ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಮಹಮ್ಮದ್ ಶರೀಫರು ಶಿವಯೋಗಿ ಶರೀಫರಾಗಿ ಹಿಂದೂ-ಮುಸ್ಲಿಂ ಸಾಮರಸ್ಯ ಸಾರಿದ ಮಹಾಸಂತ. ನಾಡಿನ ಶ್ರೇಷ್ಠ ತತ್ತ್ವಪದಕಾರರಲ್ಲಿ ಒಬ್ಬರು. ಲೋಕಸಂಚಾರಗೈದ ಅವರು, ಜನರ ಆಡುಭಾಷೆಯಲ್ಲೇ ಗಹನವಾದ ತತ್ತ್ವಗಳನ್ನು ಮನವರಿಕೆ ಮಾಡಿಕೊಟ್ಟರು. ಸರಳತೆಯೇ ದೈವೀಭಾವಗಳನ್ನು ತಂದುಕೊಡುತ್ತದೆಂದೂ ಬ್ರಹ್ಮಾನಂದಕ್ಕೆ ಇದು ಮೆಟ್ಟಿಲೆಂದೂ ಲೋಕಕ್ಕೆ ಸಾರಿದರು.
ಉತ್ತರ ಕರ್ನಾಟಕವು ಅನೇಕ ಸಂತರನ್ನು ಪುಣ್ಯಕ್ಷೇತ್ರ. ಹುಬ್ಬಳ್ಳಿಯ ಸಿದ್ಧಾರೂಢರು, ನವಲಗುಂದದ ನಾಗಲಿಂಗಜ್ಜ. ಅಥಣಿಯ ಮುರುಘೇಂದ್ರರು, ಅಗಡಿ ಶೇಷಾಚಲಸ್ವಾಮಿಗಳು, ತಿಂಥಿಣಿ ಮೋನೇಶ್ವರರು. ಕಡಕೋಳ ಮಡಿವಾಳಪ್ಪ ಮುಂತಾದವರು ಜನಮಾನಸದಲ್ಲಿ ಬೆರೆತು ಹೋಗಿದ್ದಾರೆ. ಜಾತಿ, ಧರ್ಮಗಳನ್ನು ಮುಂತಾದವರು ಬದಿಗೊತ್ತಿ ಜನಮಾನಸದಲ್ಲಿ ಬೆರೆತು ಹೋಗಿದ್ದಾರೆ. ಜಾತಿ, ಧರ್ಮಗಳನ್ನು ಬದಿಗೊತ್ತಿ ಸಹೋಂತತ್ವವನ್ನು ಹಿಡಿದು ಕೆಲವರು ನಡೆದರೆ; ಇನ್ನೂ ಕೆಲವರು ದಾಸೋಹಂ ಭಾವದಲ್ಲಿ ನಡೆದಿದ್ದಾರೆ. ಇವರೆಲ್ಲರು ಆತ್ಮತತ್ತ್ವವೆಂದು ಹಿಡಿದು ನಡೆದವರೇ. ಅಲ್ಲಮಪ್ರಭು ಹೇಳಿದ ತನ್ನ ತಾನರಿದಡೆ ತನ್ನರಿವೆ ಗುರು ಎಂಬ ಮಹಾಸೂತ್ರವನ್ನು ಇಲ್ಲಿಯ ನೂರಾರು ಸಂತರು ಧ್ಯಾನಿಸಿದ್ದಾರೆ.
18ನೇ ಶತಮಾನದ ಅಂತ್ಯಭಾಗದಲ್ಲಿ ಧಾರ್ಮಿಕ ಜೀವನ ಸರ್ವನಾಶದ ಹಾದಿ ಹಿಡಿದಿತ್ತು. ಆಗ ಈ ಕವಿದ ಮಬ್ಬುಗತ್ತಲೆಯನ್ನು ನಾಶಗೈದು ಕರ್ನಾಟಕದ ಪುಣ್ಯಭೂಮಿಯಲ್ಲಿ ಪುಣ್ಯಪುರುಷರು ಉದಯಿಸುತ್ತಾರೆ.
ಲೋಕದಂತೆ ಬಾರರು, ಲೋಕದಂತೆ ಇರರು,
ಲೋಕದಂತೆ ಹೋಗರು ನೋಡಯ್ಯ,
ಪುಣ್ಯದಂತೆ ಬಪ್ಪರು, ಜ್ಞಾನದಂತೆ ಇಪ್ಪರು,
ಮುಕ್ತಿಯಂತೆ ಹೋಹರು ನೋಡಯ್ಯ
ಉರಿಲಿಂಗದೇವಾ, ನಿಮ್ಮ ಶರಣರು ಉಪಮಾತೀತರಾಗಿ ಉಪಮಿಸಬಾರದು
ಉರಿಲಿಂಗಪೆದ್ದಿಗಳ ಈ ಅನುಭಾವಮೃತಕ್ಕೆ ಅಮೃತದ ಕಲಶವಾಗಿ ಹುಟ್ಟಿ ಬಂದವರೇ ಶರೀಫ ಸಾಹೇಬರು. ಶರೀಫರ ತಂದೆ ಇಮಾಸಾಹೇಬರ ಹಾಗೂ ತಾಯಿ ಹುಜ್ಜುಮಾ. ಇವರಿಗೆ ಬಹಳ ದಿವಸಗಳಿಂದ ಮಕ್ಕಳಾಗಲಿಲ್ಲ. ಇವರು ಭಕ್ತೋದ್ಧಾರಕ್ಕಾಗಿ ಭೂಮಿಗಿಳಿದ ಭಗವಂತನೆಂದು ಹೆಸರುವಾಸಿಯಾದ ಹುಲಗೂರಿನ ಖಾದರಿಲಿಂಗನ ಬಳಿಗೆ ಭಕ್ತಿಯಿಂದ ಹೋದರು. ಅವರ ಸೇವೆಯನ್ನು ಮನಮುಟ್ಟಿ ಮಾಡಿದರು. ಮೋಕ್ಷವನ್ನು ನೀಡುವಂಥ ಸದ್ಗುರು ಖಾದಲಿಂಗರು ಇರುವಾಗ ವಂಶಾಭಿವೃದ್ಧಿಗೆ ಮಗನನ್ನು ಬೇಡುವುದು ಸರಿಯಲ್ಲ ಎಂಬ ಭಾವ ಇಮಾಮರಲ್ಲಿ ಭಾವಲಿಂಗವಾಯ್ತು. ಹೀಗೆ ಅವರು ಖಾದರಲಿಂಗರ ಸೇವೆಯಲ್ಲಿ ಹನ್ನೆರಡು ವರ್ಷ ಕಳೆದರು. ಇಷ್ಟು ವರ್ಷಗಳು ಗತಿಸಿದ ಮೇಲೆ ಕೂಡ್ರಿಸಿಕೊಂಡು, ಇಮಾಯ್ ನಿನ್ನ ನಿಷ್ಕಾಮಸೇವೆಗೆ ಅಲ್ಲಾ ಒಲಿದಿದ್ದಾನೆ. ಬಾ ಇತ್ತ, ಇದೋ ಫಲಪುಷ್ಪ ಸ್ವೀಕರಿಸೆಂದು ಪ್ರಸಾದ ನೀಡಿದರು. ಹಿಂದಣ ಏಳೇಳು ಜನ್ಮಾಂತರ ಪಾಪಗಳನ್ನು ಪರಿಹರಿಸಿ, ವಂಶಕ್ಕೆ ಹೆಸರು ತರುವ ಕುಲಪುತ್ರನಾಗುತ್ತಾನೆ ಎಂದು ಹರಸಿದರು. ಮಾನವ ಕುಲದ ಉದ್ಧಾರ ಮಡಲು ಜ್ಞಾನಮಯ ಹಣ್ಣಾಗಿ ಮೂಡಿಬಂದಂತೆ ಹಜ್ಜುಮಾ ಗರ್ಭವತಿಯಾದರು, ಬಯಕೆ ಬಳ್ಳಿ ಹೂಬಿಟ್ಟಿತು.
ಮಹಾತ್ಮ ಖಾದರಲಿಂಗರೇ ಬಂದು ಮಗುವಿಗೆ ಶರೀಫ ಎಂದು ನಾಮಕರಣ ಮಾಡಿದರಂತೆ, ಶರೀಫರು ಶಿಶುನಾಳದಲ್ಲಿ ಬೆಳೆಯುತ್ತಿರುವಾಗಲೇ, ವೇದ-ಪುರಾಣ-ಶಾಸ್ತ್ರಗಳನ್ನು ಸಮಗ್ರವಾಗಿ ಕರತಲಾಮಲಕ ಮಾಡಿಕೊಂಡ ಸಾಕಾರವಾಗಿ, ಬಾದಾಮಿಯ ಬನಶಂಕರಿಯೊಂದಿಗೆ ಮಾತನಾಡುವ ಇಚ್ಛಾಶಕ್ತಿಯನ್ನು ಹೊಂದಿದ್ದ ಗೋವಿಂದ ಭಟ್ಟರು, ಕುಳಿತಲ್ಲಿಯೇ ಶರೀಫ ಬೇಗ ಬಾರೋ ಎಂದು ಕನವರಿಸುತ್ತಿದ್ದರಂತೆ. ಗೋವಿಂದ ಭಟ್ಟರಂತಹ ಗುರುಗಳು ಜನ್ಮಾಂತರದ ಪುಣ್ಯದಿಂದ ಶರೀಫರಿಗೆ ಸಿಕ್ಕಿದ್ದು ಒಂದರ್ಥದಲ್ಲಿ ಪರಮಹಂಸರಿಗೆ ವಿವೇಕಾನಂದರು ಸಿಕ್ಕಂತೆ, ಗೋವಿಂದಭಟ್ಟರ ಗರಡಿಯಲ್ಲಿ ಪಳಗಿದ ಶರೀಫರು ದೇಹವೇ ದೇಗುಲ, ಈ ಮಸೂತಿಯಲ್ಲಿರುವ ಅಲ್ಲಮನಿಗೆ ಎಡೆಯನ್ನು ಅರ್ಪಿಸುವ ರೀತಿ ನೋಡಿದರೆ, ಹೊರಗಿನ ಗುರು ಗೋವಿಂದ ಭಟ್ಟರಾದರೆ ಅಂತರಂಗದ ಗುರು ಅಲ್ಲಮಪ್ರಭುದೇವರು.
ಗೋವಿಂದ ಭಟ್ಟರು ಕೂಡ ಶರೀಫರ ಆಧ್ಯಾತ್ಮಿಕ ಬೆಳವಣಿಗೆಯ ಮೇಲೆ ಲಕ್ಷವನ್ನು ಸಂಪೂರ್ಣ ಕೇಂದ್ರೀಕರಿಸಿ, ಶರೀಫಾ, ಜೀವನ ಎನ್ನುವ ಸಾಹಿತ್ಯವನ್ನು ಓದಿಕೊಂಡಿರುವೆ. ಓದಿಕೊಂಡದ್ದನ್ನು ಅರ್ಥೈಸಿಕೊ, ಅರ್ಥವಾದದ್ದು ಅನುಭವವಾಗಬೇಕು. ಈ ಹಸಿವು ಹೆಚ್ಚಾದಾಗ ನಿನಗೆ ಎಲ್ಲಿದ್ದರೂ ನಾನು ಅನ್ನ ನೀಡುತ್ತೇನೆ ಎಂದು ಹರಸಿ ಆಶೀರ್ವಧಿಸಿದರು.
ಗುರುಗೋಂವಿಂದರು ಉಪನಿಷತ್ತುಗಳ ಸಾರವನ್ನು ಶರೀಫರಿಗೆ ತಿಳಿಸಿಕೊಟ್ಟರು. ಬ್ರಹ್ಮ ಒಂದೇ ಬ್ರಹ್ಮನಾದ ಒಂದೇ, ಬ್ರಹ್ಮಾನಂದದಿ ಮುಣಗ್ಯಾಡ್ವುದು ನೋಡು, ಬಾಯಿಲೆ ಬ್ರಹ್ಮವ ಇವೇ ಮುಂತಾದ ತತ್ತ್ವಪದಗಳಲ್ಲಿ ಉಪನಿಷತ್ತು ಸಾರುವ ಅಯಮಾತ್ಮಾ ಬ್ರಹ್ಮ, ಅಹಂ ಬ್ರಹ್ಮಾಸ್ಮಿ, ಎಂಬ ಸೂತ್ರರೂಪಿ ಮಾತುಗಳ ವಿಸ್ತರಣೆಗಳನ್ನು ನಾವು ಕಾಣಬಹುದು. ಶರೀಫರು ಅತ್ಮ ಧ್ಯಾನದಲ್ಲಿ ತೊಡಗಿದರು; ಬ್ರಹ್ಮಧ್ಯಾನದಲ್ಲಿ ಲೀನರಾಗತೊಡಗಿದರು. ಶರೀಫರ ತಂದೆ-ತಾಯಿಗಳು ಮಗ ಹೀಗೆ ಅಲೆದಾಡುತ್ತಿರುವುದಕ್ಕೆ ಮದುವಯೇ ಸರಿಯಾದ ಮದ್ದೆಂದು ತಿಳಿದು ಕುಂದಗೋಳದ ನಾಯಕ ಮನೆತನಕ್ಕೆ ಸೇರಿದ ಫಾತಿಮಾ ಎಂಬಾಕೆಯೊಡನೆ ನಿಕಾ ನೆರವೇರಿಸಿದರು. ಶರೀಫರ ಮದುವೆಗೆ ಗೋವಿಂದ ಭಟ್ಟರು ಹಸಿರು ನಿಶಾನೆ ತೋರಿಸಿದರು. ಸ್ವತಃ ತಾಯಿ-ತಂದೆಯರನ್ನು ಮಕ್ಕಾ-ಮದೀನ ಸ್ವರೂಪವೆಂದು ತಿಳಿದಿದ್ದರಿಂದ ಮದುವೆ ಯಾವ ಅಡ್ಡಿಆತಂಕಗಳೂ ಇಲ್ಲದೆ ನಡೆಯಿತು. ಶರೀಪರ ಬಾಳಿನಲ್ಲಿ ಫಾತಿಮಾ ಚಂದ್ರಮಾ ಆಗಿ ಬಂದಳು. ಶರೀಫರೂ ಕೂಡ ಜಾಣ ಸಂಸಾರಿಗನಾಗಿ ಬಾಳಿದರು; ಹೆಂಡತಿಯನ್ನು ಬಲು ಗೌರವಯುತವಾಗಿ ನಡೆಸಿಕೊಂಡರು. ಅವರೊಂದು ತತ್ತ್ವಪದದಲ್ಲಿ ತಕ್ಕವಳೆನಿಸಿದಿ ನನ್ನ ಹೆಣ್ತೆ ಎಂದು ಹೇಳಿಕೊಂಡಿದ್ದಾರೆ. ಅವರ ದಾಂಪತ್ಯದ ಬಾಳಿನಲ್ಲಿ ಹೆಣ್ಣುಕೂಸು ಬೆಳ್ದಿಂಗಳಂತೆ ಜನ್ಮಿಸಿತು. ಅದರ ಹೆಸರು ಲತೀಮಾ. ಶರೀಫರು ಮಡದಿ-ಮಕ್ಕಳ ವ್ಯಾಮೋಹಕ್ಕೊಳಗಾಗದೆ, ಪ್ರಾಪಂಚಿಕ ವಿಷಯಗಳಲ್ಲಿ ಕುಂಬಾರಹುಳುವಿನಂತೆ ವ್ಯವಹರಿಸುತ್ತಿದ್ದರು. ಈ ನಡುವೆ ಹುಟ್ಟಿದ ಹೆಣ್ಣುಮಗು ಕೆಲದಿನಗಳಲ್ಲಿ ತೀರಿಕೊಂಡಿತು. ತವರುಮನೆಗೆ ಹೋಗಿದ್ದ ಫಾತಿಮಾ ಕೂಡ ಅಲ್ಲಿಯೇ ತೀರಿಕೊಂಡಳು. ಮಾವ ಅಂತ್ಯಕ್ರಿಯೆಗೆ ಬರಬೇಕೆಂದಾಗ ಮೋಹದ ಹೆಂಡತಿ ತೀರಿದ ಬಳಿಕ ಮಾವನ ಮನೆಯ ಹಂಗಿನ್ಯಾಕೋ ಎಂದು ಹೇಳಿ ಪ್ರಪಂಚದ ಹಂಗನ್ನು ತೊರೆದು ಸ್ವತಂತ್ರರಾದರು.
ಶರೀಫರ ಸಾಹಿತ್ಯ
ಶರೀಫರು ಹಲವು ಪ್ರಕಾರಗಳಲ್ಲಿ ಪದ್ಯಗಳನ್ನು ರಚಿಸಿದರು. ಅವರ ಕಾವ್ಯ ವೈವಿಧ್ಯಮಯವಾದುದು. ಅವರು ತತ್ತ್ವಪದಗಳನ್ನು ಹಾಡಿದರು. ದಂಡಕಗಳನ್ನು ಹೇಳಿ ದೇವ-ದೇವಿಯನ್ನು ನುತಿಸಿದರು. ಕಾಲಜ್ಞಾನವನ್ನು ಹೇಳಿ ಜನರನ್ನು ಎಚ್ಚರಿಸಿದರು. ಲಾವಣಿಗಳನ್ನು ಹಡಿ ನೀತಿಬೋಧೆಯನ್ನು ಹೇಳಿದರು. ಹೋಳೀ ಹಾಡುಗಳ ಮೂಲಕ ಚರಿತ್ರೆಯನ್ನು ವಿವರಿಸಿದರು. ಅವರು ರಚಿಸಿದ ದಿವಾಯತ್ ಹೆಜ್ಜೆಮೇಳಕ್ಕೆ ಸೊಬಗನ್ನು ನೀಡಿದವು. ಮಂಗಳಾರತಿ ಪದಗಳನ್ನು ರಚಿಸಿ-ಜನತೆಗೂ ದೈವಕ್ಕೂ ಮಂಗಳವನ್ನು ಹೇಳಿದರು. ಶರೀಫರು ಜೀವನದ ನಿತ್ಯ ಘಟನೆಗಳನ್ನೆ ವಸ್ತುವಾಗಿ ಆರಿಸಿಕೊಂಡು ಆಧ್ಯಾತ್ಮ ನಡೆಯ ಮಾರ್ಗಗಳನ್ನು ನಿರೂಪಿಸಿದರು. ಶರೀಫರು ಚಿಕ್ಕಂದಿನಿಂದಲ್ಲಿ ಆ ಊರಿನ ಹೀರೇಮಠದ ಸಿದ್ಧರಾಮಯ್ಯ ಎಂಬ ವೀರಶೈವ ಪಂಡಿತರಿಂದ ವೀರಶೈವ ಧರ್ಮದ ಮರ್ಮವನ್ನು ತಿಳಿಸಿದರು. ಅವರು ಬಸವಣ್ಣ ಮತ್ತು ಅಲ್ಲಮಪ್ರಭುಗಳ ವಚನಗಳಿಗೆ ಮಾರುಹೋಗಿದ್ದರು. ಅವರೊಂದು ಕಡೆ ಬಸವಣ್ಣನಂಥ ಭಕ್ತನಿಲ್ಲ; ಪ್ರಭುದೇವರಂಥ ಪರಮಾತ್ಮನಿಲ್ಲ ಎಂದು ಮನದುಂಬಿ ಹಾಡಿದ್ದಾರೆ. ಮಣ್ಣುಬಿಟ್ಟು ಮಡಕೆಯಿಲ್ಲ; ತನ್ನ ಬಿಟ್ಟು ದೇವರಿಲ್ಲ ಎಂದು ಬಲು ಸೂಚ್ಯವಾಗಿ ಅದ್ವೈತದ ಪ್ರಮೇಯವನ್ನು ತಿಳಿಸಿದ್ದಾರೆ. ಭಕ್ತಿಯಿಂದ ಜ್ಞಾನ, ಜ್ಞಾನದಿಂದ ವಿರಕ್ತಿ, ವಿರಕ್ತಿಯಿಂದ ಮುಕ್ತಿ-ಎಂದು ಸಾರಿದ್ದಾರೆ. ಅವರು ಮ್ಮ ಹಾಡುಗಳಿಗೆ ಶಿಶುನಾಳಧೀಶ ಎಂಬ ಅಂಕಿತವನ್ನು ನೀಡಿದ್ದಾರೆ. ಇದು ಶಿಶುನಾಳಗ್ರಾಮದ ಬಯಲುಗುಡಿಯ ಸ್ತಂಭಮೂರ್ತಿ-ಬಸವಣ್ಣ. ಇದು ಊರಿನ ಜಾಗ್ರತ ದೇವತೆ.
ಶರೀಫರ ದೈವಭಕ್ತ, ಸಂತ, ಜ್ಞಾನಿ, ಕವಿ, ಸಮಾಜ ಸುಧಾರಕ, ವಿಚಾರವಾದಿ ಇವೆಲ್ಲ ಮುಖವೂ ಅವರು ರಚಿಸಿದ ಕೃತಿಗಳಿಂದ ನಮಗೆ ಕಾಣಬರುತ್ತದೆ. ಅವರು ಭಕ್ತಿ ಸಾಧನೆಯೇ ಜೀವನದ ಏಕಮಾತ್ರ ಉದ್ದೇಶವೆಂದು ತಿಳಿದಿದ್ದರು. ಎಲ್ಲಾ ಪಂಥಗಳು ಹೇಳುವುದು ಬ್ರಹ್ಮತತ್ತ್ವವೆಂದು ಅನುಭವದಿಂದಲೇ ಮನಗಂಡಿದ್ದರು. ಆ ಮೂಲಕ ಪರಮಾಥಸಾಧನೆಯ ಹಾದಿಯನ್ನು ಎಲ್ಲರಿಗೂ ತೋರಿಸಿದರು. ಲೋಕದಲ್ಲಿ ನಡೆಯುತ್ತಿದ್ದ ಅನೀತಿ, ಮೋಸ, ವಂಚನೆ, ಕಪಟತನ, ಬಾಹ್ಯಡಂಬರ, ಅಂಧಶ್ರದ್ಧೆ, ಶೋಷಣೆ, ಇವುಗಳನ್ನು ಕಂಡು ಕಟುವಾಗಿ ವಿರೋಧಿಸಿದರು. ಉಚ್ಚ-ನೀಚ, ಕುಲ-ಗೋತ್ರ ಇತ್ಯಾದಿ ಎಲ್ಲಾ ಬಗೆಯ ಭೇದಗಳನ್ನು ತ್ಯಜಿಸಬೇಕೆಂದು ಸಾರಿದರು. ಸರಳತೆಯೇ ದೈವೀಭಾವಗಳನ್ನು ತಂದುಕೊಡುತ್ತದೆಂದೂ ಬ್ರಹ್ಮಾನಂದಕ್ಕೆ ಇದು ಮೆಟ್ಟಿಲೆಂದೂ ಹೇಳುತ್ತಿದ್ದರು.
ಶರೀಫರ ಅಂತ್ಯಕ್ರಿಯೆಯನ್ನು ಹಿಂದೂ ಪದ್ಧತಿಯಂತೆ ನಡೆಸಬೇಕೊ ಮುಸ್ಲಿಂ ಸಂಪ್ರದಾಯದಂತೆಯೇ ಎಂಬ ಚರ್ಚೆ ಶಿಷ್ಯರಲ್ಲಿ ಗೊಂದಲವನ್ನು ಉಂಟು ಮಾಡಿತು. ಅಂತಿಮವಾಗಿ ಎರಡೂ ಕಡೆಯ ಶಿಷ್ಯರು ಒಪ್ಪಂದ ಮಾಡಿಕೊಂಡು ಅಪೂರ್ವರೀತಿಯಲ್ಲಿಯೇ ಶರೀಫರ ಸಂಸ್ಕಾರವನ್ನು ನಡೆಸಿದರು. ಒಂದು ಕಡೆ ಮುಸ್ಲಿಮರು ಕುರಾನ್ ಪಠಣ ಮಾಡಿದರು. ಇವ ನಮ್ಮವ ಎಂದು ಎಲ್ಲರೂ ಅಂತಿಮ ಯಾತ್ರೆಯಲ್ಲಿ ಭಾಗವಹಿಸಿದರು. ಮುಸ್ಲಿಂ ಬಂಧುಗಳು ಶರೀಫಾ ನಾನಾಕಿ ದೋಸ್ತಾರಾ ಎಂದರೆ ಹಿಂದೂಗಳು ಶರೀಫ ಶಿವಯೋಗಿ ಮಹಾರಾಜ್ ಕೀ ಜೈ ಎಂದರು. ಅವರ ಇಚ್ಛೆಯ ಮೇರೆಗೆ ತಾಯಿ-ತಂದೆಗಳ ಸಮಾಧಿ ಮಗ್ಗುಲಲ್ಲಿ ಅಂತ್ಯಕ್ರಿಯೆ ನೆರವೇರಿಸಿದರು. ಶರೀಫರ ಗದ್ದುಗೆ ವಿಶಿಷ್ಟವಾದುದು. ಅದು ಯಾವ ಧರ್ಮದ ಮಾದರಿಯಲ್ಲೂ ಇಲ್ಲ. ಅವರ ಗದ್ದುಗೆಯ ಎಡಭಾಗದಲ್ಲಿ ಮಹಮ್ಮದೀಯರು ಸಕ್ಕರೆಯನ್ನು ಓದಿಸುತ್ತಿದ್ದರೆ; ಬಲ ಭಾಗದಲ್ಲಿ ಹಿಂದೂಗಳು ಕಾಯಿ-ಕರ್ಪೂರ ಅರ್ಪಿಸುತ್ತಾರೆ. ಶರೀಫರ ಗದ್ದುಗೆಯಲ್ಲಿ ಮತೀಯ ಭಾವನೆಗೆ ಅವಕಾಶವಿಲ್ಲ. ಎಲ್ಲರೂ ಶರೀಫಜ್ಜನ ಮಕ್ಕಳೆಂಬಂತೆ ಏಕೋಭಾವ ನಮಗಿಂದು ಅಲ್ಲಿ ಕಾಣಸಿಗುತ್ತದೆ.
ಮಹಮ್ಮದ್ ಶರೀಫರು ಶಿವಯೋಗಿ ಶರೀಫರಾಗಿ ಹತ್ತೊಂಬತ್ತನೆಯ ಶತಮಾನದಲ್ಲಿ ಹಿಂದೂ-ಮುಸ್ಲಿಂ ಸಾಮರಸ್ಯದ ತಾತ್ತ್ವಿಕ ಭೂಮಿಕೆಯನ್ನು ಪಸರಿಸಿದ ಮಹಾಸಂತ. ವೃಷ್ಟಿಯಿಂದ ಸಮಷ್ಟಿ ಬಾಳುಮೆಯ ಮಹಾತತ್ತ್ವವನ್ನು ಸಾರುತ್ತ ಬೋಧ ಒಂದೇ ಬ್ರಹ್ಮಭಾವ ಒಂದೇ ಎಂಬ ಸಾರ್ವತ್ರಿಕ ಹಾಗೂ ತಾತ್ತ್ವಿಕ ಮೌಲ್ಯವನ್ನು ಸಾರಿ ಜನಮಾನಸದಲ್ಲಿ ನೆಲೆ ನಿಂತಿದ್ದಾರೆ.
ಶಿಶುನಾಳ ಶರೀಫ ಸಾಹೇಬರು ಭಾರತದೇಶ ಕಂಡರಿವ ಮಹಾಪುರುಷರಲ್ಲಿ ಒಬ್ಬರು. ಅವರು ಕರ್ನಾಟಕದ ಕಬೀರರೆಂದೇ ಜನಸಾಮಾನ್ಯರಿಂದ ಕೀರ್ತಿಸಲ್ಪಡುತ್ತಿದ್ದಾರೆ. ಶರೀಫರು ಭಕ್ತಾಗ್ರೇಸರು, ತತ್ತ್ವಜ್ಞಾನಿಗಳು, ಕವಿಗಳು, ಸಮಾಜಸುಧಾರಕರು, ನೀತಿ ಬೋಧಕರು, ಕ್ರಾಂತಿಪುರುಷರು; ಮಾತ್ರವಲ್ಲ, ಎಲ್ಲ ಮತಧರ್ಮಗಳ ಗುರಿಯೂ ಒಂದೇ ಎಂದು ಸಾರಿದ ಮಹಾಸಮನ್ವಯಕಾರರೂ ಹೌದು. ಅವರ ಕಾವ್ಯ ಸೃಷ್ಟಿಯೂ ಅಪೂರ್ವವಾದುದು. ಕೇವಲ ಸೌಂದರ್ಯಭಿವ್ಯಕ್ತಿಯಾಗಿ ಅವರ ಕಾವ್ಯಸೃಷ್ಟಿ ಹೊರಹೊಮ್ಮಿದುದಲ್ಲ. ಅದು ಅವರ ಅಂತರಂಗದ ಬೆಳಕಿನ ಸಹಜವಾದ ಅಭಿವ್ಯಕ್ತಿಯಾಯಿತು. ಜನರನ್ನು ಆಧ್ಯಾತ್ಮ ಮಾರ್ಗದಲ್ಲಿ ಕರೆದೊಯ್ಯಲು ಅವರ ಒಂದೊಂದು ತತ್ತ್ವಪದವೂ ಒದಗಿಬರುವಂಥದ್ದು. ಅವರ ತತ್ತ್ವಪದಗಳು ಏಕಕಾಲದಲ್ಲಿ ಕಾವ್ಯಗುಣವನ್ನೂ, ಆಧ್ಯಾತ್ಮಿಕತೆಯನ್ನೂ ಹೊಂದಿವೆ.
Get In Touch With Us info@kalpa.news Whatsapp: 9481252093
Discussion about this post