ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ಗುಣಾತ್ಮಕ ಶಿಕ್ಷಣದಿಂದ ಮಾತ್ರ ಉತ್ತಮ ಸಮಾಜವನ್ನು ನಿರ್ಮಾಣ ಮಾಡಲು ಸಾಧ್ಯ ಎಂದು ಕುಮದ್ವತಿ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಡಾ. ಎಂ. ವೀರೇಂದ್ರ ಅಭಿಪ್ರಾಯಪಟ್ಟರು.
ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಅಂಗಸಂಸ್ಥೆಯಾದ ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯದ ಪ್ರಸಕ್ತ ಶೈಕ್ಷಣಿಕ ಸಾಲಿನ ಸುಗಂಧ ಸಾಂಸ್ಕೃತಿಕ ವೇದಿಕೆಯ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಬಿಇಡಿ ಶಿಕ್ಷಣದಲ್ಲಿ ಕೇವಲ ಜ್ಞಾನವನ್ನು ಮಾತ್ರ ನೀಡದೇ, ವಿವಿಧ ಅರ್ಥಪೂರ್ಣ ಕಾರ್ಯಕ್ರಮಗಳ ತರಬೇತಿಯನ್ನೂ ಸಹ ನೀಡಲಾಗುತ್ತದೆ. ವ್ಯಕ್ತಿ ಜ್ಞಾನವಂತನಾದರೆ ಸಾಲದು ಆ ವ್ಯಕ್ತಿ ಪಡೆದ ಜ್ಞಾನವನ್ನು ಯಾವ ರೂಪದಲ್ಲಿ ಸಮಾಜಕ್ಕೆ ಕೊಡುಗೆಯಾಗಿ ನೀಡುತ್ತಾನೆ ಎಂಬುದು ಮುಖ್ಯ. ಇಲ್ಲಿ ನಾಯಕತ್ವ, ಸಂವಹನ, ಪ್ರಸ್ತುತೀಕರಣಗಳಂತಹ ಗುಣಗಳನ್ನೂ ಸಹ ಪಡೆದಾಗ ಶಿಕ್ಷಣಕ್ಕೆ ಬೆಲೆ ಎಂದರು.
ಶಿಕ್ಷಣವನ್ನು ಕಲಿಯುವಾಗ ಅತ್ಯಂತ ಪರಿಶ್ರಮ, ಶಿಸ್ತು, ಸಂಯಮ, ಸಮಯ ಪ್ರಜ್ಞೆ ಬಹಳ ಮುಖ್ಯ ಈ ನಿಟ್ಟಿನಲ್ಲಿ ಯಾರು ಇವುಗಳನ್ನು ಜಾಗರೂಕರಾಗಿ ನಿರ್ವಹಿಸುತ್ತಾರೋ ಅವರು ಜೀವನದಲ್ಲಿ ಏನಾದರೂ ಸಾಧನೆ ಮಾಡಲು ಸಾಧ್ಯ. ಯಾವ ಹುದ್ದೆಯೂ ಕಡಿಮೆ ಅಲ್ಲ, ಯಾವ ಹುದ್ದೆಯೂ ಹೆಚ್ಚು ಅಲ್ಲ ಆದರೆ, ಅವುಗಳನ್ನು ನಿಭಾಯಿಸುವುದರಲ್ಲಿ ಜಾಗರೂಕರಾಗಿರಬೇಕು ಎಂದರು.
ಸಮಾಜದಲ್ಲಿ ಹೆಚ್ಚು ಅಪರಾಧಗಳನ್ನು ಮಾಡುವ ಕೃತ್ಯಗಳು ವಿದ್ಯಾವಂತರಿಂದ ಎಂಬುದು ದುರದೃಷ್ಟಕರ. ಆದ್ದರಿಂದ, ಶಿಕ್ಷಣವನ್ನು ಆಸಕ್ತಿಯಿಂದ ಮತ್ತು ಪ್ರೀತಿಯಿಂದ ಕಲಿತಾಗ ಮಾತ್ರ ವಿದ್ಯಾರ್ಥಿಗಳಿಂದ ಉತ್ತಮ ಸಮಾಜವನ್ನು ನಿರ್ಮಿಸಲು ಸಾಧ್ಯ ಆದ್ದರಿಂದ ವಿದ್ಯಾರ್ಥಿಗಳು ಉತ್ತಮವಾಗಿ ಬರೆಯುವ ಹಾಗೂ ಓದುವ ಕೌಶಲವನ್ನು ಕಲಿಯಬೇಕು, ಇಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿಗೆ ಸಂಬಂಧಿಸಿದಂತೆ, ವಿದ್ಯಾರ್ಥಿಗಳು ಕಲಿಯುವ ಹಂತದಲ್ಲಿ ಉತ್ತಮ ಸಂಸ್ಕಾರಯುತವಾಗಿ ಕಲಿಯುವಂತಾಗಲಿ ಎಂದು ಆಶಿಸಿದರು.
ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯದದ ಪ್ರಾಚಾರ್ಯರಾದ ಡಾ. ಜಿ.ಎಸ್. ಶಿವಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ಕಲಿಯುವ ಹಂತಗಳಲ್ಲಿ ಏಳು ಪ್ರಮುಖ ಸಂಗತಿಗಳನ್ನು ಪಾಲಿಸಿದಾಗ ಮಾತ್ರ ಯಶಸ್ಸು ಸಾಧ್ಯ ಓದುವ ಹವ್ಯಾಸ, ಮಾನಸಿಕ ಆರೋಗ್ಯ, ಸಹಾಯ ಮಾಡುವುದು ಧನ್ಯವಾದಗಳನ್ನು ಹೇಳುವುದು, ಧನಾತ್ಮಕ ಮನೋಧೋರಣೆ, ಸಮಯ ಪಾಲನೆ, ಆತ್ಮಸ್ಥೆರ್ಯ, ಹೋಲಿಕೆ ಮಾಡಿಕೊಳ್ಳದಿರುವುದು ಇತ್ಯಾದಿ ಗುಣಗಳನ್ನು ಕಲಿಯುವ ಹಂತದಲ್ಲಿ ಮೈಗೂಡಿಸಿಕೊಂಡಾಗ ಮಾತ್ರ ಉತ್ತಮ ವಿದ್ಯಾರ್ಥಿಗಳಾಗಲು ಸಾಧ್ಯ ಎಂದರು.
ಬೇರೊಬ್ಬರನ್ನು ಮೆಚ್ಚಿಸುವ ಬದಲು ನಾವು ಉತ್ತಮ ದೇಶ ಪ್ರಜೆಯಾಗಬೇಕು. ಕಲಿಯುವಾಗ ತಾತ್ಸಾರ ಮಾಡಿದರೆ ಜೀವನ ಪೂರ್ತಿ ಅಳಬೇಕಾಗುತ್ತದೆ, ಈಗ ಉತ್ತಮವಾಗಿ ಕಲಿತರೆ ಜೀವನಪೂರ್ತಿ ಉತ್ತಮ ಜೀವನವನ್ನು ನಡೆಸಬೇಕಾಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಕಲಿಯುವಾಗ ಸರಿಯಾಗಿ ಕಲಿಯಬೇಕು, ಉತ್ತಮ ಪ್ರಜೆಯಾಗಿ ಎಂದು ನುಡಿದರು.
ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಶಿವಕುಮಾರ್ ಎಂ.ಬಿ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕುಮದ್ವತಿ ಪ್ರೌಢಶಾಲೆಯ ಪ್ರಾಚಾರ್ಯರಾದ ಪಿ. ವಿಶ್ವನಾಥ್, ಶಿಕ್ಷಣ ಮಹಾವಿದ್ಯಾಲಯದ ಬೋಧಕ, ಬೋಧಕೇತರ ವರ್ಗದವರು ಮತ್ತು ಪ್ರಥಮ ಮತ್ತು ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಾರ್ಷಿಕ ಸಂಚಿಕೆಗಳಾದ ಸುಜ್ಞಾನ, ವಾರ್ಷಿಕ ಚಟುವಟಿಕೆಗಳ ಸಂಚಿಕೆ ಹಾಗೂ ಭಾಷಾ ಸಂಘ (ಕನ್ನಡ – ಚಿಗುರು, ಇಂಗ್ಲೀಷ್ – Inspire), ಸಮಾಜ ವಿಜ್ಞಾನ (ಯುಗ ಸ್ಮೃತಿ) ವಿಜ್ಞಾನ ಸಂಘಗಳ ವಾರ್ಷಿಕ ಸಂಚಿಕೆ ಹಾಗೂ ವಿದ್ಯಾರ್ಥಿಗಳು ಪ್ರತಿದಿನ ಪ್ರಾರ್ಥನಾ ವಿಷಯ ಮಂಡನೆಯನ್ನು ಮಾಡಿದ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು.
ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗಾಗಿ ವಾರ್ಷಿಕ ಕ್ರೀಡಾಕೂಟವನ್ನು ಏರ್ಪಡಿಸಲಾಗಿತ್ತು. ವಿಜೇತರಾದವರಿಗೆ ಕಾರ್ಯಕ್ರಮದಲ್ಲಿ ಬಹುಮಾನವನ್ನು ನೀಡಿ ಪ್ರೋತ್ಸಾಹಿಸಲಾಯಿತು. 2024-2025ನೇ ಸಾಲಿನಲ್ಲಿ ಕಾಲೇಜಿನಲ್ಲಿ ನಡೆದ ಸಮಗ್ರ ಕಾರ್ಯಚಟುವಟಿಕೆಗಳ ಸಂಕ್ಷಿಪ್ತ ನೋಟ ವಾರ್ಷಿಕ ವರದಿಯನ್ನು ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಡಾ. ದೇವರಾಜ ವೈ., ವಾಚನ ಮಾಡಿದರು.
ಅರ್ಪಿತಾ ಹಾಗೂ ತಂಡದವರು ಪ್ರಾರ್ಥಿಸಿ, ಪ್ರಶಿಕ್ಷಣಾರ್ಥಿ ರಮೇಶ್ ಎಂ. ಗುತ್ತೇದಾರ್ ಸ್ವಾಗತಿಸಿದರು. ಪ್ರಶಿಕ್ಷಣಾರ್ಥಿಗಳಾದ ಕೆ.ಎಸ್. ಐಶ್ವರ್ಯ ವಂದನಾರ್ಪಣೆ ಮಾಡಿ, ಜಿ.ಸಿ. ಮೌನೇಶ್ ನಿರೂಪಿಸಿದರು.
ವೇದಿಕೆ ಕಾರ್ಯಕ್ರಮದ ನಂತರ ಚತುರ್ಥ ಸೆಮಿಸ್ಟರ್ ವಿದ್ಯಾರ್ಥಿಗಳಿಂದ ಗುರುವಂದನ ಕಾರ್ಯಕ್ರಮವನ್ನು ನೆರವೇರಿಸಿದರೆ, ದ್ವಿತೀಯ ಸೆಮಿಸ್ಟರ್ ವಿದ್ಯಾರ್ಥಿಗಳಿಂದ ಚತುರ್ಥ ಸೆಮಿಸ್ಟರ್ ವಿದ್ಯಾರ್ಥಿಗಳಿಗಾಗಿ ಬಿಳ್ಕೊಡುಗೆ ಕಾರ್ಯಕ್ರಮವನ್ನು ನೆರವೇರಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















