ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸದಾ ದ್ವೇಷಭಾಷಣ ಮಾಡುವುದನ್ನು ಬಿಟ್ಟು ಕೆ.ಎಸ್. ಈಶ್ವರಪ್ಪ #K S Eshwarappa ಅವರು ಕಳೆದ 25 ವರ್ಷಗಳ ಕಾಲ ಶಾಸಕರಾಗಿ, ಸಚಿವರಾಗಿ ಮಾಡಿದ ಅಭಿವೃದ್ಧಿ ಕಾರ್ಯಗಳ ಕೈಪಿಡಿ ಹೊರತರಲಿ ಎಂದು ಮಾಜಿ ಕಾರ್ಪೋರೇಟರ್ ಹೆಚ್.ಸಿ. ಯೋಗೀಶ್ ಸವಾಲು ಹಾಕಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧ ನಿಯಂತ್ರಣ ವಿಧೇಯಕವನ್ನು ಜಾರಿಗೆ ತಂದಿದ್ದು, ಸದಾ ದ್ವೇಷಭಾಷಣದಲ್ಲೇ ನಿರತರಾಗಿರುವ ಮಾಜಿ ಸಚಿವರ ಕೆ.ಎಸ್. ಈಶ್ವರಪ್ಪ ಮತ್ತು ಅವರ ಮಾನಸ ಪುತ್ರ, ಹಾಲಿ ಶಾಸಕ ಎಸ್.ಎನ್. ಚನ್ನಬಸಪ್ಪ ಅವರಿಗೆ ಅರಗಿಸಿಕೊಳ್ಳಲಾಗುತ್ತಿಲ್ಲ. ಅವರ ಈ ನಡೆಯನ್ನು ಕಾಂಗ್ರೆಸ್ ಪಕ್ಷ ಕಟ್ಟಿಹಾಕುತ್ತಿದೆಯಾ ಎಂಬ ಪ್ರಶ್ನೆ ಅವರನ್ನು ಕಾಡುತ್ತಿದೆ ಎಂದು ಲೇವಡಿ ಮಾಡಿದರು.

ಹುಬ್ಬಳ್ಳಿಯಲ್ಲಿ ನಡೆದ ಮಾನ್ಯಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳು ಮರ್ಯಾದಾ ಹತ್ಯೆ ತಡೆ ಕಾಯ್ದೆ ಜಾರಿ ಮಾಡಲು ಹೊರಟಿರುವುದನ್ನು ನಾವು ಸ್ವಾಗತಿಸುತ್ತೇವೆ. ಮರ್ಯಾದಾ ಹತ್ಯೆ ಎನ್ನುವುದು ಸಮಾಜಕ್ಕೆ ಕಳಂಕವಾಗಿದೆ. ಇಂತಹ ಅಮಾನವೀಯ ಕೊಲೆಗಳು ನಿಲ್ಲಬೇಕಾಗಿದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಕಾನೂನನ್ನು ಜಾರಿಮಾಡಲು ಹೊರಟಿರುವುದು ಸರಿ ಇದೆ. ಇದು ಪರಿಣಾಮಕಾರಿಯಾಗಿ ಜಾರಿಯಾಬೇಕಾಗಿದೆ.
-ಹೆಚ್.ಸಿ. ಯೋಗೀಶ್, ಮಾಜಿ ಕಾರ್ಪೋರೇಟರ್
ಇತ್ತೀಚೆಗೆ ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲಿ ಜಾರಿಗೆ ತಂದ ಸದರಿ ಕಾಯ್ದೆ ಎಲ್ಲರಿಗೂ ಅನ್ವಯಿಸುವ ಕಾನೂನಾಗಿದೆ. ಈ ಕಾಯ್ದೆಯನ್ನು ವಿರೋಧಿಸಿ ಬಿಜೆಪಿ ಎಲ್ಲೆಡೆ ಪ್ರತಿಭಟನೆ ನಡೆಸುತ್ತಿದೆ. ಈ ಕಾಯ್ದೆ ಜಾರಿಯಿಂದ ತಮ್ಮ ಎಂದಿನ ದ್ವೇಷ ಭಾಷಣಕ್ಕೆ ಯಾವುದೇ ಅವಕಾಶ ಇಲ್ಲದಂತೆ ಆಗಿದೆ ಎಂಬ ಅಸಮಾಧಾನ ಅವರಲ್ಲಿ ಮನೆಮಾಡಿದೆ. ತಾವು ಮಾಡಿದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಎಲ್ಲಿಯೂ ಮಾತನಾಡುತ್ತಿಲ್ಲ. ಆದುದರಿಂದ ವಿನಾಕಾರಣ ಈ ಕಾಯ್ದೆಯನ್ನು ಅವರು ವಿರೋಧಿಸುತ್ತಿರುವುದಕ್ಕೆ ಯಾವುದೇ ಸಮರ್ಥನೆ ಇಲ್ಲ ಎಂದರು.
ಶಾಸಕ ಚನ್ನಬಸಪ್ಪ ಮತ್ತು ಅವರ ಆರಾಧ್ಯದೈವ ಕೆ.ಎಸ್. ಈಶ್ವರಪ್ಪ ಅವರಿಗೆ ಇನ್ನು ಮುಂದೆ ಸಾರ್ವಜನಿಕರನ್ನು ದ್ವೇಷ ಭಾಷಣದ ಮೂಲಕ ಪ್ರಚೋದಿಸಲು ಈ ಕಾಯ್ದೆ ಅಡ್ಡಿಯಾಗಿದೆ. ಇನ್ನು ಮುಂದಾದರೂ ಈಶ್ವರಪ್ಪ ಮತ್ತು ಶಾಸಕ ಚನ್ನಿ ಕೋಮಸೌಹಾರ್ಧತೆಗೆ ಗಮನಹರಿಸಲಿ ಎಂದು ಸಲಹೆ ನೀಡಿದರು.
ಇತ್ತೀಚೆಗೆ ಶಿವಮೊಗ್ಗದ ಅಮೀರ್ಅಹ್ಮದ್ ವೃತ್ತ, ಆರ್.ಎಂ.ಎಲ್. ನಗರ, ಸೀಗೆಹಟ್ಟಿ ಮೊದಲಾದೆಡೆ ನಡೆದ ಘಟನೆಗಳಿಗೆ ಸಂಬಂಧಿಸಿದಂತೆ ಬಿಜೆಪಿಯವರು ಬಾಯಿಗೆ ಬಂದಂತೆ ಮಾತನಾಡಿ, ಸಾರ್ವಜನಿಕರನ್ನು ಪ್ರಚೋದಿಸಿ ತಪ್ಪುದಾರಿಗೆ ಎಳೆಯುತ್ತಿದ್ದರು ಇನ್ನು ಮುಂದೆ ಈ ಕಾಯ್ದೆಯ ಪ್ರಕಾರ ಯಾವುದೇ ದ್ವೇಷಭಾಷಣ, ಪ್ರಚೋದನೆಗೆ ಅವಕಾಶ ನೀಡದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕ್ರಮವಹಿಸಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಕಾರ್ಪೋರೇಟರ್ ವಿಶ್ವನಾಥ್ಕಾಶಿ, ಶಿವಕುಮಾರ್, ಆಸೀಫ್ಮಸೂದ್, ಮುನ್ನಾ, ಗಂಗಾಧರ್ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















