ಶಿವಮೊಗ್ಗ: ದೇಶದಾದ್ಯಂತ 73ನೆಯ ಸ್ವತಂತ್ರೋತ್ಸವವನ್ನು ಸಂಭ್ರಮ ಹಾಗೂ ಸಡಗರದಿಂದ ಆಚರಿಸಲಾಗುತ್ತಿದೆ.
ಇನ್ನೊಂದೆಡೆ ನೆರೆ ಹಾವಳಿಯಿಂದ ತತ್ತರಿಸಿರುವ ಜಿಲ್ಲೆಯಲ್ಲಿ ಸಂಕಟದ ನಡುವೆಯೇ ದೇಶದ ಹಬ್ಬವನ್ನು ಆಚರಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಶ್ರೀ ಕೆ.ಬಿ. ಶಿವಕುಮಾರ್ ಅವರ ಜಿಲ್ಲೆಯ ಜನತೆಗೆ ಪ್ರಮುಖ ಸಂದೇಶದ ರವಾನಿಸಿದ್ದು, ಈ ವಿಚಾರಗಳು ಮನಮುಟ್ಟುವಂತಿದೆ.
ಜಿಲ್ಲಾಧಿಕಾರಿಗಳ ಸಂದೇಶದ ಯಥಾವತ್ ಹೀಗಿದೆ:
ಶಿವಮೊಗ್ಗ ಜಿಲ್ಲೆಯ ಸಮಸ್ತ ಜನತೆಗೆ ಸ್ವತಂತ್ರೋತ್ಸವ ದ ಶುಭಾಶಯಗಳು.
ಈ ಶುಭ ಸಮಾರಂಭದಲ್ಲಿ ಭಾಗವಹಿಸಿರುವ ಗೌರವಾನ್ವಿತ ಜನಪ್ರತಿನಿಧಿಗಳೇ, ಹಿರಿಯ ಸ್ವಾತಂತ್ರ್ಯ ಹೋರಾಟಗಾರರೇ, ಸಂಘ ಸಂಸ್ಥೆಗಳ ಪ್ರತಿನಿಧಿಗಳೇ, ಮಾಧ್ಯಮ ಪ್ರತಿನಿಧಿಗಳೇ, ವಿದ್ಯಾರ್ಥಿ ವಿದ್ಯಾರ್ಥಿನಿಯರೆ, ಶಿವಮೊಗ್ಗದ ಎಲ್ಲ ನಾಗರಿಕ ಬಂಧುಗಳೆ,
ಇಂದು ದೇಶದಾದ್ಯಂತ 73ನೇ ಸ್ವಾತಂತ್ರ್ಯ ದಿನಾಚರಣೆಯನ್ನು, ಸಂಭ್ರಮ, ಸಡಗರದಿಂದ ಆಚರಿಸಲಾಗುತ್ತಿದೆ. ಇಂದು ಬ್ರಿಟೀಷರಿಂದ ನಮ್ಮ ಮಹಾನ್ ದೇಶ ಸ್ವತಂತ್ರಗೊಂಡ ಶುಭ ದಿನ. ಈಸ್ಟ್ ಇಂಡಿಯಾ ಕಂಪೆನಿ ಹೆಸರಿನಲ್ಲಿ ದೇಶಕ್ಕೆ ಕಾಲಿರಿಸಿ, ನಂತರ ಇಡೀ ದೇಶವನ್ನೇ ಸ್ವಾಧೀನಪಡಿಸಿದ ಬ್ರಿಟೀಷರಿಂದ ಮುಕ್ತಿ ಪಡೆದ ಸುದಿನ. ಇಂದಿನ ದಿನವನ್ನು ದೇಶದ ಪ್ರತಿಯೊಬ್ಬ ಪ್ರಜೆಯು ಸಡಗರ, ಸಂಭ್ರಮದಿಂದ ಆಚರಿಸುತ್ತಿದ್ದಾನೆ.
ಈ ದೇಶವನ್ನು ಬ್ರಿಟೀಷರ ಆಡಳಿತದಿಂದ ಮುಕ್ತಿಗೊಳಿಸಲು, ಸಾವಿರಾರು ಭಾರತೀಯರು ತಮ್ಮ ತನು, ಮನ, ಧನ ತ್ಯಾಗ ಮಾಡಿದ್ದಾರೆ. ದೇಶದ ಸ್ವಾತಂತ್ರ್ಯ ಚಳುವಳಿಯಲ್ಲಿ ಸಾವಿರಾರು ದೇಶಪ್ರೇಮಿಗಳ ಬಲಿದಾನವಿದೆ.
ಮಹಾತ್ಮಾ ಗಾಂಧಿ, ಜವಾಹರ ಲಾಲ್ ನೆಹರು, ಸರ್ದಾರ್ ವಲ್ಲಭಬಾಯಿ ಪಟೇಲ್, ಭಗತ್ ಸಿಂಗ್, ನೇತಾಜಿ ಸುಭಾಷ್ ಚಂದ್ರ ಬೋಸ್ ಸೇರಿದಂತೆ ಹಲವಾರು ಮಹಾನ್ ನಾಯಕರ ಪರಿಶ್ರಮದ ಫಲವಾಗಿ ನಾವಿಂದು ಸ್ವತಂತ್ರಗೊಂಡಿದ್ದೇವೆ. ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಎಲ್ಲವನ್ನೂ ತ್ಯಾಗ ಮಾಡಿದ ಎಲ್ಲರಿಗೂ, ಈ ಸಂದರ್ಭದಲ್ಲಿ ನನ್ನ ಪ್ರಣಾಮ ಸಲ್ಲಿಸ ಬಯಸುತ್ತೇನೆ.
ಶಿವಮೊಗ್ಗ ಸಾಂಸ್ಕೃತಿಕ ಮತ್ತು ಸಮಾಜವಾದಿ ಚಿಂತನೆಗಳ ನೆಲೆಗಟ್ಟಿನ ಜಿಲ್ಲೆಯಾಗಿದೆ. ಸಾಹಿತ್ಯ ಕ್ಷೇತ್ರದ ದಿಗ್ಗಜರಾದ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕುವೆಂಪು, ಯು.ಆರ್. ಅನಂತಮೂರ್ತಿ, ಜಿ.ಎಸ್. ಶಿವರುದ್ರಪ್ಪ, ಪಿ. ಲಂಕೇಶ್, ಪೂರ್ಣಚಂದ್ರ ತೇಜಸ್ವಿ ಅವರಂತ, ಮಹಾನ್ ಸಾಹಿತಿಗಳು ಹುಟ್ಟಿದ ಜಿಲ್ಲೆ ಎಂಬ ಹೆಮ್ಮೆ ನಮ್ಮದು.
ಸ್ವಾತಂತ್ರ್ಯ ಸಂಗ್ರಾಮದಲ್ಲಿ, ಶಿವಮೊಗ್ಗ ಜಿಲ್ಲೆಯ ಪಾತ್ರ ಗಣನೀಯ. ಶಿಕಾರಿಪುರ ತಾಲೂಕು ಈಸೂರು ದೇಶದ ಪ್ರಥಮ ಸ್ವಾತಂತ್ರ್ಯ್ರ ಗ್ರಾಮ ಎಂಬ ಹೆಗ್ಗಳಿಕೆ ನಮ್ಮದು. ಈಸೂರಿನಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದ 5 ಮಂದಿ ಹೋರಾಟಗಾರರು ದೇಶಕ್ಕಾಗಿ ತಮ್ಮ ಜೀವವನ್ನೇ ಅರ್ಪಿಸಿದ್ದಾರೆ.
ಸ್ವಾತಂತ್ರ್ಯ ಹೋರಾಟದಲ್ಲಿ ಮಹಿಳೆಯರು, ತಾಯಂದಿರ ಪಾತ್ರವೂ ಮುಖ್ಯವಾಗಿತ್ತು. ದೇಶಕ್ಕಾಗಿ ತ್ಯಾಗ ಮಾಡಿದ ಎಲ್ಲ ಮಹನೀಯರಿಗೆ, ಹೋರಾಟಗಾರರಿಗೆ ನನ್ನ ಸಹಸ್ರ ಸಹಸ್ರ ನಮನಗಳು.
ಇಂದು ನಮ್ಮ ದೇಶ ಕೃಷಿ, ವಿಜ್ಞಾನ ತಂತ್ರಜ್ಞಾನ, ಮೂಲಸೌಕರ್ಯ ಅಭಿವೃದ್ಧಿ ಕ್ಷೇತ್ರಗಳಲ್ಲಿ ನಾವು ಅಸಾಧಾರಣ ಪ್ರಗತಿ ಸಾಧಿಸಿದ್ದೇವೆ. ಭಾರತೀಯ ಭೂಸೇನೆ, ವಾಯುಸೇನೆ, ನೌಕಾಸೇನೆ ಪ್ರಬಲ ಶಕ್ತಿಯಾಗಿ ಬೆಳೆದಿವೆ. ವಿಶ್ವಮಟ್ಟದಲ್ಲಿ ನಾವು ಪ್ರಮುಖ ಶಕ್ತಿಯಾಗಿ ಬೆಳೆದಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ನಮ್ಮದೇ ಆದ ಹೆಸರು ಗಳಿಸಿದ್ದೇವೆ.
ಆಹಾರ ಉತ್ಪಾದನೆಯಲ್ಲಿ ಭಾರತ ಸ್ವಾವಲಂಬನೆಯನ್ನು ಸಾಧಿಸಿದೆ. ಬಹುಮುಖ್ಯವಾಗಿ ದೇಶದ ರಕ್ಷಣಾ ವ್ಯವಸ್ಥೆಯನ್ನು ಇನ್ನಷ್ಟು ಬಲಗೊಳಿಸಿ, ಸೈನಿಕರಲ್ಲಿ ಭರವಸೆ ಮೂಡಿಸುವ, ಅವರಲ್ಲಿ ವಿಶ್ವಾಸ ತುಂಬುವ ಕಾರ್ಯ ಮಾಡಲಾಗುತ್ತಿದೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರ ರೈತರು, ಮೀನುಗಾರರು, ನೇಕಾರರು ಸೇರಿದಂತೆ ಶೋಷಿತರ, ದುರ್ಬಲ ವರ್ಗದವರ ಏಳಿಗೆಗಾಗಿ ಕಾರ್ಯಕ್ರಮಗಳನ್ನು ರೂಪಿಸಿ ಅವರ ಬದುಕಿನಲ್ಲಿ ಹೊಸ ಭರವಸೆಯನ್ನು ಮೂಡಿಸಿವೆ.
ರೈತರಿಗೆ ಕೇಂದ್ರ ಸರ್ಕಾರ ಘೋಷಿಸಿರುವ ಕಿಸಾನ್ ಸನ್ಮಾನ್ ಯೋಜನೆಯಡಿ, ರಾಜ್ಯ ಸರ್ಕಾರ ಹೆಚ್ಚುವರಿಯಾಗಿ, ಪ್ರತಿ ರೈತರ ಖಾತೆಗಳಿಗೆ, 4ಸಾವಿರ ರೂಪಾಯಿ, ಎರಡು ಕಂತಿನಲ್ಲಿ ಹಾಕುವ ಯೋಜನೆಗೆ ಚಾಲನೆ ನೀಡಿದೆ. ಮೀನುಗಾರರ ಹಾಗೂ ನೇಕಾರರ ಸಾಲಮನ್ನಾ ಘೋಷಣೆಯಿಂದ, ಸಾವಿರಾರು ಮಂದಿ ಪ್ರಯೋಜನ ಪಡೆಯಲಿದ್ದಾರೆ.
ಶಿವಮೊಗ್ಗ ಜಿಲ್ಲೆಯಲ್ಲಿ, ಹಲವು ಪ್ರಮುಖ ನೀರಾವರಿ ಯೋಜನೆಗಳಿಗೆ ಚಾಲನೆ ನೀಡಲಾಗಿದೆ. ರೈತರ ಹೊಲಗಳಿಗೆ ನೀರು ಉಣಿಸುವ ಇನ್ನೂ ಹಲವು ಪ್ರಮುಖ ನೀರಾವರಿ ಯೋಜನೆಗಳನ್ನು ಜಾರಿಗೊಳಿಸುವ ಪ್ರಕ್ರಿಯೆ ಜಾರಿಯಲ್ಲಿದೆ.
ಈ ಬಾರಿ ಅನಿರೀಕ್ಷಿತವಾಗಿ ಸುರಿದ ಮಳೆಯಿಂದ ಸಾವಿರಾರು ಮಂದಿ ಆಶ್ರಯ ಕಳೆದುಕೊಂಡಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲಿ, ನೂರಾರು ಕುಟುಂಬಗಳು, ಮನೆ ಕಳೆದುಕೊಂಡು ಸಂತ್ರಸ್ತರಾಗಿದ್ದಾರೆ. ಜಿಲ್ಲೆಯ ಇತಿಹಾಸದಲ್ಲಿ ಇದುವರೆಗೂ ಆಗದಷ್ಟು ನಾಶ, ನಷ್ಟ ಉಂಟಾಗಿದೆ. ಜನರ ಬದುಕು ಕೊಚ್ಚಿ ಹೋಗಿದೆ. ಕುಸಿದ ಮನೆಗಳು, ಜರಿದ ಗುಡ್ಡಗಳು, ಮುಳುಗಿದ ತೋಟಗಳು, ಎಲ್ಲೆಲ್ಲೂ ನೀರೋ ನೀರು. ನೂರಾರು ಮಂದಿ ನೆರೆ ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ.
ಇಂತಹ ಸಂಕಷ್ಟದ ಸಂದರ್ಭದಲ್ಲಿ ಜನ-ಜಾನುವಾರುಗಳನ್ನು ರಕ್ಷಿಸುವ ಕೆಲಸ ಜಿಲ್ಲಾಡಳಿತದ ವತಿಯಿಂದ, ತಮ್ಮೆಲ್ಲರ ಸಹಕಾರದಿಂದ ಮಾಡಲಾಗಿದೆ.
ಪ್ರವಾಹದಿಂದ ಸಂಕಷ್ಟ ಅನುಭವಿಸುತ್ತಿರುವವರ ನೆರವಿಗೆ, ರಾಜ್ಯ ಸರ್ಕಾರ ಹೆಗಲು ಕೊಟ್ಟು ನಿಂತಿದೆ. ಪರಿಹಾರ ಕಾರ್ಯ ಚುರುಕುಗೊಳಿಸಲಾಗಿದೆ. ನೆರೆಯಿಂದ ಮನೆ, ಜಾನುವಾರು, ಕೃಷಿ ಭೂಮಿ ಕಳೆದುಕೊಂಡವರ ರಕ್ಷಣೆಗೆ ಸರ್ಕಾರ ಬದ್ಧವಾಗಿದೆ.
ಜನರ ಕಣ್ಣೀರನ್ನು ಒರೆಸಿ, ಅವರ ಬದುಕಿನಲ್ಲಿ ಭರವಸೆಯ ಆಶಾಕಿರಣ ಮೂಡಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಮಾನ್ಯ ಮುಖ್ಯಮಂತ್ರಿ ಅವರು ನೆರೆಪೀಡಿತ ಸ್ಥಳಗಳಿಗೆ ಭೇಟಿ ನೀಡಿ, ಸಂತ್ರಸ್ತರ ಕಣ್ಣೀರನ್ನು ಒರೆಸಿ, ಅವರ ಶಾಶ್ವತ ಪುನರ್ ವಸತಿಗೆ ಸೂಚನೆಗಳನ್ನು ನೀಡಿದ್ದಾರೆ.
ನಿರಾಶ್ರಿತರಿಗೆ ತಕ್ಷಣದ ಅಗತ್ಯಕ್ಕಾಗಿ, ಬಟ್ಟೆ, ಪಾತ್ರೆ ಹಾಗೂ ಆಹಾರ ಸಾಮಾಗ್ರಿ ಖರೀದಿಸಲು, ಪ್ರತಿ ಕುಟುಂಬಕ್ಕೆ 10 ಸಾವಿರ ರೂ. ತಕ್ಷಣದ ಆರ್ಥಿಕ ನೆರವು ನೀಡಲು ಆದೇಶಿಸಲಾಗಿದೆ. ಪ್ರವಾಹದಿಂದ ಮನೆಗಳನ್ನು ಕಳೆದುಕೊಂಡವರಿಗೆ ನೀಡಲಾಗುವ ಪರಿಹಾರದ ಮೊತ್ತವನ್ನು ಹೆಚ್ಚಿಸುವ ಪ್ರಕ್ರಿಯೆ ಜಾರಿಯಲ್ಲಿದೆ.
ಅನಿರೀಕ್ಷಿತವಾಗಿ, ಮುರಿದು ಬಿದ್ದ, ಸಾವಿರಾರು ಮಂದಿಯ ಬದುಕನ್ನು ಕಟ್ಟಿಕೊಡಲು ಎಲ್ಲರ ನೆರವು ಅಗತ್ಯವಿದೆ. ಈ ಕಾರ್ಯದಲ್ಲಿ, ಶಿವಮೊಗ್ಗದ ಜನತೆ ಜಿಲ್ಲಾಡಳಿತದೊಂದಿಗೆ, ಕೈ ಜೋಡಿಸಲು ಈ ಸಂದರ್ಭದಲ್ಲಿ ಮನವಿ ಮಾಡುತ್ತೇನೆ.
ಪರಿಹಾರ ಹಾಗೂ ಪುನರ್ವಸತಿ ಕಾರ್ಯದಲ್ಲಿ ನೂರಾರು ಮಂದಿ ತೊಡಗಿಸಿಕೊಂಡಿದ್ದಾರೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಸಹಾಯಹಸ್ತ ನೀಡಿ, ನೆರವಾಗುತ್ತಿರುವ ಎಲ್ಲರಿಗೂ ನಮನಗಳು.
ಹೋರಾಟದ ಫಲವಾಗಿ ದೊರೆತಿರುವ ಸ್ವಾತಂತ್ರ್ಯವನ್ನು, ಎಲ್ಲರೂ ಅರ್ಥಪೂರ್ಣವಾಗಿ ಬಳಸಬೇಕು.
ಸ್ವಾತಂತ್ರ್ಯ ಜನರ ನೆಮ್ಮದಿಯ ಬದುಕಿಗೆ ಪೂರಕವಾಗಬೇಕು. ಈ ನಿಟ್ಟಿನಲ್ಲಿ ದೇಶದ ಪ್ರತಿಯೊಬ್ಬರು ಕೆಲಸ ಮಾಡಬೇಕಿದೆ. ಇಂದಿನ ಈ ಶುಭ ಸಂದರ್ಭದಲ್ಲಿ, ಜಿಲ್ಲೆಯ ಎಲ್ಲಾ ಜನತೆಗೆ ಮತ್ತೊಮ್ಮೆ, ಸ್ವತಂತ್ರೋತ್ಸವದ ಶುಭಾಶಯಗಳನ್ನು ಹೇಳುತ್ತೇನೆ.
-ಶ್ರೀ ಕೆ.ಬಿ. ಶಿವಕುಮಾರ್
ಮಾನ್ಯ ಜಿಲ್ಲಾಧಿಕಾರಿಗಳು, ಶಿವಮೊಗ್ಗ
Discussion about this post