ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ಗ್ರಾಹಕರು ಕೇವಲ ಸೇವೆಗಳನ್ನು ಬಳಸುವವರಲ್ಲ, ತಮ್ಮ ಹಕ್ಕುಗಳ ಬಗ್ಗೆ ಅರಿವು ಹೊಂದಿರುವ ಜವಾಬ್ದಾರಿಯುತ ನಾಗರಿಕರಾಗಬೇಕು ಎಂದು ಕರ್ನಾಟಕ ಗ್ರಾಹಕ ಮತ್ತು ಸ್ವಯಂಸೇವಾ ಸಂಸ್ಥೆಗಳ ಸಂಘಟಿತ ಒಕ್ಕೂಟದ ಮುಖ್ಯ ಸಂಯೋಜಕ ಹಾಗೂ ಗ್ರಾಹಕ ಶಕ್ತಿ ಸಂಸ್ಥಾಪಕ ಸೋಮಶೇಖರ್ ಹೇಳಿದರು.
ದೂರಸಂಪರ್ಕ ಮತ್ತು ಪ್ರಸಾರ ಕ್ಷೇತ್ರದಲ್ಲಿ ಗ್ರಾಹಕರ ಹಕ್ಕುಗಳು, ಡಿಜಿಟಲ್ ಸುರಕ್ಷತೆ ಹಾಗೂ ಜಾಗೃತಿಯ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಕರ್ನಾಟಕ ಗ್ರಾಹಕ ಮತ್ತು ಸ್ವಯಂಸೇವಾ ಸಂಸ್ಥೆಗಳ ಸಂಘಟಿತ ಒಕ್ಕೂಟ (ರಿ), ಬೆಂಗಳೂರು, ಶಿವಮೊಗ್ಗ ಗ್ರಾಹಕ ಹಿತರಕ್ಷಣಾ ವೇದಿಕೆ, ಸ್ವಾಮಿ ವಿವೇಕಾನಂದ (ರಿ), ಶಿಕಾರಿಪುರ, ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯದ ಐಕ್ಯೂಎಸಿ (IQAC) ಹಾಗೂ ರಾಷ್ಟ್ರೀಯ ಸೇವಾ ಯೋಜನೆ (NSS) ಸಂಯುಕ್ತಾಶ್ರಯದಲ್ಲಿ ಗ್ರಾಹಕ ಜಾಗೃತಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು.
ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (TRAI) ದೇಶಾದ್ಯಂತ ಗ್ರಾಹಕರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ದೂರಸಂಪರ್ಕ ಮತ್ತು ಪ್ರಸಾರ ಕ್ಷೇತ್ರದಲ್ಲಿನ ಹಕ್ಕುಗಳು, ಸ್ಪ್ಯಾಮ್ ನಿಯಂತ್ರಣ, ಡಿಜಿಟಲ್ ಸುರಕ್ಷತೆ, ವಿವಿಧ ಸೇವೆಗಳ ಆಯ್ಕೆ ಹಾಗೂ ಗ್ರಾಹಕ ಸಂರಕ್ಷಣಾ ಕಾನೂನುಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲಾಗುತ್ತಿದೆ. ಮಾರುಕಟ್ಟೆಯಲ್ಲಿ ಗ್ರಾಹಕರ ಶೋಷಣೆಯನ್ನು ತಡೆಯಲು ಕಾನೂನುಗಳ ಬಗ್ಗೆ ತಿಳುವಳಿಕೆ ಅಗತ್ಯ ಎಂದು ಅವರು ಹೇಳಿದರು.
Also read: ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಆದ್ಯತೆ | ಬಳ್ಳಿಗಾವಿ ಗ್ರಾಮದಲ್ಲಿ ಶಾಸಕ ವಿಜಯೇಂದ್ರ ವಾಸ್ತವ್ಯ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಶಿವಕುಮಾರ್ ಜಿ.ಎಸ್. ಮಾತನಾಡಿ, ಆನ್ಲೈನ್ ವಹಿವಾಟುಗಳಲ್ಲಿ ವಿದ್ಯಾವಂತರೇ ಹೆಚ್ಚು ಮೋಸಕ್ಕೆ ಒಳಗಾಗುತ್ತಿದ್ದಾರೆ. ಇಂತಹ ಪ್ರಕರಣಗಳಲ್ಲಿ ಸಂಬಂಧಿತ ಪೋರ್ಟಲ್ಗಳಲ್ಲಿ ದೂರು ದಾಖಲಿಸಿದಾಗ ಮಾತ್ರ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
“ಜಾಗೃತ ಗ್ರಾಹಕ ತನ್ನನ್ನು ಮಾತ್ರವಲ್ಲ, ಸಮಾಜವನ್ನೂ ರಕ್ಷಿಸುತ್ತಾನೆ. ಸುರಕ್ಷಿತ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಗ್ರಾಹಕ ಹಕ್ಕುಗಳ ಬಗ್ಗೆ ಅರಿವು ಹೊಂದಬೇಕು” ಎಂದು ಅವರು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಕುವೆಂಪು ವಿಶ್ವವಿದ್ಯಾಲಯದ ಎನ್ಎಸ್ಎಸ್ ಕಾರ್ಯಕ್ರಮ ಸಂಯೋಜಕ ಹಾಗೂ ಶಿವಮೊಗ್ಗ ಗ್ರಾಹಕ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಡಾ. ಶುಭಮರವಂತೆ, ನಿವೃತ್ತ ಬಿಎಸ್ಎನ್ಎಲ್ ಉಪ ವಿಭಾಗೀಯ ಇಂಜಿನಿಯರ್ ಶಿವಪ್ಪ ಪಿ., ಟಿಆರ್ಎಐ ಪ್ರಾದೇಶಿಕ ಕಚೇರಿಯ ಸುದರ್ಶನ್ ಎ.ಎಸ್.ಒ., ಡೆಪ್ಯುಟಿ ಮ್ಯಾನೇಜರ್ ಎಸ್.ಎಂ. ಶಾಯಿದ್, ನೆಟ್ವರ್ಕ್ ತಂಡದ ಹೇಮಂತ್ ಕುಮಾರ್, ಎನ್ಎಸ್ಎಸ್ ಸಲಹೆಗಾರ್ತಿ ದಿವ್ಯ, ಜಿಲ್ಲಾ ಸಹಾಯಕ ಡಾ. ಕವಿತಾ ಸಾಗರ್, ಬಿಎಸ್ಎನ್ಎಲ್ ಜೆಟಿಒ ಧಾರ್ಮಿಕ ಹೆಗ್ಡೆ ಸೇರಿದಂತೆ ಮಹಾವಿದ್ಯಾಲಯದ ಪ್ರಾಧ್ಯಾಪಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸೌಂದರ್ಯ ಕೆ.ಆರ್. ಪ್ರಾರ್ಥನೆ ನೆರವೇರಿಸಿದರು. ರವಿಕುಮಾರ್ ಎನ್.ಜಿ. ಸ್ವಾಗತಿಸಿದರು. ಡಾ. ದೇವರಾಜ್ ವೈ. ವಂದಿಸಿದರು. ಡಾ. ವೀರೇಂದ್ರ ಕುಮಾರ ವಾಲಿ ಎಸ್. ಕಾರ್ಯಕ್ರಮ ನಿರೂಪಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 








