ನವದೆಹಲಿ: ಸಂವಿಧಾನದ ವಿಧಿ 370ನ್ನು ರದ್ದು ಮಾಡುವ ಮೂಲಕ ಕಣಿವೆ ರಾಜ್ಯ ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ಹಿಂಪಡೆಯುವ ಮೂಲಕ ದೇಶದ ಮೊದಲ ಗೃಹಸಚಿವ ಸರ್ದಾರ್ ವಲ್ಲಭಾಬಾಯ್ ಪಟೇಲ್ ಅವರ ಕನಸನ್ನು ನಾವು ನನಸು ಮಾಡಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಎರಡನೆಯ ಬಾರಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ನಡೆಯುತ್ತಿರುವ 73ನೆಯ ಸ್ವತಂತ್ರೋತ್ಸವದ ಅಂಗವಾಗಿ ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ನಮ್ಮ ಸರ್ಕಾರ 2ನೆಯ ಬಾರಿ ಅಧಿಕಾರಕ್ಕೆ ಬಂದ 10 ವಾರಗಳೊಳಗೆ ಎಲ್ಲಾ ವಿಧದಲ್ಲಿಯೂ ಅಭಿವೃದ್ಧಿಯತ್ತ ಹೆಜ್ಜೆ ಇಟ್ಟಿದ್ದೇವೆ. 70ನೇ ವಿಧಿಯಿಂದಾಗಿ ಜಮ್ಮು ಕಾಶ್ಮೀರ ಹಾಗೂ ಲಡಾಖ್’ನಲ್ಲಿ ಭ್ರಷ್ಟಾಚಾರ, ಭಯೋತ್ಪಾದನೆ ಹೆಚ್ಚಾಗಿತ್ತು. ಮಹಿಳೆಯರು, ಮಕ್ಕಳು, ದೀನ ದಲಿತರ ಹಕ್ಕುಗಳನ್ನು ಕಸಿದುಕೊಳ್ಳಲಾಗಿತ್ತು. ನೈರ್ಮಲ್ಯೀಕರಣ ವ್ಯವಸ್ಥೆ ಎಂಬುದೇ ಇರಲಿಲ್ಲ ಇದನ್ನು ಹೇಗೆ ಒಪ್ಪಿಕೊಳ್ಳಲಿ ಎಂದರು.
ದೇಶದ ಜನರು ನಮಗೆ ಮತ್ತೊಮ್ಮೆ ಅಧಿಕಾರ ನಡೆಸಲು ಪೂರ್ಣಪ್ರಮಾಣದ ಬಹುಮತ ನೀಡಿದ್ದಾರೆ. ಈ ನಿಟ್ಟಿನಲ್ಲಿ ನಾವು ವಿಳಂಬ ಮಾಡದೆ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕಾಗಿದೆ. ಪ್ರತಿಯೊಂದು ವಲಯದಲ್ಲಿಯೂ ನಾವು ಮುಖ್ಯವಾದ ಕ್ರಮಗಳನ್ನು ಕೈಗೊಂಡಿದ್ದೇವೆ. ಇದರಲ್ಲಿ ಜಮ್ಮು-ಕಾಶ್ಮೀರ, ಲಡಾಖ್ ಹಾಗೂ ತ್ರಿವಳಿ ತಲಾಖ್ ಕೂಡಾ ಸೇರಿದೆ ಎಂದರು.
















