ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಬಿಜೆಪಿ ಹಿರಿಯ ಧುರೀಣ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ 50 ವರ್ಷದ ರಾಜಕೀಯ ಜೀವನವೇ ಒಂದು ಪಾಠ. ಈ ಸಂದೇಶವನ್ನು ಯುವ ಜನಾಂಗಕ್ಕೆ ತಲುಪಿಸಲು ಮೇ.9ರಂದು ಚಿತ್ರದುರ್ಗದಲ್ಲಿ ಬಿಎಸ್ವೈ ಅಭಿಮಾನೋತ್ಸವವನ್ನು ಆಯೋಜಿಸಲಾಗಿದೆ ಎಂದು ಮಾಜಿ ಸಚಿವ, ಶಾಸಕ ಅರಗ ಜ್ಞಾನೇಂದ್ರ ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಬಿ.ಎಸ್.ಯಡಿಯೂರಪ್ಪ ಅವರು ಹೋರಾಟ, ಸಿದ್ದಾಂಗಳ ಮೂಲಕದ ಪಕ್ಷ ಕಟ್ಟಿದವರು. ಒಂದು ಕಾಲದಲ್ಲಿ ಕೇವಲ ಲಿಂಗಾಯತ, ಒಕ್ಕಲಿಗ, ಬ್ರಾಹ್ಮಣರ ಪಕ್ಷ ಎಂದು ಜಾತಿ ಹಣೆ ಪಟ್ಟಿ ಇದ್ದ ಪಕ್ಷಕ್ಕೆ ಎಲ್ಲರನ್ನೂ ಒಗ್ಗೂಡಿಸಿ ಜಾತ್ಯತೀತ ಪಕ್ಷ ಎಂದು ಹೊಸ ಟ್ವಿಸ್ಟ್ ಕೊಟ್ಟವರು ಬಿಎಸ್ವೈ ಎಂದ ಅವರು ರೈತರ ಸಾಲ ಮನ್ನಾ, ರೈತರ ಪರ ಬಜೆಟ್ ಮಂಡನೆ, ಮಹಿಳೆಯರಿಗೆ ಭಾಗ್ಯಲಕ್ಷ್ಮೀ, ಹೈಸ್ಕೂಲ್ ವಿದ್ಯಾರ್ಥಿನಿಯರಿಗೆ ಸೈಕಲ್ ವಿತರಣೆ ಮೊದಲಾದ ಮಾನವೀಯ ಮ್ಣಲ್ಯ, ತಾಯಿ ಹೃದಯದ ಯೋಜನೆ ಕೊಟ್ಟ ಕೀರ್ತಿ ಬಿಎಸ್ವೈ ಅವರದ್ದು ಎಂದು ಬಣ್ಣಿಸಿದರು.
ಈಗ ರಾಜಕಾರಣದಲ್ಲಿ ಸಿದ್ಧಾಂತಗಳ ಜಾಗದಲ್ಲಿ ಜಾತಿ, ಹಣ ಬಂದು ನಿಂತಿದೆ. ಬಹಳ ಬೇಗ ರಾಜಕೀಯದಲ್ಲಿ ಮೇಲೇರಲು ಶಾರ್ಟ್ಕಟ್ ನೋಡುತ್ತಿದ್ದಾರೆ. ಚುನಾವಣೆಯಲ್ಲಿ ರಾಜಕಾರಣ ಸಹಜ ಎಂದ ಅವರು ಬಿ.ಎಸ್.ವೈ. ಆಯ್ಕೆ ಸುದೀರ್ಘವಾಗಿತ್ತು. ರಾಜಕೀಯ ಜೀವನದಲ್ಲಿ ಅನೇಕ ಮಾನವೀಯ ಮೌಲ್ಯಗಳ ಕೆಲಸ ಮಾಡಿದ್ದಾರೆ. ಶಿವಮೊಗ್ಗ ಜಿಲ್ಲೆ ಅವರ ಕಾಲಾವಧಿಯಲ್ಲಿ ದೊಡ್ಡ ಫಲಾನುಭವಿ ಬಿಲ್ಲೆ ಎಂದರು.
ಬಿ.ಎಸ್.ವೈ ತಾವು ಪ್ರಕಟಿಸಿದ ಯೋಜನೆಗಳನ್ನು ಅಧಿಕಾರಿಗಳ ಬೆನ್ನತ್ತಿ ಕೆಲಸ ಮಾಡಿಸು ಛಲಗಾರರು. ತಾವು ಅನೇಕ ಮುಖ್ಯಮಂತ್ರಿಗಳ ಸರ್ಕಾರಗಳಲ್ಲಿ ಸೇವೆ ಸಲ್ಲಿಸಿದ್ದು, ನಿಂತಲ್ಲೇ ನೀತಿ ನಿರೂಪಣೆ ಮಾಡುತ್ತಿದ್ದ ಬಿ.ಎಸ್.ವೈ.ಅಂತಹ ಮುಖ್ಯಮಂತ್ರಿಯನ್ನು ತಾವು ನೋಡಿಲ್ಲ ಎಂದು ತಮ್ಮ ಹಾಗೂ ಬಿ.ಎಸ್.ವೈ.ಅವರ ನಡುವಿನ ರಾಜಕೀಯ ಜೀವನದ ಅನುಭವಗಳನ್ನು ಬಿಚ್ಚಿಟ್ಟರು.
ಮೇ9ರಂದು ಬೆಳಿಗ್ಗೆ 11ಗಂಟೆಗೆ ಆರಂಭವಾಗುವ ಬಿ.ಎಸ್.ವೈ. ಅಭಿಮಾನೋತ್ಸವದ ಅಧ್ಯಕ್ಷತೆಯನ್ನು ಮಾಜಿ ಉಪಮುಖ್ಯಮಂತ್ರಿ, ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಷಿ, ಹೆಚ್.ಡಿ. ಕುಮಾರಸ್ವಾಮಿ, ವಿ.ಸೋಮಣ್ಣ, ಶೋಭ ಕರಂದ್ಲಾಜೆ, ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ಸಂಸದರಾದ ಬಿ.ವೈ.ರಾಘವೇಂದ್ರ, ಜಗದೀಶ್ ಶೆಟ್ಟರ್, ಬಸವರಾಜ ಬೊಮ್ಮಾಯಿ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಚಲವಾದಿ ನಾರಾಯಣಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಗಮಿಸುವರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು, ತರಳಬಾಳು, ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳು, ಉಜ್ಜಯನಿಯ ಶ್ರೀ ಸಿದ್ಧಲಿಂಗ ರಾಜದೇಶೀಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು, ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮಿಗಳು, ಕೇದಾರನಾಥದ ಡಾ.ಭೀಮಾಶಂಕರ ಶಿವಾಚಾರ್ಯ ಮಹಾಸ್ವಾಮಿಗಳು, ಆದಿಚುಂಚನಗಿರಿಯ ನಿರ್ಮಲಾನಂದನಾಥ ಮಹಾಸ್ವಾಮಿಗಳು ಸೇರಿದಂತೆ ಸಾವಿರಕ್ಕೂ ಹೆಚ್ಚು ವಿವಿಧ ಮಠಾಧೀಶರುಗಳು ವಹಿಸುವರು ಎಂದರು.
ಕೇಂದ್ರ ಗೃಹಸಚಿವ ಅಮಿತ್ ಷಾ ಮಧ್ಯಾಹ್ನ 3.30ಕ್ಕೆ ಸಮಾವೇಶಕ್ಕೆ ಆಗಮಿಸಲಿದ್ದು, ಅಭಿನಂದನಾ ಭಾಷಣ ಮಾಡಲಿದ್ದಾರೆ. ಶಿವಮೊಗ್ಗ ಜಿಲ್ಲೆಯಿಂದ ಸುಮಾರು 60ಸಾವಿರ ಕಾರ್ಯಕರ್ತರು ಸೇರಿದಂತೆ ರಾಜ್ಯದ ಮೂಲೆಮೂಲೆಗಳಿಂದ ಸುಮಾರು 10ಲಕ್ಷ ಕಾರ್ಯಕರ್ತರು ಸ್ವಯಂಪ್ರೇರಿತವಾಗಿ ಸಮಾವೇಶಕ್ಕೆ ಆಗಮಿಸಲಿದ್ದಾರೆ. ಅವರೆಲ್ಲರಿಗೂ ಮಧ್ಯಾಹ್ನದ ಭೋಜನದ ವ್ಯವಸ್ಥೆ ಮಾಡಲಾಗಿದೆ ಎಂದ ಅವರು, ಮೇ8ರ ಸಂಜೆ ಬಿ.ಎಸ್.ಯಡಿಯೂರಪ್ಪ ಅವರ ಪುರಪ್ರವೇಶ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಬಿಎಸ್ವೈ ಅಭಿಮಾನೋತ್ಸವ ಪಕ್ಷಾತೀತ ಕಾರ್ಯಕ್ರಮವಾಗಿದ್ದು, ಎಲ್ಲಾ ಪಕ್ಷದವರಿಗೂ ಆಹ್ವಾನ ನೀಡಲಾಗಿದೆ. ಯಾರ್ಯಾರು ಬರುತ್ತಾರೆ ಎಂಬುದನ್ನು ಸಮಾವೇಶದ ವೇದಿಕೆಯಲ್ಲಿಯೇ ನೋಡಿ ತಿಳಿದುಕೊಳ್ಳಿ ಎಂದು ಪತ್ರಕರ್ತರು ಈ ಸಮಾವೇಶ ಪಕ್ಷಾತೀತವಾಗಿ ಎಂದು ಹೇಳುತ್ತಿದ್ದೀರಿ. ಆದರೆ ಆಮಂತ್ರಣ ಪತ್ರಿಕೆಯಲ್ಲಿ ವಿರೋಧ ಪಕ್ಷದ ಮುಖಂಡರ ಯಾವುದೇ ಹೆಸರು ಇಲ್ಲವಲ್ಲ ಎಂದು ಕೇಳಿದ ಪ್ರಶ್ನೆಗೆ ಆರಗ ಜ್ಞಾನೇಂದ್ರ ಮೇಲಿನಂತೆ ಉತ್ತರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶಾಸಕರಾದ ಡಿ.ಎಸ್.ಅರುಣ್, ಡಾ.ಧನಂಜಯ ಸರ್ಜಿ, ಮಾಜಿ ಶಾಸಕರಾದ ಕೆ.ಬಿ.ಅಶೋಕ್ ನಾಯ್ಕ, ಎಸ್.ರುದ್ರೇಗೌಡ, ಆರ್.ಕೆ.ಸಿದ್ದರಾಮಣ್ಣ, ಕೆ.ಜಿ.ಕುಮಾರಸ್ವಾಮಿ, ಪ್ರಮುಖರಾದ ಎಸ್.ದತ್ತಾತ್ರಿ, ಎಸ್.ಎಸ್.ಜ್ಯೋತಿಪ್ರಕಾಶ್, ಬಿಳಕಿ ಕೃಷ್ಣಮೂರ್ತಿ, ಮಂಗೋಟೆ ರುದ್ರೇಶ್, ಸಂತೋಷ್ ಬಳ್ಳೇಕೆರೆ, ಚಂದ್ರಶೇಖರ್ ಎಸ್., ಮಂಜುನಾಥ್ ಎನ್. ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















