ಕಲ್ಪ ಮೀಡಿಯಾ ಹೌಸ್ | ಸಾಗರ |
ಸಾಕು ನಾಯಿಗಳೊಂದಿಗೆ ಕಾದಾಟ ನಡೆಸಿದ ಆರೋಪದ ಹಿನ್ನೆಲೆಯಲ್ಲಿ (Street Dog) ಬೀದಿ ನಾಯಿಯೊಂದಕ್ಕೆ ಪರವಾನಗಿ ಇಲ್ಲದ ಬಂದೂಕಿನಿಂದ ಗುಂಡು ಹಾರಿಸಿ ಕೊಂದಿರುವ ಘಟನೆ (Shivamogga) ಶಿವಮೊಗ್ಗ ಜಿಲ್ಲೆಯ ಸಾಗರ (Sagar) ತಾಲೂಕಿನ ನಾಡವಳ್ಳಿ ಗ್ರಾಮದಲ್ಲಿ ನಡೆದಿದೆ.
ಘಟನೆಗೆ ಸಂಬಂಧಿಸಿದಂತೆ ಪ್ರಾಣಿ ಹತ್ಯೆ ಹಾಗೂ ಪರವಾನಗಿ ಇಲ್ಲದೆ ಬಂದೂಕು ಬಳಸಿದ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿರುವ ಆನಂದಪುರ ಪೊಲೀಸರು, ಲಿಂಗಮೂರ್ತಿ ಎಂಬಾತನನ್ನು ಬಂಧಿಸಿದ್ದಾರೆ.
ದನ ಮೇಯಿಸಲು ತೆರಳಿದ್ದ ವ್ಯಕ್ತಿಯ ಹಿಂದೆ ಬಂದ ನಾಯಿ
ನಾಡವಳ್ಳಿ ಗ್ರಾಮದ ಬೋರೆಪ್ಪ ಎಂಬುವವರು ದನಗಳನ್ನು ಮೇಯಿಸಲು ತೆರಳಿದ್ದ ಸಂದರ್ಭದಲ್ಲಿ ಕಂದು ಬಣ್ಣದ ಗಂಡು ಬೀದಿ ನಾಯಿಯೊಂದು ಅವರ ಹಿಂದೆ ಬಂದಿದೆ ಎನ್ನಲಾಗಿದೆ.
ನಂತರ ಗ್ರಾಮದ ಮಾರ್ಗದಲ್ಲಿ ಸಾಗುತ್ತಿದ್ದ ಬೀದಿ ನಾಯಿ, ಲಿಂಗಮೂರ್ತಿ ಎಂಬಾತನ ಮನೆಯ ಸಮೀಪಕ್ಕೆ ತೆರಳಿದೆ.
Also read>> ಹೊಸಪೇಟೆ–ಅರಸೀಕೆರೆ ನಡುವೆ ವಿಶೇಷ ಅನ್ರಿಸರ್ವ್ಡ್ ಡೆಮು ರೈಲು ಸೇವೆ : ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್
ಸಾಕು ನಾಯಿಗಳೊಂದಿಗೆ ಕಾದಾಟ
ಈ ವೇಳೆ ಮನೆಯಲ್ಲಿದ್ದ ಸಾಕು ನಾಯಿಗಳು ಮತ್ತು ಬೀದಿ ನಾಯಿಯ ನಡುವೆ ಕಚ್ಚಾಟ ಹಾಗೂ ಕಾದಾಟ ನಡೆದಿದೆ ಎಂದು ತಿಳಿದುಬಂದಿದೆ. ಇದರಿಂದ ಆಕ್ರೋಶಗೊಂಡ ಲಿಂಗಮೂರ್ತಿ, ತನ್ನ ಮನೆಯಲ್ಲಿದ್ದ ಪರವಾನಗಿ ಇಲ್ಲದ ಬಂದೂಕನ್ನು ಬಳಸಿಕೊಂಡು ಬೀದಿ ನಾಯಿಯ ಮೇಲೆ ಗುಂಡು ಹಾರಿಸಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಗುಂಡೇಟಿನಿಂದ ನಾಯಿ ಗಂಭೀರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿ ಸ್ಥಳದಲ್ಲೇ ಮೃತಪಟ್ಟಿದೆ ಎನ್ನಲಾಗಿದೆ.
ಘಟನೆ ಗ್ರಾಮದಲ್ಲಿ ಆತಂಕಕ್ಕೆ ಕಾರಣವಾಗಿದ್ದು, ಬೀದಿ ನಾಯಿಯನ್ನು ಬಂದೂಕಿನಿಂದ ಗುಂಡು ಹಾರಿಸಿ ಕೊಂದಿರುವ ವಿಷಯ ಪೊಲೀಸರ ಗಮನಕ್ಕೆ ಬಂದಿದೆ.
Sagar : ಪ್ರಕರಣ ದಾಖಲಿಸಿ ಆರೋಪಿಯ ಬಂಧನ
ಪ್ರಕರಣದ ಕುರಿತು ಮಾಹಿತಿ ಪಡೆದ ಆನಂದಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪ್ರಾಣಿ ಹತ್ಯೆ ಹಾಗೂ ಪರವಾನಗಿ ಇಲ್ಲದ ಬಂದೂಕು ಬಳಸಿದ ಆರೋಪದಡಿ ಲಿಂಗಮೂರ್ತಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ತನಿಖೆಯ ಭಾಗವಾಗಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಈ ಕುರಿತು ಆನಂದಪುರ ಪೊಲೀಸ್ ಠಾಣೆಯ ಪಿಎಸ್ಐ ಪ್ರವೀಣ್ ಅವರು ಪ್ರಕರಣ ದಾಖಲಿಸಿಕೊಂಡಿದ್ದು, ಅಕ್ರಮವಾಗಿ ಬಂದೂಕು ಹೊಂದಿರುವುದು ಹಾಗೂ ಪ್ರಾಣಿಯ ಮೇಲೆ ಗುಂಡು ಹಾರಿಸಿರುವ ಆರೋಪದ ಕುರಿತು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 








