ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಮಾರ್ಚ್ 2ರಂದು ಮೊದಲ ಹಂತ ಕೊರೋನಾ ಲಸಿಕೆ ಪಡೆದಿದ್ದೆವು ನಮಗೆ ಯಾವುದೇ ಆರೋಗ್ಯ ಸಮಸ್ಯೆಗಳು ಆಗಿಲ್ಲ. ಅರ್ಹರೆಲ್ಲರೂ ಸ್ವಪ್ರೇರಿತರಾಗಿ ಬೂತ್ಗೆ ಬಂದು ಕೊರೋನಾ ಲಸಿಕೆ ಪಡೆಯಿರಿ ಎಂದು ಸಚಿವ ಈಶ್ವರಪ್ಪ ಕರೆ ನೀಡಿದ್ದಾರೆ.
ನಗರದಲ್ಲಿ ಇಂದು ಎರಡನೆಯ ಹಂತದ ಕೊರೋನಾ ಲಸಿಕೆ ಪಡೆದ ನಂತರ ಮಾತನಾಡಿದ ಅವರು, ಜಿಲ್ಲೆಯ ಅಧಿಕಾರಿಗಳು ಕೋರೊನಾ ಲಸಿಕೆ ನೀಡುವ ಕಾರ್ಯದಲ್ಲಿ ಹೆಚ್ಚಿನ ಮುತುವರ್ಜಿ ವಹಿಸುತ್ತಿದ್ದು, ಈಗಾಗಲೇ 1,60,000 ಜನರಿಗೆ ಲಸಿಕೆ ನೀಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಹೇಳಿದರು.

ಎಲೆಕ್ಷನ್ ಅಂದ್ರೆನೇ ಬಿಜೆಪಿಗೆ ಗೆಲುವು:
ಇತ್ತೀಚಿನ ದಿನಗಳಲ್ಲಿ ನಡೆದ ಯಾವುದೇ ಚುನಾವಣೆಯಲ್ಲಿ ಬಿಜೆಪಿ ಹಿಂದೆ ಬಿದ್ದಿಲ್ಲ. ಆದ್ದರಿಂದ ಎಲೆಕ್ಷನ್ ಅಂದ್ರೆನೇ ಬಿಜೆಪಿಗೆ ಗೆಲುವು ಎಂದು ಸಚಿವ ಕೆ.ಎಸ್.ಈಶ್ವರಪ್ಪ ನುಡಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿ ಲೋಕಸಭೆ ನಮ್ಮದೇ ಕ್ಷೇತ್ರ ಅದು. ಸುರೇಶ್ ಅಂಗಡಿ ನಿಧನದ ನಂತರ ಚುನಾವಣೆ ಎದುರಾಗಿದೆ. ಸುಸಂಘಟಿತವಾಗಿ, ಸಂಘಟನಾತ್ಮಕವಾಗಿ ಬೂತ್ ಮಟ್ಟದಲ್ಲಿ ಕೆಲಸ ನಡೆಯುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅಭಿವೃದ್ಧಿ ಕಾರ್ಯಗಳು ಕೈ ಹಿಡಿಯುತ್ತವೆ. ಸುರೇಶ್ ಅಂಗಡಿ ಗ್ರಾಮೀಣ ಮಟ್ಟದಲ್ಲಿ ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಹೀಗಾಗಿ ಬೆಳಗಾವಿಯಲ್ಲಿ ಗೆದ್ದೆ ಗೆಲ್ಲುತ್ತೇವೆ ಎಂದು ಭರವಸೆ ವ್ಯಕ್ತಪಡಿಸಿದರು.
ಮಸ್ಕಿ ಹಾಗೂ ಬಸವ ಕಲ್ಯಾಣದಲ್ಲಿ ಕಾಂಗ್ರೆಸ್, ಜೆಡಿಎಸ್ ಬಿರುಸಿನ ಪ್ರಚಾರ ಮಾಡುತ್ತಿದ್ದಾರೆ. ಏನೇ ಪ್ರಯತ್ನ ಮಾಡಿದರೂ ಸಹ ಮೂರು ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲುತ್ತದೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
















