ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕೇಂದ್ರ ಸರ್ಕಾರ ದೂರದೃಷ್ಠಿ ಹೊಂದಿರುವ ಬಜೆಟ್ ಮಂಡಿಸಿದ್ದು, ದೇಶದ ಅಭಿವೃದ್ಧಿ ದೃಷ್ಠಿಯಿಂದ ಉತ್ತಮ ಬಜೆಟ್ ಮಂಡಿಸಲಾಗಿದೆ. ಬಜೆಟ್ ಉತ್ತಮ ಅಂಶಗಳನ್ನು ಒಳಗೊಂಡಿದೆ ಎಂದು ಆರ್ಥಿಕ ತಜ್ಞ ಜಿ.ಎನ್. ರಾವ್ ಹೇಳಿದರು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಭಾಂಗಣದಲ್ಲಿ ಆಯೋಜಿಸಿದ್ದ ಬಜೆಟ್ 2023 ಒಂದು ಅವಲೋಕನ ಕಾರ್ಯಕ್ರಮದಲ್ಲಿ ಮಾತನಾಡಿ, ದೇಶದ ಜನರು ವಸ್ತುಗಳ ಬೆಲೆ ಏರಿಕೆ ಹಾಗೂ ಇಳಿಕೆ ಬಗ್ಗೆ ಮೊದಲು ಬಜೆಟ್ನಲ್ಲಿ ಗಮನ ಹರಿಸುತ್ತಾರೆ. ಯುವಜನತೆ ಉದ್ಯೋಗ ಸೃಷ್ಠಿ ಕುರಿತು ಬಜೆಟ್ ಅವಲೋಕಿಸುತ್ತಾರೆ. ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ನಲ್ಲಿ ಅಮೃತ ಮಹೋತ್ಸವ ಸಂದರ್ಭದಲ್ಲಿ ದೇಶದ ಸದೃಢ ಹಾದಿಯಲ್ಲಿ ಸಾಗುವ ಪ್ರಮುಖ ಅಂಶಗಳಿವೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರದ ಬಜೆಟ್ನಲ್ಲಿ ವಿವಿಧ ವಿಷಯಗಳಿಗೆ ಆದ್ಯತೆ ನೀಡಿದ್ದು, ಎಲ್ಲ ವಲಯಗಳಿಗೂ ಪ್ರಾಮುಖ್ಯತೆ ನೀಡಿರುವುದನ್ನು ಕಾಣಬಹುದಾಗಿದೆ. ಪ್ರತ್ಯೇಕವಾಗಿ ಗುರುತಿಸಿ ಗಮನ ಹರಿಸಲಾಗಿದೆ. ಎಸ್ಸಿ ಎಸ್ಟಿ, ಯುವಜನತೆ, ಮಹಿಳೆ, ರೈತ ವಲಯವನ್ನು ಗುರಿಯಾಗಿಸಿ ಬಜೆಟ್ ಮಂಡಿಸಲಾಗಿದೆ. ಕೃಷಿ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ವಿಶೇಷ ಆದ್ಯತೆ ನೀಡಲಾಗಿದೆ ಎಂದರು.
ಅಮೃತ ಮಹೋತ್ಸವ ಸಂದರ್ಭದಲ್ಲಿ ದೇಶ ಸದೃಢಗೊಳಿಸುವ ನಿಟ್ಟಿನಲ್ಲಿ ಮೂಲಸೌಕರ್ಯಕ್ಕೆ ಪ್ರಾಮುಖ್ಯತೆ ನೀಡಲಾಗಿದೆ. ಹತ್ತು ಲಕ್ಷ ಕೋಟಿ ರೂ.ಗೂ ಅಧಿಕ ಹಣ ಹೂಡಿಕೆ ಮೂಲ ಸೌಕರ್ಯ ಕ್ಷೇತ್ರದಲ್ಲಿ ಆಗುತ್ತಿದೆ. ಉದ್ಯೋಗ ಸೃಷ್ಠಿಗೆ ಹೂಡಿಕೆ ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್. ಗೋಪಿನಾಥ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ದೇಶದಲ್ಲಿ ಅಧಿಕಾರ ಹಿಡಿದ ಪಕ್ಷಗಳು ಚುನಾವಣೆ ಘೋಷಣೆ ಮುನ್ನ ಪ್ರಣಾಳಿಕೆಯಲ್ಲಿ ಸೂಚಿಸಿರುವ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಪ್ರಯತ್ನಿಸುತ್ತವೆ. ಸಂಪನ್ಮೂಲ ಕ್ರೋಢಿಕರಣ, ಹಂಚಿಕೆ ಕುರಿತು ಬಜೆಟ್ನಲ್ಲಿ ವಿವರಿಸಲಾಗುತ್ತದೆ ಎಂದು ತಿಳಿಸಿದರು.
ಲೆಕ್ಕ ಪರಿಶೋಧಕ ಶರತ್, ಲೆಕ್ಕ ಪರಿಶೋಧಕ ದೀಪಕ್ ಜೈನ್ ಅವರು 2023 ಬಜೆಟ್ ಕುರಿತು ವಿಶ್ಲೇಷಣೆ ಮಾಡಿದರು. ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಕಾರ್ಯದರ್ಶಿ ವಸಂತ್ ಹೋಬಳಿದಾರ್, ಪರಮೇಶ್ವರ್, ಜಿ. ವಿಜಯ್ಕುಮಾರ್, ಶಂಕರಪ್ಪ, ಪ್ರದೀಪ್ ಎಲಿ, ಗಣೇಶ್ ಅಂಗಡಿ, ಬಿ. ಗೋಪಿನಾಥ್, ಹಾಲಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post