ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ |
ನಾಗರಿಕತೆ ಎಂಬುದು ಉದಯವಾಗುವ ಮೊದಲೇ ಜೀವಿಗಳಲ್ಲಿ ಅತ್ಯಂತ ಬುದ್ಧಿಶಾಲಿ ಆಗಿದ್ದವನೆಂದರೆ ಮಾನವ ಮಾತ್ರ. `ಬಲಶಾಲಿಯಾಗಿದ್ದವನು ಮಾತ್ರ ಬದುಕುತ್ತಾನೆ’ (ಸರ್ವೈವಲ್ ಫಾರ್ ದ ಫಿಟ್ಟೆಸ್ಟ್) ಎಂಬುದೇ ಮಾನವನ ಜೀವನದ ಕ್ರಮವಾಗಿತ್ತು.
ನಾಗರಿಕತೆ ಬೆಳೆದಂತೆ ಮಾನವನು ಈ ಭೂಮಿಯ ಮೇಲೆ ಜೀವಿಸುವ ಹಕ್ಕನ್ನು ಪ್ರತಿಪಾದಿಸಲು ಆರಂಭಿಸಿದ. ಎಲ್ಲ ಜೀವಿಗಳೊಂದಿಗೆ ಬದುಕುತ್ತಾ, ತನ್ನ ಜೀವನವನ್ನು ಹೇಗೆ ಸರ್ವಶ್ರೇಷ್ಠ ಮಾಡಿಕೊಳ್ಳಬಹುದು ಎಂದು ಚಿಂತಿಸಿದ. ಆ ದಿಸೆಯಲ್ಲಿ ನೂರಾರು ವರ್ಷ ಸಾಧನೆಯನ್ನೂ ಮಾಡಿದ. ಇತರ ಜೀವಿಗಳನ್ನು ನಿಯಂತ್ರಣ ಮಾಡುತ್ತಲೇ ಅವುಗಳನ್ನು ತನ್ನ ಜೀವನ ಕ್ರಮಕ್ಕೆ ಹೊಂದಿಸಿಕೊಂಡ. ಹೀಗೆ ಮಾಡುತ್ತಲೇ ಶ್ರೇಷ್ಠ, ಸರಳ ಮತ್ತು ಸುಂದರ ಜೀವನವನ್ನು ರೂಪಿಸಿಕೊಂಡ. ಆಗಿನಿಂದಲೇ `ಮಾನವ ಹಕ್ಕುಗಳು’ ಎಂಬ ಪರಿಕಲ್ಪನೆ ಮೊಳಕೆಯೊಡೆಯಿತು.
ಮಾನವ ಹಕ್ಕುಗಳ ಪರಿಕಲ್ಪನೆಯು ವಿವಿಧ ದೇಶಗಳಲ್ಲಿ ಮತ್ತು ವಿಭಿನ್ನ ಕಾಲದಲ್ಲಿ ತನ್ನ ಮೂಲ ಬೇರನ್ನು ಹೊಂದಿದೆ. ಆಯಾ ನೆಲದ ವಾಯುಗುಣ, ನಿಸರ್ಗದ ನಿಯಮ, ಧರ್ಮ, ಸಂಸ್ಕೃತಿ ಮತ್ತು ಆಚರಣೆಗಳ ಮೇಲೆ ಹಕ್ಕುಗಳು ಟಿಸಿಲೊಡೆದವು.
ವಿವಿಧ ಧರ್ಮಗ್ರಂಥಗಳೂ ಸಹ ಕರುಣೆ, ದಯೆ, ಜೀವಿಸುವುದಕ್ಕೆ ನೀಡಬೇಕಾದ ಅವಕಾಶ, ಹಂಚಿಕೊಂಡು ತಿಂದು ಬದುಕುವ ಜೀವನ ಕ್ರಮಗಳನ್ನು ಬೋಧಿಸಿದವು. ಮಾನವನ ವಿಕಾಸದ ಪ್ರತಿ ಹೆಜ್ಜೆಗಳಲ್ಲೂ ಅಳವಡಿಸಿಕೊಂಡ ಜೀವಪರ ನಿಲುವು ಮತ್ತು ನಿರ್ಧಾರಗಳೇ `ಹಕ್ಕುಗಳಿಗೆ’ ತವರು ಮನೆ ಇದ್ದಂತೆ ಎನ್ನಬಹುದು.
ಇತಿಹಾಸವನ್ನು ಒಮ್ಮೆ ಅವಲೋಕನ ಮಾಡಿದರೆ ನಮಗೆ ಈ ಮಾನವ ಹಕ್ಕುಗಳ ಮೂಲ ನೆಲೆ ದರ್ಶನ ಕೊಡುತ್ತದೆ. ಕೆಲವು ವಿದ್ವಾಂಸರು ಮತ್ತು ಇತಿಹಾಸಕಾರರು ಈ ಬಗ್ಗೆ ತಮ್ಮದೇ ಆದ ವ್ಯಾಖ್ಯಾನವನ್ನು ನೀಡಿದ್ದಾರೆ.
ಇಡೀ ಪ್ರಪಂಚದಲ್ಲಿ ಮಾನವ ಹಕ್ಕುಗಳ ಪರಿಕಲ್ಪನೆಯ ಮೂಲವನ್ನು ಪ್ರಾಚೀನ ಗ್ರೀಸ್ ಮತ್ತು ಭಾರತದ ನೆಲದಲ್ಲಿ ಗುರುತಿಸಿರುವುದು ಗಮನೀಯ ಅಂಶ. ಗ್ರೀಸ್ ದೇಶದ ಸ್ಟೋಯಿಕ್ ಫಿಲಾಸಫಿಯು `ನ್ಯಾಚುರಲ್ ಲಾ ಥಿಯರಿ’ ಯನ್ನು ಅಭಿವೃದ್ಧಿಪಡಿಸಿತು. ಅದೇ ಕಾಲಘಟ್ಟದಲ್ಲಿ ಭಾರತ ದೇಶದಲ್ಲಿ ಉಗಮಿಸಿದ ಋಗ್ವೇದದಲ್ಲಿ ದೇಹ, ವಾಸಸ್ಥಾನ ಮತ್ತು ಜೀವ-ಎಂಬ ಶಬ್ದಗಳನ್ನು ಪ್ರತಿಪಾದಿಸುವ ಮಂತ್ರಗಳು ಮಾನವ ಹಕ್ಕುಗಳನ್ನೇ ಪ್ರತಿಪಾದಿಸಿದವು ಎಂದು ವ್ಯಾಖ್ಯಾನಿಸಲಾಗಿದೆ.
ಕಾಲಚಕ್ರ ಹಾಗೆಯೇ ಉರುಳಿತು. ಮನುಷ್ಯ ತನ್ನ ನೆಲೆಯನ್ನು ಬಿಟ್ಟು ಹೊಸ ಹೊಸ ಪ್ರದೇಶಗಳ, ಭೂ ಖಂಡಗಳ ಅನ್ವೇಷಣೆಗೆ ಹೊರಟ. ಆಗ `ನವೋದಯ’ ಕಾಲಘಟ್ಟ ಆರಂಭವಾಯಿತು.
ಊಳಿಗಮಾನ್ಯ ಪದ್ಧತಿಯು ಪಕ್ಕಕ್ಕೆ ಸರಿಯಲು ಆರಂಭಿಸಿತು. ಪ್ರತಿಯೊಂದು ಸಂಗತಿಯನ್ನೂ ಪ್ರಶ್ನೆ ಮಾಡುವ, ಅದರ ಬಗ್ಗೆ ವಿಚಾರ ವಿಮರ್ಷೆ ಮಾಡುವ ಅಭ್ಯಾಸ ಮಾನವನಲ್ಲಿ ಹುಟ್ಟಿತು.
ಹೊಸ ಹೊಸ ನಂಬಿಕೆಗಳು, ಚಿಂತನೆಗಳು ಹಳೆಯ ಸಂಗತಿಗಳನ್ನು ಬದಲಾಯಿಸಿದವು. ಕೈಗಾರಿಕ ಕ್ರಾಂತಿಯ ನಂತರದ ನವೋದಯ ಚಳವಳಿಯ ಕಾರಣದಿಂದಾಗಿ ನೈಸರ್ಗಿಕ ಕಾನೂನು ಮತ್ತು ವೈಯಕ್ತಿಕ ಸ್ವಾತಂತ್ರದ ಪರಿಕಲ್ಪನೆ ಹುಟ್ಟಿಕೊಂಡಿತು.
ಬ್ರಿಟನ್ನಿನಲ್ಲಿ 1215 ರಲ್ಲಿ ಕಿಂಗ್ ಜಾನ್ ಎಂಬ ವಿದ್ವಾಂಸ ಹೊರಡಿಸಿದ ಮ್ಯಾಗ್ನಕಾರ್ಟ, 1689 ರಲ್ಲಿ ಹೊರಬಂದ ಬಿಲ್ ಆಫ್ ರೈಟ್ಸ್, 1776ರಲ್ಲಿ ಅಮೆರಿಕದ ಸ್ವಾತಂತ್ರ ಘೋಷಣೆ ಇತ್ಯಾದಿಗಳು ಮಾನವನ ಹಕ್ಕುಗಳ ಪ್ರತಿಪಾದನೆಯಲ್ಲಿ ಪ್ರಮುಖ ಘಟ್ಟಗಳಾದವು.
ಜೀವನಕ್ಕೆ ಅತಿ ಅವಶ್ಯಕವಾದ ಆಹಾರ, ಇದಕ್ಕೆ ಮೂಲವಾದ ಕೃಷಿಯನ್ನು ಮಾನವ ಮೊದಲಿನಿಂದಲೂ ಅವಲಂಬಿಸಿದ್ದ. ನಂತರ ಜೀವನ ಸುಗಮವಾಗಲು ರೂಪಿಸಿಕೊಂಡ ಕೈಗಾರಿಕೆಗಳು ಬದುಕಿನ ಕ್ರಮವನ್ನೇ ಬದಲಿಸಿದವು. ಈ ರಂಗದಲ್ಲೆಲ್ಲಾ ಶೋಷಣೆಗಳು ಆದಾಗ ಹಂತಹಂತವಾಗಿ ಮಾನವ ಹಕ್ಕುಗಳನ್ನು ಉಲ್ಲೇಖಿಸಲಾಯಿತು. ಹಕ್ಕುಗಳ ರಕ್ಷಣೆಗಾಗಿ ಕಾನೂನುಗಳು ಜಾರಿಯಾಗತೊಡಗಿದವು.
ಮೊದಲನೇ ಮಹಾಯುದ್ಧ ಮುಗಿದ ನಂತರ ಮಾನವ ಹಕ್ಕುಗಳ ಬಗ್ಗೆ ಅರಿವು ಮೂಡಿಸಲು ಮತ್ತು ಅವುಗಳ ರಕ್ಷಣೆಯ ಸಂಬಂಧ ಎಲ್ಲ ದೇಶಗಳು ಕಾನೂನುಗಳನ್ನು ರೂಪಿಸಲು ಮುಂದಾದವು.
ನೈಸರ್ಗಿಕ ಅಥವಾ ಪ್ರಾಕೃತಿಕ ಹಕ್ಕುಗಳನ್ನು ಆಧರಿಸಿಕೊಂಡೇ ನಾಗರಿಕ ಹಕ್ಕುಗಳು, ರಾಜಕೀಯ ಹಕ್ಕುಗಳು, ಮೂಲಭೂತ ಹಕ್ಕುಗಳು….. ಮೊದಲಾದವುಗಳು ಉಗಮ ಗೊಂಡವು. ಇವುಗಳು ಆಯಾ ದೇಶ ಮತ್ತು ಕಾಲಘಟ್ಟದ ವ್ಯವಸ್ಥೆಗೆ ಪೂರಕವಾಗಿ ರೂಪಿತತೊಂಡವು ಎಂಬುದನ್ನು ನಾವು ಗಮನಿಸಬಹುದು.
ಜೀವನದ ಯಾವುದೇ ಹಂತದಲ್ಲಿ, ಯಾವುದೇ ವೃತ್ತಿ ಅಥವಾ ಬದುಕಿನ ಕ್ರಮದಲ್ಲಿ ವ್ಯಕ್ತಿ ಸ್ವಾತಂತ್ರಕ್ಕೆ ಧಕ್ಕೆಯಾಗಬಾರದು. ಒಂದು ಬೃಹತ್ ಸಮುದಾಯವೇ ರೂಪಿಸಿಕೊಂಡ ಕಟ್ಟಳೆಗಳು ಉಲ್ಲಂಘನೆಯಾಗಬಾರದು. ಹಾಗೇನಾದರೂ ಆದರೆ ಅದು ಮಾನವ ಹಕ್ಕುಗಳ ಉಲ್ಲಂಘನೆಯಾದಂತೆಯೇ ಎಂಬ ಅಲಿಖಿತ ಚೌಕಟ್ಟು ರೂಪಿತವಾಯಿತು.
ಬಹಳ ಸಾಮಾನ್ಯ ಅರ್ಥದಲ್ಲಿ ಹೇಳಬೇಕು ಎಂದರೆ `ಮಾನವೀಯತೆ’ಯನ್ನು ಬೆಂಬಲಿಸುವ ಎಲ್ಲ ರೀತಿ ನೀತಿಗಳೂ ಮಾನವ ಹಕ್ಕುಗಳು ಎಂದು ಪರಿಗಣಿತವಾದವು. ಜೀವ ವಿರೋಧಿಯಾದ ಎಲ್ಲ ಸಂಗತಿಗಳೂ ಮಾನವ ಹಕ್ಕುಗಳ ಉಲ್ಲಂಘನೆ ಎಂದೇ ತೀರ್ಮಾನಿಸಲ್ಪಟ್ಟವು.
1945 ರ ಜೂನ್ 25 ರಂದು ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ನಡೆದ ವಿಶ್ವಸಂಸ್ಥೆಯ ಸಮ್ಮೇಳನದಲ್ಲಿ ಮೊದಲ ಬಾರಿಗೆ ವಿಶ್ವಸಂಸ್ಥೆಯ ಚಾರ್ಟರ್ ಅನ್ನು ಅಂತಿಮಗೊಳಿಸಲಾಯಿತು. ಈ ಚಾರ್ಟರ್ ನಲ್ಲಿ ಮಾನವ ಹಕ್ಕುಗಳ ರಕ್ಷಣೆ ಮತ್ತು ಉತ್ತೇಜನಕ್ಕೆ ಸಂಬಂಧಿಸಿದ ಹಲವು ನಿಬಂಧನೆಗಳನ್ನು ರೂಪಿಸಲಾಯಿತು.
1948 ರ ಡಿಸೆಂಬರ್ 10 ರಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆಯನ್ನು ಅಂಗೀಕರಿಸಿತು. ಇದು ವಿಶ್ವದ ಇತಿಹಾಸದಲ್ಲಿ ಬಹಳ ಪ್ರಮುಖ ಘಟ್ಟವಾಗಿ ಪರಿಗಣಿತವಾಯಿತು. ಆದ್ದರಿಂದಲೇ ಪ್ರತಿವರ್ಷ ಡಿಸೆಂಬರ್ 10 ನೇ ತಾರೀಖನ್ನು ವಿಶ್ವ ಮಾನವ ಹಕ್ಕುಗಳ ದಿನವೆಂದು ಆಚರಿಸಲಾಗುತ್ತಿದೆ.
ಕಾನೂನುಗಳ ಮೂಲಕ ರಕ್ಷಣೆ
ಹಾಗಾದರೆ ಈ ಮಾನವ ಹಕ್ಕುಗಳು ಯಾವೆಲ್ಲಾ ಸಂಗತಿಗಳನ್ನು ಬೆಂಬಲಿಸಿದವು ಎಂದು ಒಮ್ಮೆ ಅವಲೋಕಿಸೋಣ. ಪ್ರತಿಯೊಬ್ಬ ವ್ಯಕ್ತಿಯ ವ್ಯಕ್ತಿತ್ವ ರೂಪಿಸಲು ಅತಿ ಅವಶ್ಯಕವಾದ ಘನತೆ, ನ್ಯಾಯಸಮ್ಮತತೆ, ಸಮಾನತೆ, ಗೌರವ ಮತ್ತು ಸ್ವಾತಂತ್ರದಂತಹ ಅತ್ಯುನ್ನತ ಮೌಲ್ಯಗಳನ್ನು ಮಾನವ ಹಕ್ಕುಗಳು ಬೆಂಬಲಿಸಿದವು. ಈ ಮೌಲ್ಯಗಳನ್ನು ಆಯಾಯ ದೇಶಗಳ ಕಾನೂನಿನಿಂದ ವ್ಯಾಖ್ಯಾನಿಸಲಾಯಿತು. ಪ್ರತಿಯೊಬ್ಬ ಮಾನವನಿಗೂ ಆ ಕಾನೂನುಗಳ ಮೂಲಕವೇ ರಕ್ಷಣೆಯನ್ನು ಒದಗಿಸಲಾಯಿತು ಎಂಬುದು ಪ್ರಮುಖ ಅಂಶ.
ವಿಶ್ವಸಂಸ್ಥೆ ಔಪಚಾರಿಕವಾಗಿ ಪ್ರತಿಪಾದಿಸಿ, ದಾಖಲಿಸಿದ ಮಾನವ ಹಕ್ಕುಗಳು ಯಾವುವು ಎಂದು ಈಗ ನೋಡೋಣ. ಜೀವಿಸುವ ಹಕ್ಕು, ಮಾತನಾಡುವ ಹಕ್ಕು(ವಾಕ್ ಸ್ವಾತಂತ್ರ), ಆಹಾರದ ಹಕ್ಕು, ಶಿಕ್ಷಣದ ಹಕ್ಕು, ಸಾಮಾಜಿಕ ಭದ್ರತೆ, ದೌರ್ಜ್ಯನದ ವಿರುದ್ಧದ ಹಕ್ಕು, ಸಂಘಟನೆಯ ಹಕ್ಕು, ರಾಷ್ಟ್ರೀಯತೆ ಹಕ್ಕು, ರಕ್ಷಣೆಯ ಹಕ್ಕು, ಆರೋಗ್ಯದ ಹಕ್ಕು, ಧಾರ್ಮಿಕ ಆಚರಣೆಯ ಹಕ್ಕುಗಳನ್ನು ವಿಶ್ವಸಂಸ್ಥೆಯು ತನ್ನ ಚಾರ್ಟರ್ ನಲ್ಲಿ ಅಳವಡಿಸಿತು.
ವಿಶ್ವದ ಎಲ್ಲ ರಾಷ್ಟ್ರಗಳಿಗೆ ಮಾದರಿಯಾಗುವ ಸಂಹಿತೆಯೊಂದನ್ನು ವಿಶ್ವಸಂಸ್ಥೆ ಸಿದ್ಧಪಡಿಸಿತು. ಇದುವೇ ಅಧುನಿಕ ಮಾನವ ಜನಾಂಗದ ಜೀವನಕ್ರಮಕ್ಕೆ ಬಹು ದೊಡ್ಡ ಆಧಾರ ಸ್ತಂಭವಾಯಿತು. ವಿಜ್ಞಾನ, ತಂತ್ರಜ್ಞಾನಗಳ ವಿಕಾಸಕ್ಕೆ ಪ್ರಖರ ಪ್ರಭೆಯಾಯಿತು. ಹೊಸ ಹೊಸ ಸಂಗತಿಗಳ ಸಂಶೋಧನಾ ರಂಗಕ್ಕೆ ಮಾರ್ಗದರ್ಶಿಯಾಯಿತು. ಒಟ್ಟಾರೆ ಶೋಷಣೆ ಮತ್ತು ಕ್ರೌರ್ಯಗಳಿಂದ ಹೊರ ಬಂದ ವಿಶ್ವದ ವಿಕಸಿತ ಮನಗಳ ಸುಖ, ಸಂತೋಷ ಮತ್ತು ಸಾರ್ಥಕ ಜೀವನಕ್ಕೆ ಮುಖ್ಯ ಭೂಮಿಕೆಯಾಯಿತು.
ವಿಶ್ವಸಂಸ್ಥೆ ಮಾನವ ಹಕ್ಕುಗಳನ್ನು ಘೋಷಿಸಿದ ಸಂದರ್ಭದಲ್ಲೇ ಭಾರತದಲ್ಲೂ `ಸಂವಿಧಾನ ರಚನಾ ಪ್ರಕ್ರಿಯೆ’ ನಡೆಯುತ್ತಿತ್ತು. ವಿಶ್ವಸಂಸ್ಥೆಯ ನಿರ್ಧಾರಗಳಿಂದ ಪ್ರೇರಣೆ ಪಡೆದು ದೇಶದ ಸಂವಿಧಾನದ ಪ್ರಸ್ತಾವನೆ ಸಹಿತ, ಅನುಚ್ಛೇದದಲ್ಲಿಯೂ ಮಾನವ ಹಕ್ಕುಗಳ ಬಗ್ಗೆ ಉಲ್ಲೇಖಿಸಲಾಯಿತು.
ಭಾರತ ಸಂವಿಧಾನದ ಅನುಚ್ಛೇದ 32ರ ಅನುಸಾರ ಮಾನವ ಹಕ್ಕುಗಳ ರಕ್ಷಣೆ ಹಾಗೂ ಅನುಚ್ಛೇದ 226ರ ಪ್ರಕಾರ `ಜಾರಿಗೊಳಿಸುವ’ ಜವಾಬ್ದಾರಿಯನ್ನು ನ್ಯಾಯಾಂಗ ವಿಭಾಗಕ್ಕೆ ವಹಿಸಲಾಯಿತು. ಹಕ್ಕುಗಳ ಜತೆಗೆ ಜವಾಬ್ದಾರಿಗಳನ್ನೂ ನಿಗದಿಪಡಿಸಲಾಯಿತು. ಇವುಗಳ ಉಲ್ಲಂಘನೆ ಎಂದರೆ ಅದು ಶಿಕ್ಷಾರ್ಹ ಅಪರಾಧ ಎಂದು ಕಾನೂನುಗಳನ್ನು ರೂಪಿಸಲಾಯಿತು. ಸ್ಥಾನಗಳಿಗೆ ಅನುಗುಣವಾಗಿ ನ್ಯಾಯಾಧೀಶರು, ನ್ಯಾಯ ಮೂರ್ತಿಗಳು ಶಿಕ್ಷೆಗಳನ್ನು ನಿರ್ಧರಿಸಲು ಸಂವಿಧಾನ ಅಧಿಕಾರ ನೀಡಿತು.
ಎಲ್ಲ ರಾಷ್ಟ್ರಗಳ ಸಮ್ಮತಿ
1950ರ ಡಿಸೆಂಬರ್ 4ರಂದು ಪ್ಯಾರಿಸ್ನಲ್ಲಿ ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲೂ ಮಾನವ ಹಕ್ಕುಗಳ ಪ್ರತಿಪಾದನೆ, ಜಾರಿಗೊಳಿಸುವಿಕೆ ಬಗ್ಗೆ ನಿರ್ಣಯಗಳನ್ನು ಅಂಗೀಕರಿಸಲಾಯಿತು. ಇದಕ್ಕೆ ಭಾರತ ಸೇರಿದಂತೆ ವಿಶ್ವದ ಎಲ್ಲ ರಾಷ್ಟ್ರಗಳೂ ಸಮ್ಮತಿ ಸೂಚಿಸಿದ್ದು ವಿಶೇಷ ಸಂಗತಿ.
ಭಾರತದ ಸಂವಿಧಾನದಲ್ಲಿ ಉಲ್ಲೇಖಿಸಿರುವ ಪ್ರಕಾರ ಯಾವುದೇ ಧರ್ಮ, ಲಿಂಗ, ಜನಾಂಗ, ಬಣ್ಣ, ಭಾಷೆ, ರಾಜಕೀಯ ಅಥವಾ ಇತರೆ ಸಂಗತಿ ಬಳಸಿ ಯಾರಿಗೂ ತಾರತಮ್ಯ ಮಾಡಬಾರದು. ಅವರವರ ವ್ಯಕ್ತಿತ್ವಗಳನ್ನು ಗೌರವಿಸಬೇಕು. ಯಾರದ್ದೇ ಸ್ಥಾನಮಾನವನ್ನು ಕೀಳಾಗಿ ಕಾಣುವುದು ಸಲ್ಲ. ಎಲ್ಲ ಮಾನವರಿಗೂ ಜೀವಿಸುವ ಸ್ವಾತಂತ್ರ ಇರುವ ಕಾರಣ ಎಲ್ಲರೂ ಸಮಾನರಾಗಿದ್ದಾರೆ. ಇದನ್ನೇ ` ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು’ ಎಂದು ಹೇಳಬಹುದು.
ಮಾನವ ಹಕ್ಕುಗಳು ಎಂದರೆ ಪ್ರಪಂಚದ ಪ್ರತಿಯೊಬ್ಬ ವ್ಯಕ್ತಿಗೂ ಹುಟ್ಟಿನಿಂದ ಸಾವಿನವರೆಗೆ ಇರುವ ಮೂಲಭೂತ ಹಕ್ಕುಗಳು ಮತ್ತು ಸ್ವಾತಂತ್ರಗಳು. ಮಾನವ ಹಕ್ಕುಗಳು ಇಲ್ಲದೆ ನಾವು ಮಾನವರಾಗಿ ಬದುಕಲು ಸಾಧ್ಯವಿಲ್ಲ.
ನೀವು ಪ್ರಪಂಚದ ಯಾವ ಭಾಗದಿಂದ ಬಂದಿದ್ದೀರಿ, ನೀವು ಯಾವ ಭಾಷೆ ಆಡುತ್ತೀರಿ, ಯಾವ ಧರ್ಮವನ್ನು ನಂಬುತ್ತೀರಿ ಅಥವಾ ನಿಮ್ಮ ಜೀವನವನ್ನು ಹೇಗೆ ನಡೆಸುತ್ತೀರಿ ಎಂಬುದರ ಹೊರತಾಗಿಯೂ ಹಕ್ಕುಗಳು ಎಲ್ಲ ಮಾನವರಿಗೂ ಸಮಾನವಾಗಿವೆ. ಅವುಗಳನ್ನು ಎಂದಿಗೂ ನಮ್ಮಿಂದ ಕಸಿಯಲು ಸಾಧ್ಯವಿಲ್ಲ ಎಂಬುದು ಬಹು ವಿಶೇಷ.
ಭಾರತದ ಸಂವಿಧಾನದ ಪರಿಚ್ಛೇದ 3 ರಲ್ಲಿ ಪ್ರತಿಯೊಬ್ಬ ಭಾರತೀಯ ನಾಗರಿಕನಿಗೆ ಕಡ್ಡಾಯವಾಗಿ ನೀಡಲೇಬೇಕಾದ ಹಕ್ಕುಗಳನ್ನು ಸ್ಪಷ್ಟವಾಗಿ ವಿವರಿಸಲಾಗಿದೆ. ಯಾವುದೇ ಪ್ರಜೆಯ ಮೂಲಭೂತ ಹಕ್ಕುಗಳಿಗೆ ಧಕ್ಕೆಯುಂಟಾದಾಗ, ಆತನ ಹಕ್ಕುಗಳನ್ನು ಮರುಸ್ಥಾಪಿಸುವ ಹೊಣೆಯನ್ನು ನ್ಯಾಯಾಂಗಕ್ಕೆ ನೀಡಲಾಗಿದೆ. ಎಲ್ಲ ರಾಜ್ಯಗಳ ಹೈಕೋರ್ಟ್ ಮತ್ತು ಭಾರತದ ಸುಪ್ರೀಂ ಕೋರ್ಟ್ ಇದನ್ನು ಸಮರ್ಥವಾಗಿ ನಿರ್ವಹಿಸುತ್ತಿದೆ.
ಸಂವಿಧಾನದ ವಿಧಿ 32 ಮತ್ತು 226 ರಲ್ಲಿ ನ್ಯಾಯಾಲಯಗಳಿಗೆ ನೀಡಿರುವ ರಿಟ್ ಅಧಿಕಾರಗಳ ಮೂಲಕ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ಗಳು ಪ್ರಜೆಗಳ ಹಕ್ಕುಗಳನ್ನು ಮರುಸ್ಥಾಪಿಸುತ್ತವೆ. ಇವುಗಳಲ್ಲದೆ ರಾಷ್ಟೀಯ ಮಾನವ ಹಕ್ಕುಗಳ ಆಯೋಗವು ರಾಷ್ಟೀಯ ಮಟ್ಟದಲ್ಲಿ ಸ್ಥಾಪನೆಯಾಗಿದೆ. ನಮ್ಮ ದೇಶದ ವಿವಿಧ ರಾಜ್ಯಗಳಲ್ಲಿ `ರಾಜ್ಯ ಮಾನವ ಹಕ್ಕುಗಳ ಆಯೋಗಗಳು ತಮ್ಮದೇ ವ್ಯಾಪ್ತಿಯಲ್ಲಿ ಸೇವೆ ಸಲ್ಲಿಸುತ್ತಿವೆ. ಯಾವುದೇ ಪ್ರಜೆಯ ಮಾನವ ಹಕ್ಕುಗಳಿಗೆ ಉಂಟಾಗುವ ಧಕ್ಕೆಯನ್ನು ಸರಿಪಡಿಸಲು ಅವಿರತ ಪ್ರಯತ್ನ ಮಾಡುತ್ತಿವೆ.
ವರ್ತಮಾನದ ಅವಲೋಕನ
ವರ್ತಮಾನದಲ್ಲಿ ನಾವು ಕಂಡ ಕೆಲವು ಸಂಗತಿಗಳ ಬಗ್ಗೆ ಒಂದು ದೃಷ್ಟಿ ಹರಿಸೋಣ. ಕಳೆದ ಎರಡು ವರ್ಷಗಳಲ್ಲಿ ವಿಶ್ವವನ್ನೇ ಕೋವಿಡ್ ಎಂಬ ಮಹಾಮಾರಿ ಕಾಡಿತು. ಕೋವಿಡ್ ಬಿಕ್ಕಟ್ಟಿನಿಂದಾಗಿ ಬಡತನ, ಅಸಮಾನತೆಗಳು ಹೆಚ್ಚಾದವು. ಇದರಿಂದ ಮಾನವ ಹಕ್ಕುಗಳಿಗೆ ಕೊಂಚ ಧಕ್ಕೆಯಾಗಿದೆ ಎನ್ನಬಹುದು. ಹೀಗಾಗಿ, ಕೋವಿಡ್ ಬಳಿಕದ ಜಗತ್ತಿನಲ್ಲಿ ಮಾನವ ಹಕ್ಕನ್ನು ಪ್ರಮುಖ ವಿಷಯವಾಗಿ ಪರಿಗಣಿಸಲಾಗಿದೆ. ಅದರ ಮೂಲಕ ಅಸಮಾನತೆಗಳನ್ನು ಹೋಗಲಾಡಿಸಿದರೆ ಮಾತ್ರ ಸುಸ್ಥಿರ, ನ್ಯಾಯಸಮ್ಮತ ಜಗತ್ತನ್ನು ಪುನರ್ನಿರ್ಮಿಸಬಹುದು ಎಂಬ ತೀರ್ಮಾನಕ್ಕೆ ಬರಲಾಗಿದೆ. ಹಾಗಾಗಿ ನಾವು ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಹಕ್ಕುಗಳನ್ನು ಉತ್ತೇಜಿಸುವ ಮತ್ತು ರಕ್ಷಿಸುವ ಹೊಣೆಗಾರಿಕೆಯನ್ನು ಹೊಂದಿದ್ದೇವೆ. ಹೊಸ ಜಗತ್ತಿಗೆ ಹೊಸ ರೀತಿಯ ಬದಲಾವಣೆಗಳನ್ನು ಅಳವಡಿಸಿಕೊಳ್ಳುವುದು ಅನಿವಾರ್ಯವಾಗಿದೆ. ಬದುಕುವ ಹಕ್ಕು ಎಲ್ಲರಿಗೂ ಇದೆ: ಮನುಷ್ಯನಿಗೆ ಮುಖ್ಯವಾಗಿ ಬೇಕಾಗಿರುವುದು ವಸತಿ, ಆಹಾರ ಹಾಗೂ ಬಟ್ಟೆ. ಇವುಗಳಿಲ್ಲದೆ ಮನುಷ್ಯನ ಜೀವನವನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಈ ಮೂಲ ಸವಲತ್ತುಗಳನ್ನು ಪಡೆಯುವುದು ಪ್ರತಿಯೊಬ್ಬ ಪ್ರಜೆಯ ಜನ್ಮಸಿದ್ಧ ಹಕ್ಕಾಗಿದೆ.
ಉಲ್ಲಂಘನೆ ಪ್ರಕರಣ
ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಮತ್ತು ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗುತ್ತಿರುವ ಅನೇಕ ಪ್ರಕರಣಗಳನ್ನು ನಾವು ಕಾಣುತ್ತಿದ್ದೇವೆ. ಇದು ನಿಜಕ್ಕೂ ನಾಗರಿಕ ಸಮಾಜ ತಲೆ ತಗ್ಗಿಸುವ ಸಂಗತಿಯಾಗಿದೆ.
ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಸಂವಿಧಾನ ಮಾತ್ರವಲ್ಲದೆ, ವಿಶೇಷ ಕಾಯಿದೆಗಳಿವೆ. ಜವಾಬ್ದಾರಿಯುತ ಶಿಕ್ಷಕರು ಮತ್ತು ನಾಗರಿಕರು
ಇವುಗಳ ಪ್ರಾಮುಖ್ಯತೆಯನ್ನು ಅರಿತಿರುವುದು ಅತಿ ಮುಖ್ಯವಾಗಿದೆ. ವಿಶ್ವಸಂಸ್ಥೆಯು ಪ್ರತಿವರ್ಷ ಜಾಗತಿಕ ಮಟ್ಟದಲ್ಲಿ ಮಕ್ಕಳ ಹಕ್ಕುಗಳ ಬಗೆಗಿನ ಸಮಾವೇಶ ಆಯೋಜಿಸುತ್ತಿದೆ. ಮಾನವ ಹಕ್ಕುಗಳು ಎಲ್ಲರಿಗೂ ಇವೆ. ಆದರೆ ಹಿರಿಯರಿಗಿಂತ ಹೆಚ್ಚುವರಿಯಾದ ರಕ್ಷಣೆ ಮತ್ತು ಮಾರ್ಗದರ್ಶನ ಮಕ್ಕಳಿಗೆ ಅಗತ್ಯವಿದೆ. ಮಕ್ಕಳು ತಮ್ಮದೆ ಆದ ವಿಶೇಷ ಹಕ್ಕುಗಳನ್ನು ಹೊಂದಿದ್ದು, ಅವುಗಳನ್ನು ನಮ್ಮ ಸಂವಿಧಾನವೂ ಪ್ರತಿಪಾದಿಸಿದೆ.
ಶಿಕ್ಷಣ, ಪೌಷ್ಟಿಕತೆ, ಬಾಲ್ಯದಲ್ಲಿ ಆರೈಕೆ, ಆರೋಗ್ಯ ಮತ್ತು ಅಭಿವೃದ್ಧಿ, ಸಾಮಾಜಿಕ ಭದ್ರತೆ, ಬಿಡುವು, ಮನರಂಜನೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಹಕ್ಕುಗಳನ್ನು ಹೊಂದಿದ್ದಾರೆ. ಮಗುವಿನ ಹಿತಾಸಕ್ತಿ, ತಾರತಮ್ಯ ರಾಹಿತ್ಯ, ಮಗುವಿನ ಅಭಿಪ್ರಾಯಕ್ಕೆ ಗೌರವ ತರುವಂತೆ ಕೆಲಸ ಮಾಡುವುದು ಪ್ರಮುಖವಾಗಿದೆ.
ಕುಟುಂಬದ ಪ್ರಾಮುಖ್ಯತೆಗೆ ಒತ್ತುಕೊಡುವುದು, ಮಕ್ಕಳ ಆರೋಗ್ಯಪೂರ್ಣ ಬೆಳವಣಿಗೆ ಆದ್ಯತೆ ನೀಡುವುದು, ಮಕ್ಕಳ ಅಭಿವೃದ್ಧಿಗೆ ಪೂರಕ ವಾತಾವರಣದ ನಿರ್ಮಾಣದತ್ತ ಗಮನ ಹರಿಸುವುದು ಇಂದಿನ ತುರ್ತು ಅಗತ್ಯವಾಗಿದೆ.
ಇಂದಿನ ಮಕ್ಕಳಿಗೆ ಸಮಾಜದಲ್ಲಿ ಸಮಾನ ಮತ್ತು ಉತ್ತಮ ಸ್ಥಾನ ದೊರಕಿಸುವ ಹೊಣೆಗಾರಿಕೆ ಎಲ್ಲರ ಮೇಲಿದೆ. ಇಂದಿನ ಮಕ್ಕಳೇ ನಾಳಿನ ಯುವಕರು, ಇಂದಿನ ಯುವಕರೇ ಭಾವಿ ಭಾರತದ ಪ್ರಜೆಗಳು.
ಮಕ್ಕಳ ಹಕ್ಕುಗಳನ್ನು ನಾವೆಲ್ಲರೂ ರಕ್ಷಣೆ ಮಾಡಿದರೆ ಮುಂಬರುವ ದಿನಗಳಲ್ಲಿ ಜವಾಬ್ದಾರಿಯುತ ಯುವ ಪಡೆಯನ್ನೇ ಕಾಣಬಹುದು. 18 ವರ್ಷಕ್ಕೆ ಮತದಾನ ಮಾಡುವ ಹಕ್ಕನ್ನು ಸಂವಿಧಾನ ನೀಡಿದೆ ಎಂದರೆ ಅದಕ್ಕೆ ತಕ್ಕ ಅರ್ಹತೆ ಮತ್ತು ಯೋಗ್ಯತೆಗಳನ್ನು ಹೊಂದಿರುವ ಸಮರ್ಥ ಯುವ ಸಮೂಹದ ನಿರ್ಮಾಣಕ್ಕೆ ಸಮಾಜ ಬೆಂಬಲ ನೀಡಬೇಕಿದೆ. ಈ ದಿಸೆಯಲ್ಲಿ ಎಲ್ಲರೂ ಚಿಂತನ- ಮಂಥನ ನಡೆಸಿ ಮಕ್ಕಳ ಮತ್ತು ಯುವಕರ ಹಕ್ಕುಗಳನ್ನು ಗೌರವಿಸಬೇಕಿದೆ. ಹಾಗಾದಾಗ ಮಾತ್ರ ಅನ್ಯಾಯ, ಅತ್ಯಾಚಾರ, ಅನಾಚಾರ, ವಿಧ್ವಂಸಕ ಕೃತ್ಯ, ರಾಷ್ಟ್ರವಿರೋಧಿ ಚಟುವಟಿಕೆಗಳನ್ನು ಹತ್ತಿಕ್ಕಲು ಸಾಧ್ಯವಾಗುತ್ತದೆ.
ಯುವಕರೇ ಜಾಗೃತರಾಗಿ
ಯುವಕರು ದೇಶದ ಬೆನ್ನೆಲುಬು. ಒಂದು ದೇಶದ ಪ್ರಗತಿಯ ಸೂಚ್ಯಂಕವನ್ನು ಅಳೆಯಬೇಕು ಎಂದರೆ ಅಲ್ಲಿ ಯುವ ಸಮೂಹ ಹೇಗಿದೆ ಎಂಬುದನ್ನು ತುಲನೆ ಮಾಡಬೇಕು ಎನ್ನುತ್ತಾರೆ. ಹಾಗಿದ್ದ ಮೇಲೆ ಸದೃಢ ದೇಶ ನಿರ್ಮಾತೃಗಳಾದ ಯುವಕರನ್ನು ರಾಷ್ಟ್ರಸೇವೆಗೆ ನೀಡಬೇಕು. ಇದಕ್ಕಾಗಿ ಬಾಲ್ಯದಲ್ಲೇ ಸಂಸ್ಕಾರವಂತ ಶಿಕ್ಷಣ, ಅಭಿವೃದ್ಧಿಪರ ಚಿಂತನೆ, ಸ್ಪಷ್ಟ ಗುರಿ ಮತ್ತು ದೇಶಭಕ್ತಿಯ ಕಿಚ್ಚನ್ನು ಅವರಲ್ಲಿ ಹೊತ್ತಿಸಿರಬೇಕು. ಮಹಿಳೆಯರನ್ನು ಗೌರವಿಸುವ, ಅವರ ಸಾಧನೆಗೆ ಬೆಂಬಲಿಸುವ ಮತ್ತು ಕ್ರಿಯಾತ್ಮಕ ಚಟುವಟಿಕೆಗಳಿಗೆ ಪ್ರೋತ್ಸಾಹಿಸುವ ಮನೋಭಾವ ಎಲ್ಲರಲ್ಲಿ ರೂಢಿಗತವಾಗಬೇಕು. ಆಗ ಮಾತ್ರ ಮಾನವ ಹಕ್ಕುಗಳ ದಿನಾಚರಣೆಗೆ ಪವಿತ್ರವಾದ ಅರ್ಥ ಬರುತ್ತದೆ.
ಸಂವಿಧಾನ, ಕಾನೂನುಗಳನ್ನು ಆದರಿಸುವ ಮನೋಭಾವ ನಮ್ಮ ಯುವ ಸಮೂಹದಲ್ಲಿ ಜಾಗೃತಿಗೊಳ್ಳಬೇಕು. ಅದಕ್ಕೆ ಮಾನವ ಹಕ್ಕುಗಳ ದಿನಾಚರಣೆ ಪ್ರೇರಕ ಮತ್ತು ಪೂರಕವಾಗಲಿ ಎಂದು ಈ ಸಂದರ್ಭ ಆಶಿಸೋಣ.
ಪ್ರಜಾಪ್ರಭುತ್ವದ ಜೀವಂತಿಕೆ ಇರುವುದೇ ನಾಗರಿಕ ಸಮಾಜದ ಸ್ವತಂತ್ರ ಬದುಕಿನಿಂದ. ಹಾಗಾಗಿ ಸಂವಿಧಾನ ಹಾಗೂ ಕಾನೂನು ನೀಡಿರುವ ಮಾನವ ಹಕ್ಕುಗಳನ್ನು ಬೆಂಬಲಿಸಿ, ಬಾಳಬೇಕಿದೆ. ಮತ್ತೊಬ್ಬರ ಸ್ವಾತಂತ್ರವನ್ನು ಗೌರವಿಸಿ ಬದುಕುವುದೇ ಮಾನವ ಹಕ್ಕುಗಳನ್ನು ಪಾಲನೆ ಮಾಡಿದಂತೆ. ಪ್ರತಿಯೊಬ್ಬ ಪ್ರಜೆಯೂ ಸ್ವತಂತ್ರವಾಗಿ ಜೀವಿಸುವ ಹಕ್ಕನ್ನು ಪಡೆದಿದ್ದು, ಅವುಗಳ ರಕ್ಷಣೆ ಮಾಡುವುದೇ ವಿಶ್ವ ಮಾನವ ಹಕ್ಕುಗಳ ದಿನದ ಪ್ರಮುಖ ಆಶಯಗಳಾಗಿವೆ. ಈ ದಿಸೆಯಲ್ಲಿ ನಾವೆಲ್ಲರೂ ಮಾನವೀಯ ಹಕ್ಕುಗಳ ಪ್ರತಿಪಾದನೆಗೆ ಕಂಕಣಬದ್ಧರಾಗೋಣ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post