ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ಸಪ್ತ ಶಕ್ತಿ ಸಂಗಮ ಎಂಬುದು ಮಹಿಳೆಯರ ಸಬಲೀಕರಣವನ್ನು ಪ್ರೋತ್ಸಾಹಿಸುವ ಒಂದು ಕಾರ್ಯಕ್ರಮವಾಗಿದೆ. ಇದು ಸ್ತ್ರೀ ಶಕ್ತಿ, #WomenPower ನಾಯಕತ್ವ, ಸಾಂಸ್ಕೃತಿಕ ಜಾಗೃತಿ, ಮತ್ತು ಸಾಮಾಜಿಕ ಜವಾಬ್ದಾರಿಗಳಂತಹ ಏಳು ವಿಭಿನ್ನ ಶಕ್ತಿಗಳನ್ನು ಒಟ್ಟುಗೂಡಿಸಿ ಮಹಿಳೆಯರಲ್ಲಿ ಆತ್ಮವಿಶ್ವಾಸವನ್ನು ಮೂಡಿಸಲು ಪ್ರಯತ್ನಿಸುತ್ತದೆ ಎಂದು ಶಾಲಾ ಸಂಚಾಲಕ ಸಮಿತಿ ಸದಸ್ಯರಾದ ಸಾವಿತ್ರಿ ಜಿ. ಹೆಗಡೆ ತಿಳಿಸಿದರು.
ನಗರದ ಭವಾನಿ ರಾವ್ ಕೇರಿಯ ಮೈತ್ರಿ ಪ್ರಾಥಮಿಕ ಶಾಲೆ ಮತ್ತು ಕುಮದ್ವತಿ ಪ್ರೌಢಶಾಲೆಯಲ್ಲಿ #KumadatiHighSchool ವಿದ್ಯಾಭಾರತಿ ಕರ್ನಾಟಕ ಶಿವಮೊಗ್ಗ ಜಿಲ್ಲಾ ವತಿಯಿಂದ ಹಮ್ಮಿಕೊಂಡಿದ್ದ ಸಪ್ತ ಶಕ್ತಿ ಸಂಗಮ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ನಾವು ಪ್ರಯತ್ನ ಮಾಡಿದರೆ ಎಲ್ಲವೂ ಸಾಧ್ಯ. ಸ್ವ ಅಧ್ಯಾಯವನ್ನು ಬೆಳೆಸಿಕೊಂಡು,ತಮ್ಮ ಜ್ಞಾನವನ್ನು ವೃದ್ಧಿಸಿ, ಸಪ್ತಶಕ್ತಿಯ ಗುಣಗಳನ್ನು ಅರಿತುಕೊಂಡು ಮಕ್ಕಳನ್ನು ಬೆಳೆಸಿರಿ. ಸಂಘ ಶತಾಬ್ದಿಯ ಹಿನ್ನೆಲೆಯಲ್ಲಿ ಆಯೋಜಿಸಿದ ಸಪ್ತಶಕ್ತಿ ಸಂಗಮ ಇಲ್ಲಿ ಸಫಲವಾಗಿದೆ. ಹಾಗೆ ನಮ್ಮ ಮಾತೆಯರಲ್ಲಿ ಸಪ್ತಶಕ್ತಿಗಳು ಜಾಗೃತವಾಗಿ ಇದು ಸಮಾಜದ ಇತರ ಮಾತೆಯರಿಗೆ ಕೂಡ ಪ್ರೇರಣಾದಾಯಕವಾಗಿದೆ ಎಂದು ತಿಳಿಸಿದರು.
ನಿವೃತ್ತ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಹಿರಿಯ ಅಧಿಕಾರಿ ನಿರ್ಮಲಾ ಪೈ ಮಾತನಾಡಿ, ಕುಟುಂಬ ಮತ್ತು ಪರಿಸರವು ಪರಸ್ಪರ ಆಳವಾಗಿ ಸಂಬಂಧಿಸಿವೆ. ಏಕೆಂದರೆ ಕುಟುಂಬವು ವ್ಯಕ್ತಿಯ ಮೊದಲ ಪರಿಸರವಾಗಿದ್ದು, ಅದು ಅವರ ಮಾನಸಿಕ, ದೈಹಿಕ ಮತ್ತು ಸಾಮಾಜಿಕ ಬೆಳವಣಿಗೆಯ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತದೆ ಎಂದರು.
ಕುಟುಂಬದ #Family ಬೆಂಬಲ, ಸಂಬಂಧಗಳು ಮತ್ತು ಒಟ್ಟಾರೆ ವಾತಾವರಣವು ವ್ಯಕ್ತಿಯ ಯೋಗಕ್ಷೇಮವನ್ನು ಹೆಚ್ಚಿಸುತ್ತದೆ ಅಥವಾ ಕಡಿಮೆ ಮಾಡುತ್ತದೆ. ಪ್ರತಿಯಾಗಿ, ವ್ಯಕ್ತಿಯ ಪರಿಸರವು ಕುಟುಂಬ ರಚನೆಯ ಮೇಲೆ ಪ್ರಭಾವ ಬೀರಬಹುದು ಎಂದು ಕಥೆಗಳನ್ನು ಹೇಳುವುದರ ಮೂಲಕ ಈಗಿನ ಕುಟುಂಬ ವ್ಯವಸ್ಥೆ ಬಗ್ಗೆ ತಿಳಿಸಿದರು.
ಮೈತ್ರಿ ಮಾತೃ ಮಂಡಳಿಯ ಸದಸ್ಯರಾದ ಅಪರ್ಣಾ ಗುರುಮೂರ್ತಿ ಮಾತನಾಡಿ, ಹೆಣ್ಣು ಸಂಸಾರದ ಕಣ್ಣಾಗಿ ಭಾರತದ ಅಭಿವೃದ್ಧಿಯನ್ನು ಹೇಗೆ ನಿರ್ವಹಿಸಬಹುದು. ಇಂದು ಜಾಗತಿಕ ಮಟ್ಟದಲ್ಲಿ ಮಹಿಳೆ ಒಂದು ರತ್ನವಾಗಿ ಹೊಳೆಯುತ್ತಿದ್ದಾಳೆ. ಎಷ್ಟರ ಮಟ್ಟಿಗೆ ಎಂದರೆ ಬರೀ ಪುರುಷರೇ ಅಧ್ಯಕ್ಷ ಗಾದಿ ಏರುತ್ತಿದ್ದ ದೇಶಗಳಲ್ಲಿ ನಾವೂ ಏನು ಕಮ್ಮಿ ಇಲ್ಲ ಎಂದರು.
ಶಾಲಾ ಸಹ ಶಿಕ್ಷಕಿ ವಿಜಯಲಕ್ಷ್ಮಿ ಪ್ರಾಸ್ತಾವಿಕ ಮಾತನಾಡಿದರು. ಶಾಲಾ ಶಿಕ್ಷಕಿಯರು ಸಾಮೂಹಿಕ ಗೀತೆಗಳನ್ನು ಹಾಡಿದರು.
ವಿದ್ಯಾರ್ಥಿಗಳು ವಿವಿಧ ಧೀರ ನಾರಿಯರಾದ ರಾಣಿ ಅಬ್ಬಕ್ಕದೇವಿ, ಒನಕೆ ಓಬವ್ವ, ಅಕ್ಕಮಹಾದೇವಿ, ಕಿತ್ತೂರು ರಾಣಿ ಚೆನ್ನಮ್ಮ ಮತ್ತು ಸಾವಿತ್ರಿ ಬಾ ಫುಲೆ ಅವರ ವೇಷಭೂಷಣಗಳ ಜತೆಗೆ ಸಂದೇಶಗಳನ್ನು ನುಡಿದರು. ವಿಶೇಷ ಸಾಧನೆ ಮಾಡಿದ ಮಾತೆಯರಾದ ಕಾಂಚನಾ ಕುಮಾರ ಮತ್ತು ಸರೋಜ ಲೋಕೇಶಪ್ಪ ಅವರನ್ನು ಸನ್ಮಾನಿಸಲಾಯಿತು.
ವಿದ್ಯಾಭಾರತಿ ಕರ್ನಾಟಕ ಶಿವಮೊಗ್ಗ ಜಿಲ್ಲೆಯ ಸಹ ಕಾರ್ಯದರ್ಶಿ ಗೋಪಾಲಕೃಷ್ಣ, ಶಾಲಾ ಸಂಚಾಲನ ಸಮಿತಿ ಸದಸ್ಯರಾದ ಲೀಲಾವತಿ, ಶಾಲಾ ಪ್ರಾಚಾರ್ಯರಾದ ಪಿ. ವಿಶ್ವನಾಥ, ಪ್ರಭಾರಿ ಮುಖ್ಯ ಶಿಕ್ಷಕರಾದ ಪ್ರಶಾಂತ ಕುಬಸದ, ಶಾಲಾ ಶಿಕ್ಷಕರು, ಮಹಿಳಾ ಪೋಷಕರು ಉಪಸ್ಥಿತರಿದ್ದರು.
ಚಂದ್ರಕಲಾ ಪ್ರಾರ್ಥಿಸಿ, ವಿಕ್ಟೋರಿಯಾ ಸ್ವಾಗತಿಸಿದರು. ಕೆ.ಸಿ. ಲಕ್ಷ್ಮಿ ವಂದಿಸಿ, ಲಲಿತಾ ಕಾರ್ಯಕ್ರಮ ನಿರೂಪಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















