ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಬಿಜೆಪಿ ಶಿವಮೊಗ್ಗ ನಗರ ಘಟಕದ ವತಿಯಿಂದ ಮಾ.31ರ ಸಂಜೆ 5ಕ್ಕೆ ಸೈನ್ಸ್ ಮೈದಾನದಲ್ಲಿ ಪಕ್ಷದ ಪೇಜ್ ಕಾರ್ಯಕರ್ತರ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಮಾವೇಶದಲ್ಲಿ ಸುಮಾರು 7 ಸಾವಿರಕ್ಕೂ ಹೆಚ್ಚು ಪೇಜ್ ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಅಭ್ಯರ್ಥಿ ಬಿ.ವೈ.ರಾಘವೇಂದ್ರ, ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್, ಮಾಜಿ ಶಾಸಕ ಎಂ.ಬಿ.ಭಾನುಪ್ರಕಾಶ್ ಪ್ರಮುಖರಾದ ಗಿರೀಶ್ ಪಟೇಲ್ ಹಾಗೂ ಇನ್ನಿತರರು ಭಾಗವಹಿಸಲಿದ್ದಾರೆ ಎಂದರು.
ಬಿಜೆಪಿ ಕಾರ್ಯಕರ್ತರ ಆಧಾರಿತ ಪಕ್ಷವಾಗಿದೆ. ಜನ ಸಂಘದಿಂದ ಹಿಡಿದು 1980ರಿಂದ ಭಾರತೀಯ ಜನತಾ ಪಕ್ಷವಾಗಿ ರೂಪುಗೊಂಡಿದ್ದು, ಜನಸಂಘದಿಂದಲೂ ಹಿಂದುಗಳ ಹಿತರಕ್ಷಣೆಗಾಗಿ ಹಾಗೂ ಉಳಿವಿಗಾಗಿ ಮತ ನೀಡುವಂತೆ ಮತಯಾಚಿಸುತ ಬಂದಿದ್ದು, ಈಗಲೂ ಸಹ ಹಿಂದುತ್ವದ ಮೇಲೆ ಮತಯಾಚಿಸುತ್ತಿದೆ ಎಂದರು.
ಶಿವಮೊಗ್ಗ ಜಿಲ್ಲೆ ಸಮಾಜವಾದಿ ನೆಲೆಗಟ್ಟಾಗಿದ್ದು, ಪಕ್ಷ ನಿರಂತರವಾಗಿ ವೈಚಾರಿಕತೆ ನೆಲೆಗಟ್ಟಿನಲ್ಲಿ ಕೆಲಸ ಮಾಡುತ್ತ ಜನರ ಜೊತೆಗಿದೆ. ಚುನಾವಣೆ ಸಂದರ್ಭದಲ್ಲಿ ಮಾತ್ರ ಸಿದ್ದತೆಗಳು ನಡೆಯದೆ, ನಿರಂತರವಾಗಿ ನಡೆಯುತ್ತಿದೆ ಎಂದರು.
ಪ್ರತಿ ಮತಗಟ್ಟೆಯಲ್ಲಿ 13 ಜನರ ಕಾರ್ಯಕರ್ತರ ತಂಡ ಕಾರ್ಯನಿರ್ವಹಿಸುತ್ತಿದೆ. 8 ವಿವಿಧ ಮೋರ್ಚಾಗಳನ್ನು ಬಲಪಡಿಸುವ ಕೆಲಸ ನಡೆಯುತ್ತಿದೆ. ವಿವಿಧ ಸಮಾಜದ ಮುಖಂಡರನ್ನು ಭೇಟಿ ಮಾಡಿ, ಬೆಂಬಲಿಸುವಂತೆ ಮನವಿ ಮಾಡಿಕೊಳ್ಳಲಾಗುತ್ತದೆ ಎಂದರು.
Also read: ಕುವೆಂಪು ವಿಶ್ವವಿದ್ಯಾಲಯ: 2024-25 ನೇ ಸಾಲಿಗೆ 137.7 ಕೋಟಿ ರೂ.ಗಳ ಬಜೆಟ್ ಮಂಡನೆ
ಕಳೆದ ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿಯಾಗಿದ್ದ ಬಿ.ವೈ.ರಾಘವೇಂದ್ರ ಅವರಿಗೆ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದಲ್ಲಿ 1ಲಕ್ಷ 10ಸಾವಿರದ 700 ಮತಗಳು ಬಂದಿದ್ದವು. ಹಿಂದುತ್ವದ ಉಳಿವಿಗೆ ನಮ್ಮ ಆದ್ಯತೆ. ಹಾಗಾಗಿಯೇ ಶಿವಮೊಗ್ಗ ಜಿಲ್ಲೆಯನ್ನಾಗಿ ನಾವು ಮಾಡಿದ್ದೇವೆ. ಕಳೆದ ಎಲ್ಲಾ ಚುನಾವಣೆಗಳಲ್ಲಿಯೂ ಬಿಜೆಪಿಗೆ ಸಾಕಷ್ಟು ಮತಗಳು ಬಂದಿವೆ. ಈ ಬಾರಿಯೂ ಕೂಡ ಬಿ.ವೈ. ರಾಘವೇಂದ್ರ ಅವರಿಗೆ ಶಿವಮೊಗ್ಗ ನಗರದಿಂದ 1.5 ಲಕ್ಷ ಮತವನ್ನು ಕೊಡುವುದರ ಮೂಲಕ ಅವರನ್ನು ಗೆಲ್ಲಿಸುತ್ತೇವೆ ಎಂದರು.
ಬಿಜೆಪಿಯ 370 ಸ್ಥಾನಗಳನ್ನು ನಾವು ಈ ಬಾರಿ ಗೆಲ್ಲುತ್ತೇವೆ. ಅದರ ಜೊತೆಗೆ ಎನ್.ಡಿ.ಎ. ಮೈತ್ರಿಕೂಟದ ಕ್ಷೇತ್ರಗಳು ಸೇರಿದಂತೆ 400 ಕ್ಕೂ ಅಧಿಕ ಸ್ಥಾನಗಳಲ್ಲಿ ಗೆಲ್ಲುತ್ತೇವೆ. 370 ಏಕೆ ಎಂದರೆ 370ರ ವಿಧಿಯನ್ನು ರದ್ದು ಮಾಡಿ ಜಮ್ಮು ಮತ್ತು ಕಾಶ್ಮೀರವನ್ನು ಭಾರತದೊಳಗೆ ಸೇರಿಸಿದ ಕೀರ್ತಿ ನಮ್ಮದು ಎಂದರು.
ಈಶ್ವರಪ್ಪನವರ ಬಂಡಾಯದ ಕುರಿತಂತೆ ಮಾತನಾಡಿದ ಅವರು, ಈಶ್ವರಪ್ಪ ಅವರು ಪಕ್ಷಕ್ಕೆ ವಾಪಸ್ ಆದರೆ ಕರೆದುಕೊಳ್ಳುತ್ತೇವೆ. ಬಾರದಿದ್ದರೆ ಅವರನ್ನು ಬಿಟ್ಟು ಹಾಕುತ್ತೇವೆ. ಅವರು ಲಕ್ಷಕ್ಕೂ ಹೆಚ್ಚು ಮತ ಗಳಿಸುತ್ತಾರೆ ಎಂದರೆ ನಮಗೆ ನಗು ಬರುತ್ತದೆ ಅಷ್ಟೇ. ಈಗ ಅವರ ಹತ್ತಿರ ಕೇವಲ 6 ಜನ ಮಾಜಿ ಕಾರ್ಪೋರೇಟರ್ ಗಳಿದ್ದಾರೆ ಅಷ್ಟೇ. ಆದರೆ, ಈಶ್ವರಪ್ಪ ಅವರು ವಾಪಸ್ ಬರುತ್ತಾರೆ ಎಂಬ ವಿಶ್ವಾಸವಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಮೋಹನ್ರೆಡ್ಡಿ, ಎಸ್.ಜ್ಞಾನೇಶ್ವರ್, ನಾಗರಾಜ್, ಕೆ.ವಿ.ಅಣ್ಣಪ್ಪ, ಶ್ರೀನಾಗ್ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post