ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಿನ್ನೆ ನಡೆದ ಪರ್ತಗಾಳಿ ಮಠದ ದಿಗ್ವಿಜಯೋತ್ಸವದ ಅಂಗವಾಗಿ ಆಯೋಜಿಸಲಾದ ಶ್ರೀರಾಮ ವ್ರತ ರಥಯಾತ್ರೆಗೆ, ಶಿವಮೊಗ್ಗ ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯದ ಲಕ್ಷ್ಮಣ ಅಗ್ರಜ ಜಪ ಕೇಂದ್ರದಿಂದ ಭವ್ಯವಾದ ಸ್ವಾಗತ ನೀಡಲಾಯಿತು.
ಶೃಂಗೇರಿಯಿಂದ ಪ್ರಯಾಣ ಬೆಳೆಸಿದ ರಥವು ಸಂಜೆ ಏಳು ಗಂಟೆಯ ಸುಮಾರಿಗೆ ಸುಂದರ ಆಶ್ರಯ ಹೋಟೆಲ್ ಬಳಿಗೆ ಆಗಮಿಸಿತು. ಈ ರಥಕ್ಕೆ ಸ್ವಾಗತವನ್ನು ಪೂರ್ಣಕುಂಭ, ಬಿರುದು ಬಾವಲಿ, ಚತ್ರಚಾಮರ, ಭಾಜಭಜಂತ್ರಿ, ವೇಷಭೂಷಣ, ವಾನರ ಸೇನೆ, ಮಂಗಳವಾದ್ಯ ಮತ್ತು ಸಿಡಿಮದ್ದುಗಳ ಸದ್ದುಗದ್ದಲದ ನಡುವೆ ಅತ್ಯಂತ ಶ್ರದ್ಧೆ ಮತ್ತು ಭಕ್ತಿಭಾವದಿಂದ ಕರೆತರಲಾಯಿತು.
ಕಾರ್ಯಕ್ರಮದಲ್ಲಿ ಶಿವಮೊಗ್ಗ ಲಕ್ಷ್ಮಣಾಗ್ರಜ ಜಪ ಕೇಂದ್ರದ ವತಿಯಿಂದ ವಿಶೇಷ ಸಮೂಹ ಶಂಖನಾದದ ಮೂಲಕ ರಥಯಾತ್ರೆಗೆ ಸ್ವಾಗತ ನೀಡಲಾಯಿತು. ಈ ಸಂದರ್ಭದಲ್ಲಿ ರಾಮನಾಮ ಜಪದ ಘೋಷಗಳು ಮೊಳಗುತ್ತಿದ್ದಂತೆ, ವೇದಿಕೆಯ ಹಿಂಭಾಗದಿಂದ ಆಕರ್ಷಕ ಸಿಡಿಮದ್ದಿನ ಸಂಭ್ರಮವು ಭಕ್ತರ ಹೃದಯಗಳಲ್ಲಿ ಭಕ್ತಿಯ ಅಲೆಗಳನ್ನು ಉಂಟುಮಾಡಿತು.
ವೇದಿಕೆ ಕಾರ್ಯಕ್ರಮದಲ್ಲಿ ಮಹಿಳಾ ಮಂಡಳಿಯಿಂದ ವಿಶೇಷ ಸಾಂಸ್ಕೃತಿಕ ಪ್ರದರ್ಶನಗಳು ನಡೆದು ರಥಯಾತ್ರೆಯ ಧಾರ್ಮಿಕ ವಾತಾವರಣಕ್ಕೆ ಸಾಂಸ್ಕೃತಿಕ ಶೋಭೆಯನ್ನು ಹೆಚ್ಚಿಸಿತು. ನಂತರ ಲಕ್ಷ್ಮಣ ಅಗ್ರಜ ಜಪ ಕೇಂದ್ರದ ದಾಖಲೆಗಳನ್ನು ರಥ ಸಮಿತಿಗೆ ಹಸ್ತಾಂತರಿಸುವ ಕಾರ್ಯಕ್ರಮ ನೆರವೇರಿಸಲಾಯಿತು.
ಕಾರ್ಯಕ್ರಮದ ಅಂತ್ಯದಲ್ಲಿ ರಥಕ್ಕೆ ಧಾರ್ಮಿಕ ಪೂಜಾ ವಿಧಾನಗಳು ಪ್ರಾರಂಭಗೊಂಡು, ಶ್ರೀ ಲಕ್ಷ್ಮಿ ವೆಂಕಟರಮಣ ದೇವರ ಪೂಜೆ ಹಾಗೂ ಪ್ರಸಾದ ವಿತರಣೆ ನಡೆಯಿತು. ಭಕ್ತರು ಅದರಲ್ಲಿ ಭಾಗವಹಿಸಿ ಆಧ್ಯಾತ್ಮಿಕ ಆನಂದವನ್ನು ಅನುಭವಿಸಿದರು.
ಈ ಧಾರ್ಮಿಕ ಮತ್ತು ಸಾಂಸ್ಕೃತಿಕ ಸಂಭ್ರಮವು ಅತ್ಯಂತ ಯಶಸ್ವಿಯಾಗಿ, ಭವ್ಯವಾಗಿ ಮತ್ತು ದಿವ್ಯವಾಗಿ ನೆರವೇರಿತು. ಕಾರ್ಯಕ್ರಮದಲ್ಲಿ ಶಿವಮೊಗ್ಗ ಲಕ್ಷ್ಮಿ ವೆಂಕಟರಮಣ ದೇವಸ್ಥಾನ ಮತ್ತು ಶಿವಮೊಗ್ಗ ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯದ ಅಧ್ಯಕ್ಷೆ ಭಾಸ್ಕರ್ ಜಿ. ಕಾಮತ್, ಉಪಾಧ್ಯಕ್ಷ ರಮೇಶ್ ಶೆಣೈ, ಕಾರ್ಯದರ್ಶಿ ವೇದಮೂರ್ತಿ ನರಸಿಂಹ ಭಟ್, ಸಹ ಕಾರ್ಯದರ್ಶಿ ಕಿರಣ್ ಪೈ ಹಾಗೂ ಸಮಿತಿ ಸದಸ್ಯರು ಮತ್ತು ಲಕ್ಷ್ಮಣಾಗ್ರಜ ಜಪ ಕೇಂದ್ರದ ಅನೇಕ ಭಕ್ತರು ಭಾಗವಹಿಸಿ ಈ ಧಾರ್ಮಿಕ ಉತ್ಸವವನ್ನು ಪುನೀತಗೊಳಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 




















