ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನೆನಗುದಿಗೆ ಬಿದ್ದಿರುವ ಭದ್ರಾ ಮೇಲ್ದಂಡೆ ಯೋಜನೆಯನ್ನು ತ್ವರಿತವಾಗಿ ಕೈಗೆತ್ತಿಕೊಳ್ಳಲಾಗುವುದು ಎಂದು ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಯೋಜನೆ ಮತ್ತು ಸಾಂಖಿಕ ಸಚಿವ ಡಿ. ಸುಧಾಕರ್ ಹೇಳಿದರು.
ಅವರು ಇಂದು ಬಿ.ಆರ್.ಪಿಯಲ್ಲಿ ಭದ್ರಾ ಮೇಲ್ದಂಡೆ ಯೋಜನೆಯ ಕಾಲುವೆ ಮತ್ತು ಇತರೆ ಕಾಮಗಾರಿಗಳ ಪರಿಶೀಲನೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಭದ್ರಾ ಮೇಲ್ದಂಡೆ ಯೋಜನೆ ಪ್ರಮುಖವಾಗಿ ಕುಡಿಯುವ ನೀರಿನ ಯೋಜನೆಯಾಗಿದೆ. ಈ ಯೋಜನೆಯಿಂದ ಚಿತ್ರದುರ್ಗ, ಶಿರಾ,ದಾವಣಗೆರೆ ಮತ್ತು ತುಮಕೂರು ಜಿಲ್ಲೆಗಳಿಗೆ ಅನುಕೂಲವಾಗುತ್ತದೆ. ಆದರೆ ಈ ಯೋಜನೆ 2018ರಿಂದಲೂ ಕುಂಠಿತಗೊಂಡಿದೆ. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಈ ಯೋಜನೆಗೆ ಮಹತ್ವ ನೀಡಿದ್ದರಾದೂ ಅದು ಕಾರ್ಯಗತ ಆಗಿರಲಿಲ್ಲ. ಈಗ ಕಾಂಗ್ರೆಸ್ ಸರ್ಕಾರ ಈ ಯೋಜನೆಯನ್ನು ಮತ್ತಷ್ಟು ತೀವ್ರಗೊಳಿಸಲು ಉದ್ದೇಶಿಸಿದೆ ಎಂದರು.
ಈ ಯೋಜನೆಗೆ ಅನೇಕ ಸ್ಥಳೀಯ ಸವiಸ್ಯೆಗಳಿವೆ. ಈ ಬಗ್ಗೆ ಈಗಾಗಲೇ ಮಾಹಿತಿ ತೆಗೆದುಕೊಳ್ಳತ್ತಿದ್ದೇನೆ ಕೆಲವು ಕಡೆ ಕೆಇಬಿಗೆ ಸಂಬಂಧಿಸಿದಂತೆ 12 ಟವರ್ಗಳನ್ನು ನಿರ್ಮಿಸಬೇಕಾಗಿದೆ. ರಸ್ತೆಗಳ ನಿರ್ಮಾಣ ಆಗಬೇಕಾಗಿದೆ. ಟವರ್ ನಿರ್ಮಿಸಲು ಇನ್ನೂ ಅನುಮತಿ ಸಿಕ್ಕಿಲ್ಲ. ಅರಣ್ಯ ಇಲಾಖೆ ಅನುಮತಿಕೂಡ ಬೇಕಾಗಿದೆ. ಈ ಎಲ್ಲಾ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಅಧಿಕಾರಿಗಳೊಂದಿಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದರು.
ಯೋಜನೆ ಜಾರಿಗೆ ಸಂಬಂಧಿಸಿದಂತೆ ಮಾಹಿತಿ ಮತ್ತು ವರದಿಯನ್ನು ತರಿಸಿಕೊಳ್ಳುತ್ತೇನೆ. ಒಟ್ಟು 17ಟಿಎಂಸಿ ನೀರನ್ನು ತುಂಗಾನದಿಯಿಂದ ಲಿಫ್ಟ್ ಮಾಡುವ ಉದ್ದೇಶ ಹೊಂದಲಾಗಿದೆ. ತುಂಗಾ ನದಿ ತುಂಬಿದಾಗ ಮಾತ್ರ ಲಿಫ್ಟ್ ಮಾಡಲಾಗುವುದು. ಹೆಚ್ಚುವರಿ ನೀರನ್ನು ಲಿಫ್ಟ್ ಮಾಡಲಾಗುತ್ತದೆಯಷ್ಟೆ. ಇದರಿಂದ ತುಂಗಾ ಅಣೆಕಟ್ಟಿನ ನೀರನ್ನು ಬಳಸುವಂತಾಗುವುದಿಲ್ಲ. ಮಳೆಗಾಲದಲ್ಲಿ ಮಾತ್ರ ನೀರನ್ನು ಲಿಫ್ಟ್ ಮಾಡಲಾಗುವುದು ಎಂದರು.
Also read: ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿಲ್ಲ: ನಳಿನ್ಕುಮಾರ್ ಕಟೀಲ್ ಸ್ಪಷ್ಟನೆ
ಹಾಯ್ಹೊಳೆ, ಗೌಡನಕೆರೆ, ಮೊದಲಾದ ಕೆರೆಗಳು ಭರ್ತಿಯಾದ ಮೇಲೆ ಭದ್ರಾ ಮೇಲ್ದಂಡೆಗೆ ನೀರು ಹರಿಸಲಾಗಿದ್ದು, ಎರಡೂ ನದಿಯ ನೀರು ಸೇರಿ ಒಟ್ಟು 32 ಟಿಎಂಸಿ ನೀರನ್ನು ಚಿತ್ರದುರ್ಗ ತುಮಕೂರು ಶಿರಾ ದಾವಣಗೆರೆ ಮೊದಲಾದ ಊರುಗಳಿಗೆ ನೀರು ಹರಿಸುವ ಯೋಜನೆ ಇದಾಗಿದೆ ಎಂದರು.
ಈ ಸಂದರ್ಭದಲ್ಲಿ ಹಿರಿಯ ಶಾಸಕ ಗೋಪಾಲಕೃಷ್ಣ, ಶಾಸಕ ವೀರೇಂದ್ರ ಪಪ್ಪಿ, ರಘುಮೂರ್ತಿ, ಮಾಜಿ ಸಚಿವ ಆಂಜನೇಯ, ರಾಜುಗೌಡ ಸೇರಿದಂತೆ ಹಲವರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post