ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರಾಜ್ಯದ ಹಿಂದೂ ದೇಗುಲಗಳಿಗೆ ಸ್ವಾಯತ್ತತೆ ನೀಡುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಿರ್ಧಾರವನ್ನು ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಎಸ್. ದತ್ತಾತ್ರಿ ಸ್ವಾಗತಿಸಿದ್ದಾರೆ.
ಹಿಂದೂ ದೇಗುಲಗಳನ್ನು ಸರ್ಕಾರದಿಂದ ಹೊರತಾಗಿಟ್ಟು ಪ್ರತ್ಯೇಕವಾದ ಸ್ಥಾನ-ಮಾನಕಲ್ಪಿಸಬೇಕು ಎನ್ನುವ ನಿಟ್ಟಿನಲ್ಲಿ ಹುಬ್ಬಳ್ಳಿಯ ಕಾರ್ಯಕಾರಿಣಿಯಲ್ಲಿ ಸಿಎಂ ಪ್ರಸ್ತಾವನೆ ಮಾಡಿರುವುದು ಅಭಿನಂದನೀಯ ಎಂದಿದ್ದಾರೆ.

ಇತರೆ ಮತಗಳ ಪ್ರಾರ್ಥನಾ ಮಂದಿರಗಳು ಸ್ವಾತಂತ್ರ್ಯವಾಗಿವೆ. ನಮ್ಮ ಹಿಂದೂ ದೇವಾಲಯಗಳು ಮಾತ್ರ ಹಲವು ನಿಯಂತ್ರಣಕ್ಕೆ ಒಳಪಟ್ಟಿವೆ. ಹಲವು ಕಟ್ಟುಪಾಡುಗಳಿಗೆ ಒಳಪಟ್ಟು ಕಿರುಕುಳ ಅನುಭವಿಸುತ್ತಿವೆ. ಆದಾಯ ಬೇರೆ ಕಡೆ ಹೋಗುತ್ತಿದೆ. ದೇವಸ್ಥಾನದ ಆದಾಯದ ಹಣವನ್ನು ದೇವಸ್ಥಾನದ ಅಭಿವೃದ್ಧಿಗೆ ಪಡೆಯಬೇಕೆಂದರೂ ಕೂಡಾ ಅಧಿಕಾರಿಗಳ ಅನುಮತಿ ಪಡೆಯಬೇಕಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಈ ಉತ್ತಮ ನಿರ್ಧಾರ ಕೈಗೊಂಡು ಮುಂಬರುವ ಬಜೆಟ್ ಅಧಿವೇಶನಕ್ಕೆ ಮುನ್ನವೇ ಇದಕ್ಕೆ ಸಂಬಂಧಿಸಿದ ಕಾನೂನು ಜಾರಿ ಮಾಡಲಾಗುವುದೆಂದು ತಿಳಿಸಿದ್ದಾರೆ. ಹಾಗೂ ಇದು ನಮ್ಮ ಬದ್ಧತೆಯಾಗಿದ್ದು, ತಕ್ಷಣ ಸ್ಪಂದಿಸುವುದು ಸರ್ಕಾರದ ಬದ್ಧತೆಯಾಗಿದೆ ಎಂದು ಹೇಳಿದ್ದಾರೆ.

ದೇವಾಲಯದ ಹಣ ದೇವಾಲಯಗಳ ಅಭಿವೃದ್ಧಿಗೆ ಮಾತ್ರ ಬಳಕೆಯಾಗಬೇಕು. ನಮ್ಮ ಅಜೆಂಡಾ ಸ್ಪಷ್ಟವಾಗಿದೆ. ಅದನ್ನು ಜಾರಿಗೆ ತರುತ್ತೇವೆ ಎಂದು ಹೇಳಿದ್ದಾರೆ. ಹಿಂದು ದೇವಸ್ಥಾನಗಳನ್ನು ಸರ್ಕಾರದ ಕಪಿಮುಷ್ಠಿಯಿಂದ ಮುಕ್ತಗೊಳಿಸಬೇಕೆಂಬ ಅನೇಕ ವರ್ಷಗಳ ಬೇಡಿಕೆಗೆ ಈ ಹೇಳಿಕೆ ಆಶಾದಾಯಕವಾಗಿದೆ ಎಂದು ಎಸ್ ದತ್ತಾತ್ರಿ ಅಭಿಪ್ರಾಯ ಪಟ್ಟಿದ್ದಾರೆ.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















