ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ರಾಜ್ಯದಲ್ಲಿ 15 ದಿನಗಳ ಕಾಲ ಲಾಕ್ಡೌನ್ ಜಾರಿಯಲ್ಲಿದ್ದು, ವಿರೋಧಪಕ್ಷದ ನಾಯಕ ಸಿದ್ಧರಾಮಯ್ಯ ಸೇರಿದಂತೆ ಡಿ.ಕೆ. ಶಿವಕುಮಾರ್ ಹಾಗೂ ಹೆಚ್.ಡಿ. ಕುಮಾರಸ್ವಾಮಿ ಅವರು ತಮ್ಮ ಬಾಯಿಗೂ ಲಾಕ್ಡೌನ್ ಮಾಡಿಕೊಳ್ಳಿ ಎಂದು ಸಚಿವ ಈಶ್ವರಪ್ಪ ಹೇಳಿದ್ದಾರೆ.

ಕೊರೋನಾ ಸೋಂಕು ಹರಡುವುದು ನಿಯಂತ್ರಿಸಲು ಸರ್ಕಾರ ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದ್ದು, ರೋಗಿಗಳಿಗೆ ನೆರವು ನೀಡಲಾಗುತ್ತಿದೆ. ಈ ಸಂದರ್ಭದಲ್ಲಿ ಪ್ಯಾಕೇಜ್ ಘೋಷಿಸಲು ವಿಪಕ್ಷಗಳು ಒತ್ತಾಯಿಸುತ್ತಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ರಾಜ್ಯದ ಜನ ಸಂಕಷ್ಟದಲ್ಲಿದ್ದಾರೆ. ಒಳ್ಳೆಯ ಕೆಲಸಗಳನ್ನು ಗುರುತಿಸಿ ಅಭಿನಂದಿಸುವುದನ್ನು ಬಿಟ್ಟು ಪ್ರತಿಯೊಂದಕ್ಕೂ ಟೀಕೆ ಮಾಡುತ್ತಿದ್ದೀರಾ ಎಂದು ಪ್ರಶ್ನಿಸಿದ್ದಾರೆ.

14 ದಿನ ದಯವಿಟ್ಟು ಸುಮ್ಮನೆ ಇರಿ. ಜೊತೆಗೆ ಸಾಧ್ಯವಾದರೆ ಒಳ್ಳೆಯ ಸಲಹೆ ಕೊಡಿ. ರೋಗಿಗಳಿಗೆ ಅನುಕೂಲ ಮಾಡಲು ಏನು ಮಾಡಬೇಕು ಹೇಳಿ. ಅದನ್ನು ಬಿಟ್ಟು 10 ಸಾವಿರ ಕೊಡಿ ಅಂದರೆ ನಾವೇನ್ ಪ್ರಿಂಟ್ ಮಾಡ್ತೀವಾ? ಎಂದು ಪ್ರಶ್ನಿಸಿದ ಈಶ್ವರಪ್ಪ ರೋಗಿಗಳಿಗೆ ಅನುಕೂಲಕ್ಕೆ ಅವರು ಎನು ಸಲಹೆ ಕೊಟ್ಟರೂ ನಾವು ಮಾಡಲು ತಯಾರಿದ್ದೇವೆ. ಎಷ್ಟೋ ವರ್ಷದ ನಂತರ ನಾವು ನಿರೀಕ್ಷೆ ಮಾಡದೆ ಈ ರೀತಿಯ ಸಾಂಕ್ರಾಮಿಕ ರೋಗ ಬಂದಿದೆ. ಟೀಕೆ ವಿರೋಧ ಪಕ್ಷದ ಕರ್ತವ್ಯ. ಆದರೆ ಇಂತಹ ಸಂದರ್ಭದಲ್ಲಿ ಬಾಯಿಗೆ ಬಂದಂತೆ ಟೀಕೆ ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

















