ಬೆಂಗಳೂರು: ಕನ್ನಡ ಚಿತ್ರರಂಗ ಕಂಡ ಅತ್ಯಂತ ಪ್ರತಿಭಾನ್ವಿತ ಹಿರಿಯ ನಟ ಲೋಕನಾಥ್ ಇಂದು ವಿಧಿವಶರಾಗಿದ್ದಾರೆ.
90 ವರ್ಷ ಲೋಕನಾಥ್ ವಯೋಸಹಜ ಅಸ್ವಸ್ಥತೆಯಿಂದ ಬಳಲುತ್ತಿದ್ದರು. ನಿನ್ನೆ ರಾತ್ರಿ 12 ಗಂಟೆ ವೇಳೆಗೆ ಅವರ ಕೊನೆಯ ಉಸಿರೆಳೆದಿದ್ದಾರೆ.
1927 ರ ಆಗಸ್ಟ್ 14ರಂದು ಬೆಂಗಳೂರಿನಲ್ಲಿ ಹನುಮಂತಪ್ಪ ಮತ್ತು ಗೌರಮ್ಮ ದಂಪತಿಗಳಿಗೆ ಜನಿಸಿದ ಲೋಕನಾಥ್ ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದ ಅವರು ಕುಟುಂಬದ ವ್ಯಾಪಾರಕ್ಕೆ ಆಸರೆಯಾಗಿರಲು ಓದು ಬಿಟ್ಟರು. ಮನೆಯಲ್ಲಿದ್ದ ವೇಳೆಯಲ್ಲಿ ಸಂಗೀತದ ಮೇಲಿನ ಆಸೆಯಿಂದ ಸಂಗೀತವನ್ನು ಸುಮ್ಮನೆ ಗುನುಗುತ್ತಿದ್ದರು. ತಬಲಾ ಕಲಿಯಬೆಕೆಂಬ ಆಸೆಗೆ ತಬಲಾ ತಂದಿಟ್ಟುಕೊಂಡಾಗ ಮನೆಯ ವಾತಾವರಣ ಅದಕ್ಕೆ ಸರಿಹೋಗುವುದಿಲ್ಲ ಎಂದು ಅದನ್ನು ಕೈ ಬಿಟ್ಟರು. ಸಂಪ್ರದಾಯಸ್ಥ ಕುಟುಂಬದ ವಿರೋಧದ ನಡುವೆ ರಂಗಭೂಮಿ ಪ್ರವೇಶ ಮಾಡಿದ್ದರು.
1970ರಲ್ಲಿ ತೆರೆಕಂಡಿದ್ದ ಸಂಸ್ಕಾರ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದ ಲೋಕನಾಥ್, ಸುಮಾರು 650 ಸಿನಿಮಾಗಳು ಮತ್ತು 1 ಸಾವಿರಕ್ಕೂ ಅಧಿಕ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಕೊನೆಯದಾಗಿ ಅವರು ಎಕೆ 56 ಮತ್ತು ಭೀಮಾ ತೀರದಲ್ಲಿ ಎಂಬ ಚಿತ್ರಗಳಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದರು.
ಚಿತ್ರರಂಗದಲ್ಲಿ ಅಂಕಲ್ ಎಂದೇ ಖ್ಯಾತಿ ಪಡೆದಿದ್ದ ಲೋಕನಾಥ್, ಶಂಕರ್ ನಾಗ್ ಮತ್ತು ಅನಂತ್ ನಾಗ್ ಅವರ ಮಿಂಚಿನ ಓಟ ಚಿತ್ರದ ಅಂಕಲ್ ಪಾತ್ರದ ಮೂಲಕ ಖ್ಯಾತಿಯ ಉತ್ತುಂಗಕ್ಕೆ ಏರಿದ್ದರು. ರಂಗಭೂಮಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಅವರು 1972 ರಿಂದ ‘ನಟರಂಗ’ದ ಪ್ರಮುಖ ನಟನಾಗಿ ‘ಸಮುದಾಯ’ ‘ಸೂತ್ರದಾರ’ ತಂಡಗಳ ಸುಮಾರು 1000 ಪ್ರದರ್ಶನಗಳಲ್ಲಿ ಭಾಗವಹಿಸಿದ್ದರು. ಭೂತಯ್ಯನ ಮಗ ಅಯ್ಯು ಸೇರಿದಂತೆ ೬೫೦ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಪೋಷಕ ಪಾತ್ರಗಳ ಮೂಲಕ ಲೋಕನಾಥ್ ಅವರು ಮನೆಮಾತಾಗಿದ್ದರು.
ನಾಗರಹಾವು ಚಿತ್ರದಲ್ಲಿ ರಾಮಾಚಾರಿ ಕಾಪಿ ಹೊಡೆದಾಗ ಆತನನ್ನು ಅವಮಾನಿಸಿದ್ದಕ್ಕಾಗಿ, ಆತನಿಂದ ಲೈಟು ಕಂಬಕ್ಕೆ ಕಟ್ಟಲ್ಪಟ್ಟ ಪ್ರಿನ್ಸಿಪಾಲ್ ಶ್ಯಾಮರಾಯರಾಗಿ, ಭೂತಯ್ಯನ ಮಗ ಅಯ್ಯು ಚಿತ್ರದಲ್ಲಿ ಚಪ್ಪಲಿ ಹೊಲೆಯುವ ಮಾಚನಾಗಿ, ಅದರಲ್ಲೂ ಭೂತಯ್ಯನ ಮನೆ ಉಪ್ಪಿನಕಾಯಿ ಜಾಡಿ ಕಾಲಿ ಮಾಡುವ ಅವರ ಅಭಿನಯ ಅಜರಾಮರವಾಗಿದೆ.
ಇಂದು ಮಧ್ಯಾಹ್ನ 2 ಗಂಟೆಯವರೆಗೂ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ಲೋಕನಾಥ್ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆ ಇಡಲಾಗುತ್ತದೆ. ಬಳಿಕ ಸಂಜೆ 4 ಗಂಟೆಗೆ ಬನಶಂಕರಿಯಲ್ಲಿರುವ ಚಿತಾಗಾರದಲ್ಲಿ ಅಂತಿಮ ವಿಧಿವಿಧಾನ ನಡೆಸಲಾಗುತ್ತದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
Discussion about this post