ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಕೆಳದಿ ಸಾಮ್ರಾಜ್ಯವನ್ನು ಆಳಿದ ಶಿಸ್ತಿನ ಸಿಪಾಯಿ ಶಿವಪ್ಪ ನಾಯಕ (1645-1660) ಅವರು ಕರ್ನಾಟಕದ ಆದರ್ಶಪ್ರಾಯ ರಾಜನಾಗಿದ್ದು, ಸೋಗಾನೆಯಲ್ಲಿ ನಿರ್ಮಾಣವಾಗುತ್ತಿರುವ ನೂತನ ವಿಮಾನ ನಿಲ್ದಾಣಕ್ಕೆ ಕೆಳದಿ ಶಿವಪ್ಪ ನಾಯಕರ ಹೆಸರನ್ನು ನಾಮಕರಣ ಮಾಡಬೇಕೆಂದು ಶಾಂತವೇರಿ ಗೋಪಾಲಗೌಡ ಸಮಾಜವಾದಿ ಸಂಘಟನೆಯ ವ್ಯವಸ್ಥಾಪಕ ಟ್ರಸ್ಟಿ ಕಲ್ಲೂರು ಮೇಘರಾಜ್ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಈಗಾಗಲೇ ಕೆಲವು ಸಂಘಟನೆಗಳು ಕೆಲವು ಹೆಸರುಗಳನ್ನು ಮಾಧ್ಯಮಗಳಲ್ಲಿ ಹರಿಬಿಡುತ್ತಿವೆ. ಆದರೆ, ಯಾವುದೇ ಒಂದು ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ, ಬಸ್ಸು ನಿಲ್ದಾಣಗಳಿಗೆ ಧೀಮಂತ ನಾಯಕರ ಹೆಸರನ್ನು ನಾಮಕರಣ ಮಾಡಬೇಕಾದರೆ, ಆ ಹೆಸರು ಈ ನಿಲ್ದಾಣಗಳಿಗೆ ಚಾರಿತ್ರಿಕವಾಗಿ ಅರ್ಥಪೂರ್ಣವಾಗಿರಬೇಕು. ಶಿವಪ್ಪ ನಾಯಕರ ಆಳ್ವಿಕೆಯ ಅವಧಿಯಲ್ಲಿ ಮಂಗಳೂರು, ಕುಂದಾಪುರ ಮತ್ತ ಹೊನ್ನಾವರ ಕೋಸ್ಟಲ್ ಫೋರ್ಚುಗೀಸ್ ಆಳ್ವಿಕೆಯ ಕೋಟೆಗಳನ್ನು ಶಿವಪ್ಪ ನಾಯಕ ತಮ್ಮ ಆಳ್ವಿಕೆಗೆ 1953 ವಶಪಡಿಸಿಕೊಂಡರು. ಚಂದ್ರಗಿರಿ, ಬೇಕಲ್ ಮತ್ತು ಮಂಗಳೂರು ಕೋಟೆಗಳನ್ನು ರಾಜ ಶಿವಪ್ಪ ನಾಯಕ ಅವರ ಆಳ್ವಿಕೆಯಲ್ಲಿ ನಿರ್ಮಿಸಲಾಯಿತು. ಕೆಳದಿ ಸಾಮ್ರಾಜ್ಯ ವಂಶಸ್ಥರಲ್ಲಿ ಶಿಸ್ತಿನ ಸಿಪಾಯಿ ಎನಿಸಿಕೊಂಡಿದ್ದ ಶಿವಪ್ಪ ನಾಯಕರು ಪ್ರಮುಖರು ಎಂದು ಹೇಳಿದ್ದಾರೆ.
ಕೃಷಿ ಭೂಮಿಗೆ ಅದರ ಬೆಳೆಯ ಆಧಾರದ ಮೇಲೆ ಕಂದಾಯ ಹಾಕುವ ವ್ಯವಸ್ಥೆಯನ್ನು ಶಿವಪ್ಪ ನಾಯಕರ ಕಾಲದಲ್ಲಿ ಜಾರಿಗೆ ತರಲಾಯಿತು. ಕೆಳದಿ ಸಾಮ್ರಾಜ್ಯದ ವ್ಯಾಪ್ತಿಯಲ್ಲಿ ಅಪೂರ್ವವಾದ ಕೆರೆಕಟ್ಟೆಗಳನ್ನು ಶಿವಪ್ಪ ನಾಯಕರ ಕಾಲದಲ್ಲಿ ನಿರ್ಮಿಸಲಾಯಿತು. ಶಿವಪ್ಪ ನಾಯಕರ ಆಳ್ವಿಕೆಯ ಅವಧಿಯಲ್ಲಿ ಅವರ ಆಳ್ವಿಕೆಯ ವ್ಯಾಪ್ತಿಯ ಭೂಮಿಗಳಲ್ಲಿ ಗಡಿ ಹದ್ದುಬಸ್ತನ್ನು ಅಚ್ಚುಕಟ್ಟಾಗಿ ಮಾಡಲಾಗಿದೆ. ಶಿವಪ್ಪ ನಾಯಕರು ಕ್ರಿಶ್ಚಿಯನ್, ಹಿಂದೂ, ಅದ್ವೈತ, ಕೊಮಟಿಸ್ ಮತ್ತು ಕೊಂಕಣೀಸ್ ಅವರಿಗೆ ತಮ್ಮ ಆಳ್ವಿಕೆಯಲ್ಲಿ ಶಾಂತಿಯಿಂದ ಜೀವನ ನಡೆಸಲು ಪ್ರೋತ್ಸಾಹಿಸುತ್ತಿದ್ದರು. ಈರೀತಿ ಕೆಳದಿ ಶಿವಪ್ಪ ನಾಯಕರ ಆಳ್ವಿಕೆಯೇ ಕರ್ನಾಟಕದಲ್ಲಿ ವಿಶೇಷವಾಗಿ ಶಿವಮೊಗ್ಗದಲ್ಲಿ ಒಂದು ಮೈಲಿಗಲ್ಲು ಎಂದು ವಿವರಿಸಿದ್ದಾರೆ.
ಶಿವಮೊಗ್ಗದಲ್ಲಿ ಶಿವಪ್ಪ ನಾಯಕ ಅರಮನೆ, ಶಿವಪ್ಪ ನಾಯಕರ ಕಾಲದಲ್ಲಿ ನಿರ್ಮಿಸಲಾಗಿರುವುದು ಈಗಲೂ ನಮ್ಮೆಲ್ಲರ ಹೆಮ್ಮೆಯ ವಿಷಯವಾಗಿದೆ. ರಾಜ ಶಿವಪ್ಪ ನಾಯಕನ ಆಳ್ವಿಕೆಯ ಕೆಳದಿ ಸಾಮ್ರಾಜ್ಯವು ಕೆಳದಿ, ಇಕ್ಕೇರಿ, ನಗರಕೋಟೆ ಪ್ರದೇಶ, ಮಂಗಳೂರು ಆಜುಬಾಜು, ಕಾಸರಗೋಡು, ಧಾರವಾಡ ಮುಂತಾದ ಪ್ರದೇಶಗಳಿಗೆ ವ್ಯಾಪಿಸಿಕೊಂಡಿತ್ತು ಎಂದಿದ್ದಾರೆ.
ಈ ಎಲ್ಲಾ ಹಿನ್ನೆಲೆಯಲ್ಲಿ ಶಿವಮೊಗ್ಗದ ಸೋಗಾನೆಯಲ್ಲಿ ಮುಕ್ತಾಯ ಹಂತದಲ್ಲಿರುವ ನೂತನ ವಿಮಾನ ನಿಲ್ದಾಣಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶಿಸ್ತಿನ ಸಿಪಾಯಿ ಕೆಳದಿ ಶಿವಪ್ಪ ನಾಯಕ ವಿಮಾನ ನಿಲ್ದಾಣ ಎಂದು ನಾಮಕರಣ ಮಾಡಲು ನಮ್ಮ ಸಂಘಟನೆಯು ಒತ್ತಾಯಿಸುತ್ತದೆ ಎಂದು ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಹೊಳೆಮಡಲು ವೆಂಕಟೇಶ್, ಎಚ್.ಎಮ್. ಸಂಗಯ್ಯ, ರಾಜಮ್ಮ, ಎಲ್.ಆರ್. ಗೋಪಾಲಕೃಷ್ಣ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post