ಕಲ್ಪ ಮೀಡಿಯಾ ಹೌಸ್ | ಶಂಕರಘಟ್ಟ (ಶಿವಮೊಗ್ಗ) |
ಗ್ರಾಮೀಣ ಮತ್ತು ಹಿಂದುಳಿದ ಹಿನ್ನೆಲೆಯಿಂದ ಬಂದು ಪದವಿ ಪಡೆಯುತ್ತಿರುವ ವಿದ್ಯಾರ್ಥಿಗಳು ಕೌಶಲಗಳನ್ನು ವೃದ್ಧಿಸಿಕೊಳ್ಳುವ ಮೂಲಕ ಸಮಾಜದ ಬದಲಾವಣೆಗೆ ಶ್ರಮಿಸಬೇಕು ಮತ್ತು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳಬೇಕಿದೆ ಎಂದು ರಾಷ್ಟ್ರೀಯ ಶೈಕ್ಷಣಿಕ ತಂತ್ರಜ್ಞಾನ ಫೋರಂನ ಅಧ್ಯಕ್ಷ ಪ್ರೊ. ಅನಿಲ್ ಡಿ.ಸಹಸ್ರಬುಧೆ Prof. Anil D Sahasrabudhe ಕರೆ ನೀಡಿದರು.
ಇಂದು ಜ್ಞಾನ ಸಹ್ಯಾದ್ರಿಯಲ್ಲಿ ಕುವೆಂಪು ವಿಶ್ವವಿದ್ಯಾಲಯದ 35ನೇ ಘಟಿಕೋತ್ಸವದಲ್ಲಿ Kuvempu University 35th Convocation ಎಲ್ಲರಿಗೂ ನಮಸ್ಕಾರ ಎನ್ನುತ್ತಲೇ ಕನ್ನಡದಲ್ಲಿಯೇ ಪ್ರಧಾನ ಭಾಷಣ ಆರಂಭಿಸಿದ ಅವರು, ಭಾರತವು ಇಂದು ಜಾಗತಿಕವಾಗಿ ಮುಂಚೂಣಿಯಲ್ಲಿದ್ದು, ನೂರಕ್ಕೂ ಹೆಚ್ಚು ರಾಷ್ಟ್ರಗಳ ಗಣ್ಯರು ಹಾಗೂ ಉದ್ದಿಮೆಗಳ ಪ್ರಮುಖರು ನಮ್ಮ ದೇಶದತ್ತ ನೋಡುತ್ತಿದ್ದಾರೆ. ಶೀಘ್ರದಲ್ಲೇ ಫ್ರಾನ್ಸ್ನಲ್ಲಿ ನಡೆಯಲಿರುವ ಪ್ರದರ್ಶನದಲ್ಲಿ ಭಾರತದ ಸ್ಟಾರ್ಟ್-ಅಪ್ ಪ್ರತಿಭೆಗಳು ಭಾಗವಹಿಸಲಲಿರುವುದು ನಮ್ಮ ದೇಶದ ಹೆಮ್ಮೆಯ ವಿಷಯವಾಗಿದೆ ಎಂದರು.
ಭಾರತವು ಇಂದು ಬಾಹ್ಯಾಕಾಶ ವಿಜ್ಞಾನ ಮತ್ತು ಪರಮಾಣು ಶಕ್ತಿಯಲ್ಲಿ ಸ್ವಾವಲಂಬನೆಯನ್ನು ಸಾಧಿಸಿದೆ. ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳನ್ನು ಸ್ಥಾಪಿಸುವ ಮೂಲಕ ಯುವಜನರು ಉದ್ಯೋಗದಾತರಾಗಬೇಕು. ಐಟಿ ಕ್ಷೇತ್ರದಲ್ಲಿನ ಕ್ರಾಂತಿಯು ಭಾರತದ ಶಕ್ತಿಯನ್ನು ಜಗತ್ತಿಗೆ ಪರಿಚಯಿಸಿದೆ.ವಿದ್ಯಾರ್ಥಿಗಳು ಕೇವಲ ಎಂಜಿನಿಯರಿಂಗ್ ಅಥವಾ ವೈದ್ಯಕೀಯ ಕ್ಷೇತ್ರಕ್ಕಷ್ಟೇ ಸೀಮಿತವಾಗದೆ, ಸಮಾಜಶಾಸ್ತ್ರ, ಮನೋವಿಜ್ಞಾನ ಮತ್ತು ಉದ್ಯಮಶೀಲತೆಯಂತಹ ವಿವಿಧ ಜ್ಞಾನ ಶಾಖೆಗಳ ನಡುವೆ ಸಮನ್ವಯ ಸಾಧಿಸಬೇಕು ಎಂದು ಸಲಹೆ ನೀಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
