ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ರೆಕ್ಕೆ ಇದ್ದರೆ ಸಾಕೆ ಹಕ್ಕಿಗೆ ಬೇಕು ಬಾನು ಬಯಲಲಿ ತೇಲುತ ತಾನು ಮೇಲೆ ಹಾರೋಕೆ ಎಂಬ ಕವಿತೆಯ ಸಾಲಿನೊಂದಿಗೆ ಪ್ರಾರಂಭಿಸುವ ಈ ಲೇಖನ. ವ್ಯಕ್ತಿಯೊಬ್ಬನಿಗೆ ಕೇವಲ ಪ್ರತಿಭೆಯೊಂದಿದ್ದರೆ ಸಾಕೇ ಹೇಳಿ ಅದಕ್ಕೆ ತಕ್ಕ ವೇದಿಕೆ ಸಿಕ್ಕಬೇಕು ಮತ್ತು ತನ್ನ ಪರಿಶ್ರಮದ ಜೊತೆಗೆ ಸಾಧನೆಯನ್ನು ತನ್ನ ಉಸಿರಾಗಿರಿಸಿಕೊಂಡಿರಬೇಕು. ಹೂವೊಂದು ಇದ್ದರೆ ಸಾಕೆ ಬೇಡವೆ ಗಾಳಿ ಕಂಪ ಬೀರೊಕೆ ಎಂಬ ಹಾಡಿನ ಸಾಲಿನಂತೆ ಪ್ರತಿಭೆಯೊಂದು ಪ್ರಪಂಚಕ್ಕೆ ಪರಿಚಯ ಆಗಬೇಕಿದ್ದರೆ ತಂದೆ ತಾಯಿ ಗುರು ಹಿರಿಯರ ಪ್ರೋತ್ಸಾಹವೂ ಮುಖ್ಯವಾಗುತ್ತದೆ. ಇವೆಲ್ಲವೂ ಜೊತೆಯಾದಾಗ ಸಾಧನೆಗೆ ಒಂದು ಸ್ಪೂರ್ತಿಯ ಜೊತೆಗೆ ಸಾಧನೆಯೆಂಬುದು ಉಸಿರಾಗಿ ನಮ್ಮ ಜೊತೆಗೆ ನಿಲ್ಲುತ್ತದೆ ಎಂಬುದಕ್ಕೆ ಪ್ರತ್ಯಕ್ಷ ಸಾಕ್ಷಿ ನಾವು ಇಂದು ನಿಮಗೆ ಪರಿಚಯಿಸುತ್ತಿರುವ ಖ್ಯಾತ ಕಿರುತೆರೆ ಮತ್ತು ಚಲನಚಿತ್ರ ನಟಿ, ಗಿರ್-ಗಿಟ್ ಎಂಬ ತುಳು ಚಲನಚಿತ್ರದ ಮೂಲಕ ಮನೆಮಾತಾಗಿರುವ ಪುತ್ತೂರಿನ ಶಿಲ್ಪಾ ಶೆಟ್ಟಿ.
ಜನ್ಮ ಭೂಮಿ ಪುತ್ತೂರು. ಆದರೆ ಇವರನ್ನು ಕೈ ಬೀಸಿ ಕರೆದದ್ದು ಅದೆಷ್ಟೋ ಕಲಾವಿದರ ಪಾಲಿಗೆ ಕರ್ಮಭೂಮಿಯಾದ ಬೆಂಗಳೂರು. ತಂದೆ ವಸಂತ ಶೆಟ್ಟಿ, ತಾಯಿ ಯಶೋಧ ಶೆಟ್ಟಿಯವರ ಮುದ್ದಿನ ಮಗಳು ಶಿಲ್ಪಾ ಶೆಟ್ಟಿ ಅವರಿಗೆ ಬಾಲ್ಯದಲ್ಲೇ ಸಂಗೀತ, ನಾಟ್ಯ, ಅಭಿನಯದಲ್ಲಿ ಅತ್ಯಂತ ಹೆಚ್ಚಿನ ಆಸಕ್ತಿ. ಜೊತೆಗೆ ತಂದೆ ತಾಯಿಯ ಪ್ರೋತ್ಸಾಹವೂ ಇದ್ದು, ಅಭಿನಯ ಇವರಿಗೆ ಭಗವಂತ ಕೊಟ್ಟ ಹುಟ್ಟು ಪ್ರತಿಭೆ ಎನ್ನಬಹುದು.
ಯಾವುದೇ ತರಬೇತಿಗೆ ಹೋದವಳಲ್ಲ ಈಕೆ. ತನಗೆ ತಾನೇ ಸ್ಪೂರ್ತಿಯಾಗಿಟ್ಟುಕೊಂಡು, ಸ್ವಪ್ರಯತ್ನದಿಂದ ಕಲೆಯನ್ನು ಉಸಿರನ್ನಾಗಿಸಿ ಮುಂದುವರೆಸಿಕೊಂಡು ಬಂದವಳು. ಮುಖ್ಯವಾಗಿ ತಂದೆಯ ಬೆಂಬಲವನ್ನು ಹೆಚ್ಚಾಗಿ ನೆನಪಿಸಿಕೊಳ್ಳುತ್ತಾಳೆ ಶಿಲ್ಪಾ. ಪ್ರತಿ ಚಲನಚಿತ್ರದ ಶೂಟಿಂಗ್ ಇರಲಿ, ಪ್ರಚಾರದ ಕಾರ್ಯಕ್ರಮವಿರಲಿ ಜೊತೆಯಲ್ಲಿ ಇರುತ್ತಿದ್ದವರು ಈಕೆಯ ತಂದೆ. ತಂದೆ ಮತ್ತು ಮಗಳ ಅವಿನಾಭಾವ ಸಂಬಂಧವೂ ಈಕೆಯ ಕಾರ್ಯಕ್ಷೇತ್ರದಲ್ಲಿ ಈ ಮಟ್ಟದ ಬೆಳವಣಿಗೆಗೆ ಸಾಕ್ಷಿ.
ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ ಈಕೆಯನ್ನು ಸಿನಿಮಾ ಮತ್ತು ಅಭಿನಯದ ಮೇಲಿನ ಆಸಕ್ತಿ ಶಿಕ್ಷಣದ ಜೊತೆಗೆ ಕಿರುತೆರೆ ಮತ್ತು ಸಿನಿಮಾ ಕ್ಷೇತ್ರಕ್ಕೆ ಆಕೆಯನ್ನು ಸೆಳೆಯುತ್ತದೆ. ಈಕೆಯ ಅಭಿನಯಕ್ಕೆ ಮೊದಲು ಅವಕಾಶ ಸಿಕ್ಕಿದ್ದು ಎರಡು ಕನಸು ಎಂಬ ಧಾರವಾಹಿಯಲ್ಲಿ.
ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿದ್ದ ಈ ಧಾರವಾಹಿಯ ಮೊದಲ ಆಡಿಷನ್ ಸುತ್ತಿನಲ್ಲಿ ಆಯ್ಕೆಯಾದ ಇವಳು ನಂತರ ಕಲರ್ಸ್ ಸೂಪರ್’ನಲ್ಲಿ ಪ್ರಸಾರವಾಗುತ್ತಿದ್ದ ರಾಜ-ರಾಣಿ ಧಾರವಾಹಿಯಲ್ಲಿ ಖಳನಾಯಕಿಯಾಗಿ ಅವಕಾಶವನ್ನು ಪಡೆಯುತ್ತಾಳೆ. ಈಕೆಯ ಮನೋಜ್ಞವಾದ ಮತ್ತು ಎಳೆಯ ಮನಸ್ಸಿನ ತೊಳಲಾಟದ ಭಾವನೆಗಳನ್ನು ತೋರ್ಪಡಿಸುವ ಅಭಿನಯ ಕರ್ನಾಟಕದಲ್ಲಿ ಮನೆಮಾತಾಗುತ್ತದೆ. ಹೀಗೆ ಕಿರುತೆರೆಯಲ್ಲಿ ಸೀಮಿತವಾಗಿದ್ದ ಶಿಲ್ಪಾ ಮುಂದಿನ ದಿನಗಳಲ್ಲಿ ಕನ್ನಡ ಮತ್ತು ತುಳು ಚಿತ್ರರಂಗಕ್ಕೂ ಪಾದಾರ್ಪಣೆ ಮಾಡುತ್ತಾರೆ.
ತುಳು ಸಿನಿಮಾ ರಂಗದ ಇತಿಹಾಸದಲ್ಲೇ ಹೊಸ ದಾಖಲೆಯನ್ನು ಬರೆದ ಚಲನಚಿತ್ರ ಗಿರ್-ಗಿಟ್. ಕೇವಲ ತುಳುನಾಡಿನಲ್ಲಿ ಮಾತ್ರವಲ್ಲದೆ ಕರ್ನಾಟಕ ರಾಜ್ಯದಾದ್ಯಂತ ಮತ್ತು ದೇಶ ವಿದೇಶಗಳಲ್ಲಿ ಜನಮನ್ನಣೆ ಪಡೆದ ಚಲನಚಿತ್ರವಿದು ಇದರ ನಾಯಕಿ ನಟಿ ಶಿಲ್ಪಾ ಶೆಟ್ಟಿ ಪ್ರಾಯಶಃ ಈ ಚಲನಚಿತ್ರದಲ್ಲಿನ ಇವರ ಪಾತ್ರ ನಿರ್ವಹಣೆ ಜನ ಎಂದಿಗೂ ನೆನಪಿನಲ್ಲಿ ಇಟ್ಟುಕೊಳ್ಳುತ್ತಾರೆ.
ಕನ್ನಡ ಚಿತ್ರರಂಗಕ್ಕೂ ಪಾದಾರ್ಪಣೆ ಮಾಡಿರುವ ಈಕೆ ಈಗಾಗಲೇ ನ್ಯೂರಾನ್ ಎಂಬ ಚಲನಚಿತ್ರದಲ್ಲಿ ಅಭಿನಯಿಸಿದ್ದಾರೆ. ಜೊತೆಗೆ ಶೀಘ್ರದಲ್ಲೇ ಬಿಡುಗಡೆಯಾಗಲಿರುವ ಕನ್ನಡದ ಪ್ರಖ್ಯಾತ ನಟ ರಮೇಶ್ ಅರವಿಂದ್ ನಟಿಸಿರುವ 100 ಎಂಬ ಚಲನಚಿತ್ರಕ್ಕೆ ವೈಶಿಷ್ಟ್ಯ ಪೂರ್ಣ ಪಾತ್ರಕ್ಕೆ ನಟಿಯಾಗಿ ಆಯ್ಕೆಯಾಗಿರುತ್ತಾಳೆ. ಕನ್ನಡ ಚಿತ್ರರಂಗ ಕಂಡ ಮೇರು ನಟರಾದ ರಮೇಶ್ ಅರವಿಂದ್, ಶ್ರೀನಾಥ್, ಸುಧಾರಾಣಿ ಇವರೊಂದಿಗೆ ನಟಿಸಿರುವುದು ಒಂದು ಒಳ್ಳೆಯ ಅವಕಾಶ ಮತ್ತು ಮನಸ್ಸಿಗೆ ಖುಷಿ ತಂದಿದೆ ಎನ್ನುತ್ತಾರೆ ಶಿಲ್ಪಾ.
ಪುತ್ತೂರಿನ ಪವಿತ್ರವಾದ ಮಹಾಲಿಂಗೇಶ್ವರನ ಮಡಿಲಲ್ಲಿ ಮತ್ತು ಆಶೀರ್ವಾದದಿಂದ ಉದಯಿಸಿದ ಅದೆಷ್ಟೋ ಕಲಾವಿದರು, ರಾಜಕಾರಣಿಗಳನ್ನು ಕಂಡವರು ನಾವು. ಈ ಪುಣ್ಯದ ಮಣ್ಣಿನಲ್ಲಿ ಹುಟ್ಟಿ ಬೆಳೆದ ನಮ್ಮೂರಿನ ಪ್ರತಿಭೆ ಇವಳು. ಇವಳ ಸಾಧನೆಯ ಹಾದಿ ನಿಮ್ಮ ಆಶೀರ್ವಾದ ಮತ್ತು ಪ್ರೋತ್ಸಾಹದೊಂದಿಗೆ ಮುಂದುವರೆಯಲಿ ಎಂದು ಹಾರೈಸುತ್ತಾ ಇವಳ ಮುಂದಿನ ಎಲ್ಲಾ ಯೋಚನೆ ಮತ್ತು ಯೋಜನೆಗಳಿಗೆ ಶುಭ ಹಾರೈಕೆಯೊಂದಿಗೆ ಈ ಲೇಖನ.
Get in Touch With Us info@kalpa.news Whatsapp: 9481252093
Discussion about this post