ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಜಿಲ್ಲಾ ಕೈಗಾರಿಕಾ ಮತ್ತು ವಾಣಿಜ್ಯ ಸಂಘ ಇಂದು ಶಿವಮೊಗ್ಗ ಕ್ಷೇತ್ರಕ್ಕೆ ಸಂಬಂಧಿಸಿದಂತೆ ನಾಲ್ಕು ಪಕ್ಷದ ಅಭ್ಯರ್ಥಿಗಳೊಡನೆ ಸಂವಾದ ಕಾರ್ಯಕ್ರಮ ಏರ್ಪಡಿಸಿತ್ತು.
ನಾಲ್ಕು ಜನರಿಗೂ ಒಂದೇ ರೀತಿಯ ಪ್ರಶ್ನೆಯನ್ನು ಮುಂದಿಟ್ಟು ತಮ್ಮ ಅಭಿಪ್ರಾಯಗಳನ್ನು ಮಂಡಿಸುವಂತೆ ತಿಳಿಸಲಾಯಿತು. ತಾವು ಶಾಸಕರಾಗಿ ಆಯ್ಕೆಯಾದರೆ ತಮ್ಮ ಅಧಿಕಾರದ ಅವಧಿಯಲ್ಲಿ ಶಿವಮೊಗ್ಗ ಹೇಗಿರಬೇಕು ಎಂಬುದರ ಬಗ್ಗೆ ಸಾರ್ವಜನಿಕರಿಗೆ ತಿಳಿಸಬೇಕು ಎಂದು ವಾಣಿಜ್ಯ ಸಂಘದ ಅಧ್ಯಕ್ಷ ಪ್ರಾಸ್ತಾವಿಕ ಮಾತನಾಡಿ, ನಾಲ್ಕೂ ಜನರಿಗೆ ಸೂಚನೆ ನೀಡಿದರು.
ಅದರಂತೆ ಆಮ್ಆದ್ಮಿ ಪಕ್ಷದ ಅಭ್ಯರ್ಥಿ ನೇತ್ರಾವತಿ ಗೌಡ, ಜೆಡಿಎಸ್ ಅಭ್ಯರ್ಥಿ ಆಯನೂರು ಮಂಜುನಾಥ್, Ayanuru Manjunath ಬಿಜೆಪಿ ಅಭ್ಯರ್ಥಿ ಎಸ್.ಎನ್. ಚನ್ನಬಸಪ್ಪ, SNChannabasappa ಕಾಂಗ್ರೆಸ್ ಅಭ್ಯರ್ಥಿ ಹೆಚ್.ಸಿ. ಯೋಗೀಶ್ HCYogish ಅವರು ತಮ್ಮ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು.
ನೇತ್ರಾವತಿ ಆಮ್ ಆದ್ಮಿ ಪಕ್ಷ: ಮಹಿಳೆಯರಿಗೆ ಆದ್ಯತೆ, ಶಿವಮೊಗ್ಗದ ಅಭಿವೃದ್ಧಿಗೆ ಬದ್ಧತೆ
ಶಿವಮೊಗ್ಗದಲ್ಲಿ ಮುಖ್ಯವಾಗಿ ಉದ್ಯೋಗ ನಿರ್ಮಾಣ ಮಾಡಬೇಕಾಗಿದೆ. ಯುವಕರಿಗೆ ಇಲ್ಲಿ ಉದ್ಯೋಗದ ಅವಕಾಶಗಳು ತುಂಬಾ ಕಡಿಮೆ ಇದೆ. ಅದರಲ್ಲೂಮಹಿಳೆಯರಿಗೆ ಉದ್ಯೋಗಗಳೇ ಸಿಗುತ್ತಿಲ್ಲ. ಕಷ್ಟಪಟ್ಟು ಓದಿ ಕೆಲಸವಿಲ್ಲದೆ ಮನೆಯಲ್ಲಿ ಇರಬೇಕಾದ ಪರಿಸ್ಥಿತಿ ಬಂದಿದೆ. ಇವರೆಲ್ಲರಿಗೂ ಉದ್ಯೋಗ ನೀಡುವ ನಿಟ್ಟಿನಲ್ಲಿ ಪ್ರಯತ್ನ ಪಡುತ್ತೇನೆ ಎಂದು ನೇತ್ರಾವತಿ ತಮ್ಮ ಅಭಿಪ್ರಾಯ ತಿಳಿಸಿದರು.
ಮುಖ್ಯವಾಗಿ ಮಹಿಳೆಯರಿಗೆ ರಕ್ಷಣೆ ಬೇಕಾಗಿದೆ. ಶಿವಮೊಗ್ಕ್ಕೆ ಮತ್ತಷ್ಟು ಅಭಿವೃದ್ಧಿ ಕೆಲಸಗಳು ಆಗಬೇಕಾಗಿದೆ. ಮುಖ್ಯವಾಗಿ ಭ್ರಷ್ಟಾಚಾರ ನಿರ್ಮೂಲನೆಯಾಗಬೇಕು. ನಮ್ಮ ಪಕ್ಷದ ಮೂಲ ಸಿದ್ಧಾಂತವೇ ಭ್ರಷ್ಟಾಚಾರ ತೊಲಗಿಸುವುದು. ಹಣ, ಹೆಂಡ ಹಂಚದೆ ಪ್ರಾಮಾಣಿಕವಾಗಿ ಚುನಾವಣೆ ನಡೆಸುವಂತಗಬೇಕು. ಮುಖ್ಯವಾಗಿ ಉದ್ಯಮಿಗಳು ಇಲ್ಲಿಗೆ ಬರಬೇಕು. ಶಿವಮೊಗ್ಗಕ್ಕೆ ಮತ್ತಷ್ಟು ಗೌರವ ತಂದುಕೊಡುವ ನಿಟ್ಟಿನಲ್ಲಿ ಕೆಲಸ ಮಾಡುವೆ ಎಂದರು.
ಆಯನೂರು ಮಂಜುನಾಥ್ ಜೆಡಿಎಸ್ ಪಕ್ಷ : ನೆಮ್ಮದಿಗೆ ಭಂಗ ತರುವವರ ಒದ್ದು ಹಾಕಬೇಕು;
ಶಿವಮೊಗ್ಗಕ್ಕೆ ಮುಖ್ಯವಾಗಿ ಬೇಕಾಗಿರುವುದು ಶಾಂತಿ. ಶಾಂತಿ ಇಲ್ಲದ ಕಾರಣಕ್ಕಾಗಿಯೇ ಇಲ್ಲಿ ಉದ್ಯಮಿಗಳು ಬರುತ್ತಿಲ್ಲ. ಕೈಗಾರಿಕೆಗಳು ಸ್ಥಾಪನೆ ಆಗುತ್ತಿಲ್ಲ. ಉದ್ಯೋಗ ಸಿಗುತ್ತಿಲ್ಲ. ಕೇವಲ ಗಲಾಟೆ, ಅಶಾಂತಿಯಿಂದ ನಲುಗಿದ ಶಿವಮೊಗ್ಗಕ್ಕೆ ಉದ್ಯಮಿಗಳು ಬರುವಂತೆ ಮಾಡಲು ನೆಮ್ಮದಿಗೆ ಭಂಗ ತರುವವರನ್ನು ಒದ್ದು ಹಾಕಿದಾಗ ಮಾತ್ರ ಈಗಿರುವ ಅಶಾಂತಿ ನಗರವನ್ನು ನಾನು ಶಾಸಕನಾದರೆ ಖಂಡಿತ ಬದಲಾಯಿಸುವೆ ಎಂದು ಆಯನೂರು ಮಂಜುನಾಥ್ ತಿಳಿಸಿದರು.
ಚುನಾವಣೆಯೇ ಪ್ರಜಾಪ್ರಭುತ್ವದ ಉತ್ಸವ. ರಾಜಕಾರಣ ಕೇವಲ ಅಧಿಕಾರದ ರೋಮಾಂಚನವಲ್ಲ. ಆಶೋತ್ತರಗಳನ್ನು ಶಾಂತಿಯ ಫಸಲನ್ನು ಬೆಳೆಯುವ ಅವಕಾಶ ಶಾಸಕನಿಗೆ ಸಿಗುತ್ತದೆ. ನಮ್ಮಲ್ಲಿ ಎಲ್ಲವೂ ಇದೆ. ರಸ್ತೆ, ನೀರು, ವಿದ್ಯುತ್, ವಿಮಾನ, ಆದರೆ ಉದ್ಯಮಿಗಳು ಮಾತ್ರ ಬರುತ್ತಿಲ್ಲ. ಇದು ಬದಲಾಗಬೇಕಾಗಿದೆ ಎಂದರು.
ಎಸ್.ಎನ್. ಚನ್ನಬಸಪ್ಪ -ಬಿಜೆಪಿ: ಹಿಂದೂ ಸಮಾಜದ ಮೇಲೆ ದಬ್ಬಾಳಿಕೆ ನಡೆದರೆ ಸುಮ್ಮನಿರಬೇಕೆ
ಹಿಂದೂ ಸಮಾಜದ ಮೇಲೆ ಹಲ್ಲೆಯಾದರೆ, ಹಿಂದುಗಳನ್ನು ಕೊಂದರೆ ಅದನ್ನು ಪ್ರಶ್ನಿಸುವುದೇ ತಪ್ಪೇ. ಶಾಂತಿಯನ್ನು ಕದಡುವವರು ನಾವಲ್ಲ. ವಿಶ್ವವೇ ಒಂದು ಕುಟುಂಬ ಎಂದು ಹಿಂದು ಸಮಾಜ ಬಯಸುತ್ತದೆ. ಆದರೆ ಅಶಾಂತಿಗೆ ಕಾರಣರಾದವರ ವಿರುದ್ಧ ನಮ್ಮ ಧ್ವನಿ ಸದಾ ಇರುತ್ತದೆ. ಆದರೆ ಈ ಧ್ವನಿಯನ್ನೇ ಕೋಮುವಾದ ಎಂದರೆ ಹೇಗೆ ಎಂದು ಚನ್ನಬಸಪ್ಪ ಪ್ರಶ್ನೆ ಮಾಡಿದರು.
ಶಿವಮೊಗ್ಗಕ್ಕೆ ತನ್ನದೇ ಇತಿಹಾಸವಿದೆ. ಇದು ಸಾಂಸ್ಕೃತಿಕ ನಗರ. ಶಾಂತಿಯನ್ನು ಬಯಸುವವರು ನಾವೇ. ಆದರೆ ಈ ಶಾಂತಿಯನ್ನು ಕದಡುವ ಒಂದು ವರ್ಗವೇ ಇಲ್ಲಿದೆ. ಶಾಂತಿಗಾಗಿ ನಾವು ಯಾವಾಗಲೂ ಪ್ರಯತ್ನಿಸುತ್ತೇವೆ. ಶಾಂತಿಗೆ ಅಡ್ಡಿಪಡಿಸುವವರ ವಿರುದ್ಧ ಕ್ರಮವನ್ನೂ ತೆಗೆದುಕೊಳ್ಳುತ್ತೇವೆ ಎಂದರು.
ನಾನು ಹುಟ್ಟುವ ಮೊದಲೇ ಇಲ್ಲಿ ಕೋಮು ಗಲಭೆ ಆಗಿತ್ತು. 1933ರಲ್ಲಿಯೇ ಅಶಾಂತಿ ತಲೆದೋರಿತ್ತು. ನಂತರದ ದಿನಗಳಲ್ಲಿ ಹಿಂದುಗಳ ಕೊಲೆಗಳು ನಡೆದವು. ಆಗಲೂ ನಾವು ಸಹಿಸಿಕೊಂಡಿದ್ದೇವೆ. ಈ ಎಲ್ಲದರ ಮಧ್ಯೆ ಎಲ್ಲರೂಒಟ್ಟಾಗಿ ಬಾಳಬೇಕು ಎಂಬುದೇ ನಮ್ಮ ತತ್ವ. ಜೊತೆಗೆ ಶಿವಮೊಗ್ಗದ ಅಭಿವೃದ್ಧಿಗೆ ಯಾವತ್ತಿಗೂ ನಮ್ಮ ಮೊದಲ ಆದ್ಯತೆ ಎಂದರು.
ಹೆಚ್.ಸಿ. ಯೋಗೀಶ್ ಕಾಂಗ್ರೆಸ್ ಪಕ್ಷ: ಉದ್ದಿಮೆಗಳು ಶಿವಮೊಗ್ಗಕ್ಕೆ ಬರಬೇಕು
ಶಿವಮೊಗ್ಗದಲ್ಲಿ ಇನ್ನು ಗಲಭೆಗಳೇ ಇರಬಾರದು. ಪ್ರಪಂಚದ ಎಲ್ಲಾ ಉದ್ಮಮಿಗಳು ಸಾಂಸ್ಕೃತಿಕ ನಗರಕ್ಕೆ ಕಾಲಿಡಬೇಕು. ಅಂತಹ ವಾತಾವರಣವನ್ನು ನಿರ್ಮಿಸಬೇಕು ಎಂಬುದೇ ನನ್ನ ಉದ್ದೇಶವಾಗಿದೆ. ಕೋಮು ರಾಜಕಾರಣ ಕೊನೆಯಾಗಬೇಕು. ಮಾನವೀಯತೆಯ ರಾಜಕಾರಣ ನೆಲೆಸಬೇಕು ಎಂದು ಹೆಚ್.ಸಿ. ಯೋಗೀಶ್ ಹೇಳಿದರು.
ನಾನು ಮಹಾನಗರ ಪಾಲಿಕೆ ಸದಸ್ಯನಾಗಿ, ವಿರೋಧ ಪಕ್ಷದ ನಾಯಕನಾಗಿ ಉತ್ತಮ ಕೆಲಸ ಮಾಡಿರುವೆ. ಹೋರಾಟಗಳ ರೂಪಿಸಿಕೊಂಡಿರುವೆ. ಮುಖ್ಯವಾಗಿ ಟ್ರೇಡ್ ಲೈಸೆನ್ಸ್ಗೆ ಹೊಸತನ ನೀಡಿರುವೆ. ವ್ಯಾಪಾರಿಗಳಿಗೂ ಅನುಕೂಲ ಮಾಡಿರುವೆ. ಬೀದಿಬದಿ ವ್ಯಾಪಾರಿಗಳಿಗೂ ಹೇಗೆ ಸರಳ ತೆರಿಗೆ ಹಾಕಬೇಕು ಎಂದು ಚರ್ಚಿಸಿರುವೆ. ಒಂದು ಜನಸ್ನೇಹಿ ಟ್ರೇಡ್ ಲೈಸೆನ್ಸ್ ಗುರುತಿಸಿದ ಕೀರ್ತಿ ನನಗಿದೆ ಎಂದು ಯೋಗೀಶ್ ತಿಳಿಸಿದರು.
ನಾನು ಶಾಸಕನಾಗಿ ಆಯ್ಕೆಯಾದರೆ ಶಿವಮೊಗ್ಗದ ಅಭಿವೃದ್ಧಿಗೆ ಶ್ರಮಿಸುವೆ. ಎಲ್ಲಾ ವರ್ಗದ ಜನರ ನೆಮ್ಮದಿಗೆ ಪ್ರಯತ್ನಿಸುವೆ. ಮತ್ತೆಂದೂ ಗಲಭೆಗಳಾಗದಂತೆ ನಿಯಂತ್ರಿಸುವೆ. ಮುಖ್ಯವಾಗಿ ನಮ್ಮ ಪಕ್ಷದ ಗ್ಯಾರಂಟಿಯಂತೆ ಎಲ್ಲಾ ಬಡ ಮತ್ತು ಮಧ್ಯಮ ವರ್ಗದವರ ಬದುಕನ್ನು ಹಸನುಗೊಳಿಸುವೆ. ಉದ್ಯೋಗಕ್ಕೆ ಆದ್ಯತೆ ನೀಡುವೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















