ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ದೇಶವು ಸಂಭ್ರಮದ 75ನೇ ಸ್ವಾತಂತ್ರ್ಯ ದಿನಾಚರಣೆ ಅಮೃತ ಮಹೋತ್ಸವ Amruth Mathothsav ಆಚರಿಸುತ್ತಿರುವ ಸುಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ. ಆರ್. ಸೆಲ್ವಮಣಿ DC Selvamani ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿ ನಾಡಿಗೆ ಸ್ವಾತಂತ್ರ್ಯ ದೊರಕಿಸಿಕೊಡುವಲ್ಲಿ ಅವಿರತವಾಗಿ ಶ್ರಮಿಸಿದ ಶಿವಮೊಗ್ಗ ಮತ್ತು ಸೊರಬ ತಾಲೂಕಿನ ಹಿರಿಯ ಸ್ವಾತಂತ್ರ್ಯ ಹೋರಾಟಗಾರರ ಮನೆಗೆ ಖುದ್ದಾಗಿ ಭೇಟಿ ನೀಡಿ, ಜಿಲ್ಲಾಡಳಿತದ ವತಿಯಿಂದ ಅವರನ್ನು ಫಲ-ಪುಷ್ಪ ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಾಡಿಗೆ ಸ್ವಾತಂತ್ರ್ಯ ದೊರಕಿಸಿಕೊಡುವಲ್ಲಿ ತಮ್ಮ ಮಾನ-ಪ್ರಾಣ, ಕುಟುಂಬವನ್ನು ಲೆಕ್ಕಿಸದೇ ಹೋರಾಡಿದ ಹಿರಿಯ ಸ್ವಾತಂತ್ರ್ಯ ಹೋರಾಟಗಾರರನ್ನು ಗುರುತಿಸಿ ಗೌರವಿಸುವುದು ವೈಯಕ್ತಿಕವಾಗಿ ಸಂತಸವನ್ನುಂಟು ಮಾಡಿದೆ ಎಂದರು.
ದೇಶಕ್ಕಾಗಿ ಶ್ರಮಿಸಿದ ಹಿರಿಯ ಜೀವಿಗಳನ್ನು ಖುದ್ದಾಗಿ ಮಾತನಾಡಿಸಿ, ಅವರ ಯೋಗಕ್ಷೇಮ, ಕುಶಲ ಸಮಾಚಾರ ವಿಚಾರಿಸಿರುವುದಾಗಿ ತಿಳಿಸಿದ ಅವರು, ಶಿವಮೊಗ್ಗ ತಾಲೂಕಿನ ಹಿರಿಯ ಸ್ವಾತಂತ್ರ್ಯ ಸೇನಾನಿಗಳಾದ ಬಿ.ಹಾಲೇಶಪ್ಪ, ಕೃಷ್ಣಶೆಟ್ಟಿ, ನಂಜುಂಡಪ್ಪ, ಸಯ್ಯದ್ ಅಬ್ದುಲ್ ಕಲಾಂ ಅವರೊಂದಿಗೆ ಸೊರಬ ತಾಲೂಕು ಅಗಸನವಳ್ಳಿಯ ಹಿರಿಯ ಹೋರಾಟಗಾರ ಗುಡ್ಡಪ್ಪ ಬಿನ್ ದೊಡ್ಮನಿ ಬಸಪ್ಪ ಅವರನ್ನು ಇದೇ ಸಂದರ್ಭದಲ್ಲಿ ಭೇಟಿಯಾಗಿರುವುದಾಗಿ ಅವರು ತಿಳಿಸಿದರು.
Also read: ಕೊಡಗಿನಲ್ಲಿ ಮುಂದುವರೆದ ಮಳೆ: ಪುಷ್ಪಗಿರಿ ಬೆಟ್ಟದ ತಪ್ಪಲಿನಲ್ಲಿ ಭಾರೀ ಭೂಕುಸಿತ
ದೇಶಕ್ಕೆ ಸ್ವಾತಂತ್ರ್ಯ ದೊರೆತು ಯಶಸ್ವಿಯಾಗಿ 75 ವಸಂತಗಳನ್ನು ಪೂರೈಸುತ್ತಿರುವುದು ಹೆಮ್ಮೆಯ ಸಂಗತಿ. ಈ ಸಂದರ್ಭದಲ್ಲಿ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಈ ಸಂಭ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲು ಕರೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ದೇಶದ ಪ್ರತಿ ಪ್ರಜೆಯೂ ತಮ್ಮ ಮನೆಗಳ ಮೇಲೆ ಆಗಸ್ಟ್ 13ರಿಂದ 18ರವರೆಗೆ ರಾಷ್ಟ್ರಧ್ವಜವನ್ನು ಹಾರಿಸಿ, ರಾಷ್ಟ್ರಾಭಿಮಾನ ಮೆರೆಯುವಂತೆ ಸೂಚಿಸಿದ್ದಾರೆ. ಅಂತೆಯೇ ಜಿಲ್ಲೆಯಾದ್ಯಂತ ಹರ್ಘರ್ ತಿರಂಗ ಅಭಿಯಾನವನ್ನು ಜಿಲ್ಲೆಯ ನಗರ,ಪಟ್ಟಣ ಸೇರಿದಂತೆ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲೂ ಸಂಭ್ರಮದಿಂದ ಆಚರಿಸುವಂತೆ ಕರೆ ನೀಡಲಾಗಿದೆ ಎಂದರು.
ಈ ಅಭಿಯಾನವು ಯಶಸ್ವಿಯಾಗಿ ನಡೆಸುವಲ್ಲಿ ಅಗತ್ಯವಿರುವ ರಾಷ್ಟ್ರಧ್ವಜವನ್ನು ಉಚಿತವಾಗಿ ತಲುಪಿಸಲು ಈಗಾಗಲೇ ಕ್ರಮ ವಹಿಸಲಾಗಿದೆ. ಈ ಅವಧಿಯಲ್ಲಿ ಜಿಲ್ಲೆಯಾದ್ಯಂತ ಎಲ್ಲರ ಮನೆಗಳ ಮೇಲೆ, ಸರ್ಕಾರಿ ಮತ್ತು ಸರ್ಕಾರೇತರ ಕಟ್ಟಡಗಳ ಮೇಲೆ ರಾಷ್ಟ್ರಧ್ವಜ ಹಾರಿಸಲು ಸಿದ್ಧತೆ ಮಾಡಲಾಗಿದೆ ಎಂದವರು ತಿಳಿಸಿದ್ದಾರೆ.
ಸದರಿ ಅಭಿಯಾನವನ್ನು ತಮ್ಮ ಮನೆಗಳಲ್ಲಿ ಧ್ವಜಾರೋಹಣ ನೆರವೇರಿಸುವ ಮೂಲಕ ಅಮೃತ ಮಹೋತ್ಸವವನ್ನು ಸಂಭ್ರಮಿಸುವಂತೆ ಕರೆ ನೀಡಿರುವ ಅವರು, ರಾಷ್ಟ್ರಾಭಿಮಾನದ ಪ್ರತೀಕವಾಗಿ ಆಚರಿಸಲಾಗುತ್ತಿರುವ ಈ ಅಭಿಯಾನವನ್ನು ಯಶಸ್ವಿಯಾಗಿ ನಡೆಸುವಂತೆ ಹಾಗೂ ಈ ಅವಧಿಯಲ್ಲಿ ನೌಕರರು ತ್ರಿವರ್ಣಧ್ವಜದ ಶಿಷ್ಟಾಚಾರಕ್ಕೆ ಚ್ಯುತಿ ಬಾರದಂತೆ ಎಚ್ಚರಿಕೆ ವಹಿಸುವಂತೆ ಅವರು ಮನವಿ ಮಾಡಿದ್ದಾರೆ.
ಈ ಭೇಟಿಯ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀಪ್ರಸಾದ್, ಶಿವಮೊಗ್ಗ ತಹಶೀಲ್ದಾರ್ ನಾಗರಾಜ್, ಸೊರಬ ತಹಶೀಲ್ದಾರ್ ಶ್ರೀಮತಿ ಶೋಭಾ ಸೇರಿದಂತೆ ಕಂದಾಯ ಇಲಾಖೆಯ ಅಧಿಕಾರಿ-ಸಿಬ್ಬಂಧಿಗಳು, ಹೋರಾಟಗಾರರ ಕುಟುಂಬದ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post