ಕಲ್ಪ ಮೀಡಿಯಾ ಹೌಸ್ | ಹೊಸಗುಂದ |
ಪ್ರತಿ ವರ್ಷದಂತೆ ಈ ವರ್ಷವು ಶ್ರೀ ಉಮಾಮಹೇಶ್ವರ ಸೇವಾ ಟ್ರಸ್ಟ್ ವತಿಯಿಂದ ಡಿ. 1 ರಿಂದ 3ರವರೆಗೂ ಹೊಸಗುಂದ ಉತ್ಸವ ಮತ್ತು ಲಕ್ಷದೀಪೋತ್ಸವ ಆಯೋಜಿಸಲಾಗಿದೆ.
ಮೂರು ದಿನಗಳ ಕಾಲ ನಡೆಯಲಿರುವ ಈ ಉತ್ಸವದಲ್ಲಿ ಭಗವಂತನ ಉಪಾಸನೆ ಮಾಡಲು ಭಜನೆ, ನೃತ್ಯ, ಸಂಗೀತ, ಕಲೆ, ಸಂಸ್ಕೃತಿ, ಜಾನಪದ ಕಲೆ ಹಾಗೂ ವಿವಿಧ ವಾದ್ಯಗಳ ಕಲೆಯ ಬಗ್ಗೆ ಕಲಾವಿದರು ವಾದ್ಯಗಳನ್ನು ನುಡಿಸಿ ಉತ್ಸವದ ಮೆರೆಗೂ ಹೆಚ್ಚಿಸಲಿದ್ದಾರೆ.
ಡಿ.3ರ ಕಾರ್ತಿಕ ಕೃಷ್ಣ ಚತುರ್ದಶಿ ಶುಕ್ರವಾರದಂದು ಶ್ರೀ ಉಮಾಮಹೇಶ್ವರನಿಗೆ ಲಕ್ಷದೀಪೋತ್ಸವ ಜರುಗಲಿದ್ದು, ಪದ್ಮಶ್ರೀ ಪುರಸ್ಕೃತ ಡಾ. ವಿ.ಆರ್. ಗೌರಿಶಂಕರ್ ಲಕ್ಷದೀಪೋತ್ಸವಕ್ಕೆ ಚಾಲನೆ ನೀಡಲಿದ್ದಾರೆ.
ಶೃಂಗೇರಿಯ ಉಭಯ ಜಗದ್ಗುರುಗಳ ದಿವ್ಯ ಆಶೀರ್ವಾದ:
ಶೃಂಗೇರಿಯ ಉಭಯ ಜಗದ್ಗುರುಗಳ ದಿವ್ಯ ಆಶೀರ್ವಾದದೊಂದಿಗೆ ಉತ್ಸವ ನಡೆಯಲಿದ್ದು, ಡಿ.1 ರಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದಲ್ಲಿ ಗಿರಿಜನ ಉತ್ಸವ ಆಯೋಜಿಸಲಾಗಿದೆ. ನಾಡಿನ ಹೆಸರಾಂತ ಕಲಾವಿದರು ವೈವಿಧ್ಯಮಯ ಕಾರ್ಯಕ್ರಮ ನೀಡಲಿದ್ದಾರೆ.
ಜಾನಪದ ನೃತ್ಯ ಸ್ಪರ್ಧೆ:
2 ರಂದು ಸಂಜೆ 4ಕ್ಕೆ ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಕಾಲೇಜು ವಿದ್ಯಾರ್ಥಿಗಳಿಗೆ ಜಾನಪದ ನೃತ್ಯ ಸ್ಪರ್ಧೆ ಆಯೋಜಿಸಲಾಗಿದೆ.
ಸಂಜೆ 7ಕ್ಕೆ ಯೋಗ, ನೃತ್ಯ ಹಾಗೂ ಪ್ರಸಿದ್ಧ ಗಾಯಕ ಹುಮಾಯೂನ್ ಹರ್ಲಾಪುರ ಅವರಿಂದ ಸಂಗೀತ ಕಾರ್ಯಕ್ರಮ ನಂತರ ಕಲಾಸಿಂಚನ ಬಳಗದಿಂದ ಕೆರೆಗೆ ಹಾರ ನಾಟಕ ಪ್ರದರ್ಶನ ನಡೆಯಲಿದೆ.
ಜಲಯೋಗ:
3 ರಂದು ಸಂಜೆ 5:30ಕ್ಕೆ ವನಶ್ರೀ ಸಂಸ್ಥೆಯಿಂದ ಜಲಯೋಗ, 6 ಗಂಟೆಗೆ ತೇಜಸ್ವಿ ತಬಲಾ ತಂಡ, ಸಾಗರ ಇವರಿಂದ ವಾದ್ಯ ವೈವಿಧ್ಯ, ನಂತರ ವಿದ್ವಾನ್ ಪ್ರದ್ಯುಮ್ನ ಮತ್ತು ತಂಡದವರಿಂದ ಶ್ರೀ ದುರ್ಗಾದೇವಿ ಭರತನಾಟ್ಯ ವೈಭವ ಕಾರ್ಯಕ್ರಮ ಏರ್ಪಡಿಸಲಾಗಿದೆ.
ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಸಾಧಕರಿಗೆ ಸನ್ಮಾನ
ಕಾರ್ಯಕ್ರಮದಲ್ಲಿ ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಸಾಧಕರನ್ನು ಸನ್ಮಾನಿಸಲಾಗುವುದು. ರಾತ್ರಿ 8ಕ್ಕೆ ಲಕ್ಷದೀಪೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ.
ದೇವಾಲಯದ ಹಿನ್ನೆಲೆ:
ಕರ್ನಾಟಕ ಹಲವು ಪರಂಪಾರಿಕ ತಾಣಗಳ ತವರೂರು. ಅಡಿಕೆಯ ನಾಡು ಎಂದೇ ಕರೆಯುವ ತೀರ್ಥಹಳ್ಳಿ ಅತ್ಯಂತ ಸುಂದರ ತಾಲೂಕುಗಳಲ್ಲಿ ಒಂದು ಆನಂದಪುರಂನಿಂದ 8 ಕಿ.ಮೀ. ಸಾಗಿ, ಎಡಕ್ಕೆ ತಿರುಗಿ ಮತ್ತೆ 3ಕಿ.ಮೀ. ಕ್ರಮಿಸಿದರೆ ಸಿಗುವ ಪುಟ್ಟ ಗ್ರಾಮ ಹೊಸಗುಂದ.
ಹೊಸಗುಂದ ಕೇವಲ ಪೂಜಾ ಸ್ಥಳವಲ್ಲ. ಅದು ಪ್ರಕೃತಿ ಪ್ರಿಯರಿಗೆ ಶಾಂತಿಯ ವಾಸಸ್ಥಾನ, ಅಲ್ಲಿನ 600 ಎಕರೆಗೂ ವಿಸ್ತಾರವಾದ ದಟ್ಟಾರಣ್ಯದಲ್ಲಿ ದೇವಾಲಯ ನಗರಿ ತೆರೆದುಕೊಂಡಿದೆ.
ಶ್ರೀ ಉಮಾ ಮಹೇಶ್ವರ ದೇವಾಲಯವು ಶಿಲಾಮಯವಾಗಿದ್ದು, ಇಲ್ಲಿನ ಫಲಕಗಳಲ್ಲಿ ಪೌರಾಣಿಕ ಪ್ರಸಂಗಗಳನ್ನು, ಸಾಮಾಜಿಕ ಬದುಕಿನ ಚಿತ್ರಣವನ್ನು ಕಟ್ಟಿಕೊಡುವುದರ ಜೊತೆಗೆ ಮಿಥುನ ಶಿಲ್ಪಗಳು ಮನೋಹರವಾಗಿದ್ದು, ದೇವಾಲಯವು ಪೂರ್ವಾಭಿಮುಖವಾಗಿದೆ.
ದೇವಾಲಯ 21ಮೀ. ಉದ್ದ 9ಮೀ. ಅಗಲವಿದೆ. ದೇವಾಲಯದ ಪೂರ್ವ ಮತ್ತು ದಕ್ಷಿಣ ಬದಿಗಳಲ್ಲಿ ಪ್ರವೇಶದ್ವಾರವಿದೆ. ಕಲ್ಯಾಣ ಚಾಲುಕ್ಯ ಕಾಲದ ಸ್ಥಂಭ ಮಾದರಿಗಳಲ್ಲಿ ಒಂದಾದ ಪುಷ್ಪದ ಫಲಕಗಳಿವೆ.
ದೇವಾಲಯದ ವಾಸ್ತು ಶಿಲ್ಪ, ಲಕ್ಷಣ ಮತ್ತು ಶೈಲಿಯನ್ನು ಅವಲೋಕನ ಮಾಡಿದಾಗ 12ನೇ ಶತಮಾನದ ಆದಿ ಭಾಗದಲ್ಲಿ ನಿರ್ಮಾಣ ಮಾಡಿದ ದೇವಾಲಯವೆಂದು ಹೇಳಬಹುದು.
ದೇವಾಲಯದ ಸುತ್ತಲೂ ಕೃಷ್ಣನ ಬಾಲಲೀಲೆಗಳು, ರತಿ ಮನ್ಮಥ, ಸಂನ್ಯಾಸಿ, ದರ್ಪಣ ಸುಂದರಿ, ಮತ್ಸ್ಯ ಕನ್ಯೆ, ಬೇಟೆಗಾರರು, ಬೇಟೆಯ ಸನ್ನಿವೇಶ, ವಾದ್ಯಗಾರರು, ನೃತ್ಯ ಭಂಗಿಗಳು ಮುಂತಾದ ಸಾಮಾಜಿಕ ಜೀವನವನ್ನು ಬಿಂಬಿಸುವ ಶಿಲ್ಪಗಳನ್ನು ಕೆತ್ತಲಾಗಿದೆ.
ಶ್ರೀ ಉಮಾ ಮಹೇಶ್ವರ ದೇವಾಲಯ , ಶ್ರೀ ಪ್ರಸನ್ನ ನಾರಾಯಣ ದೇವಾಲಯ , ಶ್ರೀ ಕಂಚಿ ಕಾಳಮ್ಮ ದೇವಾಲಯ , ಶ್ರೀ ಲಕ್ಷ್ಮೀ ಗಣಪತಿ ದೇವಾಲಯ ಹಾಗೂ ಪರಿವಾರ ದೇವತೆಗಳಾದ ಕದಂಬ ನಾಗರ ಮಾದರಿಯ ಚಿಕ್ಕ ಗುಡಿಯಲ್ಲಿ ಶ್ರೀ ವೀರಭದ್ರ ದೇವರು ಮತ್ತು ಶ್ರೀ ಗಣೇಶ – ಸುಬ್ರಹ್ಮಣ್ಯ ಮತ್ತು ಮಹಿಷಮರ್ದಿನಿ ದೇವತೆಗಳ ಸಾನಿಧ್ಯವಿತ್ತು ಎಂದು ಅಷ್ಟ ಮಂಗಲ ಪ್ರಶ್ನೆಯಿಂದ ತಿಳಿದು ಬಂದಿದ್ದು ಈಗ ದೇವಾಲಯಗಳು ನಿರ್ಮಾಣವಾಗಿದೆ.
ಹೊಸಗುಂದ ಇತಿಹಾಸ :
ಕ್ರಿ. ಶ. 1995ರಲ್ಲಿ ಶಿವಮೊಗ್ಗದ ಮಲ್ನಾಡ್ ರಿಸರ್ಚ್ ಅಕಾಡೆಮಿಯ ಹೊಸಗುಂದದ ದಿ. ಹೆಚ್.ಡಿ. ನಾಗರಾಜಪ್ಪ ಗೌಡರ ಸಹಕಾರದೊಂದಿಗೆ ಇಲ್ಲಿಯ ಇತಿಹಾಸದ ಮೇಲೆ ಬೆಳಕು ಚೆಲ್ಲುವ ವಿಚಾರ ಸಂಕಿರಣದ ಮೂಲಕ ಅಧಿಕೃತವಾಗಿ ಚಾಲನೆ ನೀಡಲಾಯಿತು.
ಸಿ.ಎಂ. ನಾರಾಯಣ ಶಾಸ್ತ್ರೀಯವರು ದೇವಾಲಯದ ಜೀರ್ಣೋದ್ಧಾರದ ಕೆಲಸವನ್ನು ಪ್ರಾರಂಭ ಮಾಡಿ ಗ್ರಾಮಸ್ಥರನ್ನು ಸೇರಿಸಿ ಶ್ರೀ ಉಮಾಮಹೇಶ್ವರ ಟ್ರಸ್ಟ್ (ರಿ) ಸ್ಥಾಪಿಸಿದರು. 2001 ಮೇ 4 ರಂದು ಕಾಶಿಯಿಂದ ತಂದಿದ್ದ ನರ್ಮದಾ ಬಾಣಲಿಂಗವನ್ನು ಪ್ರತಿಷ್ಠೆ ಮಾಡಲಾಯಿತು.
ಜಗದ್ಗುರು ಶಂಕರಾಚಾರ್ಯ ದಕ್ಷಿಣಾಮ್ನಾಯ ಶೃಂಗೇರಿ ಶ್ರೀ ಶಾರದಾ ಪೀಠಾಧೀಶ್ವರರ ಅನುಗ್ರಹದಿಂದ ಪ್ರತಿನಿತ್ಯ ಧಾರ್ಮಿಕ ವಿಧಿ ವಿಧಾನಗಳು ಸಾಂಗವಾಗಿ ನೆರೆವೇರುತ್ತಿದ್ದು, ಪುತ್ತೂರಿನ ಮೂಲದವರಾದ ಸಿ.ಎಂ.ನಾರಾಯಣ ಶಾಸ್ತ್ರಿ ದಂಪತಿ 20 ವರ್ಷಗಳ ಹಿಂದೆ ದೇವಾಲಯ ಸಮೀಪದಲ್ಲಿ ಜಮೀನು ಖರೀದಿಸಿ ವಾಸಿಸಲು ಆರಂಭಿಸಿದರು. ದೇವಾಲಯದ ಪಾಳು ಸ್ಥಿತಿ ಬಗ್ಗೆ ಕಾಳಜಿ ಹೊಂದಿ ಜೀರ್ಣೋದ್ಧಾರಕ್ಕೆ ಸಂಕಲ್ಪಿಸಿ ಉಮಾ ಮಹೇಶ್ವರ ಸೇವಾ ಟ್ರಸ್ಟ್ (ರಿ) ರಚಿಸಿದರು.
ಯೋಜನೆ:
ಟ್ರಸ್ಟ್ ಹಲವು ಯೋಜನೆಗಳನ್ನು ರೂಪಿಸಿದ್ದು ಅವುಗಳಲ್ಲಿ ಗೋ ಶಾಲೆ ನಿರ್ಮಾಣ, ನಕ್ಷತ್ರವನ, ಗಿಡಾ ಮೂಲಿಕಾ ವನಗಳ ನಿರ್ಮಾಣ, ಹೊಸಗುಂದದ ಅಪರೂಪದ ಸಸ್ಯ ಸಂಪತ್ತು ಗಳನ್ನು ಉಳಿಸಿ ಬೆಳಸುವ ಯೋಜನೆ, ಹೊಸಗುಂದ ಕೆರೆಯ ಹೂಳೆತ್ತಿಸಿ ಅಂತರ್ ಜಲ ಮಟ್ಟವನ್ನು ಹೆಚ್ಚಿಸುವ ಯೋಜನೆ, ಹೊಸಗುಂದದ ೫೦೦ ಎಕರೆ ಕಾಡನ್ನು ದೇವರ ಕಾಡು ಎಂದು ಘೋಷಣೆ ಮಾಡಲು ಸರಕಾರದ ಬಳಿ ವಿನಂತಿಸಿ ಕೊಳ್ಳುವುದು ಹಾಗೂ ಕರ್ನಾಟಕದ ಪ್ರಸಿದ್ಧ ಐತಿಹಾಸಿಕ, ಧಾರ್ಮಿಕ ಪ್ರ್ರವಾಸಿ ನಗರಿಯನ್ನಾಗಿಸುವುದು ಹತ್ತು ಹಲವಾರು ಯೋಜನೆಗಳನ್ನು ಹೊಂದಿದೆ.
ಹೊಸಗುಂದದ ಬಗ್ಗೆ :
ಕ್ರಿ.ಶ.9ರಿಂದ 13ನೇ ಶತಮಾನದವರೆಗೆ ಹೊಸಗುಂದ ಸಾಂತರಸರು ಈ ಪ್ರದೇಶದಲ್ಲಿ ಆಡಳಿತ ನಡೆಸಿದ್ದರು ಎಂಬುದು ಇತಿಹಾಸ ಅಧ್ಯಯನಕಾರರಾದ ಅ. ಸುಂದರಂ, ಡಾ.ಜಿ.ವಿ.ಕಲ್ಲಾಪುರ, ಎಸ್.ಜಿ. ಸಾಮಗ ಮತ್ತಿತರರ ಅಧ್ಯಯನ ಶ್ರಮದಿಂದ ದೃಢಪಟ್ಟಿದೆ.
ಉತ್ಖಖನನ ಸಂದರ್ಭದಲ್ಲಿ ನೂತನ ಶಿಲಾಯುಗಕ್ಕೆ ಸೇರಿದ ಕಲ್ಲಿನ ಆಯುಧಗಳು, ಗಂಗರ ಕಾಲದ ನಾಣ್ಯಗಳು ಲಭಿಸಿದ್ದು, ಈ ಸ್ಥಳದ ಪುರಾತನ ವೈಭವವನ್ನು ಅನಾವರಣಗೊಳಿಸಿರುವ ಬಗ್ಗೆ ಹೊಸಗುಂದ ಇತಿಹಾಸ ನಿಬಂಧನೆಗಳು ಎಂಬ ಗ್ರಂಥದಲ್ಲಿ ಡಾ.ಜಿ.ವಿ. ಕಲ್ಲಾಪುರ (ಗುರುರಾಜ್ ಕಲ್ಲಾಪುರ) ಅವರ ಸಂಪಾದಕತ್ವದಲ್ಲಿ ೨೦೦೧ರಲ್ಲಿ ಪ್ರಥಮ ಆವೃತಿ ಯನ್ನು ಮಲ್ನಾಡ್ ರಿಸರ್ಚ್ ಅಕಾಡೆಮಿ (ರಿ) ಶಿವಮೊಗ್ಗ ಪ್ರಕಟಣೆ ಮಾಡಿದ್ದು ಹೊಸಗುಂದದ ಬಗ್ಗೆ ಹಾಗೂ ಉಮಾಮಹೇಶ್ವರ ದೇವಾಲಯದ ಬಗ್ಗೆ ಈ ಲೇಖನ ಬರೆಯಲು ಡಾ.ಜಿ.ವಿ. ಕಲ್ಲಾಪುರ ಅವರಿಂದ ಸಮಗ್ರ ಮಾಹಿತಿ ಮತ್ತು ಮಾರ್ಗದರ್ಶನ ಪಡೆದು ಲೇಖನ ಬರೆಯಲಾಗಿದೆ.
ಎಲ್ಲಿದೆ ಹೊಸಗುಂದ?
ಶಿವಮೊಗ್ಗ-ಸಾಗರ ರಾಷ್ಟ್ರೀಯ ಹೆದ್ದಾರಿ 206ರಲ್ಲಿ, ಆನಂದಪುರಂನಿಂದ ಸಾಗರ ಕಡೆ 8 ಕಿ.ಮೀ. ಸಾಗಿ, ಎಡಕ್ಕೆ ತಿರುಗಿ ಮತ್ತೆ 3 ಕಿ.ಮೀ. ಕ್ರಮಿಸಿದರೆ ಪುಟ್ಟ ಗ್ರಾಮ ಹೊಸಗುಂದ ಸಿಗುತ್ತದೆ, ಬೆಂಗಳೂರಿನಿಂದ 330 ಕಿ.ಮೀ ದೂರದಲ್ಲಿದೆ.
ಶಿವರಾತ್ರಿ ಆಚರಣೆ, ವಾರ್ಷಿಕೋತ್ಸವ, ಶ್ರಾವಣ ಮಾಸ ಹಾಗೂ ನವರಾತ್ರಿ ಸಂದರ್ಭದಲ್ಲಿ ದೇವಾಲಯದಲ್ಲಿ ವಿಶೇಷ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ.
ಮಾಸ್ಕ್ ಧಾರಣೆ ಕಡ್ಡಾಯ:
ಕೊರೋನಾ ಆತಂಕ ಇರುವ ಕಾರಣ ಭಕ್ತರ ಆರೋಗ್ಯ ಮತ್ತು ದೇವಾಲಯದ ಹಿತ ದೃಷ್ಟಿಯಿಂದ ಪ್ರತಿಯೊಬ್ಬರೂ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಂಡು ಯಾವುದೇ ಆತಂಕವಿಲ್ಲದೆ ಹೊಸಗುಂದ ಉತ್ಸವದಲ್ಲಿ ಭಾಗವಹಿಸಿ ಶ್ರೀ ಸ್ವಾಮಿಯ ದರ್ಶನ ಪಡೆದು ಅನುಗ್ರಹಕ್ಕೆ ಪಾತ್ರರಾಗಿ ಎಂದು ದೇವಾಲಯದ ಆಡಳಿತ ಮಂಡಳಿ ವಿನಂತಿಸಿದೆ.
ಲೇಖನ: ತೀರ್ಥಹಳ್ಳಿ ಅನಂತ ಕಲ್ಲಾಪುರ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post