ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಭದ್ರಾವತಿಯ ನ್ಯೂಟೌನ್ ಪೊಲೀಸ್ ಠಾಣೆ ವ್ಯಾಪ್ತಿಯ ಹೊಸ ಸಿದ್ದಾಪುರದಲ್ಲಿ ಅಕ್ರಮ ಚಟುವಟಿಕೆಗಳು ಹೆಚ್ಚಾಗಿದ್ದು ಪೊಲೀಸ್ ಇಲಾಖೆ ಮೌನವಹಿಸಿದೆ.
ಹೊಸಸಿದ್ದಾಪುರ ವೇಗವಾಗಿ ಬೆಳೆಯುತ್ತಿರುವ ಪ್ರದೇಶವಾಗಿದ್ದು 5 ಸಾವಿರಕ್ಕೂ ಹೆಚ್ಚಿನ ಜನಸಂಖ್ಯೆ ಇದೆ. ಕೆಲ ವರ್ಷಗಳಿಂದ ಯುವಕರು ಶಾಲಾ ಆವರಣ, ಸರ್ಕಲ್ಗಳನ್ನು ಅಡ್ಡೆ ಮಾಡಿಕೊಂಡು ಗಾಂಜಾ ಸೇವನೆ, ಬೀಡಿ, ಸಿಗರೇಟ್, ಮದ್ಯ ಸೇವನೆಯಲ್ಲಿ ತೊಡಗಿಕೊಂಡಿದ್ದು ಸಾರ್ವಜನಿಕರ ಮೇಲೆ ನಿಂದನೆ, ಹಲ್ಲೆ ನಡೆಸುತ್ತಿರುವುದು ಸಾಮಾನ್ಯವಾಗಿದೆ. ಈ ಕುರಿತು ಪೊಲೀಸ್ ಇಲಾಖೆಗೆ ದೂರು ನೀಡಲಾಗಿದ್ದರೂ ಯಾವುದೇ ಬೀಟ್ ವ್ಯವಸ್ಥೆ ಮಾಡಿಲ್ಲ.
ಇಲ್ಲಿರುವ ಚೌಡೇಶ್ವರಿ, ಗಣಪತಿ, ಶನೇಶ್ವರ, ಆದಿಶಕ್ತಿ, ಆಂಜನೇಯ ದೇವಸ್ಥಾನಗಳನ್ನು ಎರಡ್ಮೂರು ಬಾರಿ ಕಳ್ಳತನ ಮಾಡಲಾಗಿದೆ. ಆದರೂ ಯಾವುದೇ ಕ್ರಮಗಳು ಜರುಗಿಲ್ಲ.
ಮೇ 26ರಂದು ಬೆಳಗ್ಗೆ ಗಾರ್ಮೆಂಟ್ಸ್ಗೆ ಹೊರಟಿದ್ದ ಯುವತಿ ಮೇಲೆ ಇದೇ ಊರಿನ ನಾಲ್ಕೈದು ಹುಡುಗರು ಹಲ್ಲೆ ಮಾಡಿದ್ದಾರೆ. ಮೇ 25ರಂದು ಅಕ್ರಮ ಮದ್ಯ ಮಾರಾಟ ನಿಲ್ಲಿಸಲೂ ದೂರು ನೀಡಿದ್ದ ವ್ಯಕ್ತಿ ಮೇಲೆ ಚಾಕು ತೋರಿಸಿ ಬೆದರಿಕೆ ಹಾಕಲಾಗಿದ್ದು ನ್ಯೂಟೌನ್ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಆರೋಪಿಯನ್ನು ಸ್ಟೇಷನ್ ಬೇಲ್ ಮೇಲೆ ಬಿಟ್ಟು ಕಳುಹಿಸಲಾಗಿದೆ.
ನಾಲ್ಕು ದಿನದ ಹಿಂದೆ ಎರಡು ಯುವಕರು ಗುಂಪು ಮಾರಕಾಸ್ತçಗಳಿಂದ ಹೊಡೆದಾಡಿಕೊಂಡಿದ್ದು ಈ ವೇಳೆ ಹೊಡೆತ ತಿಂದ ಹುಡುಗ ಎದುರಿನ ಮನೆ ಒಳಗೆ ನುಗ್ಗಿ ಬಾಗಿಲು ಹಾಕಿಕೊಂಡಿದ್ದಾರೆ. ಮನೆಯಲ್ಲಿದ್ದ ಮಹಿಳೆಯರು ಗಾಬರಿಗೊಂಡಿದ್ದಾರೆ. ಕೆಲ ಹೊತ್ತಿನ ನಂತರ ಆ ಯುವಕ ಅಲ್ಲಿಂದ ಪರಾರಿಯಾಗಿದ್ದಾನೆ. ಈ ವಿಷಯವನ್ನು ಪೊಲೀಸ್ ಠಾಣೆಗೆ ಮುಟ್ಟಿಸಿದರೂ ಯಾರೂ ಭೇಟಿ ಕೊಟ್ಟಿಲ್ಲ. ಗಾಬರಿಗೊಂಡ ಮನೆಯವರಿಗೆ ಧೈರ್ಯ ತುಂಬಿಲ್ಲ. ಗಾಂಜಾ ಮಾರಾಟ, ಸೇವನೆ ಪ್ರಕರಣದಲ್ಲಿ ಇದೇ ಗ್ರಾಮದ ಒಂದಿಬ್ಬರು ಬಂಧನ ಕೂಡ ಆಗಿದ್ದಾರೆ. ಇಷ್ಟೆಲ್ಲ ಇದ್ದರೂ ಪೊಲೀಸರು ಸ್ಪಂದಿಸುತ್ತಿಲ್ಲ ಎಂಬುದು ಗ್ರಾಮಸ್ಥರು ದೂರು.
ನಾಲ್ಕು ದಿನದ ಹಿಂದೆ ಯುವಕರ ಗುಂಪು ಹೊಡೆದಾಡಿಕೊಂಡು ನಮ್ಮ ಎದುರಿನ ಮನೆಗೆ ಯುವಕನೊಬ್ಬ ನುಗ್ಗಿದ್ದಾನೆ. ಈ ಬಗ್ಗೆ ಠಾಣೆಗೆ ಮಾಹಿತಿ ಕೊಟ್ಟರೂ ಈವರೆಗೆ ಬಂದು ನೋಡಿಲ್ಲ. ಗ್ರಾಮದಲ್ಲಿ ಅಕ್ರಮ ಚಟುವಟಿಕೆಗಳು ಹೆಚ್ಚಾಗುತ್ತಿದ್ದು ಪೊಲೀಸ್ ಇಲಾಖೆ ಸೂಕ್ತ ಕ್ರಮಕೈಗೊಳ್ಳುತ್ತಿಲ್ಲ.
– ನವೀನ್, ಬಿಜೆಪಿ ಮುಖಂಡ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post