ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸಾಗರ ತಾಲ್ಲೂಕಿನ ಆವಿನಹಳ್ಳಿ, ಬೇಸೂರು ಗ್ರಾಮದಲ್ಲಿ ಉದ್ದೇಶಿತ ಅಣು ವಿದ್ಯುತ್ ಸ್ಥಾವರ Nuclear power plant ಸ್ಥಾಪನೆ ಮಾಡುತ್ತಿರುವುದನ್ನು ಕೂಡಲೇ ನಿಲ್ಲಿಸಬೇಕು ಎಂದು ಆಗ್ರಹಿಸಿ ನಾಗರಿಕ ಹಕ್ಕುಗಳ ರಕ್ಷಣಾ ಸಂಘಟನೆ (ಎಪಿಸಿಆರ್), ಅಹಿಂದ ಚಳುವಳಿ ಸಂಘಟನೆ ವತಿಯಿಂದ ಇಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಕೇಂದ್ರ ಸರ್ಕಾರದ ರಾಷ್ಟ್ರೀಯ ಶಾಖಾ ವಿದ್ಯುತ್ ನಿಗಮವು ಸಾಗರ ತಾಲ್ಲೂಕಿನಲ್ಲಿ ಅಣುವಿದ್ಯುತ್ ಸ್ಥಾವರ ಸ್ಥಾಪಿಸಲು ಈಗಾಗಲೇ ಸಿದ್ಧತೆ ನಡೆಸಿದೆ. ವೈಮಾನಿಕ ಸಮೀಕ್ಷೆ ಕೂಡ ನಡೆದಿದೆ. ಸುಮಾರು 1200 ಎಕರೆ ಪ್ರದೇಶವನ್ನು ಗುರುತಿಸಲಾಗಿದೆ. ಇದರಲ್ಲಿ 900 ಎಕರೆಗೂ ಹೆಚ್ಚು ದಟ್ಟ ಅರಣ್ಯವಿದೆ. 485 ಎಕರೆ ಗೋಮಾಳವಿದೆ. ಈ ಎಲ್ಲಾ ವಿವರಗಳನ್ನು ತಾಲ್ಲೂಕು ಆಡಳಿತವು ಜಿಲ್ಲಾಧಿಕಾರಿಗಳ ಕಛೇರಿಗೆ ರವಾನಿಸಿರುವುದು, ಯೋಜನೆ ರೂಪಿಸಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಮನವಿದಾರರು ತಿಳಿಸಿದರು.
ಈಗಾಗಲೇ ಈ ಭಾಗದ ಜನರು ಲಿಂಗನಮಕ್ಕಿ, ಚಕ್ರ, ಸಾವೇಹಕ್ಲು ಮತ್ತು ಮಾಣಿ ಅಣೆಕಟ್ಟುಗಳು ನಿರ್ಮಾಣದಿಂದ ನೆಲೆಗಳನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಈಗ ಈ ಅಣುಸ್ಥಾವರ ಸ್ಥಾಪನೆಯಾದರೆ ಇಲ್ಲಿನ ಸ್ಥಳೀಯ ಜನರ ಬದುಕು ಮತ್ತೆ ಸಂಕಷ್ಟಕ್ಕೆ ಸಿಲುಕಲಿದೆ. ಸಾವಿರಾರು ಕುಟುಂಬಗಳು ಸಂತ್ರಸ್ಥರಾಗುತ್ತಾರೆ. ಅಲ್ಲದೆ ಇದೊಂದು ವಿನಾಶಕಾರಿ ಯೋಜನೆಯಾಗಿದೆ. ಜನರ ಬದುಕು ಮತ್ತು ಸಾವಿನ ಪ್ರಶ್ನೆಯಾಗಿದೆ. ಮುಂದಿನ ದಿನಗಳಲ್ಲಿ ಅಪಾಯದ ಸೂಚನೆಗಳು ಕಾಣಿಸಿಕೊಳ್ಳುತ್ತವೆ. ಆದ್ದರಿಂದ ಈ ಉದ್ದೇಶಿತ ಯೋಜನೆಯನ್ನು ತಕ್ಷಣವೇ ಕೈಬಿಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಮಲೆನಾಡ ಪರಿಸರವನ್ನು ಹಾಳುಮಾಡುವ ಜೀವ ವೈವಿಧ್ಯವನ್ನು ನಾಶಮಾಡುವ ಜನವಸತಿ ಪ್ರದೇಶಕ್ಕೆ ಅಪಾಯಕಾರಿಯಾಗಿರುವ ಈ ಯೋಜನೆ ಯಾವುದೇ ಕಾರಣಕ್ಕೂ ಬೇಡ. ಸರ್ಕಾರ ಈ ಯೋಜನೆಯನ್ನು ಮುಂದುವರಿಸಲು ಹೊರಟರೆ ಮಲೆನಾಡಿನ ಜನ ಸಾರಾಸಗಟಾಗಿ ವಿರೋಧ ವ್ಯಕ್ತಪಡಿಸುವುದಲ್ಲದೆ ಬಹುದೊಡ್ಡ ಹೋರಾಟವನ್ನು ಕೂಡ ಹಮ್ಮಿಕೊಳ್ಳುತ್ತೇವೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಮನವಿ ನೀಡುವ ಸಂದರ್ಭದಲ್ಲಿ ಪ್ರಮುಖರಾದ ಆರ್.ಟಿ.ನಟರಾಜ್, ಸರೋಜಾ ಪಿ.ಚಂಗೊಳ್ಳಿ, ಮಹಮ್ಮದ್ ರಫೀಕ್, ವಿ.ರಾಜು, ಎಸ್.ವಿ.ರಾಜಮ್ಮ ಸೇರಿದಂತೆ ಹಲವರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 






















