ಶಿವಮೊಗ್ಗ: ಪ್ರತಿವರ್ಷದಂತೆ ಈ ಬಾರಿಯೂ ಸಹ ನಮ್ ಟೀಮ್ ರಂಗತಂಡವು ನೀನಾಸಂ ನಾಟಕೋತ್ಸವವನ್ನು 2019ರ ಅಕ್ಟೋಬರ್ 9 ಹಾಗೂ 10ರಂದು ನಗರದ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಿದೆ. ಮನೋವೈದ್ಯ ಡಾ. ಕೆ.ಎ. ಅಶೋಕ್ ಪೈ ಅವರ ಸ್ಮರಣೆಯೊಂದಿಗೆ ಆಯೋಜಿಸಿರುವ ಈ ನಾಟಕೋತ್ಸವದಲ್ಲಿ ನೀನಾಸಂ ರೆಪರ್ಟರಿಯ ಎರಡು ನಾಟಕಗಳು ಪ್ರದರ್ಶನವಾಗುವವು.
ಅ.9ರಂದು ಗಿರೀಶ್ ಕಾರ್ನಾಡ್ ರಚಿಸಿರುವ `ರಾಕ್ಷಸ-ತಂಗಡಿ’ ನಾಟಕವು ಬಿ.ಆರ್. ವೆಂಕಟರಮಣ ಐತಾಳ ಅವರ ನಿರ್ದೇಶನದಲ್ಲಿ ಪ್ರದರ್ಶನವಾಗುವುದು. ಅ.10ರಂದು ಗಣೇಶ್ ಮಂದರ್ತಿ ಅವರ ನಿರ್ದೇಶನದಲ್ಲಿ ಕರ್ಣ ಸಾಂಗತ್ಯ ನಾಟಕ ಪ್ರದರ್ಶನವಾಗುವುದು. ಪ್ರತಿದಿನ ಸಂಜೆ 6.45ಕ್ಕೆ ನಾಟಕ ಪ್ರದರ್ಶನ ಆರಂಭವಾಗುವುದು. ಪ್ರವೇಶ ದರ ಒಬ್ಬರಿಗೆ ಒಂದು ನಾಟಕಕ್ಕೆ ರೂ. 50. ವಿವರಕ್ಕೆ ಅಧ್ಯಕ್ಷ ಅ.ಮ. ಶಿವಮೂರ್ತಿ (98808 67840), ಪ್ರಧಾನ ಕಾರ್ಯದರ್ಶಿ ಹೊನ್ನಾಳಿ ಚಂದ್ರಶೇಖರ್ (98445 18866) ಇವರನ್ನು ಸಂಪರ್ಕಿಸಬಹುದು.
ರಾಕ್ಷಕ- ತಂಗಡಿ ಕುರಿತು:
ಈ ನಾಟಕವನ್ನು ಗಿರೀಶ ಕಾರ್ನಾಡ ರಚಿಸಿದ್ದು, ಬಿ.ಆರ್. ವೆಂಕಟರಮಣ ಐತಾಳ ನಿರ್ದೇಶಿಸಿದ್ದಾರೆ. 1565 ರಲ್ಲಿ ಜರುಗಿದ ರಕ್ಕಸಗಿ-ತಂಗಡಗಿ ಕಾಳಗದ ಒಂದೇ ಒಂದು ದಿನದ ಅವಧಿಯಲ್ಲಿ ಅದ್ವಿತೀಯ ಸಮೃದ್ಧಿಯ ಹಂಪಿ ನಗರ ಹೊತ್ತಿ ಉರಿದು ಬೂದಿಯಾಯಿತು. ತನ್ನ ಸಾಮಥ್ಯಾ- ಐಶ್ವರ್ಯಗಳಿಂದ ಜಗತ್ತನ್ನು ಬೆರಗುಗೊಳಿಸಿದ ವಿಜಯನಗರ ಸಾಮ್ರಾಜ್ಯ ಮಣ್ಣುಮುಕ್ಕಿ ನಿರ್ನಾಮವಾಯಿತು. ಈ ಕರಾಳ ಘಟನಾ ಚಕ್ರದ ಕೇಂದ್ರ ದಲ್ಲಿ ನಿಂತಿದ್ದವನು ಅಳಿಯ ರಾಮರಾಯ- ಸೇನಾನಿ, ಮುತ್ತದ್ದಿ. ಸಿಂಹಾಸನವಿಲ್ಲದ ಚಕ್ರವರ್ತಿ, ಪರಂಪರೆಯಿಲ್ಲದ ಚಾಲುಕ್ಯ ವಂಶಕ್ಕೆ ಒಪ್ಪಿಗೆಯಾಗದ ಅಳಿಯ. ಭಾರತದ ಇತಿಹಾಸದಲ್ಲೇ ಅನ್ಯಾದೃಶ ಎನ್ನಬಹುದಾದ ಈ ವ್ಯಕ್ತಿಯ ದುರಂತವನ್ನು ಅರ್ಥೈಸಲು ಯತ್ನಿಸುವ ನಾಟಕ ಇದು.
ಕರ್ಣಸಾಂಗತ್ಯ ನಾಟಕ ಕುರಿತು:
ಗಣೇಶ್ ಮಂದರ್ತಿ ಅವರು ಈ ನಾಟಕವನ್ನು ನಿರ್ದೇಶಿಸಿದ್ದಾರೆ. ಈ ನಾಟಕವು ಕುಮಾರವ್ಯಾಸಭಾರತ, ಜನಪದ ಮಹಾಭಾರತ ಹಾಗೂ ಪಂಪಭಾರತ ಕೃತಿಗಳನ್ನು ಆಧರಿಸಿದ್ದು. ಪ್ರಸ್ತುತ ನಿರ್ದೇಶಕರು ಕರ್ಣನ ಜೀವನ, ಹಾಗೂ ವ್ಯಕ್ತಿತ್ವ ಮತ್ತು ಬದುಕಿನುದ್ದಕ್ಕೂ ಎದುರಾಗುವ ಸಂದಿಗ್ಧ, ಸಂಬಂಧಗಳ ತೊಳಲಾಟ, ಹತಾಶೆ – ಇವುಗಳ ನಡುವೆ ಅವನು ಸ್ಥಾಪಿಸಿಕೊಂಡ ಆದರ್ಶತತ್ವ ಮತ್ತು ವ್ಯಕ್ತಿತ್ವ – ಇವುಗಳನ್ನು ಶಾಸ್ತ್ರೀಯ ಹಾಗೂ ಜಾನಪದೀಯ ಶೈಲಿಯಲ್ಲಿ ಲಘುಹಾಸ್ಯದ ಸಂಭಾಷಣೆಗಳೊಂದಿಗೆ ಕಟ್ಟಿದ್ದಾರೆ. ಯಕ್ಷಗಾನ, ಕೂಡಿಯಾಟ್ಟಂ ಮೊದಲಾದ ಬೇರೆ ಬೇರೆ ಪ್ರಕಾರಗಳನ್ನು ಸಂಗೀತ ಮತ್ತು ನೃತ್ಯದಲ್ಲಿ ಅಳವಡಿಸಿದ ಒಂದು ವಿಶಿಷ್ಟ ಪ್ರಯೋಗ ಇದು.
Discussion about this post