ಶಿವಮೊಗ್ಗ: ಸಂಶೋಧಕರಲ್ಲಿ ಕುತೂಹಲ ಅವಶ್ಯವಾಗಿರಬೇಕು ಎಂದು ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಜೋಗನ್ ಶಂಕರ್ ಹೇಳಿದರು.
ಸುಬ್ಬಯ್ಯ ವೈದ್ಯಕೀಯ ಹಾಗೂ ದಂತವೈದ್ಯಕೀಯ ಕಾಲೇಜು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಸಮುದಾಯ ವೈದ್ಯಕೀಯ ವಿಭಾಗದ ವತಿಯಿಂದ ಇಂದು ಬೆಳಿಗ್ಗೆ ಹಮ್ಮಿಕೊಂಡಿದ್ದ ರಾಷ್ಟ್ರಮಟ್ಟದ ನಿರಂತರ ವೈದ್ಯಕೀಯ ಶಿಕ್ಷಣದ ಸಂಶೋಧನೆಯ ವಿಧಾನಗಳ ಕುರಿತ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಸಂಶೋಧನೆ ಎಂದರೆ ನಿಂತರವಾಗಿ ನಡೆದುಕೊಂಡು ಬರುವ ವಿಷಯವಾಗಿದೆ. ಸಂಶೋಧನೆಯಲ್ಲಿ ನಮಗೆ ಹೊಸ-ಹೊಸ ವಿಷಯಗಳು ತಿಳಿದುಬರುತ್ತದೆ. ಸಂಶೋಧನೆಯ ಮೂಲಕ ನಾವು ಪ್ರತಿಯೊಂದು ಪ್ರಶ್ನೆಗೂ ಉತ್ತರ ಕಂಡುಕೊಳ್ಳಲು ಸಾಧ್ಯವಿದೆ. ಹಲವಾರು ಸಾಮಾಜಿಕ ಸಮಸ್ಯೆಗಳನ್ನು ಸಂಶೋಧನೆಗಳ ಮೂಲಕ ನಿವಾರಿಸಬಹುದು ಎಂದರು.
ಸಂಶೋಧನೆಯನ್ನು ಮಾಡುವವರು ಮೊದಲು ಅದನ್ನು ಸರಿಯಾಗಿ ಗುರುತಿಸಿಕೊಳ್ಳಲು ಒಬ್ಬ ಸಂಶೋಧಕರ ದೃಷ್ಠಿಯಿಂದ ಎಲ್ಲವನ್ನು ನೋಡಬೇಕಿದೆ. ಕೇವಲ ಉದ್ಯೋಗ ಭದ್ರತೆಗಾಗಿ ಅಥವಾ ಮುಂಬಡ್ತಿಗಾಗಿ ಸಂಶೋಧನೆಯನ್ನು ಮಾಡಬಾರದು. ಹಾಗೆ ಮಾಡುವುದರಿಂದ ಸಮಾಜಕ್ಕೆ ಯಾವುದೇ ಅನುಕೂಲ ಆಗುವುದಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ವೈದ್ಯಕೀಯ ನಿರ್ದೇಶಕರಾದ ಡಾ. ಎಸ್. ನಾಗೇಂದ್ರ, ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ.ಲತಾ ನಾಗೇಂದ್ರ, ಪ್ರಾಂಶುಪಾಲರಾದ ಡಾ. ಎಸ್.ಎಂ ಕಟ್ಟಿ, ಡಾ.ಆರ್.ಪಿ. ಪೈ, ಡಾ.ಸುರೇಶ್, ಕೆಎಂಸಿ ಮಣಿಪಾಲದ ವೈದ್ಯಕೀಯ ವಿಭಾಗದ ಪ್ರೊ. ಡಾ. ಶುಭಾ ವಿದ್ಯಾಸಾಗರ್, ಸಂಪನ್ಮೂಲ ವ್ಯಕ್ತಿಯಾಗಿ ಮಂಗಳೂರಿನ ಕೆಎಸ್ಎಚ್ಇಎಂಎ ವೈದ್ಯಕೀಯ ಸಂಸ್ಥೆಯ ಪ್ರೊ. ಡಾ. ರಶ್ಮಿ ಕುಂದಾಪುರ ಇನ್ನಿತರರು ಉಪಸ್ಥಿತರಿದ್ದರು.
Discussion about this post