ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗದಲ್ಲಿ ನಡೆಯುವ ಮಾರಿಕಾಂಬಾ ಜಾತ್ರೆಯನ್ನು ಪ್ಲಾಸ್ಟಿಕ್ ಮುಕ್ತ #plastic-free Marikamba Fari ಪರಿಸರ ಸ್ನೇಹಿಯಾಗಿ ಆಚರಿಸಲು ಪರ್ಯಾವರಣ ಟ್ರಸ್ಟ್ ಕರೆ ನೀಡಿದೆ.
ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್, ಲೋಟ, ತಟ್ಟೆ ಕವರ್ ಗಳ ಬಳಕೆಗಳು ಇತ್ತೀಚಿನ ವರ್ಷಗಳಲ್ಲಿ ಮಿತಿ ಮೀರಿದ್ದು, ಪರಿಸರದ ಸ್ವಚ್ಛತೆ, ಜಲಮೂಲಗಳ ಸಂರಕ್ಷಣೆಗಾಗಿ ಇವುಗಳನ್ನು ತ್ಯಜಿಸಿ ಪರಿಸರ ಸ್ನೇಹಿ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವ ಅನಿವಾರ್ಯತೆ ಇದೆ. ಅಲ್ಲದೆ ಇವುಗಳ ಸಂಗ್ರಹ , ಮಾರಾಟ ಹಾಗೂ ಬಳಕೆ ಕಾನೂನು ರೀತ್ಯಾ ಅಪರಾಧವೂ ಆಗಿದೆ ಎಂದು ಪರ್ಯಾವರಣ ಟ್ರಸ್ಟ್ ಅಧ್ಯಕ್ಷ ಪ್ರೊ. ಬಿ.ಎಂ. ಕುಮಾರಸ್ವಾಮಿ ಹೇಳಿದರು.
ಅವರು ಮಂಗಳವಾರದಂದು ಮಾರಿಕಾಂಬಾ ದೇವಿ ಜಾತ್ರಾ ಸಮಿತಿ ಪದಾಧಿಕಾರಿಗಳನ್ನು ಭೇಟಿ ಮಾಡಿ ದೇವಸ್ಥಾನದ ಆಡಳಿತ ಮಂಡಳಿಯವರು ಜಾತ್ರಾ ವ್ಯಾಪಾರಿ ಮಳಿಗೆಗಳಿಗೆ ಅನುಮತಿ ನೀಡುವಾಗ ಪ್ಲಾಸ್ಟಿಕ್ ನಿಷೇಧವನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಬೇಕು ಹಾಗೂ ಬಟ್ಟೆ ಚೀಲ , ಮಾರುಕಟ್ಟೆಯಲ್ಲಿ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ಗೆ ಪರ್ಯಾಯವಾಗಿ ಬಂದಿರುವ ಪರಿಸರ ಸ್ನೇಹಿ ಜೈವಿಕ ಕ್ಯಾರಿ ಬ್ಯಾಗ್, ಕವರ್ ಗಳನ್ನು ಬಳಸಿ ಪರಿಸರ ಸಂರಕ್ಷಣೆ ಕಾರ್ಯದಲ್ಲಿ ಕೈಜೋಡಿಸಿ ಉತ್ಸವವನ್ನು ಪ್ಲಾಸ್ಟಿಕ್ ಮುಕ್ತ ಉತ್ಸವವನ್ನಾಗಿ ಆಚರಿಸಬೇಕು ಎಂದು ಕೋರಿದರು.
ಮಾರಿಕಾಂಬಾ ದೇವಿ ಜಾತ್ರಾ ಸಮಿತಿ ಅಧ್ಯಕ್ಷ ಎಸ್.ಕೆ. ಮರಿಯಪ್ಪ ಮಾತನಾಡಿ, ದೇವಿಯ ಪ್ರಸಾದ ವಿತರಣೆಗೆ ಆಡಳಿತ ಸಮಿತಿ ವತಿಯಿಂದ ಈಗಾಗಲೇ 22 ಸಾವಿರಕ್ಕೂ ಹೆಚ್ಚು ಬಟ್ಟೆ ಚೀಲಗಳನ್ನು ಉಚಿತವಾಗಿ ನೀಡಲು ಕ್ರಮ ಕೈಗೊಂಡಿದ್ದು ಇದಕ್ಕೆ ನಗರದ ಸಂಸ್ಥೆಯೊಂದು ಸಹಕಾರ ನೀಡಿದೆ. ದೇವಸ್ಥಾನದ ವತಿಯಿಂದ ಪ್ಲಾಸ್ಟಿಕ್ ಮುಕ್ತ ಜಾತ್ರೆ ಆಚರಿಸಲು ಎಲ್ಲರ ಸಹಕಾರ ಅಗತ್ಯವಾಗಿದೆ. ಜಾತ್ರಾ ವ್ಯಾಪಾರಿ ಮಳಿಗೆಗಳಿಗೆ ಅನುಮತಿ ನೀಡುವಾಗ ಈ ಸೂಚನೆ ನೀಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಾತ್ರಾ ಸಮಿತಿಯ ಪ್ರಮುಖರಾದ ಎನ್. ಉಮಾಪತಿ, ಸಿ.ಹೊನ್ನಪ್ಪ, ಕೆ. ರಂಗನಾಥ್, ಪರ್ಯಾವರಣ ಟ್ರಸ್ಟ್ ನ ಡಾ. ಶ್ರೀಪತಿ ಎಲ್.ಕೆ., ಎಂ. ಶಂಕರ್, ಬಿ.ಎನ್. ಮಂಜುನಾಥ್, ರಮೇಶ್ ಹೆಗ್ಡೆ, ತ್ಯಾಗರಾಜ ಮಿತ್ಯಾಂತ, ದಿನೇಶ್ ಶೇಟ್, ಜಗದೀಶ್ ಮುಂತಾದವರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















