ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಆಧುನಿಕ ಯುಗದಲ್ಲಿನ ಕಟ್ಟಡಗಳ ಕಾಮಗಾರಿಯಲ್ಲಿ ಹಲವಾರು ಸವಾಲುಗಳು ಎದುರಾಗುತ್ತಿದ್ದು ಅಂತಹ ಸಮಸ್ಯೆಗಳಿಗೆ ನಿರ್ಮಾಣ ಹಂತದಲ್ಲಿಯೇ ಸುಭದ್ರತೆಯನ್ನು ಹೆಚ್ಚಿಸುವ ಕೌಶಲ್ಯಗಳನ್ನು ಕಟ್ಟಡ ನಿರ್ಮಾಣಕಾರರು ಅಳವಡಿಸಿಕೊಳ್ಳಬೇಕಿದೆ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷರಾದ ಎ.ಎಸ್.ವಿಶ್ವನಾಥ ಸಲಹೆ ನೀಡಿದರು.
ನಗರದ ಜೆ.ಎನ್.ಎನ್.ಸಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಅಲ್ಟ್ರಾಟೆಕ್ ಸಿಮೆಂಟ್ ಲಿಮಿಟೆಡ್ ಮತ್ತು ಸಿವಿಲ್ ಎಂಜಿನಿಯರಿಂಗ್ ವಿಭಾಗದ ವತಿಯಿಂದ ಏರ್ಪಡಿಸಿದ್ದ ಕಟ್ಟಡ ನಿರ್ಮಾಣಕಾರರಿಗೆ ಕೌಶಲ್ಯಾಭಿವೃದ್ದಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಒಂದು ಕಟ್ಟಡದ ನಿಜವಾದ ಪಲಿತಾಂಶ ಸಿಗುವುದು ನಿರ್ಮಾಣವಾದ ಹಲವು ವರ್ಷಗಳ ನಂತರ. ನಿರ್ಮಾಣ ಕಾರ್ಯಾದಲ್ಲಿನ ಸಣ್ಣ ತಪ್ಪು ಮುಂದೇ ಕಟ್ಟಡದ ಮೇಲೆ ಬಹು ದೊಡ್ಡ ಪರಿಣಾಮ ಬೀರುತ್ತಿದೆ. ಹಲವು ಆಧುನಿಕ ಕ್ರಮಗಳ ನಂತರವು ಮನೆಯ ತಾರಸಿಗಳ ಸೊರುವಿಕೆ, ಅಡಿಪಾಯದಲ್ಲಿ ಉಂಟಾಗುವ ಜಲ ಉತ್ಫಾದನೆ ಹೀಗೆ ಹಲವಾರು ಸಮಸ್ಯೆಗಳನ್ನು ಮಾಲಿಕರು ಎದುರಿಸುತ್ತಾರೆ. ಅಂತಹ ಸಮಸ್ಯೆಗಳಿಗೆ ನಿಮ್ಮ ಕೌಶಲ್ಯದ ಮೂಲಕ ಪರಿಹರಿಸಲು ಪ್ರಯತ್ನಿಸಿ. ಯಾವುದೇ ಕೆಲಸಗಳ ಪರಿಪೂರ್ಣತೆ ಸಾಧ್ಯವಾಗುವುದು ಕೌಶಲ್ಯತೆಯಿಂದ ಎಂದು ಹೇಳಿದರು.
ರಾಷ್ಟ್ರೀಯ ಶಿಕ್ಷಣ ಸಮಿತಿ ಉಪಾಧ್ಯಕ್ಷರಾದ ಟಿ.ಆರ್. ಅಶ್ವಥನಾರಾಯಣ ಶೆಟ್ಟಿ ಮಾತನಾಡಿ, ಹಣಕ್ಕಿಂತ ಮಿಗಿಲಾಗಿದ್ದು ಕೆಲಸದಲ್ಲಿನ ಶ್ರದ್ದೆ, ಕೌಶಲ್ಯತೆ. ನಮ್ಮ ಹಿರಿಯರು ನಿರ್ಮಾಣ ಮಾಡಿದ ಕಟ್ಟಡಗಳು ನೂರಾರು ವರ್ಷಗಳಾದರು ಭದ್ರವಾಗಿ ನಿಂತಿರುವುದು ಅಂದಿನ ಗುಣಮಟ್ಟದ ಕೆಲಸಕ್ಕೆ ಹಿಡಿದ ಕೈಗನ್ನಡಿ. ಇಂದಿಗೂ ಹಳೆಯ ಕಟ್ಟಡಗಳ ಆಧುನಿಕರಣಗೊಳಿಸುವಾಗ ಅದನ್ನು ಒಡೆಯಲು ಹರಸಾಹಸ ಪಡುವುದನ್ನು ನಾವು ನೋಡಿದ್ದೇವೆ. ಆಧುನಿಕ ಕಾಮಗಾರಿಯ ಕ್ರಮಗಳು ನಿರ್ಮಾಣ ಕ್ಷೇತ್ರದಲ್ಲಿ ಮತ್ತಷ್ಟು ಬುನಾದಿ ನೀಡುವಂತಾಗಲಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬೆಂಗಳೂರಿನ ಅಲ್ಟ್ರಾಟೆಕ್ ಬಿಲ್ಡಿಂಗ್ ಪ್ರಾಡಕ್ಟ್ ವಿಭಾಗದ ಟೆಕ್ನಿಕಲ್ ಸರ್ವಿಸ್ ಸಂತೋಷ್.ವಿ.ಕೋರಿ, ಸಿವಿಲ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಡಾ.ಕಾರ್ತಿಕ.ಬಿ.ಎಸ್, ಕಾರ್ಯಾಗಾರ ಸಂಯೋಜಕರಾದ ಭುವನ್ ಕುಮಾರ, ಅಲ್ಟ್ರಾಟೆಕ್ ಟೆಕ್ನಿಕಲ್ ಸರ್ವಿಸ್ ರಾಕೇಶ್.ಬಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post