ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ಶಿಕಾರಿಪುರ ಹೇಳಿಕೇಳಿ ರಾಜಕೀಯ ಕ್ಷೇತ್ರದ ತವರುಮನೆ. ಘಟಾನಘಟಿಗಳೆಲ್ಲ ಈ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. ಮುಖ್ಯಮಂತ್ರಿಯೂ ಆಗಿದ್ದಾರೆ. ಈಗೆಲ್ಲಾ ಅದು ಹಳೆಯ ಕಥೆ. ಮುಂಬರು ವಿಧಾನಸಭಾ ಚುನಾವಣೆ ಹೊಸ ರೀತಿಯಲ್ಲಿ ತೆರೆದುಕೊಳ್ಳಲಿದೆ. ಈಗಾಗಲೇ ಈ ಕ್ಷೇತ್ರದಿಂದ ಸ್ಪರ್ಧಿಸಿ ಮುಖ್ಯಮಂತ್ರಿಯಾಗಿದ್ದ ಬಿ.ಎಸ್ ಯಡಿಯೂರಪ್ಪವರು ಚುನಾವಣೆಯಿಂದ ದೂರ ಸರಿದಿದ್ದಾರೆ. ಹಾಗಾಗಿ ಇದು ಒಂದು ಕುತೂಹಲವನ್ನು ಕಾಯ್ದುಕೊಂಡಿದೆ.
ಕಾಂಗ್ರೆಸ್ ಪಕ್ಷದಿಂದ ಹಲವು ಹೆಸರುಗಳು ಕೇಳಿಬರುತ್ತಿವೆ. ಅದರಲ್ಲಿ ವಕೀಲರೊಬ್ಬರು ಸ್ಪರ್ಧಿಸು ಆಕಾಂಕ್ಷೆ ಹೊಂದಿದ್ದಾರೆ. ಅವರೇ ಚಂದ್ರಕಾಂತ್ ಪಾಟೀಲ್. ವೃತ್ತಿಯಲ್ಲಿ ವಕೀಲರಾಗಿದ್ದರೂ ಕೃಷಿ ಮೂಲಕ ಭೂತಾಯಿಯ ಸೇವೆ ಮಾಡುತ್ತಿದ್ದಾರೆ. ಅಲ್ಲದೆ ಅಲ್ಲಲ್ಲಿ ಕ್ಷೇತ್ರದಲ್ಲಿ ಸದ್ದಿಲ್ಲದೆ ಸಮಾಜಸೇವೆ. ಜನಪರ ಧ್ವನಿಯೂ ಆಗಿದ್ದಾರೆ.
ಲಿಂಗಾಯತ ಸಮುದಾಯದ ಚಂದ್ರಕಾಂತ್ ಪಾಟೀಲ್ ಎಲ್ಲರೊಳಗೊಂದಾಗುವ ಎಲ್ಲಾ ಸಮುದಾಯಗಳೊಂದಿಗೆ ಬೆಸೆಯುವ ಜನಸ್ನೇಹಿ ಗುಣವನ್ನು ಹೊಂದಿದ್ದಾರೆ. ವೃತ್ತಿಯಲ್ಲಿ ವಕೀಲರಾಗಿ ವ್ಯವಸಾಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರೂ ಸಹ ರಾಜಕೀಯವಾಗಿ ಧುಮುಕಬೇಕು. ಕೈಪಕ್ಷದ ಕೈ ಬಲ ಪಡಿಸಬೇಕು. ಶಿಕಾರಿಪುರ ಕ್ಷೇತ್ರಕ್ಕೆ ಜನಧ್ವನಿಯಾಗಬೇಕು, ಹೊಸಬದಲಾವಣೆಗಳನ್ನು ತರಬೇಕೆಂದು ಚಂದ್ರಕಾಂತ್ ಪಾಟೀಲ್ ಉತ್ಸುಕರಾಗಿದ್ದಾರೆ. ಯುವ ಸಮುದಾಯವನ್ನು ಪ್ರತಿನಿಧಿಸುವ ಚಂದ್ರಕಾಂತ್ ಪಾಟೀಲ್ಗೆ ಹಿರಿಯಕಿರಿಯರ ಮೇಲೂ ಗೌರವ ಪ್ರೀತಿ ಇದೆ ಎಲ್ಲರನ್ನೂ ಸಮಾನ ಮನಸ್ಕರಾಗಿ ಕಾಣುತ್ತಾರೆಂದರೆ ಬಹುಶಃ ಅತಿಶಯೋಕ್ತಿಯಾಗಲಾರದು.
ಕಾಂಗ್ರೆಸ್ ಆಕಾಂಕ್ಷಿಗಳ ಪಟ್ಟಿಯಲ್ಲಿ ಟಾಪ್ ೩ರಲ್ಲಿ ಚಂದ್ರಕಾಂತ್ ಪಾಟೀಲ್ ಇವರ ಹೆಸರೂ ಕೇಳಿ ಬರುತ್ತಿದೆ. ಕಾಂಗ್ರೆಸ್ನಲ್ಲಿ ಟಿಕೆಟ್ ಆಕಾಂಕ್ಷಿಗಳು ಹೊಂದಾಣಿಕೆ ಮಾಡಿಕೊಳ್ಳುತ್ತಾರೆನ್ನುವ ಮಾತನ್ನು ತೆಗೆದುಹಾಕುವ ಯಾವುದಕ್ಕೂ ಹಿಂದೇಟು ಹಾಕದೆ ಧೈರ್ಯವಾಗಿ ಚುನಾವಣೆಯನ್ನು ಎದುರಿಸುತ್ತೇನೆ ಎನ್ನುವ ದಿಟ್ಟತನ ಚಂದ್ರಕಾಂತ್ ಪಾಟೀಲ್ ಅವರದ್ದಾಗಿದೆ.
ಚಂದ್ರಕಾಂತ್ ಪಾಟೀಲರ ಹಿನ್ನೆಲೆಯನ್ನು ನೋಡುವುದಾದರೆ, ಇವರ ಕುಟುಂಬವೂ ಕಾಂಗ್ರೆಸ್ ಹಿನ್ನೆಲೆಯುಳ್ಳ ಪಕ್ಷ. ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದಿಂದ ಬಂದಿರುವ ಚಂದ್ರಕಾಂತ್ ಪಾಟೀಲ್, ಅವರ ತಂದೆ-ತಾಯಿ ಕಾಂಗ್ರೆಸ್ನ ನಿಷ್ಠಾವಂತ ಕಾರ್ಯಕರ್ತರ ಪಟ್ಟಿಯಲ್ಲಿ ಸೇರುತ್ತಾರೆ. ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದಲ್ಲಿ ಜನಿಸಿದ ನಂತರ ರಕ್ತದಲ್ಲೇ ಹೋರಾಟ ಹಾಗೂ ನ್ಯಾಯದ ಮನೋಭಾವದಿಂದ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ಚಿಕ್ಕಂದಿನಿಂದ ಸಮಾಜ ಸೇವೆ ಮಾಡುತ್ತಿದ್ದಾರೆ.
ತಂದೆ ಮತ್ತು ತಾಯಿ ಇಬ್ಬರೂ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ಸೇವೆ ಸಲ್ಲಿಸುತ್ತಿದ್ದು ತಾಯಿ ಶಿಕಾರಿಪುರ ಪುರಸಭೆಯ ಮಾಜಿ ಅಧ್ಯಕ್ಷರಾಗಿ ಮತ್ತು 1997 ರಿಂದ 2004ರವರೆಗೆ ಶಿವ ಸಹಕಾರಿ ಬ್ಯಾಂಕ್ ನ ಸಂಸ್ಥಾಪಕ ನಿರ್ದೇಶಕರಾಗಿ, ಬಸವಾಶ್ರಮದ’ ನಿರ್ದೇಶಕರಾಗಿ, ಸತ್ಯಕ್ಕ ಸಹಕಾರಿ ಸಂಘದ ಅಧ್ಯಕ್ಷರಾಗಿ, ಮಾತೆಯ ಮಡಿಲು ಕೇಂದ್ರದ ಅಧ್ಯಕ್ಷರಾಗಿ, ಕದಳಿ, ವೇದಿಯ” ಅಧ್ಯಕ್ಷರಾಗಿ, “ತಾಲೂಕು: ಶರಣ ಸಾಹಿತ್ಯ ಪರಿಷತ್ವ’ ಉಪಾಧ್ಯಕ್ಷರಾಗಿ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ನ’ ಸದಸ್ಯರಾಗಿ ಸೇವೆ ಸಲ್ಲಿಸಿರುತ್ತಾರೆ .
1997ರಿಂದ ನಡೆದ ಎಲ್ಲಾ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಶಿಕಾರಿಪುರ ವಿಧಾನಸಭೆ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಾದ ಬಿ. ಏನ್. ಮಹಾಲಿಂಗಪ್ಪ, ಕೆ. ಶೇಖರಪ್ಪ, ಎಸ್. ಬಂಗಾರಪ್ಪ, ಎಚ್.ಎಸ್. ಶಾಂತವೀರಪ್ಪ ಗೌಡ, ಮತ್ತು ಗೋಣಿ ಮಾಲತೇಶ್ ಅವರ ಪರವಾಗಿ ಚುನಾವಣಾ ಪ್ರಚಾರದಲ್ಲಿ ತೊಡಗಿಸಿ ಕೊಂಡಿದ್ದಾರೆ. ಅದೇ ರೀತಿ ಶಿವಮೊಗ್ಗ ಲೋಕಸಭೆ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷದಿಂದ ಎಸ್.ಬಂಗಾರಪ್ಪ, ಆಯನೂರು ಮಂಜುನಾಥ್ (ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದಾಗ ಮಂಜುನಾಥ ಭಂಡಾರಿ ಮತ್ತು ಮಧು ಬಂಗಾರಪ್ಪ ಅವರ ಪರವಾಗಿ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ.
1999ರಿಂದ 2009ದ ಅವಧಿಗೆ ಶಿಕಾರಿಪುರ ಶರಣ ಸಾಹಿತ್ಯ ಪರಿಷತ್ನ ಉಪಾಧ್ಯಕ್ಷರಾಗಿ ಮತ್ತು ಹಲವು ಸಂಘ ಸಂಸ್ಥೆಗಳಲ್ಲಿ ಅಧ್ಯಕ್ಷರಾಗಿ, ನಿರ್ದೇಶಕರಾಗಿ ಸೇವೆ ಸಲ್ಲಿಸಿರುತ್ತಾರೆ. ಶಿಕಾರಿಪುರದ ಶಿವಶರಣೆ ಸತ್ಯಕ್ಕ ಮಹಿಳಾ ಗೃಹ ಕೈಗಾರಿಕಾ ಸಂಘದ ಸಂಸ್ಥಾಪಕ ನಿರ್ದೇಶಕರಾಗಿ ಮತ್ತು ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುತ್ತಾರೆ. ತಾಲೂಕಿನ ಜನರಿಗೆ ಚಿರಪರಿಚಿತರಾಗಿ ಮಹಿಳೆ ಮತ್ತು ಮಕ್ಕಳು, ಹಾಗೂ ದುಃಖಿತ ಮತ್ತು ಶೋಷಿತ ಮತ್ತು ಹಿಂದುಳಿದ ವರ್ಗಗಳ ಪರವಾಗಿ, ಸದಾ ಹೋರಾಟ ಮಾಡುತ್ತಾ, ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾ ಜನ ಮನದಲ್ಲಿ ಬೆರೆತಿದ್ದಾರೆ.
ಇವರಿಗೆ ಈ ಬಾರಿ ಕಾಂಗ್ರೆಸ್ನಿಂದ ಟಿಕೆಟ್ ಸಿಗುವ ಎಲ್ಲಾ ಅವಕಾಶ ಇದೆ. (ಫೋಟೋ ಇದೆ)
ಶಾಸಕ ಈಶ್ವರಪ್ಪ ವಿರುದ್ಧ ವೈ.ಹೆಚ್. ನಾಗರಾಜ್ ವಾಗ್ದಾಳಿ
ಉರಿ ಮತ್ತು ನಂಜನ್ನೇ ತುಂಬಿಕೊಂಡಿರುವ ಕೆ.ಎಸ್. ಈಶ್ವರಪ್ಪನವರ ಅಧರ್ಮದ ಮಾತುಗಳು ಮಿತಿಮೀರಿದ್ದು ಅವರ ರಾಜಕೀಯ ಜೀವನ ಅಂತ್ಯಗೊಳ್ಳಲಿದೆ ಎಂದು ಕೆಪಿಸಿಸಿ ಸದಸ್ಯ ವೈ.ಹೆಚ್. ನಾಗರಾಜ್ ಹೇಳಿದ್ದಾರೆ.
ಕಾಂಗ್ರೆಸ್ ಸಂಚಲನದಿಂದ ಬಿಜೆಪಿಯಲ್ಲಿ ಕಂಪನ ಆರಂಭವಾಗಿದೆ, ಇಡೀ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಹೊಸ ರಾಜಕೀಯ ಅಲೆಯ ಎಬ್ಬಿಸಿದೆ. ಈ ಅಲೆಯಲ್ಲಿ ಬಿಜೆಪಿ ಕೊಚ್ಚಿ ಹೋಗುವುದು ಖಚಿತವಾಗಿದೆ. ಅದರಲ್ಲೂ ಶಿವಮೊಗ್ಗದಲ್ಲಿ ಬಿಜೆಪಿಯಿಂದ ಯಾರೇ ಸ್ಪರ್ಧೆ ಮಾಡಿದರೂ ಕೂಡ ಕಾಂಗ್ರೆಸ್ ಗೆಲ್ಲುವುದರಲ್ಲಿ ಸಂಶಯವೇ ಇಲ್ಲ. ಬಿಜೆಪಿಯ ದುರಾಡಳಿತದಿಂದ ಜನರ ಬದುಕು ದುಸ್ತರವಾಗಿದೆ. ಬೆಲೆ ಏರಿಕೆಯ ನೋವಿನ ಜೊತೆಗೆ ನಂಜು ಮತ್ತು ಉರಿಯ ಬಿಜೆಪಿ ಮುಖಂಡರ ಮಾತುಗಳು, ಅವರ ಕೋಮುತನ, ಅಧರ್ಮದ ನಡೆ, ಸಂವಿಧಾನಕ್ಕೆ ಮಾಡುವ ಅಗೌರವ ಜನಪದ, ಪೌರಾಣಿಕ, ಐತಿಹಾಸಿಕ ಘಟನೆಗಳ ತಿರುಚುವಿಕೆಯಿಂದ ಜನರು ಬೇಸರ ಮಾತ್ರವಲ್ಲ, ಆಕ್ರೋಶ ಕೂಡ ವ್ಯಕ್ತಪಡಿಸುತ್ತಿದ್ದಾರೆ.
ಇದರ ಜೊತೆಗೆ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಪ್ರಣಾಳಿಕೆಯ ಘೋಷಣೆಗಳು ಬಡವರ ಗುಡಿಸಲುಗಳ, ಮಧ್ಯಮವರ್ಗದ ಮನ ಮನೆಗಳಲ್ಲಿ ಪ್ರತಿಧ್ವನಿಸುತ್ತಿವೆ. ಎಲ್ಲರಿಗೂ 200 ಯೂನಿಟ್ ವಿದ್ಯುತ್ ಉಚಿತ, ಮನೆಯ ಯಜಮಾನಿಗೆ ತಿಂಗಳಿಗೆ 2000 ರೂ., ಬಡವರಿಗೆ 10 ಕೆಜಿ ಅಕ್ಕಿ ಉಚಿತ, ನಿರುದ್ಯೋಗಿ ಪದವೀಧರರಿಗೆ 3000 ರೂ., ಡಿಪ್ಲೋಮೋ ಪಾಸಾದವರಿಗೆ 1500ರೂ. ಘೋಷಣೆಗಳು ಸೇರಿಕೊಂಡು ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪ? ಬಹುಮತ ಪಡೆದು ಅಧಿಕಾರಕ್ಕೆ ಬರಲಿದೆ.
ಪ್ರಜಾಪ್ರಭುತ್ವದಲ್ಲಿನ ಸರ್ವಾಧಿಕಾರ ಬಹಳ ದಿನ ಉಳಿಯುವುದಿಲ್ಲ. ಪ್ರಜಾಪ್ರಭುತ್ವದಲ್ಲಿ ಸರ್ವಾಧಿಕಾರಿಗಳಿಗೆ ಜಾಗವೂ ಇಲ್ಲ. ಇದು ಐತಿಹಾಸಿಕ ಸತ್ಯವಾಗಿದೆ. ಬಿಜೆಪಿಯನ್ನು ಸಹಿಸಿಕೊಂಡಿದ್ದು ಇನ್ನು ಸಾಕು ಎಂದು ಅವರು ತಿಳಿಸಿದ್ದಾರೆ.
ಕೆ.ಎಸ್. ಈಶ್ವರಪ್ಪ, ರೇಣುಕಾಚಾರ್ಯ, ಸಿ.ಟಿ. ರವಿ, ಮುಂತಾದವರ ಅಧರ್ಮದ ಮಾತುಗಳು ಅವರ ರಾಜಕೀಯ ಜೀವನವನ್ನು ಅಂತ್ಯಗೊಳಿಸಲಿವೆ. ಮೀಸೆ ತಿರುವಿ ಮೆರೆದವರೆಲ್ಲ ಬಹಳ ಕಾಲ ಆಳಲು ಸಾಧ್ಯವಿಲ್ಲ. ಅಧರ್ಮದ ಭಾವನೆಗಳ ಮೇಲೆ ಸವಾರಿ ಮಾಡಿ ಚುನಾವಣೆಯಲ್ಲಿ ಗೆದ್ದೇ ಗೆಲ್ಲುತ್ತೇವೆ ಎಂಬ ಉನ್ಮಾದದಲ್ಲಿರುವ ಈಶ್ವರಪ್ಪನವರಿಗೆ ಈ ಬಾರಿ ಶಿವಮೊಗ್ಗದ ಜನ ತಕ್ಕ ಉತ್ತರ ಕೊಡಲಿದ್ದಾರೆ ಎಂದು ವೈ.ಹೆಚ್. ನಾಗರಾಜ್ ತಿಳಿಸಿದ್ದಾರೆ.
ಆಯುಷ್ ವಿಶ್ವವಿದ್ಯಾಲಯಕ್ಕೆ ವಿಶೇಷಾಧಿಕಾರಿಗಳನ್ನು ನೇಮಕ: ಸಿಹಿ ಹಂಚಿ ಸಂಭ್ರಮಾಚರಣೆ
ಶಿವಮೊಗ್ಗದ ಆಯುಷ್ ವಿಶ್ವವಿದ್ಯಾಲಯಕ್ಕೆ ವಿಶೇಷಾಧಿಕಾರಿಗಳನ್ನು ನೇಮಕ ಮಾಡಿರುವುದನ್ನು ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್ ಸ್ವಾಗತಿಸಿದೆ. ಅಲ್ಲದೆ ಸಂಘಟನೆಯ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪರಸ್ಪರ ಸಿಹಿ ಹಂಚಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಟ್ರಸ್ಟಿನ ಮುಖ್ಯಸ್ಥ ಕಲ್ಲೂರು ಮೇಘರಾಜ್ ಮಾತನಾಡಿ, ಶಿವಮೊಗ್ಗ ನಗರಕ್ಕೆ ಆಯುಷ್ ವಿವಿ ಮಂಜೂರು ಮಾಡಲು ಅಂದಿನ ಸಭಾಪತಿಗಳಾಗಿದ್ದ ಡಿ.ಹೆಚ್. ಶಂಕರಮೂರ್ತಿ ಹಾಗೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಕಾರಣರಾಗಿದ್ದಾರೆ. ಅಲ್ಲಿಂದ ಇಲ್ಲಿಯವರೆಗೆ ವಿಶ್ವವಿದ್ಯಾನಿಲಯಕ್ಕೆ ವಿಶೇಷಾಧಿಕಾರಿಗಳ ನೇಮಕ ಮಾಡಿರಲಿಲ್ಲ. ಈಗ ರಾಜ್ಯ ಸರ್ಕಾರ ವಿಶೇಷ ಅಧಿಕಾರಿಯನ್ನು ನೇಮಕ ಮಾಡಿದೆ. ಇದು ಅತ್ಯಂತ ಸಂತೋಷದ ವಿಷಯವಾಗಿದೆ. ಹಾಗೂ ನಮ್ಮ ಟ್ರಸ್ಟಿನ ಹೋರಾಟದ ಫಲವಾಗಿದೆ ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಪ್ರಮುಖರಾದ ಎಸ್.ವಿ. ರಾಜಮ್ಮ, ಡಾ. ನೇತ್ರಾವತಿ, ಬಿ. ಲಿಂಗರಾಜು, ನಾಗರತ್ನ, ಸುರೇಶ್ಕೋಟೆಕಾರ್, ಶಂಕ್ರಾ ನಾಯ್ಕ, ಪೂಜಾ ಅಶೋಕ್ ಇದ್ದರು.
ಸದಾಶಿವ ಆಯೋಗದ ವರದಿ ಶಿಫಾರಸ್ಸಿಗೆ ಆಗ್ರಹ
ನ್ಯಾ.ಎ.ಜೆ. ಸದಾಶಿವ ಆಯೋಗದ ವರದಿಯನ್ನು ಅಂಗೀಕರಿಸಿ ಕೇಂದ್ರಕ್ಕೆ ಶಿಫಾರಸು ಮಾಡಬೇಕು ಎಂದು ಆಗ್ರಹಿಸಿ ಇಂದು ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿ ಹೋರಾಟ ಸಮಿತಿ ಜಿಲ್ಲಾಧಿಕಾರಿಗಳ ಕಚೇರಿ ಅವರಣದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಪರಿಶಿಷ್ಟ ಜಾತಿಗಳ ಒಳಮೀಸಲಾತಿಗಾಗಿ ಹಲವು ವರ್ಷಗಳಿಂದ ನಾವು ಹೋರಾಟ ಮಾಡುತ್ತಾ ಬಂದಿದ್ದೇವೆ. ಆದರೂ ನಮ್ಮ ಬೇಡಿಕೆಗಳು ಈಡೇರಲಿಲ್ಲ. ಈಗ ಚುನಾವಣೆಯ ಸಮಯ. ನೀತಿಸಂಹಿತೆ ಜಾರಿಯಾಗುವ ಮುನ್ನವೇ ನ್ಯಾ.ಎ.ಜೆ. ಸದಾಶಿವ ಆಯೋಗದ ವರದಿಯನ್ನು ಸ್ವೀಕರಿಸಿ ಕೇಂದ್ರಕ್ಕೆ ಶಿಫಾರಸು ಮಾಡಬೇಕು ಎಂದು ಪ್ರತಿಭಟನಕಾರರು ತಿಳಿಸಿದರು.
ಕೇಂದ್ರ ಸರ್ಕಾರ ಅನುಚ್ಛೇದ 341(3)ಕ್ಕೆ ತಿದ್ದುಪಡಿ ತರಬೇಕು ಪರಿಶಿಷ್ಟ ಜಾತಿಗಳಲ್ಲಿನ ತ್ರಿಮತಸ್ಥ ಚರ್ಮಗಾರ, ಸಮುದಾಯಗಳಿಗೆ ಪ್ರತ್ಯೇಕ ನಿಗಮ ಸ್ಥಾಪಿಸಬೇಕು. ಹಿಂದುಳಿದ ವರ್ಗಗಳ ಕಾಂತರಾಜ ವರದಿಯನ್ನು ಬಹಿರಂಗ ಮಾಡಿ ಯಥಾವತ್ತಾಗಿ ಜಾರಿ ಮಾಡಬೇಕು. ಎಲ್ಲಾ ರಾಜಕೀಯ ಪಕ್ಷಗಳು ಪರಿಶಿಷ್ಟ ಜಾತಿಗಳಲ್ಲಿ ಬಹುಸಂಖ್ಯಾತರಾಗಿರುವ ಮಾದಿಗ ದಂಡೋರ ಛಲವಾದಿಗಳ ಜನಸಂಖ್ಯೆಗೆ ಅನುಗುಣವಾಗಿ ರಾಜಕೀಯ ಪ್ರಾತಿನಿಧ್ಯ ನೀಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಕರ್ನಾಟಕ ರಾಜ್ಯದಲ್ಲಿರುವ 43 ಸಾವಿರ ಪೌರ ಕಾರ್ಮಿಕರು ಮತ್ತು ವಾಹನ ಚಾಲಕರನ್ನು ಖಾಯಂಗೊಳಿಸಬೇಕು. ಪರಿಶಿಷ್ಟ ಜಾತಿಗಳ ಉಪ ಹಂಚಿಕೆಯನ್ನು ಸರಿಯಾಗಿ ಹಂಚಿಕೆ ಮಾಡಬೇಕು. ಅನುದಾನ ದುರುಪಯೋಗ ಆಗದಂತೆ ತಡೆಗಟ್ಟಬೇಕು. ಮುಖ್ಯವಾಗಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿಯನ್ನು ಜಾರಿ ಮಾಡಬೇಕು. ಇಲ್ಲದಿದ್ದರೆ ಖುರ್ಚಿ ಖಾಲಿ ಮಾಡಿಕೊಂಡು ಹೋಗಬೇಕಾಗುತ್ತದೆ ಎಂದು ಮನವಿಯಲ್ಲಿ ಎಚ್ಚರಿಸಲಾಗಿದೆ.
ಪ್ರತಿಭಟನೆಯಲ್ಲಿ ಪ್ರಮುಖರಾದ ಬಿ.ಎ. ಭಾನುಪ್ರಸಾದ್, ಹೆಚ್.ಎನ್. ಮಂಜುನಾಥ್, ನಿರಂಜನ್, ಚಂದ್ರಪ್ಪ, ಸುನಿಲ್, ಬಸವರಾಜ್, ನರಸಪ್ಪ ಸೇರಿದಂತೆ ಹಲವರಿದ್ದರು.
ಮಾ.24ರಂದು ಶಿವಾಜಿ ಮಹಾರಾಜರ ಜಯಂತಿ ಹಾಗೂ ಪುಸ್ತಕ ಬಿಡುಗಡೆ ಸಮಾರಂಭ
ಅಮೂಲ್ಯ ಶೋಧ ಟ್ರಸ್ಟ್ ವತಿಯಿಂದ ಮಾ.24ರಂದು ಬೆಳಿಗ್ಗೆ 11.45ಕ್ಕೆ ಲಕ್ಕಿನಕೊಪ್ಪದಲ್ಲಿರುವ ವಸ್ತುಸಂಗ್ರಹಾಲಯದಲ್ಲಿ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿ ಅನಾವರಣ, ಶಿವಾಜಿ ಮಹಾರಾಜರ ಜಯಂತಿ ಹಾಗೂ ಪುಸ್ತಕ ಬಿಡುಗಡೆ ಸಮಾರಂಭ ಆಯೋಜಿಸಲಾಗಿದೆ ಎಂದು ಟ್ರಸ್ಟಿನ ಮ್ಯಾನೇಜಿಂಗ್ ಟ್ರಸ್ಟಿ ಹೆಚ್. ಖಂಡೋಬ ರಾವ್ ಹೇಳಿದರು.
ಅವರು ಇಂದು ಪ್ರೆಸ್ ಟ್ರಸ್ಟ್ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶಿವಾಜಿ ಹಿಂದೂ ಧರ್ಮದ ಸಂರಕ್ಷಕರಾಗಿದ್ದಾರೆ. ಇಂತಹ ಮಹಾನ್ ವ್ಯಕ್ತಿಯ ಪುತ್ಥಳಿಯನ್ನು ಬಾಗಲಕೋಟೆಯ ಮಾರುತಿರಾವ್ ಶಿಂಧೆ ಅವರು ಅಮೂಲ್ಯ ಶೋಧಕ್ಕೆ ನೀಡಿರುತ್ತಾರೆ. ಅದರ ಅನಾವರಣವನ್ನು ಬೆಕ್ಕಿನ ಕಲ್ಮಠದ ಡಾ. ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು ನೆರವೇರಿಸಲಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಶಿವಾಜಿ ಮಹಾರಾಜರ 396ನೇ ಜಯಂತಿ ಉತ್ಸವವನ್ನು ಹಾಗೂ ಮಗರ್ವಾಹಿನಿ ಎಂಬ ಪುಸ್ತಕವನ್ನು ಬಿಡುಗಡೆ ಮಾಡಲಾಗುವುದು. ಈ ಕಾರ್ಯಕ್ರಮದಲ್ಲಿ ಶಾಸಕ ಕೆ.ಎಸ್. ಈಶ್ವರಪ್ಪ, ಸಂಸದ ಬಿ.ವೈ. ರಾಘವೇಂದ್ರ, ಕೆ.ಕೆ.ಎಂ.ಪಿ. ರಾಜ್ಯಾಧ್ಯಕ್ಷ ಎಸ್. ಸುರೇಶ್ ರಾವ್ ಸಾಠೆ ಶಾಸಕರುಗಳಾದ ಕೆ.ಬಿ. ಅಶೋಕ ನಾಯ್ಕ, ಎಸ್. ರುದ್ರೇಗೌಡ, ಡಿ.ಎಸ್. ಅರುಣ್, ವೀರಶೈವ ಮಹಾಸಭಾದ ಅಧ್ಯಕ್ಷ ಎಸ್.ಎಸ್.ಜ್ಯೋತಿಪ್ರಕಾಶ್, ಕ್ಷತ್ರಿಯ ಮರಾಠಾ ಸಂಘದ ಅಧ್ಯಕ್ಷ ವಿ.ಆರ್. ದಿನೇಶ್ರಾವ್ ಚೌಹಾಣ್, ಪ್ರಮುಖರಾದ ಚಂದ್ರಾರಾವ್ ಗಾರ್ಗೆ, ಚೂಡಾಮಣಿ ಪವಾರ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ರಣಜಿತ್ ಕೆ. ಮಾಗರ್, ಟಿ.ಆರ್. ಅಶ್ವತ್ಥನಾರಾಯಣ, ರಮೇಶ್ ಬಾಬು, ಎಸ್.ಬಿ. ಅಶೋಕ್ಕುಮಾರ್ ಇದ್ದರು.
ಮಾ.22ರಿಂದ ಏಪ್ರಿಲ್ 3ರವರೆಗೆ 60ನೇ ಶ್ರೀ ವಸಂತ ರಾಮೋತ್ಸವ
ಜಯನಗರದ ಶ್ರೀರಾಮ ಮಂದಿರ ಟ್ರಸ್ಟ್ ವತಿಯಿಂದ ಮಾ.22ರಿಂದ ಏಪ್ರಿಲ್ 3ರವರೆಗೆ 60ನೇ ಶ್ರೀ ವಸಂತ ರಾಮೋತ್ಸವ, ಸೀತಾಕಲ್ಯಾಣೋತ್ಸವ ಪಟ್ಟಾಭಿಷೇಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಮಹೋತ್ಸವ ನಡೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಪ್ರತಿದಿನ ವಿಶೇಷ ಪೂಜಾ ಕಾರ್ಯಕ್ರಮಗಳು ಇರುತ್ತವೆ. ಮಾ. 22ರಂದು ಚಾಂದ್ರಮಾನ ಯುಗಾದಿಯನ್ನು ಆಚರಿಸಲಾಗುವುದು. 30ರಂದು ಸಾಮೂಹಿಕ ಸತ್ಯನಾರಾಯಣ ವ್ರತ ಇರುತ್ತದೆ. 31ರಂದು ಸೀತಾಕಲ್ಯಾಣೋತ್ಸವ ನಡೆಯುತ್ತದೆ. ಏ.3ರವರೆಗೂ ಅಲಂಕಾರ್, ಹೋಮ, ಅನ್ನಸಂತರ್ಪಣೆ ಮುಂತಾದ ಕಾರ್ಯಕ್ರಗಳನ್ನು ಹಮ್ಮಿಕೊಳ್ಳಲಾಗಿದೆ. ಹಾಗೆಯೇ ಪ್ರತಿದಿನವೂ ದೇವರಿಗೆ ರಾಮನವಮಿಯ ವಿಶೇಷ ಅಲಂಕಾರಗಳು ಇರುತ್ತವೆ.
ಪ್ರತಿದಿನ ಸಂಜೆ 5ರಿಂದ 6:30ರವರೆಗೆ ಭಜನೆ, ಭಕ್ತಿಸಂಗೀತ, ಯಕ್ಷಗಾನ, ಭರತನಾಟ್ಯ, ಉಪನ್ಯಾಸ, ವಾದ್ಯಸಂಗೀತ ಶಾಸ್ತ್ರೀಯ ಸಂಗೀತ ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಚುನಾವಣೆಗೆ ಆಮ್ ಆದ್ಮಿ ಸಕಲ ಸಿದ್ಧತೆ: ಕಿರಣ್
ಶಿವಮೊಗ್ಗ: ಮುಂಬರುವ ವಿಧಾನಸಭಾ ಚುನಾವಣೆಗೆ ಆಮ್ ಆದ್ಮಿ ಪಕ್ಷದಿಂದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಲಾಗಿದೆ. ಪಕ್ಷ ಚುನಾವಣೆಗೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಕೆ. ಕಿರಣ್ ತಿಳಿಸಿದರು.
ಇಂದು ಮೀಡಿಯಾ ಹೌಸ್ನಲ್ಲಿ ಕರೆದಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗ ಕ್ಷೇತ್ರಕ್ಕೆ ಅಭ್ಯರ್ಥಿಯಾಗಿ ನೇತ್ರಾವತಿ ಟಿ., ಸಾಗರ ಕ್ಷೇತ್ರದಿಂದ ಹೈಕೋರ್ಟ್ ನ್ಯಾಯವಾದಿ ಕೆ.ದಿವಾಕರ ಹಾಗೂ ಭದ್ರಾವತಿ ಕ್ಷೇತ್ರದಿಂದ ಮಾರುತಿ ಮೆಡಿಕಲ್ಸ್ನ ಆನಂದ್ ಅವರನ್ನು ಘೋಷಣೆ ಮಾಡಲಾಗಿದೆ. ಅಭ್ಯರ್ಥಿಗಳು ಈಗಿನಿಂದಲೇ ಪ್ರಚಾರ ಆರಂಭಿಸಲಿದ್ದಾರೆ. ಇನ್ನುಳಿದ ನಾಲ್ಕು ಕ್ಷೇತ್ರಗಳಿಗೂ ಶೀಘ್ರದಲ್ಲೇ ಪಕ್ಷದ ವರಿಷ್ಠರು ಅಭ್ಯರ್ಥಿಗಳ ಘೋಷಣೆ ಮಾಡಲಿದ್ದಾರೆ ಎಂದರು.
ಪಕ್ಷದ ಮುಖಂಡ ರೇವಣಕರ್ ಮಾತನಾಡಿ, 2012ರಲ್ಲಿ ಪಕ್ಷ ಸ್ಥಾಪನೆ ಆಗಿದೆ. ಕೇವಲ 10 ವರ್ಷಗಳಲ್ಲಿ ರಾಷ್ಟ್ರೀಯ ಪಕ್ಷವಾಗಿ ಹೊರಹೊಮ್ಮಿದೆ. ಇಲ್ಲಿ ಜಾತಿ, ಧರ್ಮ ನೋಡಿ ಯಾರಿಗೂ ಟಿಕೆಟ್ ಕೊಡುವುದಿಲ್ಲ. ದೆಹಲಿಯಲ್ಲಿ ಮೂರು ಬಾರಿ ಪಕ್ಷ ಅಧಿ ಕಾರಕ್ಕೆ ಬಂದಿದೆ. ಪಂಜಾಬ್ನಲ್ಲಿ ಅಧಿಕಾರ ಸಿಕ್ಕಿದೆ. ಈ ಬಾರಿ ಕರ್ನಾಟಕದಲ್ಲಿಯೂ ಹೆಚ್ಚಿನ ಸ್ಥಾನಗಳು ಸಿಗುವ ನಿರೀಕ್ಷೆ ಇದೆ ಎಂದು ಆಶಯ ವ್ಯಕ್ತಪಡಿಸಿದರು.
ಶಿವಮೊಗ್ಗ ಅಭ್ಯರ್ಥಿ ನೇತ್ರಾವತಿ, ಭದ್ರಾವತಿ ಅಭ್ಯರ್ಥಿ ಆನಂದ್ ಮಾತನಾಡಿ, ಪಕ್ಷ ನ್ಮಮನ್ನು ಗುರುತಿಸಿ ಟಿಕೆಟ್ ನೀಡಿದೆ. ನಮ್ಮದು ಅತ್ಯಂತ ಪ್ರಾಮಾಣಿಕವಾದ ರಾಷ್ಟ್ರೀಯ ಪಕ್ಷ. ನಾವು ಚುನಾವಣೆಯಲ್ಲಿ ಹಣ ಖರ್ಚು ಮಾಡುವುದಿಲ್ಲ. ಜನಸೇವೆಯೇ ನಮ್ಮ ಮುಖ್ಯ ಗುರಿ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ನಜೀರ್ ಅಹ್ಮದ್, ಸುರೇಶ್ ಕೋಟೆಕಾರ್, ಅಮೃತ್, ಶ್ರೀನಿವಾಸ್, ಹರೀಶ್, ಲಕ್ಷ್ಮೀಶ್ ಇನ್ನಿತರರು ಇದ್ದರು.
ರಾಜು ತಲ್ಲೂರು ಅವರಿಗೆ ಟಿಕೆಟ್ ನೀಡಿ: ಧ್ರುವಕುಮಾರ್ ಒತ್ತಾಯ
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮಡಿವಾಳ ಸಮಾಜದ ಮುಖಂಡರಾದ ಗೋಪಿಕೃಷ್ಣ ಮತ್ತು ರಾಜು ತಲ್ಲೂರು ಅವರಿಗೆ ಟಿಕೆಟ್ ನೀಡಲೇಬೇಕು ಎಂದು ಜಿಲ್ಲಾ ಮಡಿವಾಳರ ಯುವ ಘಟಕದ ವಿಭಾಗೀಯ ಕಾರ್ಯಾಧ್ಯಕ್ಷ ಕೆ.ವಿ. ಧ್ರುವಕುಮಾರ್ ಒತ್ತಾಯಿಸಿದ್ದಾರೆ.
ಇಂದು ಮೀಡಿಯಾ ಹೌಸ್ನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ತರೀಕೆರೆ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದಿಂದ ಗೋಪಿಕೃಷ್ಣ ಅವರಿಗೆ ಮತ್ತು ಸೊರಬ ಕ್ಷೇತ್ರದಿಂದ ರಾಜು ತಲ್ಲೂರು ಅವರಿಗೆ ಬಿಜೆಪಿಯಿಂದ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿದರು.
ಗೋಪಿಕೃಷ್ಣ ಅವರಿಗೆ ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳು ದ್ರೋಹ ಮಾಡಿವೆ. ನಾಲ್ಕು ವರ್ಷ ಕಾಲ ಜೆಡಿಎಸ್ನಲ್ಲಿ ಸಕ್ರಿಯವಾಗಿ ಕೆಲಸ ಮಾಡಿದ್ದರು. ಆದರೆ ಅವರಿಗೆ ಟಿಕೆಟ್ ನೀಡಲಿಲ್ಲ. 2018ರ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ನೀಡುವುದಾಗಿ ಸಿಟಿ ರವಿ ಭರವಸೆ ನೀಡಿದ್ದರು. ಆದರೆ ಮೋಸ ಮಾಡಿದರು. ಗೋಪಿಕೃಷ್ಣ ಅವರು 2018ರಲ್ಲಿ ಕೇವಲ 579 ಮತಗಳ ಅಂತರದಲ್ಲಿ ಸೋತಿದ್ದಾರೆ. ಈ ಬಾರಿ ಡಿಕೆಶಿ ಮತ್ತು ಸಿದ್ದರಾಮಯ್ಯ ಅವರು ಗೋಪಿಕೃಷ್ಣ ಅವರಿಗೆ ಟಿಕೇಟ್ ನೀಡಲೇಬೇಕು ಎಂದು ಒತ್ತಾಯಿಸಿದರು.
1965ರಲ್ಲಿ ಯಾದಗಿರಿ ಕ್ಷೇತ್ರದಿಂದ ಮಡಿವಾಳ ಸಮಾಜದ ಓರ್ವರು ಶಾಸಕರಾಗಿ ಆಯ್ಕೆ ಆಗಿದ್ದರು. ಆ ನಂತರ ಸಮಾಜದ ಯಾರಿಗೂ ಸ್ಪರ್ಧೆ ಮಾಡಲು ಅವಕಾಶ ಸಿಕ್ಕಿಲ್ಲ. 58 ವರ್ಷಗಳಿಂದ ಸಮಾಜ ರಾಜಕೀಯ ಪ್ರಾತಿನಿಧ್ಯದಿಂದ ವಂಚಿತವಾಗಿದೆ. ಹಾಗಾಗಿ ಈ ಬಾರಿ ಟಿಕೆಟ್ ನೀಡಲೇಬೇಕು ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಟಿ.ಎಸ್. ಗುರುಮೂರ್ತಿ, ಪ್ರಮೋದ್ ಎಂ.ಕೆ., ರವಿಕುಮಾರ್, ಜೆ.ಹಿರಣ್ಣಯ್ಯ, ಮೇಘರಾಜ್, ಮಂಜುನಾಥ್ ಕಾನಡೆ, ಬಾಲಾಜಿ ರಾಜು ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post