ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಪ್ರಾರಂಭಿಕ ಹಂತದ ಶಸ್ತ್ರಚಿಕಿತ್ಸಾ ಕ್ಷೇತ್ರದಲ್ಲಿ ಬರುವ ಸವಾಲುಗಳನ್ನು ಎದುರಿಸಿ ಕೌಶಲ್ಯವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಸುಬ್ಬಯ್ಯ ವೈದ್ಯಕೀಯ ಕಾಲೇಜಿನ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥರಾದ ಡಾ. ಬಿ.ಪಿ ಸುರೇಶ್ ತಿಳಿಸಿದರು.
ಸುಬ್ಬಯ್ಯ ದಂತ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಅಂತರ್ ರಾಷ್ಟ್ರೀಯ ಬಾಯಿ ಮುಖ ಮತ್ತು ದವಡೆ ಶಸ್ತ್ರ ಚಿಕಿತ್ಸಾ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಸ್ತ್ರಚಿಕಿತ್ಸಾ ವಿಭಾಗದಲ್ಲಿ ವೈದ್ಯಕೀಯ ಕೌಶಲ್ಯಗಳನ್ನು ರೂಡಿಸಿಕೊಳ್ಳುವ ಅನಿವಾರ್ಯತೆ ಇದೆ. ಹಿರಿಯ ಶಸ್ತ್ರಚಿಕಿತ್ಸಾ ತಜ್ಞರ ವಾಡಿಕೆಯ ಪ್ರಕಾರ ವಯಸ್ಸು ನಲವತ್ತು ಆದ ನಂತರವೇ ಯಶಸ್ವಿ ಶಸ್ತ್ರಚಿಕಿತ್ಸಾ ತಜ್ಞರೆನಿಸಿಕೊಳ್ಳಲು ಸಾಧ್ಯ. ಪದವಿ ಪಡೆದವರೆಲ್ಲ ನುರಿತ ಶಸ್ತ್ರಚಿಕಿತ್ಸಾ ತಜ್ಞರಾಗುವುದಿಲ್ಲ. ಪ್ರಮುಖವಾಗಿ ಶಸ್ತ್ರಚಿಕಿತ್ಸೆಗೆ ಸಂಬಂಧಿಸಿದ ಹಾಗೆ ಜ್ಞಾನ ಸಂಪಾದನೆ ಮಾತ್ರವಲ್ಲದೆ ಕೌಶಲ್ಯ ನಿಪುಣತೆಯ ಅಗತ್ಯವೂ ಇದೆ. ಬಾಯಿ ಮುಖ ದವಡೆ ಶಸ್ತ್ರಚಿಕಿತ್ಸಾ ವಿಭಾಗವು ದಂತ ವೈದ್ಯಕೀಯದಲ್ಲಿದ್ದರೂ ವೈದ್ಯಕೀಯ ವಿಭಾಗಗಳಾದ ಶಸ್ತ್ರಚಿಕಿತ್ಸಾ ವಿಭಾಗ, ನರರೋಗ ವಿಭಾಗ, ಕೀಲು-ಮೂಳೆ ವಿಭಾಗ, ಅರವಳಿಕೆ ವಿಭಾಗ ಹಾಗೂ ಸೌಂದರ್ಯವರ್ಧಕ ಶಸ್ತ್ರಚಿಕಿತ್ಸಾ ವಿಭಾಗಗಳಲ್ಲಿ ತನ್ನ ಸೇವಾ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ ಎಂದರು.
ಅಪಘಾತ ಮತ್ತು ತುರ್ತು ಚಿಕಿತ್ಸಾ ನಿರ್ವಾಹಣೆಯಲ್ಲಿ ಬಾಯಿ ಮುಖ ದವಡೆ ಶಸ್ತ್ರಚಿಕಿತ್ಸೆಯು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಗ್ರಾಮೀಣ ಪ್ರದೇಶಗಳಿಂದ ಸೌಲಭ್ಯವಿರುವ ನಗರ-ಪಟ್ಟಣಗಳ ಆಸ್ಪತ್ರೆಗೆ ದಾಖಲಿಸುವ ಸಮಯದಲ್ಲಿ ವಹಿಸಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ. ಬಿ. ಎಸ್. ಸುರೇಶ್ ಮಾತನಾಡಿ, ಮುಖದ ಅಂದವನ್ನು ಹೆಚ್ಚಿಸುವಲ್ಲಿ ಬಾಯಿ ಮುಖ ಮತ್ತು ದವಡೆ ಶಸ್ತ್ರಚಿಕಿತ್ಸಕರು ಬಹು ಮುಖ್ಯ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಈ ವಿಭಾಗದಲ್ಲಿ ಅತ್ಯಂತ ಮುಂದುವರೆದ ವೈದ್ಯಕೀಯ ಸಂಶೋಧನೆಗಳು ಸಫಲತೆಯನ್ನು ಪಡೆದಿದ್ದು, ಆಧುನಿಕ ಕಾಲಘಟ್ಟದಲ್ಲಿ ಪ್ರಮುಖ ವಿಭಾಗವಾಗಿ ಬೆಳೆದಿದೆ. ವೈದ್ಯರುಗಳಾದ ನಾವೆಲ್ಲರೂ ಸಾಮಾಜಿಕ ಹೊಣೆಗಾರಿಕೆ ಹಾಗೂ ಬದ್ಧತೆಯಿಂದ ಜನಸಾಮಾನ್ಯರಿಗೆ ಬಾಯಿ ಮುಖ ಮತ್ತು ದವಡೆ ಶಸ್ತ್ರಚಿಕಿತ್ಸೆಯ ಕುರಿತು ಜಾಗೃತಿ ಮೂಡಿಸಬೇಕಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ.ವಿನಯ ಶ್ರೀನಿವಾಸ್ ಮಾತನಾಡಿ, ಬಾಯಿ ಮುಖ ಮತ್ತು ದವಡೆಗಳ ಆರೋಗ್ಯವನ್ನು ಸಂರಕ್ಷಿಸಿಕೊಳ್ಳುವ ಕುರಿತು ವೈದ್ಯಕೀಯ ಕ್ಷೇತ್ರದಲ್ಲಿರುವವರು ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸಬೇಕು. ವೈದ್ಯಕೀಯ ವಿದ್ಯಾರ್ಥಿಗಳು ಕಲಿಕೆಯ ಸಂದರ್ಭದಲ್ಲಿಯೇ ಸಾರ್ವಜನಿಕರಲ್ಲಿ ಅರಿವು ಉಂಟಾಗುವಂತಹ ವಿಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದರು.
ಅಪಘಾತ ಹಾಗೂ ತುರ್ತು ಚಿಕಿತ್ಸಾ ಸಂದರ್ಭದಲ್ಲಿ ಪ್ರತಿ ಕ್ಷಣವು ಅಮೂಲ್ಯವಾದದ್ದು ಈ ಬಗ್ಗೆ ಪ್ರತಿಯೊಬ್ಬರಲ್ಲೂ ಜ್ಞಾನ ಬೆಳೆಸಬೇಕಿದೆ. ಭಾರತದಂತಹ ದೇಶಗಳಲ್ಲಿ ಗ್ರಾಮೀಣ ಪ್ರದೇಶದ ಸಂಚಾರ ವ್ಯವಸ್ಥೆಯಲ್ಲಿ ಚಿಕಿತ್ಸೆಯು ಸಕಾಲಕ್ಕೆ ಸಿಗುವಂತೆ ಆಗಲು ನಾವೆಲ್ಲರೂ ಜವಬ್ದಾರರಾಗಬೇಕಿದೆ. ಆರೋಗ್ಯ ಕ್ಷೇತ್ರವೆಂದರೆ ಪ್ರಚಾರ ಮಾಡುವಂತಾಗಬಾರದು, ಅನಾರೋಗ್ಯದಿಂದ ಬಳಲದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ರೋಗಗಳನ್ನು ತದೆಗಟ್ಟುವಂತ್ತಾಗಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪ್ರಾಸ್ತಾವಿಕ ನುಡಿಗಳನ್ನಾಡಿದ ವಿಭಾಗ ಮುಖ್ಯಸ್ಥರಾದ ಡಾ.ಪ್ರಮೋದ್ ಕೃಷ್ಣ ಬಿ ಅವರು, ಬಾಯಿ ಮುಖ ಮತ್ತು ದವಡೆ ವಿಭಾಗವು ದಂತ ವೈದ್ಯಕೀಯ ವಿಭಾಗದ ಒಂದು ಅವಿಭಾಜ್ಯ ಅಂಗ. ಸಾರ್ವಜನಿಕರಲ್ಲಿ ಬಾಯಿ ಮುಖ ಮತ್ತು ದವಡೆ ಶಸ್ತ್ರ ಚಿಕಿತ್ಸಾ ವಿಭಾಗದ ಕುರಿತು ಜಾಗೃತಿ ಮತ್ತು ಅರಿವು ಮೂಡಿಸುವ ನಿಟ್ಟಿನಲ್ಲಿ ಮುಖದ ವಿಕಲಾಂಗತೆ ನಿವಾರಣೆ ಎಂಬ ಧ್ಯೇಯ ವಾಕ್ಯವನ್ನು ಇಟ್ಟುಕೊಂಡು 1969 ರಿಂದ ಪ್ರತಿ ವರ್ಷ ಫೆಬ್ರವರಿ 13ರಂದು ಬಾಯಿ ಮುಖ ಮತ್ತು ದವಡೆ ಚಿಕಿತ್ಸಾ ದಿನಾಚರಣೆಯನ್ನು ಆಚರಿಸಲಾಗುವುದು. 2022ರ ಆಚರಣೆಯ ಧ್ಯೇಯವಾಕ್ಯ ಮುಖದ ಬದಲಾವಣೆ ಹಂತಗಳು ಹಾಗೂ ಕಪ್ಪು ಶಿಲೀಂದ್ರ ರೋಗವನ್ನು ಎದುರಿಸೋಣ, ಜೀವನ ದೃಷ್ಠಿಕೋನವನ್ನು ಬದಲಾಯಿಸೋಣ ಎಂಬುದಾಗಿದೆ. ಭಾರತ ದೇಶದಾದ್ಯಂತ ಸುಮಾರು 25 ಸಾವಿರದಷ್ಟು ಬಾಯಿ ಮುಖ ಮತ್ತು ದವಡೆ ಶಸ್ತ್ರಚಿಕಿತ್ಸಕರೆಲ್ಲರೂ ಈ ದಿನವನ್ನು ಆಚರಿಸಿ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜನ್ಮಜಾತ ವಿಕಲಾಂಗತೆ, ಕೃತಕ ವಿಕಲಾಂಗತೆ, ದವಡೆ ಕೀಲು ಸೋಂಕು, ದವಡೆ ಮರುಜೋಡಣೆ, ಬಾಯಿ, ಮುಖ ಮತ್ತು ದವಡೆಗಳಲ್ಲಿ ಗಡ್ಡೆ ಹಾಗೂ ಕೋವಿಡ್-19 ರೋಗವಿರುವ ರೋಗಿಗಳಲ್ಲಿ ಬ್ಲಾಕ್ ಫಂಗಸ್ ಅಥವಾ ಕಪ್ಪು ಶಿಲೀಂದ್ರ ರೋಗದಿಂದ ಮುಖದ ಮೇಲಿನ ದವಡೆ ಸಂಪೂರ್ಣವಾಗಿ ಕೊಳೆತು, ಮಾರಣಾಂತಿಕವಾಗಿ ಕಾಡಬಹುದಾದ ಸಂದರ್ಭದಲ್ಲಿ ಕೊಳೆತ ದವಡೆ ಭಾಗವನ್ನು ಸರ್ಜರಿ ಮುಖಾಂತರ ಕಿತ್ತು, ಮುಖದ ವಿಕಲಾಂಗತೆಯನ್ನು ತಡೆಯುವ ಕುರಿತು ನುರಿತ ತಜ್ಞ ವೈದ್ಯರು ಹಾಗೂ ವಿದ್ಯಾರ್ಥಿಗಳೊಂದಿಗೆ ಸಂವಾದವನ್ನು ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ ದಂತ ವೈದ್ಯಕೀಯ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ದಂತ ವೈದ್ಯರು ಹಾಗೂ ದಂತ ವೈದ್ಯಕೀಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post