ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ಸ್ಥಾಪನೆಯಾಗುತ್ತಿರುವುದನ್ನು ನಾವು ಸ್ವಾಗತಿಸುತ್ತೇವೆ ಮತ್ತು ಅದನ್ನು ಸಂಭ್ರಮದಿಂದ ಆಚರಿಸುವ ಉದ್ದೇಶದಿಂದ ಫೆ.25ರಂದು ಸಂಜೆ 4 ಗಂಟೆಯಿಂದ ಫ್ರೀಡಂ ಪಾರ್ಕ್ನಲ್ಲಿ ಫ್ಲೈ ಶಿವಮೊಗ್ಗ (ಮುಗಿಲೆತ್ತರಕ್ಕೆ ಮಲೆನಾಡು) ಹೆಸರಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಫ್ಲೈ ಶಿವಮೊಗ್ಗ ತಂಡದ ಸಂಚಾಲಕ ಹರಿಕೃಷ್ಣ ಹೇಳಿದರು.
ಅವರು ಇಂದು ಹೋಟೆಲ್ ಮಥುರಾ ಪ್ಯಾರಾಡೈಸ್ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶಿವಮೊಗ್ಗದಲ್ಲಿ ವಿಮಾನ ನಿಲ್ದಣ ಉದ್ಘಾಟನೆಯಾಗುತ್ತಿರುವುದು ನಮಗೆಲ್ಲಾ ಅತ್ಯಂತ ಸಂಭ್ರಮ ತಂದಿದೆ. ಇದು ನಮ್ಮ ಕನಸಿನ ವಿಮಾನ ನಿಲ್ದಾಣ. ಶಿವಮೊಗ್ಗೆಗೊಂದು ಕಲಶಪ್ರಾಯ. ಹಿರಿಮೆ, ಗರಿಮೆ. ಇಂತಹ ಸಂತೋಷದ ವಿಷಯವನ್ನು ನಾವೆಲ್ಲಾ ಸಂಭ್ರಮಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ನಮ್ಮ ತಂಡ ಇದನ್ನು ಒಂದು ಸಾಂಸ್ಕೃತಿಕ ಹಬ್ಬವನ್ನಾಗಿ ಆಚರಿಸುತ್ತಿದೆ ಎಂದರು.
ಫೆ.25ರ ಸಂಜೆ 4 ಗಂಟೆಗೆ ಗಾಳಿಪಟಗಳನ್ನು ಹಾರಿಸುವ ಮೂಲಕ ವಿಮಾನ ಹಾರಾಟಕ್ಕೆ ನಾವು ಸ್ವಾಗತ ಕೋರುತ್ತೇವೆ. ನಮ್ಮ ಸಂಭ್ರಮ ಮುಗಿಲು ಮುಟ್ಟುವ ಸೂಚನೆ ಅದು. ಮುಗಿಲೆತ್ತರಕ್ಕೆ ನಮ್ಮ ಮಲೆನಾಡು ಇದೆ. ಯಾರು ಬೇಕಾದರೂ ಅಲ್ಲಿ ಗಾಳಿಪಟ ಹಾರಿಸಬಹುದಾಗಿದೆ. ಹಾಗೆಯೇ ಸಂಗೀತ ರಸಮಂಜರಿ ಕಾರ್ಯಕ್ರಮ ಕೂಡ ನಡೆಯಲಿದೆ. ಸ್ಥಳೀಯ ಕಲಾವಿದರು ಇದರಲ್ಲಿ ಭಾಗವಹಿಸುತ್ತಾರೆ. ಮತ್ತು ರಾತ್ರಿ 7 ಗಂಟೆಗೆ ಸಿಡಿಮದ್ದುಗಳ ಪ್ರದರ್ಶನವಿದೆ. ಕತ್ತಲನ್ನು ಕಿತ್ತೊಗೆಯುವ ಬೆಳಿನ ಹಬ್ಬದ ಸಂಕೇತವಾಗಿದೆ. ಒಟ್ಟಾರೆ ಇದೊಂದು ಸಂಭ್ರಮದ ಮುಗಿಲೆತ್ತರದ ಮಲೆನಡು ಎಂಬ ವಿನೂತನ ಕಾರ್ಯಕ್ರಮವಾಗಿದೆ ಎಂದರು.
ಶಿವಮೊಗ್ಗಕ್ಕೆ ವಿಮಾನ ನಿಲ್ದಾಣ ಬರಲು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಂಸದ ಬಿ.ವೈ. ರಾಘವೇಂದ್ರ ಮುಂತಾದವರು ಕಾರಣರಾಗಿದ್ದಾರೆ. ಇವರೆಲ್ಲರಿಗೂ ಫ್ಲೈ ತಂಡದಿಂದ ಅಭಿನಂದನೆಗಳು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಪ್ರಕಾಶ್, ಗಣೇಶ್ ಬಿಳಕಿ, ವಿಜಯ್ ಇನ್ನಿತರರು ಇದ್ದರು.
ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ
ಶಿವಮೊಗ್ಗದ ಸಂಗೀತ ಶಿಕ್ಷಣ ಸಂಸ್ಥೆಯಾದ ಪೂಜಾರ್ ಅಕಾಡೆಮಿ ಆಫ್ ಮ್ಯೂಸಿಕ್ ವತಿಯಿಂದ ಫೆ.25ರ ಸಂಜೆ 5.30ಕ್ಕೆ ರವೀಂದ್ರ ನಗರದ ಶ್ರೀ ಪ್ರಸನ್ನ ಗಣಪತಿ ದೇವಸ್ಥಾನದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಪೂಜಾರ್ ಅಕಾಡೆಮಿಯ ಅಧ್ಯಕ್ಷ ರಾಜೀವ್ ಪೂಜಾರ್ ತಿಳಿಸಿದರು.
ಅವರು ಇಂದು ಮೀಡಿಯಾ ಹೌಸ್ನಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಮೈಸೂರಿನ ಜನಪ್ರಿಯ ಹಾಗೂ ಅಪ್ರತಿಮ ಕರ್ನಾಟಕ ಸಂಗೀತ ಶಾರದೆ ವಿದುಷಿ ಡಾ.ಸುಕನ್ಯಾ ಪ್ರಭಾಕರ್ ಇವರಿಂದ ಗಾಯನವಿದ್ದು, ಸಹ ಗಾಯಕರಾಗಿ ವೇದ ವಿನೋದ್, ಬೆಂಗಳೂರಿನ ವಿಶ್ವಜಿತ್ರಿಂದ ಪಿಟೀಲು, ಚಲುವರಾಜ್ ಅವರಿಂದ ಬೃದಂಗ ಹಾಗೂ ಗುರುಮೂರ್ತಿ ಘಟಂ ನುಡಿಸಲಿದ್ದಾರೆ ಎಂದರು.
ವಿದುಷಿ ಡಾ.ಸುಕನ್ಯಾ ಪ್ರಭಾಕರ್ ಪರಿಚಯ:
ಇವರು ಸಂಗೀತ ಕುಟುಂಬದಲ್ಲಿ ಜನಿಸಿದ್ದು, ತಾಯಿ ಲಕ್ಷ್ಮಮ್ಮ ಸುಬ್ಬರಾವ್ರಿಂದ ಮೊದಲ ಸಂಗೀತ ಪಾಠವನ್ನು 1977ರಿಂದ ಇಲ್ಲಿಯವರೆಗೆ ಸಂಗೀತ ಕಚೇರಿ ನೀಡುತ್ತಾ ಬಂದಿದ್ದಾರೆ. ರಾಜ್ಯ, ರಾಷ್ಟ್ರ ಹಾಗೂ ವಿದೇಶಗಳಲ್ಲೂ ಸಹ ಗಾಯನ ಕಾರ್ಯಕ್ರಮ ನೀಡಿದ್ದಾರೆ. ಆಲ್ ಇಂಡಿಯಾ ರೇಡಿಯೋ ಮತ್ತು ದೂರದರ್ಶನದಲ್ಲಿ ಏ ಗ್ರೇಡ್ ಕಲಾವಿದರಾಗಿದ್ದಾರೆ. ಅನೇಕ ಭಕ್ತಿಗೀತೆಗಳಿಗೆ ಮತ್ತು ಧ್ವನಿಮುದ್ರಿತ ಆಲ್ಬಂಗಳಿಗೆ ಧ್ವನಿ ನೀಡಿರುವ ಅವರು, ಮೈಸೂರಿನಲ್ಲಿ ಸುರಭಿ ಗಾನ ಕಲಾಮಂಡಳಿ ಎಂಬ ಸಂಗೀತ ಶಾಲೆ ಆರಂಭಿಸಿ ನೂರಾರು ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿದ್ದಾರೆ.
ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಕಲಾಶ್ರೀ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಪಡೆದಿರುವ ಇವರಿಗೆ ಮೈಸೂರು ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿ ನೀಡಿ ಗೌರವಿಸಲಾಗಿದೆ.
ಪತ್ರಿಕಾಗೋಷ್ಟಿಯಲ್ಲಿ ಡಾ.ನಾಗರಾಜ್, ರೇಣುಕಾ ಕಾರಂತ್ ಉಪಸ್ಥಿತರಿದ್ದರು.
ಅಂಧರ ಚಲನಚಿತ್ರ ಗಾಯನ ಕಾರ್ಯಕ್ರಮ
ರೋಟರಿ ಕ್ಲಬ್ ಶಿವಮೊಗ್ಗ ಮಲೆನಾಡು ವತಿಯಿಂದ ಫೆ.25ರ ಸಂಜೆ 6 ಗಂಟೆಗೆ ಸುವರ್ಣ ಸಂಸ್ಕೃತಿ ಭವನದಲ್ಲಿ ಮೈ ಆಟೋಗ್ರಾಫ್ ಖ್ಯಾತಿಯ ಅಂಧರ ಚಲನಚಿತ್ರ ಗಾಯನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ರೋಟರಿ ಕ್ಲಬ್ ಶಿವಮೊಗ್ಗ ಮಲೆನಾಡು ಅಧ್ಯಕ್ಷ ಮಂಜುಳಾ ರಾಜು ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ವಿಕಲಚೇತನರನ್ನು ಮತ್ತು ಕಲೆಗೆ ಪ್ರೋತ್ಸಾಹಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಿದ್ದು, ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ. 12 ಜನರ ಅಂಧರ ತಂಡ ಈ ಕಾರ್ಯಕ್ರಮವನ್ನು ನಡೆಸಿಕೊಡಲಿದೆ ಎಂದರು.
Also read: ಶಿವಮೊಗ್ಗಕ್ಕೆ ಬಂತು ವಾಯುಪಡೆಯ 2ನೆಯ ವಿಮಾನ: ಪ್ರಧಾನಿ ಕಾರು, ಎಸ್’ಪಿಜಿ ಸಿಬ್ಬಂದಿ ಆಗಮನ
ಶಾಸಕ ಕೆ.ಎಸ್. ಈಶ್ವರಪ್ಪ ಈ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಮುಖ್ಯ ಅತಿಥಿಯಾಗಿ ಸಂಸದ ಬಿ.ವೈ.ರಾಘವೇಂದ್ರ, ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ, ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಶಿಕ್ಷಣ ತಜ್ಞ ಕಾರ್ತಿಕ್ ಸೆರಗೂರ್, ಐಡಿಯಲ್ ಫೌಂಡೇಶನ್ ಅಧ್ಯಕ್ಷ ಶೈನಿ ಪೌಲ್, ರೋಟರ್ ಅಸಿಸ್ಟೆಂಟ್ ಗೌವರ್ನರ್ ಸುನೀತಾ ಶ್ರೀಧರ್ ಆಗಮಿಸಲಿದ್ದಾರೆ ಎಂದರು.
ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣೆ ದಿವ್ಯಾಂಗರಿಗೆ ಉಚಿತ ಸೇವಾ ಸೌಲಭ್ಯ, ಕೃತಕ ಕಾಲು ಜೋಡಣೆ ಹಾಗೂ ನೇತ್ರದಾನ ಶಿಬಿರ, ಸರ್ಕಾರಿ ಶಾಲೆಗಳ ಅವಶ್ಯಕತೆಗಳಿಗನುಗುಣವಾಗಿ ಕುಡಿಯುವ ನೀರಿನ ಸೌಲಭ್ಯ, ಮಹಿಳೆಯರಿಗೆ ಸ್ವಂತ ದುಡಿಮೆ ಕಾರ್ಯಾಗಾರ, ಮಕ್ಕಳ ಪೌಷ್ಟಿಕತೆ ಬಗ್ಗೆ ನಿವೃತ್ತ ವೈದ್ಯರಿಂದ ತಾಯಂದಿರಿಗೆ ಮಾರ್ಗದರ್ಶನ, ಸರ್ಕಾರಿ ಶಾಲೆಗಳ ಮಕ್ಕಳ ಉನ್ನತೀಕರಣ ಇತ್ಯಾದಿ ಕಾರ್ಯಕ್ರಮಗಳನ್ನು ರೋಟರಿ ಕ್ಲಬ್ ಮಲೆನಾಡು ವತಿಯಿಂದ ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಕಾರ್ಯಕ್ರಮದ ಅಧ್ಯಕ್ಷ ರಾಜು ಸಿ., ಕ್ಲಬ್ನ ಕಾರ್ಯದರ್ಶಿ ಕಿಶನ್ ಎನ್. ಪಟಕುಲೆ, ಮಮತಾ, ಅಲೇಖ, ಮುಸ್ತಾಕ್ಅಲಿ ಇನ್ನಿತರರಿದ್ದರು.
ಶ್ರೀ ಬಲಮುರಿ ವಿಜಯ ಗಣಪತಿ ದೇವಸ್ಥಾನ ಪ್ರತಿಷ್ಠಾಪನಾ ವಾರ್ಷಿಕೋತ್ಸವ
ಕೆಎಚ್ಬಿ ಕಾಲೋನಿ- ಚಾಲುಕ್ಯ ನಗರದಲ್ಲಿ ಬ್ರಾಹ್ಮಣ ಸೇವಾ ಸಂಘದ ವತಿಯಿಂದ ಪ್ರತಿಷ್ಠಾಪಿಸಲ್ಪಟ್ಟಿರುವ ಶ್ರೀ ಬಲಮುರಿ ವಿಜಯ ಗಣಪತಿ ದೇವಸ್ಥಾನ ಮತ್ತು ಸುರಭಿ ಸಮುದಾಯ ಭವನ ಇದರ ಏಳನೇ ವರ್ಷದ ಪ್ರತಿಷ್ಠಾಪನಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಫೆ. 25ರ ಶನಿವಾರದಂದು ಆಯೋಜಿಸಲಾಗಿದೆ.
ವಾರ್ಷಿಕೋತ್ಸವ ಹಾಗೂ ಲೋಕಕಲ್ಯಾಣಾರ್ಥವಾಗಿ 108 ಪರಿಕಲಶ ಸಹಿತ ಬ್ರಹ್ಮಕಳಶಾಭಿಷೇಕ ಮತ್ತು ಆಧಿವಾಸ ಹೋಮ ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ 11ಕ್ಕೆ ಕುಂಭಾಭಿಷೇಕ ಮಧ್ಯಾಹ್ನ 1ಕ್ಕೆ ಮಹಾ ಮಂಗಳಾರತಿ, ಪ್ರಸಾದ ವಿನಿಯೋಗ ನಂತರ ಅನ್ನಸಂತಪಣೆ ನಡೆಯಲಿದೆ.
Discussion about this post