ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿಕ್ಷಣವು ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ತಲುಪಿದಾಗ ಮಾತ್ರ ಅದು ಸಾರ್ಥಕವಾಗುತ್ತದೆ ಎಂದು ವಿಶ್ವವಿದ್ಯಾಲಯದ ಕುಲಾಧಿಪತಿಗಳೂ ಆಗಿರುವ ಕರ್ನಾಟಕದ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ Governor Thaawarchand Gehlot ತಿಳಿಸಿದರು.
ಕುವೆಂಪು ವಿಶ್ವವಿದ್ಯಾಲಯದಲ್ಲಿ Kuvempu University ಬುಧವಾರ ಏರ್ಪಡಿಸಲಾಗಿದ್ದ 35ನೇ ವಾರ್ಷಿಕ ಘಟಿಕೋತ್ಸವದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ವಿದ್ಯಾರ್ಥಿಗಳೇಸೋಲುಗಳು ಜೀವನದ ಭಾಗ, ಆದರೆ ಅವುಗಳಿಂದ ಕಲಿತು ಮುಂದೆ ಸಾಗುವುದೇ ನಿಜವಾದ ಯಶಸ್ಸು ಎಂಬುದನ್ನು ನೆನಪಿಡಿ ಎಂದರು.
ಇಂದಿನ ಈ ಸಂದರ್ಭವು ನಿಮ್ಮ ವರ್ಷಗಳ ಪರಿಶ್ರಮದ ಫಲವಾಗಿದೆ. ಇಂದು ನೀವು ಪಡೆಯುತ್ತಿರುವ ಪದವಿಯು ಕೇವಲ ಜ್ಞಾನದ ಸಂಕೇತವಲ್ಲ, ಸಮಾಜಕ್ಕೆ ಉತ್ತಮ ದಿಕ್ಕು ನೀಡಬಲ್ಲ ನಿಮ್ಮಲ್ಲಿರುವ ಸಾಮರ್ಥ್ಯದ ಪ್ರತೀಕವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಪೋಷಕರು ಮತ್ತು ಶಿಕ್ಷಕರಿಗೂ ನಾನು ಅಭಿನಂದನೆ ಸಲ್ಲಿಸುತ್ತೇನೆ. ನಿಮ್ಮ ಮಾರ್ಗದರ್ಶನ ಮತ್ತು ಬೆಂಬಲವಿಲ್ಲದೆ ಈ ಸಾಧನೆ ಸಾಧ್ಯವಿರಲಿಲ್ಲ. ನೀವು ನೀಡಿದ ಸಂಸ್ಕಾರ ಮತ್ತು ಮೌಲ್ಯಗಳೇ ಜೀವನದಲ್ಲಿ ಯಶಸ್ಸು ತಂದುಕೊಡಲಿವೆ. ಇಂದು ನೀವು ಜ್ಞಾನದ ದೇಗುಲದಿಂದ ಹೊರಬಂದು ಕರ್ಮಕ್ಷೇತ್ರಕ್ಕೆ ಪ್ರವೇಶಿಸುತ್ತಿದ್ದೀರಿ. ಇಲ್ಲಿ ಪಡೆದ ಶಿಕ್ಷಣವು ನಿಮ್ಮ ವೃತ್ತಿಜೀವನವನ್ನು ಯಶಸ್ವಿಗೊಳಿಸುವುದಲ್ಲದೆ, ಜೀವನವನ್ನು ಸಾರ್ಥಕಗೊಳಿಸಲು ಸಹಕಾರಿಯಾಗಲಿದೆ ಎಂಬ ನಂಬಿಕೆ ನನಗಿದೆ ಎಂದರು.
ಕುವೆಂಪು ಅವರ “ವಿಶ್ವಮಾನವ” ಆದರ್ಶ ಮತ್ತು “ಮಾನವತಾವಾದವೇ ಶ್ರೇಷ್ಠತೆಯ ಮಾನದಂಡ” ಎಂಬ ಸಂದೇಶವು ನಮ್ಮ ಆಲೋಚನೆಗಳ ಗಡಿಗಳಿಗೆ ಸೀಮಿತವಾಗದೆ ವಿಶಾಲವಾಗಿರಬೇಕು ಎಂದು ಕಲಿಸುತ್ತದೆ. ನೀವು ಜೀವನದ ಮುಂದಿನ ಹಂತಕ್ಕೆ ಕಾಲಿಡುತ್ತಿರುವಾಗ ಈ ವಿಚಾರಗಳು ನಿಮಗೆ ದಾರಿದೀಪವಾಗಲಿ ಎಂದರು.
ಜೀವನದಲ್ಲಿ ಯಶಸ್ಸಿಗಾಗಿ ನಿರಂತರ ಪರಿಶ್ರಮ, ಶಿಸ್ತು ಮತ್ತು ಸಕಾರಾತ್ಮಕ ದೃಷ್ಟಿಕೋನ ಅತ್ಯಗತ್ಯ. ಸೋಲುಗಳು ಜೀವನದ ಭಾಗ, ಆದರೆ ಅವುಗಳಿಂದ ಕಲಿತು ಮುಂದೆ ಸಾಗುವುದೇ ನಿಜವಾದ ಯಶಸ್ಸು. ನಿಮ್ಮ ಶಿಕ್ಷಣವು ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ತಲುಪಿದಾಗ ಮಾತ್ರ ಅದು ಸಾರ್ಥಕವಾಗುತ್ತದೆ ಎಂಬುದನ್ನು ನೆನಪಿಡಿ ಎಂದರು.
ಇಂದು ಜಗತ್ತು ಕ್ಷಿಪ್ರ ಬದಲಾವಣೆಯ ಹಂತದಲ್ಲಿದೆ. ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆ (Innovation) ಜೀವನದ ಪ್ರತಿಯೊಂದು ಕ್ಷೇತ್ರವನ್ನು ಪ್ರಭಾವಿಸಿದೆ. ಕೃತಕ ಬುದ್ಧಿಮತ್ತೆ (AI), ಡೇಟಾ ಸೈನ್ಸ್ ಮತ್ತು ಡಿಜಿಟಲ್ ಕ್ರಾಂತಿಯು ಹೊಸ ಅವಕಾಶಗಳ ಜೊತೆಗೆ ಹೊಸ ಸವಾಲುಗಳನ್ನೂ ತಂದೊಡ್ಡಿದೆ. ಈ ಸ್ಪರ್ಧಾತ್ಮಕ ಯುಗದಲ್ಲಿ ನಿರಂತರವಾಗಿ ಕಲಿಯುವ ಪ್ರವೃತ್ತಿ ಮತ್ತು ಸಾಮಾಜಿಕ ಜವಾಬ್ದಾರಿ ಬಹಳ ಮುಖ್ಯ. ಆದ್ದರಿಂದ ನಿಮ್ಮ ಜ್ಞಾನ ಮತ್ತು ಕೌಶಲ್ಯಗಳನ್ನು ಕಾಲಕ್ಕೆ ತಕ್ಕಂತೆ ನವೀಕರಿಸಿಕೊಳ್ಳುತ್ತಿರಿ ಎಂದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ದೇಶವು ಇಂದು “ವಿಕಸಿತ ಭಾರತ 2047” ರ ಸಂಕಲ್ಪದೊಂದಿಗೆ ಹೊಸ ಯುಗದತ್ತ ಸಾಗುತ್ತಿದೆ. ಈ ಸಂಕಲ್ಪವನ್ನು ಸಾಕಾರಗೊಳಿಸುವಲ್ಲಿ ನಿಮ್ಮಂತಹ ಯುವಕರ ಪಾತ್ರ ಬಹುದೊಡ್ಡದು ಎಂದರು.
‘ಒಂದು ಭಾರತ ಶ್ರೇಷ್ಠ ಭಾರತ’ ಮತ್ತು ‘ವಿಕಸಿತ ಭಾರತ’ಕ್ಕಾಗಿ “ಮೇಡ್ ಇನ್ ಇಂಡಿಯಾ” ಮತ್ತು “ವೋಕಲ್ ಫಾರ್ ಲೋಕಲ್” ಗುರಿಗಳನ್ನು ತಲುಪಲು ನಿಮ್ಮ ಕೊಡುಗೆ ನೀಡಿ. ಹೊಸ ಶಿಕ್ಷಣ ನೀತಿ (NEP 2020) ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಹೆಚ್ಚು ಕೌಶಲ್ಯ ಆಧಾರಿತ ಮತ್ತು ಸಮಗ್ರವಾಗಿಸಿದೆ. ಶಿಕ್ಷಣವು ಕೇವಲ ಪದವಿ ಪಡೆಯುವ ಸಾಧನವಲ್ಲ, ಅದು ನೈತಿಕತೆ ಮತ್ತು ಸಾಮಾಜಿಕ ಜವಾಬ್ದಾರಿಯ ಅಡಿಪಾಯವಾಗಿದೆ ಎಂದರು.
ಜಾಗತಿಕ ತಾಪಮಾನ ಏರಿಕೆ ಮತ್ತು ಪರಿಸರ ಮಾಲಿನ್ಯದಂತಹ ಸವಾಲುಗಳ ಬಗ್ಗೆಯೂ ನೀವು ಗಮನಹರಿಸಬೇಕು ಮತ್ತು ಈ ನಿಟ್ಟಿನಲ್ಲಿ ಸಕಾರಾತ್ಮಕವಾಗಿ ಸ್ಪಂದಿಸಬೇಕು ಎಂದು ನಾನು ಆಶಿಸುತ್ತೇನೆ ಎಂದರು.
ನೀವು ಕೇವಲ ಉದ್ಯೋಗ ಹುಡುಕುವವರಾಗದೆ, ಉದ್ಯೋಗ ಸೃಷ್ಟಿಕರ್ತರಾಗಿ (Job Creators). ಸ್ಟಾರ್ಟಪ್ ಸಂಸ್ಕೃತಿ ಮತ್ತು ಉದ್ಯಮಶೀಲತೆಯ ಮೂಲಕ ಸಮಾಜಕ್ಕೆ ಹೊಸ ಸಾಧ್ಯತೆಗಳನ್ನು ಸೃಷ್ಟಿಸಿ ಎಂದರು.
ಕುಲಪತಿಗಳು ಮತ್ತು ಅವರ ತಂಡಕ್ಕೆ ನನ್ನ ಅಭಿನಂದನೆಗಳು. ನಿಮ್ಮ ಮಾರ್ಗದರ್ಶನದಲ್ಲಿ ಈ ವಿಶ್ವವಿದ್ಯಾಲಯವು ಪ್ರಗತಿಯ ಹಾದಿಯಲ್ಲಿ ಮುನ್ನಡೆಯಲಿ ಎಂದರು.
ಮಹಾನ್ ಸಾಹಿತಿ ಮತ್ತು ಚಿಂತಕ ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ ‘ಕುವೆಂಪು’ ಅವರ ಹೆಸರಿನಲ್ಲಿ ಸ್ಥಾಪಿತವಾದ ಈ ವಿಶ್ವವಿದ್ಯಾಲಯವು, ‘ವಿಶ್ವಮಾನವ’ ಸಂದೇಶ ನೀಡಿದ ಅವರ ಆದರ್ಶಗಳಿಂದ ಪ್ರೇರಿತವಾಗಿದೆ. ಅವರ ಸಾಹಿತ್ಯವು ಸಮಾಜದಲ್ಲಿ ಸಮಾನತೆ, ಮಾನವೀಯತೆ ಮತ್ತು ಪ್ರಗತಿಪರ ಚಿಂತನೆಗಳನ್ನು ಉತ್ತೇಜಿಸಿದೆ. ಕುವೆಂಪು ಅವರ ಆದರ್ಶ ಮತ್ತು ವಿಚಾರಗಳಿಂದ ಪ್ರೇರಿತವಾದ ಈ ವಿಶ್ವವಿದ್ಯಾಲಯವು ಕೇವಲ ಶಿಕ್ಷಣದ ಕೇಂದ್ರವಲ್ಲದೆ, ಮೌಲ್ಯಗಳು, ಸಂಸ್ಕಾರ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ತಲುಪಿಸುವ ಕೆಲಸ ಮಾಡುತ್ತಿದೆ. ಇಂದು ಈ ಘಟಿಕೋತ್ಸವದ ಮೂಲಕ ವಿಶ್ವವಿದ್ಯಾಲಯವು ಜ್ಞಾನ, ಪರಂಪರೆ ಮತ್ತು ಆಧುನಿಕತೆಯ ಸಮನ್ವಯಕ್ಕೆ ಮತ್ತೊಮ್ಮೆ ಸಾಕ್ಷಿಯಾಗುತ್ತಿದೆ. ಇಂದು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪದವಿಗೆ ಭಾಜನರಾದ ಗೌರವಾನ್ವಿತರಿಗೆ ಅಭಿನಂಧಿಸುತ್ತೇನೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 




















