ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಜಿಲ್ಲೆಯಲ್ಲಿ ಅಸಂಘಟಿತರಾಗಿರುವ ಶಿಳ್ಳೇಕ್ಯಾತ ಸಮುದಾಯದ ವಿಕಾಸಕ್ಕೆ ಸರ್ಕಾರದ ವಿವಿಧ ಇಲಾಖೆಗಳಿಂದ ಅನುಷ್ಠಾನಗೊಳಿಸಲಾದ ಯೋಜನೆಗಳಲ್ಲಿ ಸೌಲಭ್ಯವನ್ನು ಒದಗಿಸಿಕೊಟ್ಟು, ಸಾಮಾಜಿಕವಾಗಿ ಮುಖ್ಯವಾಹಿನಿಗೆ ಕರೆತರುವಲ್ಲಿ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಮಾನವೀಯ ನೆಲೆಯಲ್ಲಿ ಕಾರ್ಯನಿರ್ವಹಿಸುವಂತೆ ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ/ವರ್ಗ ಅಲೆಮಾರಿಗಳ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ.ಪಲ್ಲವಿ ಅವರು ಹೇಳಿದರು.
ಅವರು ಇಂದು ಶಿವಮೊಗ್ಗ ಸಮೀಪದ ಗೋಂದಿ ಚಟ್ನಳ್ಳಿ ಗ್ರಾಮದ ಶಿಳ್ಳೇಕ್ಯಾತ ಸಮುದಾಯದ ನಿವಾಸಿಗಳ ಬೀದಿಗೆ ಭೇಟಿ ನೀಡಿ, ಅಲ್ಲಿನ ಬೀದಿ ದೀಪ, ಚರಂಡಿ, ಕುಡಿಯುವ ನೀರು, ಸ್ವಚ್ಛತೆ, ನೈರ್ಮಲ್ಯ ಮುಂತಾದ ಮೂಲಭೂತ ಸೌಕರ್ಯಗಳ ವ್ಯವಸ್ಥೆಯನ್ನು ಪರಿಶೀಲಿಸಿದ ನಂತರ ಅಲ್ಲಿನ ನಿವಾಸಿಗಳಿಂದ ಅಹವಾಲುಗಳನ್ನು ಸ್ವೀಕರಿಸಿದರು.
ಇದೇ ಸಂದರ್ಭದಲ್ಲಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಶಿಳ್ಳೇಕ್ಯಾತ ಜನಾಂಗವು ಪರಿಶಿಷ್ಟ ಜಾತಿಗೆ ಸೇರಿದ್ದು, ಜೀವನೋಪಾಯಕ್ಕಾಗಿ ಎಲ್ಲೆಂದರಲ್ಲಿ ಚದುರಿ ಹೋಗಿ, ಜೀವನ ನಿರ್ವಹಣೆಗಾಗಿ, ನೆಮ್ಮದಿಯ ಬದುಕಿಗಾಗಿ ಅಲೆದಾಡುತ್ತಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ ಎಂದ ಅವರು ಸ್ವಾತಂತ್ರ್ಯ ನಂತರ ಹಲವು ದಶಕಗಳು ಉರುಳಿದರೂ ಕನಿಷ್ಟ ಜೀವನ ನಿರ್ವಹಿಸುತ್ತಿರುವುದು ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ ಎಂದರು.
ಸಂಕಷ್ಟದಲ್ಲಿದ್ದು, ಅತ್ಯಂತ ಕನಿಷ್ಟ ಜೀವನ ನಿರ್ವಹಿಸುತ್ತಿರುವ ಶಿಳ್ಳೇಕ್ಯಾತ ಸಮುದಾಯದವರು ಮೀನುಗಾರಿಕೆ ನಡೆಸಲು ಅನುಕೂಲವಾಗುವಂತೆ ಒಂದಷ್ಟು ಕೆರೆಗಳನ್ನು ಮೀಸಲಿರಿಸಬೇಕು. ಅಲ್ಲದೇ ಮೀನುಗಾರರಿಗೆ ಅಗತ್ಯ ಸಲಕರಣೆಗಳ ಜೊತೆಗೆ ಮಾರುಕಟ್ಟೆ ಸೌಲಭ್ಯ, ಶೀತಲೀಕರಣ ಘಟಕಗಳನ್ನು ಕಲ್ಪಿಸಿಕೊಡಬೇಕು.
ನಾಗಪ್ಪ, ಶಿಳ್ಳೇಕ್ಯಾತ ಸಮುದಾಯದ ರಾಜ್ಯ ಅಧ್ಯಕ್ಷ.
ಗ್ರಾಮಕ್ಕೆ ಹೊಂದಿಕೊಂಡಂತಿರುವ ಸರ್ವೇ ನಂ.104ರಲ್ಲಿ ಸರ್ಕಾರದ ಕಾಯ್ದಿರಿಸಿದ ಜಮೀನಿದ್ದು, ಇಲ್ಲಿನ ನಿರ್ವಸತಿಗ ಕುಟುಂಬಗಳಿಗೆ ನಿವೇಶನ ಹಂಚಿಕೆ ಮಾಡಿ, ಆಶ್ರಯ ಯೋಜನೆಯಡಿ ಮನೆ ನಿರ್ಮಿಸಿಕೊಡಬೇಕು.
ಶಿಳ್ಳೇಕ್ಯಾತ ಸಮುದಾಯದ ಮುಖಂಡ. ಗೋಂದಿ ಚಟ್ನಳ್ಳಿ.
ಶಿಳ್ಳೆಕ್ಯಾತ ಜನಾಂಗದ ಮಕ್ಕಳು ಆರನೇ ತರಗತಿಯಿಂದ ಹತ್ತನೆ ತರಗತಿಯವರೆಗಿನ ಶಿಕ್ಷಣ ಪಡೆಯಲು ಪ್ರವೇಶ ಪರೀಕ್ಷೆಗಳಿಲ್ಲದೆ ಸರ್ಕಾರಿ ವಸತಿ ನಿಲಯಗಳಲ್ಲಿ ಪ್ರವೇಶಾವಕಾಶ ಹಾಗೂ ಉಚಿತ ವಸತಿ ಸೌಲಭ್ಯವನ್ನು ಒದಗಿಸಿಕೊಡಲಾಗುತ್ತಿದೆ. ಐಎಎಸ್, ಐಪಿಎಸ್., ಐಎಫ್ಎಸ್ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸಲು ದೇಶದ ಪ್ರತಿಷ್ಠಿತ ತರಬೇತಿ ಸಂಸ್ಥೆಗಳಲ್ಲಿ ತರಬೇತಿಗೆ ಸರ್ಕಾರದ ವತಿಯಿಂದಲೇ ನಿಯೋಜಿಸಲಾಗುತ್ತಿದೆ.
ಮಲ್ಲೇಶಪ್ಪ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ.
ಅತ್ಯಂತ ಹಿಂದುಳಿದಿರುವ, ಶಿಕ್ಷಣದಿಂದ ದೂರವೇ ಇರುವ, ಜೀವನೋಪಾಯಕ್ಕಾಗಿ ಮೀನುಗಾರಿಕೆಯನ್ನು ಅವಲಂಬಿಸಿರುವ ಈ ಜನಾಂಗದವರಿಗೆ, ಅವರ ನೆಲೆಸಿರುವ ಬೀದಿಗಳಿಗೆ ಶುದ್ಧ ಕುಡಿಯುವ ನೀರು, ಸೂರು, ಶಾಲೆ, ವಿದ್ಯುತ್ಸಂಪರ್ಕ, ನೀರು-ನೈರ್ಮಲ್ಯ ಮತ್ತಿತರ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಹಾಗೂ ಸ್ವಚ್ಚತೆಗೆ ಗಮನಹರಿಸುವಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಪ್ರಮಾಣಿಕವಾಗಿ ಕಾರ್ಯನಿರ್ವಹಿಸುವಂತೆ ಸೂಚಿಸಿದರು.
Also read: ಮಧ್ಯಮ ವರ್ಗದ ಜನರ ಬದುಕನ್ನು ಸುಲಭ, ಸರಳಗೊಳಿಸುವ ಬಜೆಟ್ | ಹೆಚ್ಡಿಕೆ ಪ್ರತಿಕ್ರಿಯೆ
ಅಲ್ಲದೇ ಇಲ್ಲಿನ ಅನೇಕ ಕುಟುಂಬಗಳ ಸದಸ್ಯರಿಗೆ ಸೂಕ್ತ ವಸತಿ ಸೌಲಭ್ಯವಿಲ್ಲದೇ ಒಂದೇ ಸೂರಿನಡಿ ಅನೇಕ ಕುಟುಂಬಗಳ ಜೀವನ ನಿರ್ವಹಿಸುತ್ತಿರುವುದು ಕಂಡುಬರುತ್ತಿದೆ. ಅಲ್ಲದೇ ಇಂತಹ ಮನೆಗಳಲ್ಲಿರುವ ಅನೇಕ ಕುಟುಂಬಗಳಿಗೆ ಪಡಿತರ ಚೀಟಿ ಇಲ್ಲವಾಗಿದೆ. ಇನ್ನೂ ಅನೇಕ ಕುಟುಂಬಗಳ ಮನೆಗಳಿಗೆ ಕನಿಷ್ಟ ವಿದ್ಯುತ್ಸೌಲಭ್ಯವೂ ಇಲ್ಲದಿರುವುದು ಬೇಸರ ತಂದಿದೆ. ಇಂತಹ ಕುಟುಂಬಗಳಿಗೆ ಕೂಡಲೇ ಸೌಲಭ್ಯ ಒದಗಿಸಿಕೊಡುವಲ್ಲಿ ಅಧಿಕಾರಿಗಳು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವಂತೆ ಅವರು ಸೂಚಿಸಿದರು.
ಪ್ರಸ್ತುತ ಇವರು ವಾಸಿಸುತ್ತಿರುವ ಅನೇಕರಿಗೆ ಹಕ್ಕುಪತ್ರಗಳಿಲ್ಲದಿರುವುದರಿಂದ ಮಳೆಗಾಲದಲ್ಲಿ ಹಾನಿಗೊಳಗಾದ ಮನೆಗಳಿಗೆ ಪರಿಹಾರಧನ ಹೊರತುಪಡಿಸಿ, ಶಾಶ್ವತ ಮನೆ ನಿರ್ಮಾಣಕ್ಕೆ ಇಲಾಖೆಯಿಂದ ದೊರೆಯಬೇಕಾದ ಸೌಲಭ್ಯ ದೊರೆಯುತ್ತಿಲ್ಲ. ಆದ್ದರಿಂದ ಇವರಿಗೆ ತುರ್ತಾಗಿ ಅಗತ್ಯ ದಾಖಲೆಗಳನ್ನು ನೀಡುವಲ್ಲಿ ಆಗಿರುವ ಅಡಚಣೆ ಹಾಗೂ ಪರಿಹಾರ ಕ್ರಮಗಳ ಕುರಿತು ಮಾಹಿತಿ ನೀಡಬೇಕಲ್ಲದೇ ಕೂಡಲೇ ಸಮೀಕ್ಷೆ ನಡೆಸಿ ವರದಿ ನೀಡುವಂತೆ ತಹಶೀಲ್ದಾರರಿಗೆ ಸೂಚಿಸಿದರು.
ಗ್ರಾಮದಲ್ಲಿ ಸರ್ಕಾರದ ವತಿಯಿಂದ ನಿರ್ಮಿಸಿಕೊಡಲಾದ ರಸ್ತೆ, ನೀರು ಮುಂತಾದವುಗಳನ್ನು ಸರ್ಕಾರವೇ ನಿರ್ವಹಿಸುವುದು ಕಷ್ಟಕರ. ಇಲ್ಲಿನ ಗ್ರಾಮಸ್ಥರೂ ಕೂಡ ಅದರ ಸದ್ಭಳಕೆ ಮತ್ತು ರಕ್ಷಣೆಗೆ ಮುಂದಾಗಬೇಕು. ಇಲ್ಲಿನ ಬೀದಿನಾಯಿಗಳು, ಬಿಡಾಡಿ ಹಂದಿಗಳ ನಿಯಂತ್ರಣ ಮಾಡುವಲ್ಲಿ ಅಧಿಕಾರಿಗಳು ಗಮನಹರಿಸುವಂತೆ ಸೂಚಿಸಿದರು.
ಈ ಸಮುದಾಯ ವಿದ್ಯಾವಂತ ನಿರುದ್ಯೋಗಿಗಳು ಸ್ವಯಂ ಉದ್ಯೋಗ ಆರಂಭಿಸಿ, ಸ್ವಾವಲಂಬಿ ಜೀವನ ಸಾಗಿಸಲು ಮುಂದಾಗುವಂತೆ ಸಲಹೆ ನೀಡಿದ ಅವರು, ನಿಗಮದ ವತಿಯಿಂದ ಸಹಾಯಧನದೊಂದಿಗೆ ನೇರಸಾಲಸೌಲಭ್ಯ, ವಾಹನ ಸಾಲ ಇತ್ಯಾದಿಗಳನ್ನು ನೀಡಲಾಗುತ್ತಿದ್ದು, ಅರ್ಹರು ಈ ಯೋಜನೆಗಳ ಲಾಭ ಪಡೆದುಕೊಳ್ಳುವಂತೆ ಅವರು ಸೂಚಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಮಲ್ಲೇಶಪ್ಪ, ಡಿ.ವೈ.ಎಸ್ಪಿ., ಸಂಜೀವಕುಮಾರ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಧು, ಅಲೆಮಾರಿ ಅಭಿವೃದ್ಧಿ ನಿಗಮದ ಸದಸ್ಯ ಸಂದೀಪ್, ತಹಶೀಲ್ದಾರ್ರಾಜೀವ್, ನಿಗಮದ ವ್ಯವಸ್ಥಾಪಕ ಸುರೇಶ್, ಶಿಳ್ಳೇಕ್ಯಾತ ಸಮುದಾಯದ ರಾಜ್ಯಾಧ್ಯಕ್ಷ ನಾಗಪ್ಪ, ಆನಂದ್ ಮತ್ತಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post