ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಇಂದಿನ ಜಾಗತೀಕರಣದ ಯುಗದಲ್ಲಿ ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಗಳು ಕಂಡುಬರುತ್ತಿದ್ದು, ತಂತ್ರಜ್ಞಾನ, ಡಿಜಿಟಲ್ ಕೌಶಲ್ಯ, ಕೃತಕ ಬುದ್ಧಿಮತ್ತೆ ಹಾಗೂ ಜಾಗತಿಕ ಉದ್ಯೋಗ ಮಾರುಕಟ್ಟೆಯ ಬೆಳವಣಿಗೆಗಳಿಂದ ವಿದ್ಯಾರ್ಥಿಗಳು ತಮ್ಮ ವೃತ್ತಿ ಜೀವನವನ್ನು ಮುಂಚಿತವಾಗಿಯೇ ಯೋಜಿಸುವ ಅಗತ್ಯತೆಯನ್ನು ಹೆಚ್ಚು ಮಾಡಿಕೊಳ್ಳಬೇಕಾಗಿದೆ ಎಂದು ಶಾಂತಲಾ ಸ್ಪೇರೋಕಾಸ್ಟ್ ಪ್ರೈವೇಟ್ ಲಿಮಿಟೆಡ್ನ ನಿರ್ದೇಶಕ ಡಿ.ಜಿ ಬೆನಕಪ್ಪ ಹೇಳಿದರು.
ನಗರದ ಪಿಇಎಸ್ ಐಎಎಂಎಸ್ ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗಾಗಿ ‘ಗುರಿಯ ನಿರ್ಧಾರ ಮತ್ತು ವೃತ್ತಿ ಯೋಜನೆ’ ಎಂಬ ವಿಷಯದ ಕುರಿತು ಓರಿಯೆಂಟೇಶನ್ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.
ಉತ್ತಮ ಸಂವಹನ ಕೌಶಲ್ಯ, ಡಿಜಿಟಲ್ ಜ್ಞಾನ, ಇಂಗ್ಲೀಷ್ ಭಾಷಾ ಪ್ರಾವಿಣ್ಯತೆ ಹಾಗೂ ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳುವ ಅಗತ್ಯವಿದೆ. ಇಂತಹ ಗುರಿಗಳಿಗೆ ನಿಮ್ಮ ಜೀವನಶೈಲಿ ಉತ್ತಮಪಡಿಸಿಕೊಳ್ಳಬೇಕು ಅದಕ್ಕಾಗಿ ಇಂದಿನ ವಿದ್ಯಾರ್ಥಿಗಳಾದ ನಿಮಗೆ ಶಿಕ್ಷಣವು ಅವಶ್ಯಕವಾಗಿ ಬೇಕಾಗಿದೆ ಎಂದು ಒತ್ತಿ ಹೇಳಿದರು.
ಒಬ್ಬ ಯಶಸ್ವಿ ತಂದೆ-ತಾಯಿಯರು ತಮ್ಮ ಕನಸುಗಳನ್ನು ತಮ್ಮ ಮಕ್ಕಳ ರೂಪದಲ್ಲಿ ನನಸು ಮಾಡಿಕೊಳ್ಳಲು ಸದಾ ಹಾತೊರೆಯುತ್ತಾರೆ. ನಾವು ಬೆಳೆಯುವುದಕ್ಕೆ ಕನಸು ಕಾಣಬೇಕು, ಆ ಕನಸುಗಳಿಗೆ ಯೋಜನೆಯನ್ನು ಹಾಕಿಕೊಳ್ಳಬೇಕು ಹಾಗಾಗಿ ಮಕ್ಕಳಾದ ನೀವು ಆ ಕನಸುಗಳಿಗೆ ಗುರಿಯನ್ನು ಇರಿಸಿಕೊಂಡು ಸಂಯಮದಿಂದ ಮುಂದುವರೆದರೆ ಯಶಸ್ಸನ್ನು ಗಳಿಸಬಹುದಾಗಿದೆ. ವಿದ್ಯಾರ್ಥಿಗಳು ತಮ್ಮ ಆಸಕ್ತಿ, ಸಾಮರ್ಥ್ಯ ಮತ್ತು ಮಾರುಕಟ್ಟೆಯ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಸೂಕ್ತ ಶಿಕ್ಷಣ ಹಾಗೂ ಹತ್ತು ಹಲವು ಕೌಶಲ್ಯಗಳನ್ನು ಅಭಿವೃದ್ಧಿಸಿಕೊಳ್ಳಬೇಕು ಮತ್ತು ವೃತ್ತಿ ಮಾರ್ಗದರ್ಶನವನ್ನು ಸೂಕ್ತವಾಗಿ ಪಡೆದುಕೊಳ್ಳಬೇಕು ಹಾಗೆಯೇ ಇವೆಲ್ಲವುಗಳಿಗೆ ಸಮಯವೇ ಮುಖ್ಯವಾಗಿದೆ ಇದನ್ನು ಎಂದಿಗೂ ವ್ಯರ್ಥ ಮಾಡಬಾರದು ಎಂದು ಸಲಹೆ ನೀಡಿದರು.
Also read: ಸಿಎ ಫಲಿತಾಂಶ ಪ್ರಕಟ: ಕಾರ್ಕಳದ ಕ್ರಿಯೇಟಿವ್ ಕಾಲೇಜಿನ 14 ವಿದ್ಯಾರ್ಥಿಗಳು ತೇರ್ಗಡೆ
ಪದವಿ ಪಡೆಯುವುದು ಮುಖ್ಯವಲ್ಲ ಬದಲಾಗಿ ಉದ್ಯೋಗವನ್ನು ಪಡೆಯಲು Digital Tool, Power BI, Corporate Presentation, ಮತ್ತು Professonal Business Writing ನಂತಹ ಕೌಶಲ್ಯಗಳನ್ನು ಪಡೆಯಬೇಕು. ಕೆಲಸ ಹುಡುಕುವುದೇ ಸೀಮಿತವಾಗಬಾರದು. ಉತ್ತಮ ಆಲೋಚನೆಗಳು, ಸರಿಯಾದ ಆಯ್ಕೆಗಳನ್ನು ಮಾಡಿಕೊಂಡಾಗ ಅಂತರಾಷ್ಟ್ರೀಯಮಟ್ಟದಲ್ಲಿ ಉತ್ತಮ ಅವಕಾಶಗಳನ್ನು ಪಡೆಯಬಹುದು ಅದಕ್ಕಾಗಿ ಜೀವನದಲ್ಲಿ ಬರುವಂತಹ ಕಿರುಪರೀಕ್ಷೆಗಳು ಮತ್ತು ಮುಖ್ಯ ಪರೀಕ್ಷೆಗಳನ್ನು ಸಮನಾಗಿ ಎಚ್ಚರಿಕೆಯಿಂದ ಸಮಯೋಚಿತವಾಗಿ ನಿಭಾಯಿಸಿದರೆ ಮಾತ್ರ ಗುರಿ ಎಂಬ ಫಲಿತಾಂಶದಲ್ಲಿ ಸಾಧನೆಯ ಶಿಖರವನ್ನೇರಬಹುದು ಎಂದು ಮಹತ್ವದ ಸಂದೇಶವನ್ನು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡ ಕಾಲೇಜಿನ ಪ್ರಾಂಶುಪಾಲರಾದ ಡಾ. ಸುದರ್ಶನ್ ಜಿ ಎಂ ರವರು ಇಂತಹ ಉಪನ್ಯಾಸಗಳು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಿ, ಉನ್ನತ ಗುರಿಗಳನ್ನು ಸಾಧಿಸುವ ನಿಟ್ಟಿನಲ್ಲಿ ಪ್ರೇರಣೆ ನೀಡುತ್ತವೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥರಾದ ರೂಪ ಡಿ ಎಸ್, ನಿರ್ವಹಣಾಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಮೋಹನ್ ಡಿ, ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಮಂಜುನಾಥ್ ಹೆಚ್ಆರ್ ಹಾಗೂ ಅಧ್ಯಾಪಕ ವೃಂದದವರು ಮತ್ತು ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸಹಾಯಕ ಪ್ರಾಧ್ಯಾಪರಾದ ಅಭಿಷೇಕ್ ಎಸ್ ಕಾರ್ಯಕ್ರಮವನ್ನು ನಿರೂಪಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 







