ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ : ಶ್ರೀ ವಿದ್ಯೇಶ ತೀರ್ಥ ಸ್ವಾಮೀಜಿ, ಭಂಡಾರಕೇರಿ ಮಠ, ಉಡುಪಿ | 
ಕಲಿಯುಗದ ಕಾಮಧೇನು ಮತ್ತು ಕಲ್ಪತರು ಎಂದೆ ಸವಿಖ್ಯಾತರಾದ ಶ್ರೀ ರಾಘವೇಂದ್ರ ಸ್ವಾಮಿಗಳ (Raghavendra Thirtharu) 355ನೇ ಆರಾಧನಾ ಮಹೋತ್ಸವದ ಶುಭ ಸಂದರ್ಭದಲ್ಲಿ ಭಂಡಾರ ಕೇರಿ ಮಠಾಧೀಶರಾದ ಪರಮಪೂಜ್ಯ ಶ್ರೀಗಳು ಕಲ್ಪ ನ್ಯೂಸ್ ಡಿಜಿಟಲ್ ಮಾಧ್ಯಮಕ್ಕಾಗಿ ಅನುಗ್ರಹ ಮಾಡಿಕೊಟ್ಟ ವಿಶೇಷ ಲೇಖನ.
ಅಜ್ಞಾನಾಂಧಕಾರವನ್ನು ದೂರಮಾಡುವವನು “ಗುರು” ಎಂದು ಗುರುತಿಸಲರ್ಹನು. ಭಗವಂತನನ್ನು ಪ್ರತ್ಯಕ್ಷವಾಗಿ ಕಂಡು ಅಜ್ಞಾನ – ವಿಪರೀತ – ಸಂಶಯ ಸಂಚಿತಕರ್ಮಗಳನ್ನು ದೂರಮಾಡಿಕೊಂಡು ಗುರುವೇ ಜಗದ ಅಂಧಕಾರವನ್ನು ನೀಗಿಸಬಲ್ಲನು. ಶರಣು ಬಂದ ಶಿಷ್ಯರ ಅಜ್ಞಾನದ ಜೊತೆಗೆ ರೋಗ, ದಾರಿದ್ರ್ಯ, ಕ್ಲೇಶಾದಿಗಳನ್ನು ತನ್ನ ಜ್ಞಾನವರ್ಚಸ್ಸಿನಿಂದ ದೂರಮಾಡಬಲ್ಲನು. ಶರಣು ಬಂದ ಭಕ್ತರ ಉನ್ನತಿಯನ್ನೂ ಸಾಧಿಸಬಲ್ಲನು. ಆದುದರಿಂದಲೇ ” ಆತ್ಮಜ್ಞಂ ಅರ್ಕಾಯೇತ್ ಭೂತಿಕಾಮಃ” ಎಂಬ ಆರ್ಷವಾಣಿ ಭಗವಂತನನ್ನು ಕಂಡ ಜ್ಞಾನಿಯನ್ನು, ಉನ್ನತಿಯನ್ನು ಬಯಸುವವನು ಪೂಜಿಸಬೇಕು, ಗೌರವಿಸಬೇಕು ಎಂದು ನಿರ್ದೇಶಿಸಿದೆ. (Raghavendra Thirtharu) ರಾಘವೇಂದ್ರ ಗುರುಸಾರ್ವಭೌಮರಲ್ಲಿ ಇಂತಹ ಗುರುವರ್ಚಸನ್ನು ಬಹುಮಂದಿ ಭಕ್ತರು ತಮ್ಮ ಅನುಭವದಲ್ಲಿ ತಂದುಕೊಂಡಿದ್ದಾರೆ. ಇದನ್ನೇ ಶ್ರೀ ಅಪ್ಪಣ್ಣಾಚಾರ್ಯರು ತಮ್ಮ ಅನುಭವದಲ್ಲಿ ತಂದುಕೊಂಡು ಉದ್ಗರಿಸಿದ್ದಾರೆ. ” ಶ್ರೀರಾಘವೇಂದ್ರಃ ಸಕಲಪ್ರದಾತಾ ಸ್ವಪಾದ ಕಂಜದ್ವಯಭಕ್ತಿಮದ್ಭ್ಯ: ಎಂದು.
ಗುರುಸಾರ್ವಭೌಮರು “ರಾಘವೇಂದ್ರರು” ಏಕೆ?
ಮಂತ್ರಾಲಯದ (Mantralaya) ಮಾಂತ್ರಿಕರೆಂದೇ ಪ್ರಸಿದ್ಧರಾದ ಗುರುಸಾರ್ವಭೌಮರು ರಾಘವನಾದ ಶ್ರೀರಾಮನಿಂದ(ಆತನ ಅನುಗ್ರಹದಿಂದ) “ಇಂದ್ರ”ರಾಗಿದ್ದಾರೆ. ಅರ್ಥಾತ್ ಭಕ್ತರ ಪಾಪಪರ್ವತಗಳನ್ನು ತಮ್ಮ ದೃಷ್ಟಿವಜ್ರದಿಂದಲೇ ಬೇಡಿಸುವವರಾಗಿ ಭೂಲೋಕದಲ್ಲಿ ಇಂದ್ರರೆನಿಸಿದ್ದಾರೆ. ಸ್ವರ್ಗದ ಇಂದ್ರನ ತನ್ನ ವಜ್ರಾಯುಧದಿಂದ ಪರ್ವತಗಳನ್ನು ಭೇದಿಸಿದರೆ, ರಾಯರು ದೃಷ್ಟಿವಜ್ರದಿಂದ ಪಾಪಪರ್ವತಗಳನ್ನೆಲಾ ಭೇದಿಸಿ ಇಂದ್ರಸಾಮ್ಯದಿಂದ ಮೆರೆದಿದ್ದಾರೆ. ಶ್ರೀರಾಮ ತನ್ನ ಭಕ್ತರ ಪಾಪಪರ್ವತಗಳನ್ನೆಲಾ ಕೃಪಾದೃಷ್ಟಿವಜ್ರದಿಂದ ಭೇದಿಸುತ್ತಾನೆ. ಆತನ ಉಪಾಸಕರಾದ ಶ್ರೀರಾಘವೇಂದ್ರರು ಅವನ ದಯದಿಂದ ಇದನ್ನು ಸಾಧಿಸಿದ್ದಾರೆ. ಇದನ್ನೇ ಅಪ್ಪಣ್ಣಾಚಾರ್ಯರು (ರಾಯರ ಮಹಿಮೆಯನ್ನು ಕಂಡು ಅವರ ಸ್ತುತಿಯನ್ನು ರಚಿಸಿದವರು) ಆಘಾದ್ರಿಸಂಬೇಧನ ದೃಷ್ಟಿವಜ್ರಃ ಕ್ಷಮಾಸುರೇಂದ್ರಃ ಅವತು ಮಾಮ್ ಸದಾಯಂ ಎಂದು ಹೇಳಿದ್ದಾರೆ.
Also Read>> ಶಿವಮೊಗ್ಗ : ರತ್ನಾಕರ ಬಡಾವಣೆ ಮಠದಲ್ಲಿ ರಾಯರ ಆರಾಧನಾ ಸಂಭ್ರಮ | ಏನೆಲ್ಲಾ ಕಾರ್ಯಕ್ರಮ ನಡೆಯಲಿದೆ?
ಹೊಟ್ಟೆಕಿಚ್ಚಿಗೆ ಪರಿಹಾರ ನೀಡಿದ ಗುರುಗಳು
ಶ್ರೀ ರಾಘವೇಂದ್ರ ಗುರುಗಳ ಸ್ತೋತ್ರದಿಂದ ಅಭಿಮಂತ್ರಿತವಾದ ಪವಿತ್ರೋದಕವನ್ನು ಭಕ್ತಿಯಿಂದ ಸೇವಿಸಿದರೆ ಹೊಟ್ಟೆಹುಣ್ಣು, ಅರ್ಬುದ, ವಾಯುಪ್ರಕೋಪ, ಅಗ್ನಿಮಾಂದ್ಯ, ಕರುಳಿನ ಉರಿಯೂತ ಮುಂತಾದ ರೋಗಗಳ ಜೊತೆಗೆ ಹೊಟ್ಟೆಕಿಚ್ಚೆಂಬ ರೋಗವೂ ಉಪಶಮವಾಗಬಲ್ಲದೆಂದು ಅಪ್ಪಣ್ಣಾಚಾರ್ಯರು ತಮ್ಮ ಸ್ತುತಿಯಲ್ಲಿ ಉಲ್ಲೇಖಿಸಿದ್ದಾರೆ. “ಯಃ ಪಿಬೇತ್ ಜಲಮೇತೆನ ಸ್ತೋತ್ರೇಣೈವ ಅಭಿಮಂತ್ರಿತುಂ. ತಸ್ಯ ಕುಕ್ಷಿಗತಾ ದೋಷಾಃ ಸರ್ವೇ ನಶ್ಯಂತಿ ತತ್ಕ್ಷಣಾತ್ “.
Raghavendra Thirtharu : ರಾಘವೇಂದ್ರರೇಕೆ ಕಲ್ಪತರು?
ಭಜಾತಾಂ ಕಲ್ಪವೃಕ್ಷಾಯ ಎಂದು ಅಪ್ಪಣ್ಣಾಚಾರ್ಯರು ಶ್ರೀರಾಯರನ್ನು ಕಲ್ಪವೃಕ್ಷಕ್ಕೆ ಹೋಲಿಸಿದ್ದಾರೆ. ರಾಯರು ಭಕ್ತರಿಗೆ ಕೇಳಿದ್ದನ್ನೆಲ್ಲಾ ಕೊಡುವ ಕಲ್ಪತರು ಎಂದು ಉದ್ಗರಿಸಿದ್ದಾರೆ. ಆದರೆ ಈ ಹೋಲಿಕೆಯನ್ನು ಕೊಟ್ಟ ಅಪ್ಪಣ್ಣಾಚಾರ್ಯರು ನಮಗೆಲ್ಲ ಒಂದು ಎಚ್ಚರಿಕೆಯನ್ನು ನೀಡಿದ್ದಾರೆ. ಈ ಹೋಲಿಕೆಯಿಂದ ರಾಯರಿಂದ ನಾವು ನಿಮಗಿಷ್ಟವಾದ ಎಲ್ಲವನ್ನೂ ಸುಲಭದಲ್ಲಿ ಸಾಧಿಸಿಕೊಳ್ಳಬಹುದೆಂದು ಹಗಲುಗನಸು ಕಾಣುತ್ತೇವೆ. ಇದು ಸಾಧುವಲ್ಲವೆಂದು ಕಲ್ಪತರುವಿನ ಹೋಲಿಕೆಯಿಂದ ಎಚ್ಚರಿಸಿದ್ದಾರೆ. ಕಲ್ಪತರುವಿನಿಂದ ಸೇವಾನುಗುಣವಾಗಿಯೇ ನಮಗೆ ಫಲ ದೊರೆಯುತ್ತದೆ ಎಂದು “ಸೇವಾನುರೂಪ ಫಲೋದಯಃ” ಎಂಬ ಮಾತಿನಿಂದ ಭಾಗವತವು ಸ್ಪಷ್ಟೀಕರಿಸಿದೆ. ಹೀಗಾಗಿ ರಾಯರ ಯತ್ಕಿಂಚಿತ್ ಸೇವೆಯಿಂದ ಮಹಾಫಲವನ್ನು ಪಡೆಯಬಹುದೆಂಬ ನಮ್ಮ ಭ್ರಾಂತಿ – ದುರಾಶೆಗಳನ್ನು ಕಲ್ಪವೃಕ್ಷದ ಹೋಲಿಕೆಯಿಂದ ಅಪ್ಪಣ್ಣಾಚಾರ್ಯರು ದೂರಮಾಡಿದ್ದಾರೆ.
ರಾಯರಿಗೆ ಕಾಮಧೇನುವಿನ ಹೋಲಿಕೆಯನ್ನು ನೀಡಿ ಭಕ್ತರಿಗೆ ನೀಡಿದ ಸಂದೇಶವೇನು?
ದಿವ್ಯ ಹಸುವೆನಿಸಿದ ಕಾಮಧೇನು ನಾವು ಬಯಸಿದ್ದನ್ನೆಲ್ಲಾ ನೀಡಿದಂತೆ, ನಾವು ಭೋಗಕ್ಕಾಗಿ ಬಯಸಿದ್ದನ್ನೆಲ್ಲಾ ಶ್ರೀರಾಘವೇಂದ್ರರು ನೀಡುವರೆಂದು ಭ್ರಮಿಸಬಾರದು. ಅವರು ಧರ್ಮ – ತ್ಯಾಗಕ್ಕಾಗಿ ಬಯಸಿದ್ದನ್ನೆಲ್ಲಾ ನೀಡುವವರು ವಿನಾ ನಾವು ಖಾಸಗಿ ಭೋಗಜೀವನಕ್ಕಾಗಿ ಬಯಸಿದ್ದನ್ನೆಲ್ಲಾ ನೀಡುವುದಿಲ್ಲ. ವಸಿಷ್ಠರು ತಮ್ಮ ಹವ್ಯ-ಕವ್ಯ-ಅತಿಥಿಸತ್ಕಾರ ಮುಂತಾದ ತ್ಯಾಗಮಯ ಧರ್ಮಕಾರ್ಯಗಳಿಗೆ ಅನುಕೂಲವೆನಿಸಿದ ನಂದಿನಿ ಎಂಬ ಕಾಮಧೇನುವನ್ನು ಉಪಯೋಗಿಸುತ್ತಿದ್ದರು.
ಒಮ್ಮೆ ಅವರ ಆಶ್ರಮಕ್ಕೆ ವಿಶ್ವಾಮಿತ್ರರು ಕ್ಷತ್ರಿಯರಾಗಿದ್ದಾಗ ಪರಿವಾರಸಹಿತವಾಗಿ ವಸಿಷ್ಠರ ಆಶ್ರಮಕ್ಕೆ ಬಂದರು. ಆಗ ಅವರು ನಂದಿನಿಯ ಸಹಾಯದಿಂದ ರಾಜೋಚಿತವಾದ ಉದಾರ ಅತಿಥಿ ಸತ್ಕಾರವನ್ನು ವಿಶ್ವಾಮಿತ್ರರಿಗೆ ಮಾಡಿದರು. ಈ ವೈಭವದ ಅತಿಥಿಸತ್ಕಾರವನ್ನು ಸ್ವೀಕರಿಸಿದ ಅವರು ಆಶ್ಚರ್ಯಪಟ್ಟು ಅತಿಥಿಸತ್ಕಾರಕ್ಕೆ ಕಾಮಧೇನು ಒದಗಿಸಿದ ಭೋಗವಸ್ತುಗಳೇ ಸಾಧನವಾಗಿತ್ತೆಂದು ತಿಳಿದು ಅದನ್ನು ನೀಡಲು ವಸಿಷ್ಠರಿಗೆ ಹೇಳುತ್ತಾರೆ. ಆದರೆ ಅವರು ಅದಕ್ಕೆ ಒಪ್ಪದಿದ್ದಾಗ ವಿಶ್ವಾಮಿತ್ರರು ಕ್ಷಾತ್ರಬಲದಿಂದ ಅದನ್ನು ತಮ್ಮ ಭೋಗಕ್ಕಾಗಿ ಎಳೆದುತರಲು ಸೈನಿಕರಿಗೆ ಆದೇಶಿಸುತ್ತಾರೆ. ಆಗ ನಂದಿನಿಯು ತನ್ನ ರೋಮಕೂಪದಿಂದ ಸಾವಿರಾರು ಸೈನಿಕರನ್ನು ಸೃಷ್ಟಿಸಿ ಆ ಸೈನಿಕರಿಂದ ವಿಶ್ವಾಮಿತ್ರಸೇನೆಯನ್ನು ಪರಾಭವಗೊಳಿಸಿ ವಿಶ್ವಾಮಿತ್ರರಿಂದ ತಪ್ಪಿಸಿಕೊಂಡು ಧರ್ಮತ್ಯಾಗಕ್ಕಾಗಿ ತನ್ನನ್ನು ಆಶ್ರಯಿಸಿದ ವಸಿಷ್ಠರ ಹತ್ತಿರವೇ ಬಂದು ಅವರನ್ನೇ ಸಂತೋಷದಿಂದ ಆಶ್ರಯಿಸುತ್ತಾಳೆ.
ಈ ನಿದರ್ಶನದಿಂದ ನಂದಿನಿಯನ್ನೆಂಬಂತೆ ಭೋಗಸುಖಕ್ಕಾಗಿ ರಾಯರೆಂಬ ನಂದಿನಿಯನ್ನು (ಕಾಮಧೇನು) ತಮ್ಮತ್ತ ಸೆಳೆಯಲು ಬಲಾತ್ಕರಿಸಿದರೆ, ವಿಶ್ವಾಮಿತ್ರರಿಂದ ನಂದಿನಿ ದೂರವಾದಂತೆ ನಮ್ಮಿಂದಲೂ ರಾಘವೇಂದ್ರರೆಂಬ ನಂದಿನಿಯು ದೂರವಾಗುವರು. ಧರ್ಮ-ತ್ಯಾಗ-ಜ್ಞಾನ-ಭಕ್ತ್ಯಾದಿ ಸಂಪತ್ತಿಗಾಗಿ ಅವರನ್ನು ಆಶ್ರಯಿಸಿದರೆ ವಸಿಷ್ಠರಿಗೆ ನಂದಿನಿಯು ಹತ್ತಿರವಾದಂತೆ ರಾಯರೆಂಬ ನಂದಿನಿಯು ನಮಗೆ ಸದಾ ಹತ್ತಿರವಾಗಿ ನಮ್ಮ ಅಭೀಷ್ಟವನ್ನು ಪೂರೈಸಬಲ್ಲರೆಂಬ ಎಚ್ಚರಿಕೆ ನಮಗೆ ಸದಾ ಇರಬೇಕು. ಲೋಕದ ಸಕಲಾನಿಷ್ಟಗಳನ್ನು ನೋಡಿ ಕರಗಿದ ಹೃದಯದಿಂದ ಕರುವಿನತ್ತ ಧೇನು ಧಾವಿಸುವಂತೆ ವಾತ್ಸಲ್ಯದಿಂದ ದೀನಭಕುತರತ್ತ ಧಾವಿಸಿ ಬರುವ ರಾಯರೆಂಬ ಕಾಮಧೇನು ನಮ್ಮ ಎಲ್ಲರ ಭಕುತಿಗೆ ಧಾವಿಸಿ ಬರುವಂತಾಗಲಿ ಎಂದು ಹಾರೈಸೋಣ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 









