ಭದ್ರಾವತಿ: ಲೋಕಸಭಾ ಚುನಾವಣೆ-2019 ನಗರ ಹಾಗು ಗ್ರಾಮಾಂತರ ಪ್ರದೇಶಗಳಲ್ಲಿ ಬೆಳಗ್ಗೆ ಬಹುತೇಕ ಎಲ್ಲಾ ಮತಗಟ್ಟೆಗಳಲ್ಲಿ ಮತದಾರರು ಸಾಲುಗಟ್ಟಿ ಮತದಾನ ಮಾಡಿದ ದೃಶ್ಯ ಕಂಡು ಬಂದಿದೆ. ಮಧ್ಯಾಹ್ನ ವರುಣನ ಕೃಪೆಯಿಂದ ಮತದಾರರು ನಿಟ್ಟಿಸಿರುವ ಬಿಡುವಂತಾಗಿತ್ತು.
ಸುಮಾರು 11 ಗಂಟೆಯ ನಂತರ ಏರಿದ ಬಿಸಿಲಿನ ತಾಪಕ್ಕೆ ಮತದಾರರ ಸಂಖ್ಯೆ ವಿರಳವಾಗಿತ್ತು. ಮಧ್ಯಾಹ್ನ 2 ಗಂಟೆಯ ಸಮಯದಲ್ಲಿ ಬಿಸಿಲಿನ ತಾಪ ತಣಿಸಲು ಮಳೆರಾಯ ಕೃಪೆ ತೋರಿದ್ದರಿಂದ ಜನರಿಗೆ ನಿಟ್ಟುಸಿರುವ ಬಿಡುವಂತಾಗಿತ್ತು. ಹುತ್ತಾ ಕಾಲೋನಿಯ ಮತಗಟ್ಟೆ ಸಂಖ್ಯೆ 136 ರಲ್ಲಿ ಡಿಜಿಟಲ್ ಇಂಡಿಯಾ ಜಿಲ್ಲಾ ವ್ಯವಸ್ಥಾಪಕ ಬಿ.ಕಿರಣ್ಕುಮಾರ್ ಮತ್ತು ಕುಟುಂಬ ಸದಸ್ಯರು 100 ವರ್ಷದ ಅವರ ಅಜ್ಜಿ ಆದಿಲಕ್ಷ್ಮಮ್ಮ ರವರನ್ನು ಚುನಾವಣಾ ಆಯೋಗವು ದಿವ್ಯಾಂಗರಿಗೆ ಕಲ್ಪಿಸಿಕೊಟ್ಟ ವೀಲ್ಚೇರ್ನಲ್ಲಿ ಕೂರಿಸಿ ಮತಗಟ್ಟೆಗೆ ಕರೆತಂದು ಮತದಾನ ಮಾಡಿಸಿದ್ದು ವಿಶೇಷವಾಗಿತ್ತು.
ಹುತ್ತಾಕಾಲೋನಿಯ ಸಹ್ಯಾದ್ರಿ ಶಾಲೆ ಮತಗಟ್ಟೆ ಸಂಖ್ಯೆ 134 ರಲ್ಲಿ ಅತಿಹೆಚ್ಚು ಮಹಿಳಾ ಮತದಾರರು ಸಾಲುಗಟ್ಟಿ ನಿಂತು ಹಕ್ಕು ಚಲಾಯಿಸಿದ ದೃಶ್ಯ ಕಂಡು ಬಂತು. ಭೂತ್ ಸಂಖ್ಯೆ 120 ರ ಹಾಲಪ್ಪವೃತ್ತ ಸರಕಾರಿ ಶಾಲೆಯಲ್ಲಿ ಪ್ರಥಮ ಅವಧಿಗೆ ಮತಚಲಾಯಿಸಿದ 18 ವರ್ಷ ತುಂಬಿದ ಗಣೇಶ ಕುಟುಂಬದವರೊಂದಿಗೆ ಮೊಟ್ಟ ಮೊದಲನೆ ಭಾರಿಗೆ ಮತ ಹಾಕುವುದು ಸಂತಸವಾಯಿತೆಂದು ಹೇಳಿಕೊಂಡರೆ, ಮತಗಟ್ಟೆ ಸಂಖ್ಯೆ 136 ರಲ್ಲಿ ಪ್ರಥಮವಾಗಿ ಮತ ಚಲಾಯಿಸಿದ ಸೋದರ ರೋಹಿತ್ ಮತ್ತು ಸೋದರಿ ಆದಿತಿ ಇಬ್ಬರು ಮತಚಲಾವಣೆ ಮಾಡಿರುವುದು ಖುಷಿ ತಂದಿದೆ ಎಂದು ಹೇಳಿದರು.
ಹಳೇನಗರದ ಸಂಚಿಯ ಹೊನ್ನಮ್ಮ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 100 ವರ್ಷದ ವಯೋವೃದ್ದೆ ರಂಗಮ್ಮ ಎಂಬುವವರನ್ನು ತಹಸೀಲ್ದಾರ್ ಸೋಮಶೇಖರ್ ಗಾಲಿ ಚೇರು ಮೂಲಕ ಮತಚಲಾಯಿಸಲು ಸಹಕರಿಸಿದರು. ನಗರಸಭೆಯಲ್ಲಿ ದಿವ್ಯಾಂಗರಿಗೆ ಕಲ್ಪಿಸಿದ್ದ ಮತಗಟ್ಟೆ ಸಂಖ್ಯೆ 104 ರಲ್ಲಿ 95 ವಯೋವೃದ್ದೆ ಪೀತಾಂಬರಮ್ಮ ಕುಟುಂಬ ಸದಸ್ಯರೊಂದಿಗೆ ಮತಚಲಾಯಿಸಿದರೆ, ಶಾಸಕ ಬಿ.ಕೆ.ಸಂಗಮೇಶ್ವರ್ ನಗರಸಭೆಯ ಮತಗಟ್ಟೆ ಸಂಖ್ಯೆ 107 ರಲ್ಲಿ ಮತಚಲಾಯಿಸಿ ನಂತರ ಮೊಮ್ಮೊಗುವಿನೊಂದಿಗೆ ಹೊರ ಬಂದು ಮತಚಲಾಯಿಸಿದ ಬೆರಳು ಪ್ರದರ್ಶಿಸಿ ನಂತರ ಮಾತನಾಡಿ ಈ ಭಾರಿ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಗೆಲುವು ಶತಸಿದ್ದ ಎಂದು ಹೇಳಿದರು. ವಿಧಾನಪರಿಷತ್ ಸದಸ್ಯ ಸಿ.ಎಂ. ಇಬ್ರಾಹಿಂ ಅನ್ವರ್ ಕಾಲೋನಿಯ ಮತಗಟ್ಟೆ ಸಂಖ್ಯೆ 67 ರಲ್ಲಿ ಮತ ಚಲಾಯಿಸಿ ಅಭಿಮಾನಿ ಹಾಗು ಕಾರ್ಯಕರ್ತರೊಂದಿಗೆ ಮತಗಟ್ಟೆ ಹೊರ ಭಾಗದಲ್ಲಿ ಮೈತ್ರಿ ಅಭ್ಯರ್ಥಿಯ ಪರ ಮಾತನಾಡಿ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡುವಂತೆ ಮನವಿ ಮಾಡಿದರು.
ತಾಲೂಕಿನ ಗೌರಾಪುರ ಮತ್ತು ಬಸವನಗುಡಿ ಸಂಖ್ಯೆ 203 ಮತ್ತು 204 ಭೂತ್ಗಳ ಹೊರ ಭಾಗದಲ್ಲಿ ಮತಯಾಚಿಸುತ್ತಿದ್ದ ಕಾಂಗ್ರೆಸ್ ಕಾರ್ಯಕರ್ತರು ಪಕ್ಷದ ಮುಖಂಡರು ಕಾರ್ಯಕರ್ತರಿಗೆ ಕನಿಷ್ಟ ಕಾಫಿ, ಟೀ, ತಿಂಡಿಗಾಗಿ ಹಣ ಹಂಚಿಕೆ ಮಾಡದೆ ಕಾರ್ಯಕರ್ತರಿಗೆ ಮೋಸ ಮಾಡಿದ್ದಾರೆಂದು ಆರೋಪಿಸಿದ್ದು ಕೇಳಿಬಂದರೆ, ಕೆ.ಎಚ್. ನಗರದ ಬೂತ್ ಸಂಖ್ಯೆ 202 ರಲ್ಲಿ ಮಹಿಳೆಯರು ಹೆಚ್ಚಾಗಿ ಮತದಾನದಲ್ಲಿ ಕಂಡು ಬಂತು. ಅನೇಕ ಪುರುಷ ಮತದಾರರು ಕಾಂಗ್ರೆಸ್ ಮತ್ತು ಜೆಡಿಎಸ್ ಕುಟುಂಬದವರೆಂದು ಅನೇಕರಿಗೆ ಹಣ ಹಂಚಿಕೆ ಮಾಡದೆ ಮೋಸ ಮಾಡಿದ್ದಾರೆಂದು ದೂರುತ್ತಿದ್ದರು. ಕಾಂಗ್ರೆಸ್ ಮುಖಂಡರು ಅಂತರಗಂಗೆ ವ್ಯಾಪ್ತಿಯು ಜೆಡಿಎಸ್ ಬೆಲ್ಟ್ ಆಗಿದೆ ಎಂದು ಹಣ ಹಂಚಿಕೆ ಮಾಡದೆ ಗುಳುಂ ಮಾಡಿದ್ದಾರೆಂದು ಕೆಲವರು ಆರೋಪಿಸುತ್ತಿದ್ದರು. ಕಾಗದ ನಗರದ ಮತಗಟ್ಟೆ ಸಂಖ್ಯೆ 173 ರಲ್ಲಿ ಕ್ರಮಸಂಖ್ಯೆ 124 ರ ಆಶಾ ಎಂಬುವರು ಚುನಾವಣಾಧಿಕಾರಿಗಳು ನೀಡಿದ ಮತಚೀಟಿ ಹೊತ್ತು ಮತಚಲಾಯಿಸಲು ಹೋದಾಗ ಅವರ ಮತವನ್ನು ಬೇರೊಬ್ಬರು ಚಲಾಯಿಸಿದ್ದಾರೆ. ನನಗೆ ಅನ್ಯಾಯವಾಗಿದೆ ಎಂದು ಅಧಿಕಾರಿಗಳಿಗೆ ದೂರಲಾಗಿ ಟೆಂಡರ್ ಓಟಿಗೆ ಅವಕಾಶ ಕಲ್ಪಿಸಿದ ಘಟನೆಯು ನಡೆಯಿತು.
ಬಿಆರ್ಪಿ, ಶಂಕರಘಟ್ಟ, ಮಾಳೇನಹಳ್ಳಿ, ಗೋಣಿಬೀಡುಗಳ ಮತಗಟ್ಟೆ ಸಮೀಪ ಕೇಸರಿ ಧ್ವಜಗಳ ಹಾರಾಟ ಕಂಡು ಬಂದರೆ, ಹುಣಸೆಕಟ್ಟೆ, ಹಿರಿಯೂರು, ಬೊಮ್ಮನಕಟ್ಟೆ, ವಿದ್ಯಾಮಂದಿರ, ನ್ಯೂಟೌನ್ ಬಾಲಿಕ ಪದವಿಪೂರ್ವ ಕಾಲೇಜು ಮುಂತಾದೆಡೆ ಜೆಡಿಎಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರ ಮತಯಾಚನೆ ಜೋರಾಗಿತ್ತು.
ಹೊಸಮನೆ, ಶಿವಾಜಿವೃತ್ತ, ದೇವರಹಳ್ಳಿ, ಕಾಚಿನಕಟ್ಟೆ ಹಳೇನಗರದ ತಾಲೂಕು ಕಛೇರಿ ರಸ್ತೆ, ತರೀಕೆರೆ ರಸ್ತೆ, ಜನ್ನಾಪುರ, ಸಿದ್ದಾಪುರ ಮತ್ತಿತರೆ ಪ್ರದೇಶಗಳಲ್ಲಿ ಬಿಜೆಪಿ ಕಾರ್ಯಕರ್ತರ ದಂಡು ಮತಯಾಚನೆಯಲ್ಲಿ ಹೆಚ್ಚಾಗಿ ಕಂಡು ಬಂತು. ಮಧ್ಯಾಹ್ನ ಸುಮಾರು 3 ಗಂಟೆಯ ಸಮಯಕ್ಕೆ ಸರಾಸರಿ ಶೇ: 50 ಮತದಾನವಾಗಿತ್ತು. ಸುರಿದ ಮಳೆ ಮತ್ತು ಗಾಳಿ, ಗುಡುಗು ನಿಂದಾಗಿ ತಂಪಾದ ವಾತಾವರಣ ಮೂಡಿದ್ದರಿಂದ ಮತದಾರರು ಮತಗಟ್ಟೆಗಳಿಗೆ ಮತ ಚಲಾಯಿಸಲು ತೆರಳುತ್ತಿದ್ದ ದೃಶ್ಯ ಕಂಡು ಬಂತು.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Discussion about this post