ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ವಿಶ್ವಕರ್ಮ ಸಮಾಜದ 15 ಕ್ಕೂ ಹೆಚ್ಚು ಸಂಘಟನೆಗಳ ಪ್ರಮುಖರು ನಿನ್ನೆ ಸಭೆ ಸೇರಿ ಸಮಾಜಕ್ಕೆ ಅನೇಕ ರೀತಿಯ ನೆರವು ನೀಡಿದ ಭಾರತೀಯ ಜನತಾ ಪಕ್ಷಕ್ಕೆ ಬೆಂಬಲ ನೀಡಬೇಕೆಂದು ತೀರ್ಮಾನಿಸಿದ್ದೇವೆ ಎಂದು ಸಮಾಜದ ನಿರ್ದೇಶಕರಾದ ರಾಮು(ರಮೇಶ್) ಹೇಳಿದ್ದಾರೆ.
ಅವರು ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ವಿಶ್ವಕರ್ಮ ಸಮಾಜ 40 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದೆ. ನಮ್ಮ ಸಮಾಜದ ಸಮುದಾಯ ಭವನಗಳ ನಿರ್ಮಾಣ, ದೇವಸ್ಥಾನದ ಅಭಿವೃದ್ಧಿ ಹಾಗೂ ಸಮಾಜದ ಅನೇಕ ಕಾರ್ಯ ಚಟುವಟಿಕೆಗಳಿಗೆ ಜಿಲ್ಲೆಯ ಸಂಸದರಾದ ಬಿ.ವೈ. ರಾಘವೇಂದ್ರ, ನಗರ ಶಾಸಕರಾದ ಕೆ.ಎಸ್. ಈಶ್ವರಪ್ಪ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ನಿರಂತರವಾಗಿ ಬೆಂಬಲಿಸುತ್ತಾ ಬಂದಿದ್ದು, ಅನುದಾನಗಳನ್ನು ನೀಡಿದ್ದಾರೆ. ಸಮಾಜದ ಅಭಿವೃದ್ಧಿಗೆ ಸಹಕರಿಸಿದ್ದಾರೆ. ಆದ್ದರಿಂದ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜ ಒಟ್ಟಾಗಿ ಬಿಜೆಪಿ ಬೆಂಬಲಿಸಲು ಸಾಮೂಹಿಕ ತೀರ್ಮಾನ ಕೈಗೊಳ್ಳಲಾಗಿದೆ ಎಂದರು.
ಶಿವಮೊಗ್ಗ ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಎನ್. ಚನ್ನಬಸಪ್ಪ ಅವರನ್ನು ನಾವು ಬೆಂಬಲಿಸುತ್ತೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಮಾಜದ ಪ್ರಮುಖರಾದ ಸತ್ಯನಾರಾಯಣ್, ಪುಟ್ಟಾಚಾರ್, ಆರತಿ ಆ.ಮ. ಪ್ರಕಾಶ್, ಕಲ್ಪನಾ ರಮೇಶ್, ರೂಪಾ ಚಂದ್ರಶೇಖರ್, ಮಾಲತೇಶ್, ಅಣ್ಣಪ್ಪಸ್ವಾಮಿ ಮೊದಲಾದವರಿದ್ದರು.
ಸವಿತಾ ಸಮಾಜ:
ಈ ಬಾರಿಯ ಚುನಾವಣೆಯಲ್ಲಿ ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬೆಂಬಲಿಸುವುದಾಗಿ ಸವಿತಾ ಸಮಾಜದ ಪ್ರಮುಖರು ಹೇಳಿದ್ದಾರೆ.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಮಾಜದ ಗೌರವಾಧ್ಯಕ್ಷ ಸೌಂದರ್ ಪಾಂಡ್ಯನ್ ಅವರು, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಅವಧಿಯಲ್ಲಿ ಸಮಾಜದ ಅಭಿವೃದ್ಧಿಗೆ ಅನುದಾನ ನೀಡುವುದರ ಮೂಲಕ ಮತ್ತು ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಹಿಂದುಳಿದ ನಮ್ಮ ಸಮಾಜಕ್ಕೆ ನೆರವು ನೀಡಿರುವುದರಿಂದ ಈ ಬಾರಿ ಸವಿತಾ ಸಮಾಜ ಬಿಜೆಪಿ ಬೆಂಬಲಿಸಲಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಸುಜಾತಾ ಕಣ್ಣನ್, ಹೆಚ್.ಎಸ್. ಸುಬ್ರಹ್ಮಣ್ಯ, ಪ್ರಭಾಕರ್, ಗಂಗಾಧರ್, ಎನ್.ಡಿ. ರಾಜು, ರಮೇಶ್ ಇದ್ದರು.
ಸಾಧುಶೆಟ್ಟಿ ಸಮಾಜ:
ಸಾಧುಶೆಟ್ಟಿ ಸಮಾಜಕ್ಕೆ ಶಿವಮೊಗ್ಗ ನಗರ ಶಾಸಕ ಕೆ.ಎಸ್. ಈಶ್ವರಪ್ಪ ಅವರು ಅತಿ ಹೆಚ್ಚಿನ ಕೊಡುಗೆ ನೀಡಿದ್ದಾರೆ. ಅತ್ಯಂತ ಹಿಂದುಳಿದ ನಮ್ಮ ಸಮಾಜಕ್ಕೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅತಿ ಹೆಚ್ಚಿನ ಅನುದಾನ ಸಿಕ್ಕಿದ್ದು, ನಮ್ಮ ಸಮಾಜದ ಬೆಂಬಲ ಬಿಜೆಪಿಗೆ ನೀಡಲಾಗುವುದು ಎಂದು ಸಮಾಜದ ಮುಖಂಡರು ತಿಳಿಸಿದ್ದಾರೆ.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಮಾಜದ ನಿರ್ದೇಶಕ ಗೋವಿಂದರಾಜ್ ಅವರು, ನಗರದ ಪ್ರಮುಖ ವೃತ್ತದಲ್ಲಿದ್ದ ಶಿವಪ್ಪನಾಯಕ ಮಾರುಕಟ್ಟೆ ಸ್ಥಳಾಂತರಗೊಂಡಾಗ ನಮ್ಮ ಸಮಾಜದ ಬಹುತೇಕ ಮಂದಿ ಹೂವಿನ ವ್ಯಾಪಾರ ಮಾಡುವವರು ಬದುಕೇ ಕಳೆದುಕೊಂಡರು ಎನ್ನುವ ಸ್ಥಿತಿ ನಿರ್ಮಾಣವಾಗಿತ್ತು. ಆ ಸಂದರ್ಭದಲ್ಲಿ ಪರ್ಯಾಯ ತಾತ್ಕಾಲಿಕ ಮಾರುಕಟ್ಟೆ ನಿರ್ಮಾಣ ಮಾಡಿಕೊಟ್ಟು ಶಾಸಕರು ಸಹಕರಿಸಿದ್ದಾರೆ ಎಂದರು.
ಈಗ ಶಿವಪ್ಪ ನಾಯಕ ವೃತ್ತದಲ್ಲಿ ನಿರ್ಮಾಣವಾಗುತ್ತಿರುವ ಅತಿದೊಡ್ಡ ಪಾರ್ಕಿಂಗ್ ಸಂಕೀರ್ಣದಲ್ಲೇ 118 ಜನರಿಗೆ ಶಾಶ್ವತ ಮಳಿಗೆಗಳನ್ನು ನಿರ್ಮಿಸಿಕೊಟ್ಟು ಸಹಕರಿಸಿದ್ದಾರೆ.ಸಮಾಜದ ದೇವಸ್ಥಾನಕ್ಕೆ 30 ಲಕ್ಷ ರೂ. ಹಾಗೂ ಸಮುದಾಯ ಭವನಕ್ಕೆ 1 ಕೋಟಿ ರೂ. ಅನುದಾನ ನೀಡಿದ್ದಾರೆ. ಬಿಜೆಪಿ ಅವಧಿಯಲ್ಲಿ ನಮ್ಮ ಸಮಾಜದ ನಾಲ್ವರು ಗಣ್ಯರನ್ನು ಗುರುತಿಸಿ ರಾಜ್ಯ ಪ್ರಶಸ್ತಿ ನೀಡಲಾಗಿದೆ ಎಂದರು.
ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದ ನಮ್ಮ ಸಮಾಜಕ್ಕೆ ಅನೇಕ ಕೊಡುಗೆಗಳನ್ನು ನೀಡಿರುವ ಬಿಜೆಪಿಗೆ ನಮ್ಮ ಬೆಂಬಲ ನೀಡುತ್ತೇವೆ ಎಂದರು.
ಈ ಸಂದರ್ಭದಲ್ಲಿ ಸಮಾಜದ ನಿರ್ದೇಶಕರಾದ ನರಸಿಂಹ, ಹೊನ್ನಪ್ಪ, ಸ.ನ. ಮೂರ್ತಿ, ಕಿರಣ್ ಕುಮಾರ್ ಮತ್ತಿತರರು ಇದ್ದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















