ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಹಿಟ್ಲರನ ಪ್ರಭುತ್ವ ನೀತಿಯಿಂದಲ್ಲದೇ ಜನರೇ ಜನರನ್ನು ಧರ್ಮದ ಅಂಧತನದಿಂದ ಕೊಲ್ಲುವಂತಾಯಿತು. ಈ ವಿಷಯವು ಮಾಂಟೋವಿನ ಕಥೆಗಳಲ್ಲಿ ತೀಕ್ಷ್ಣವಾದ ವ್ಯಂಗ್ಯವನ್ನು ಕಟ್ಟಿಕೊಡುತ್ತದೆ ಹಾಗೂ ಅವರ ಕೃತಿಗಳಲ್ಲಿ ಭಾರತ ಮತ್ತು ಪಾಕಿಸ್ತಾನದ ವಿಭಜನೆಯ ಸಂದರ್ಭದಲ್ಲಿ ಜನರ ಕಷ್ಟವನ್ನು ತ್ರಿಶಂಕುಸ್ವರ್ಗದಂತೆ ವಿಮರ್ಶಿಸಿದ್ದಾರೆ ಎಂದು ಖ್ಯಾತ ಬರಹಗಾರ ಎಸ್. ದಿವಾಕರ್ ರವರು ಅಭಿಪ್ರಾಯ ಪಟ್ಟರು.
ಕಟೀಲ್ ಅಶೋಕ ಪೈ ಸ್ಮಾರಕ ಕಾಲೇಜಿನ ಆಂಗ್ಲ ವಿಭಾಗ ಹಾಗೂ ಹೆಗ್ಗೋಡಿನ ನೀನಾಸಂ ಪ್ರತಿಷ್ಟಾನದ ಸಹಯೋಗದೊಂದಿಗೆ ಆಯೋಜಿಸಿದ್ದ ‘ ವಿಶ್ವ ಸಾಹಿತ್ಯಕ್ಕೊಂದು ಮುನ್ನುಡಿ’ ಏಕದಿನ ಶಿಬಿರದಲ್ಲಿ ಅವರು ಮಾತನಾಡಿದರು,
ಟಡ್ಯೂಸ್ ಬೊರೋಸ್ಕಿಯವರ ‘ದಿಸ್ ವೇ ಫಾರ್ ದಿ ಗ್ಯಾಸ್ ಲೇಡೀಸ್ ಅಂಡ್ ಜಂಟಲ್ಮನ್’ ಕೃತಿಯನ್ನು ನಿದರ್ಶನವನ್ನಾಗಿಟ್ಟುಕೊಂಡು ” ಒಬ್ಬ ವ್ಯಕ್ತಿ ಹೇಗೆ ಬಂದ, ಏಕೆ ಬಂದ, ಬಂದು ಏನು ಮಾಡಿದ ಎನ್ನುವುದರ ಮೇಲೆ ಸಣ್ಣಕಥೆಗಳು ಸಾಗುತ್ತವೆ ಹಾಗೂ ಅವು ಒಂದೇ ವಾಕ್ಯದಲ್ಲಿ ಸಂಕ್ಷಿಪ್ತ ವಿವರಣೆಯನ್ನು ನೀಡಿ ಅದರ ಬಗ್ಗೆ ಯೋಚನೆ ಮಾಡಲು ಓದುಗರಿಗೆ ಬಿಟ್ಟುಕೊಡುತ್ತವೆ” ಎಂದರು.
ಶಿಬಿರದ ಸಂಪನ್ಮೂಲ ವ್ಯಕ್ತಿಗಳಾದ ಖ್ಯಾತ ಬರಹಗಾರ ಮತ್ತು ಅನುವಾದಕರಾದ ಡಾ. ಮಾಧವ ಚಿಪ್ಪಳ್ಳಿಯವರು ಮಾತನಾಡಿ , ಟಾಲ್ಸ್ಟಾಯ್,ಸ್ಟಾನಿಸ್ಲಾವಸ್ಕಿ,ಆಂಟೋನ್ ಚೆಕಾವ್ ,ರೂಸೋ ಮುಂತಾದವರ ಸಾಹಿತ್ಯಸಕ್ತಿ ವಿಶ್ವ ಸಾಹಿತ್ಯಕ್ಕೆ ಅಪಾರ ಕೊಡುಗೆಯನ್ನು ನೀಡಿದೆ ಹಾಗೂ ಅವರ ಕೃತಿಗಳು ತತ್ವಶಾಸ್ತ್ರ ಮತ್ತು ಮನೋವಿಜ್ಞಾನದ ಯೋಚನೆಗಳನ್ನು ಹೊಂದಿದೆ ” ಎಂದು ತಿಳಿಸಿದರು.
ಶಿಬಿರದ ಅಧ್ಯಕ್ಷತೆಯನ್ನು ವಹಿಸಿದ ಕಟೀಲ್ ಅಶೋಕ ಪೈ ಸ್ಮಾರಕ ಕಾಲೇಜಿನ ಪ್ರಾಂಶುಪಾಲರಾದ ಡಾ.ಸಂಧ್ಯಾಕಾವೇರಿಯವರು ಮಾತನಾಡಿ. “ಯಾವುದೇ ಒಂದು ಅಧ್ಯವನವನ್ನು ಮಾಡುವಾಗ ಅದರ ಚೌಕಟ್ಟಿಗೆ ಮಾತ್ರ ಸೀಮಿತಗೊಳ್ಳದೆ ಅದನ್ನು ಹೊರಜಗತ್ತಿಗೆ ತಂದಾಗ ಮಾತ್ರ ವಿಶ್ವ ಸಾಹಿತ್ಯಕ್ಕೆ ಒಂದು ಹಾದಿ ಸಿಗುತ್ತದೆ , ಶಿಬಿರಗಳನ್ನು ವಿದ್ಯಾರ್ಥಿಗಳು ಉಪಯೋಗಿಸಿಕೊಳ್ಳಬೇಕು ಹಾಗೂ ವಿದ್ಯಾರ್ಥಿಯ ಸಾಮರ್ಥ್ಯವನ್ನು ವೃದ್ಧಿ ಮಾಡಿಕೊಳ್ಳುವುದಕ್ಕೆ ಶಿಬಿರವು ಪೂರಕವಾಗಿದೆ” ಎಂದರು.
Also read: ಜೆಸಿಐ ಭಾರತದಿಂದ ಶಿವಮೊಗ್ಗದಲ್ಲಿ ಕಾರ್ಗಿಲ್ ವಿಜಯ ದಿವಸ್ ಆಚರಣೆ
ಖ್ಯಾತ ವಾಗ್ಮಿ ಹಾಗೂ ವಿಮರ್ಶಕರಾದಂತಹ ಪ್ರೊ.ಟಿ.ಪಿ.ಅಶೋಕ್ ರವರು ಈ ಶಿಬಿರವನ್ನು ಉದ್ಘಾಟಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಕಾಲೇಜಿನ ಅಧ್ಯಾಪಕರಾದ ಡಿ.ಎಸ್. ಮಂಜುನಾಥರವರು ಸ್ವಾಗತಿಸಿದರು. ಶ್ರೀಮತಿ ರೇಷ್ಮಾರವರು ನಿರೂಪಿಸಿದರು.
ಈ ಸಂದರ್ಭದಲ್ಲಿ ಖ್ಯಾತ ಸಣ್ಣಕತೆ ಬರಹಗಾರರಾದ ಶ್ರೀಮತಿ.ಜಯಶ್ರೀ ಕಾಸರವಳ್ಳಿ, ಮಾನಸ ಸಂಸ್ಥೆಯ ನಿರ್ದೇಶಕರಾದ ಡಾ.ರಜನಿ ಎ. ಪೈ, ಎಮ್.ಸಿ.ಸಿ.ಎಸ್ ನ ನಿರ್ದೇಶಕರಾದ ಪ್ರೊ.ರಾಜೇಂದ್ರ ಚೆನ್ನಿ, ಪ್ರೊ.ನಾಗರಾಜರಾವ್ , ಕಾಲೇಜಿನ ಅಧ್ಯಾಪಕ ವೃಂದ, ಸಿಬ್ಬಂದಿ ವರ್ಗದವರು, ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಮಾಧ್ಯಮ ಮಿತ್ರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post