ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ದಾವಣಗೆರೆ: ಕಾಡಾ ಪ್ರಾಧಿಕಾರವನ್ನು ರೈತ ಸ್ನೇಹಿಯಾಗಿಸಿ, ಸರ್ಕಾರದ ಅನುದಾನ ಪ್ರತಿ ರೈತರಿಗೂ ದೊರೆಯುವಂತೆ ಮಾಡಿ ಎಂದು ಖ್ಯಾತ ನೀರಾವರಿ ತಜ್ಞ ಪ್ರೊ.ನರಸಿಂಹಪ್ಪ ಅವರು ಕಾಡಾ ಅಧ್ಯಕ್ಷೆ ಪವಿತ್ರ ರಾಮಯ್ಯ ಅವರಿಗೆ ಮನವಿ ಮಾಡಿದರು.
ದಾವಣಗೆರೆಯಲ್ಲಿ ನಡೆದ ಕಾರ್ಯಕ್ರದಲ್ಲಿ ಕಾಡಾ ಅಧ್ಯಕ್ಷರು ನರಸಿಂಹಪ್ಪ ಅವರನ್ನು ಭೇಟಿಯಾಗಿ, ಸನ್ಮಾನಿಸಿದ ವೇಳೆ ಅವರು ಮಾತನಾಡಿದರು.

ತುಂಗಾ ಮತ್ತು ಭದ್ರಾ ಜಲಾಶಯಗಳ ಬಗ್ಗೆ ವಿಶೇಷವಾಗಿ ಕಾಳಜಿ ಹೊಂದಿರುವ ಹಾಗೂ ಅದರ ಬಗ್ಗೆ ಸಾಕಷ್ಟು ಮಾಹಿತಿ ಹೊಂದಿರುವ ಬಗ್ಗೆ ತಮ್ಮ ಅನುಭವ ಹಂಚಿಕೊಂಡರು. ಭದ್ರಾ ಜಲಾಶಯದ ನೀರನ್ನು ಯಾವ ರೀತಿ ಸದ್ಬಳಕೆ ಮಾಡಿಕೊಳ್ಳಬೇಕು, ರೈತರಿಗೆ ಯಾವ ರೀತಿಯಲ್ಲಿ ಪ್ರಾಧಿಕಾರ ಕೆಲಸ ಮಾಡಬೇಕು, ರೈತರಿಗೆ ಎಷ್ಟರ ಮಟ್ಟಿಗೆ ಪ್ರಾಧಿಕಾರ ಅನುಕೂಲ ಮಾಡಿ ಕೊಡಬೇಕು, ಜಮೀನಿನ ಕೊನೆಯ ಭಾಗದವರೆಗೂ ನೀರನ್ನು ಯಾವ ಯೋಜನೆಗಳ ಮೂಲಕ ಅನ್ನದಾತನಿಗೆ ತಲುಪಿಸಬೇಕು, ಜಲಾಶಯದ ಕಾಲುವೆಗಳನ್ನು ಯಾವ ರೀತಿ ಉನ್ನತಿಕರಿಸಬೇಕು, ನೀರು ಪೋಲಾಗದಂತೆ ಹೇಗೆ ಕ್ರಮವಹಿಸಬೇಕು, ಪ್ರಾಧಿಕಾರವನ್ನು ಯಾವ ರೀತಿಯಲ್ಲಿ ರೈತ ಸ್ನೇಹಿಯಾಗಿಸಬೇಕು, ಸರ್ಕಾರದಿಂದ ಬರುವ ಅನುದಾನವನ್ನು ಹೇಗೆ ಸದ್ಬಳಕೆ ಮಾಡಿಕೊಳ್ಳಬೇಕು, ಯಾವ ಕಾಮಗಾರಿಗಳು ಪ್ರಾಧಿಕಾರದಿಂದ ಹೆಚ್ಚಾಗಿ ಮಾಡಿದರೆ ರೈತರು ಬೆಳೆ ಬೆಳೆಯಲು ಹೆಚ್ಚಾಗಿ ಅನುಕೂಲವಾಗುತ್ತದೆ ಎಂಬುದರ ಬಗ್ಗೆ ಇನ್ನೂ ಹಲವಾರು ಪ್ರಮುಖ ವಿಚಾರಗಳ ಬಗ್ಗೆ ತಮ್ಮ ಮನದಾಳದ ಅನುಭವವನ್ನು ಹಂಚಿಕೊಂಡರು.
ಇದಕ್ಕೆ ಪ್ರತಿಕ್ರಿಯಿಸಿದ ಭದ್ರಾ ಕಾಡ ಅಧ್ಯಕ್ಷರು, ನೀವು ಕೊಟ್ಟ ಎಲ್ಲಾ ಸಲಹೆಗಳನ್ನು ಖಂಡಿತಾ ಕಾರ್ಯ ರೂಪಕ್ಕೆ ತರುತ್ತೇನೆ. ನಿಮ್ಮ ಅನುಭವ ನಮಗೆ ಅತೀವ ಸ್ಫೂರ್ತಿ ತಂದಿದೆ. ರೈತರ ಪರ ಹೋರಾಟದ ಹಿನ್ನಲೆಯಿಂದ ಬಂದ ನನಗೆ ನಿಮ್ಮಂತವರ ಮಾರ್ಗದರ್ಶನ ಇನ್ನಷ್ಟು ಹೆಚ್ಚಿನ ಕೆಲಸ ಮಾಡಲು ಉತ್ಸುಕವಾಗುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಈ ಸಂದರ್ಭ ದಾವಣಗೆರೆ ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕರಾದ ರವೀಂದ್ರ ನಾಥ್ ಅವರು ತಮ್ಮ ಭಾಗದ ರೈತರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸುದೀರ್ಘವಾಗಿ ಚರ್ಚಿಸಿದರು. ಇದರೊಂದಿಗೆ ಕಳೆದ ಸುಮಾರು ವರ್ಷಗಳಿಂದ ದುರಸ್ಥಿ ಯಾಗದೆ ಇರುವ ಕಾಲುವೆಗಳ ಬಗ್ಗೆ, ಹೊಲಗಾಲುವೆ ನಿರ್ಮಿಸಿ ಕೊಡುವ ಬಗ್ಗೆ ಇನ್ನು ಹಲವಾರು ಪ್ರಮುಖ ಸಮಸ್ಯೆಗಳ ಬಗ್ಗೆ ಮಾಹಿತಿ ಹಂಚಿಕೊಂಡರು, ಜೊತೆಗೆ ಎಲ್ಲಾ ರೀತಿಯ ಸಲಹೆ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

















