ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಹೊಸನಗರ: ಕೊಡಚಾದ್ರಿಯಲ್ಲಿರುವ ಹಿಡ್ಲಮನೆ ಫಾಲ್ಸ್ ನೋಡಲು ಬಂದ ಪ್ರವಾಸಿಗನೊಬ್ಬ 80 ಅಡಿಗಳ ಎತ್ತರದಲ್ಲಿ ಸಿಲುಕಿ, ಸಂಕಷ್ಟದಲ್ಲಿದ್ದ ಸಂದರ್ಭದಲ್ಲಿ ಸತತ ಐದು ಗಂಟೆಗಳ ಕಾರ್ಯಾಚರಣೆ ನಡೆಸಿ ಆತನನ್ನು ರಕ್ಷಣೆ ಮಾಡಲಾಗಿದೆ.
ಹಾಸನ ಮೂಲದ ವೈದ್ಯಕೀಯ ವಿದ್ಯಾರ್ಥಿ ಅಮೋಘ ಎಂಬಾತ ತನ್ನ ಸ್ನೇಹಿತರೊಂದಿಗೆ ಪ್ರವಾಸಕ್ಕೆಂದು ಕೊಡಚಾದ್ರಿಗೆ ಆಗಮಿಸಿ, ಹೋಂ ಸ್ಟೇವೊಂದರಲ್ಲಿ ತಂಗಿದ್ದರು. ಮುಂಜಾನೆ ಕೊಡಚಾದ್ರಿ ಹತ್ತಿದ ಈತನ ಸ್ನೇಹಿತರು ನೇರವಾಗಿ ಹಿಡ್ಲಮನೆ ಫಾಲ್ಸ್’ಗೆ ತೆರಳಿದ್ದಾರೆ. ಆದರೆ, ಅಮೋಘ ಮಾತ್ರ ಫಾಲ್ಸ್ ಪಕ್ಕದಲ್ಲೇ ಇಳಿಯಲು ಪ್ರಯತ್ನಿಸಿದ ವೇಳೆ ಸುಮಾರು 80 ಅಡಿ ಎತ್ತರದಲ್ಲಿ ಸಿಲುಕಿದ್ದಾನೆ. ಈ ಜಾಗದಲ್ಲಿ ಮೇಲಕ್ಕೆ ಏರಲೂ ಆಗದೆ, ಇಳಿಯಲೂ ಆಗದೇ ಸಿಲುಕಿ, ಪ್ರಾಣಾಪಾಯಕ್ಕೆ ತುತ್ತಾಗಿದ್ದಾನೆ. ತತಕ್ಷಣ ಇದನ್ನು ಗಮನಿಸಿದ ಈತನ ಸ್ನೇಹಿತರು ಸಹಾಯಕ್ಕಾಗಿ ಕೂಗಿದ್ದಾರೆ.
ಕಾರ್ಯಾಚರಣೆ ನಡೆಸುವ ವೇಳೆ ಸುಮಾರು ಎರಡು ಗಂಟೆಗಳ ಕಾಲ ಅಮೋಘ ಒಂದೇ ಕಾಲಿನಲ್ಲಿ ನಿಂತು ಕಾಯುವಂತಹ ಪರಿಸ್ಥಿತಿಯಿತ್ತು. ಕೊಂಚ ಮಿಸುಕಾಡಿದರೂ ಆತನ ಮೇಲಿನಿಂದ ಕೆಳಕ್ಕೆ ಬೀಳುವ ಅಪಾಯವಿತ್ತು.
ವಿಷಯ ತಿಳಿದ ಅಗ್ನಿಶಾಮಕ ಸಿಬ್ಬಂದಿ ಹಾಗೂ ವನ್ಯಜೀವಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸ್ಥಳೀಯರ ನೆರವಿನೊಂದಿಗೆ ಸುಮಾರು 5 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ರಕ್ಷಿಸಲಾಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post