ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸರ್ಕಾರಿ ನೌಕರರ ಎನ್ಪಿಎಸ್ (ಹೊಸ ನಿವೃತ್ತಿ ಪಿಂಚಣಿ ಯೋಜನೆ) ರದ್ದುಗೊಳಿಸಿ ಓಪಿಎಸ್ (ಹಳೆ ನಿವೃತ್ತಿ ಪಿಂಚಣಿ ಯೋಜನೆ)ನ್ನು ಜಾರಿಗೊಳಿಸಬೇಕು ಎಂದು ಕಾಂಗ್ರೆಸ್ ವಕ್ತಾರ ಆಯನೂರು ಮಂಜುನಾಥ್ ಆಗ್ರಹಿಸಿದ್ದಾರೆ.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಸುಮಾರು 6 ಲಕ್ಷ ಸರ್ಕಾರಿ ನೌಕರರು ಹಾಗೂ ಅನುದಾನಿತ ಶಿಕ್ಷಣ ಸಂಸ್ಥೆಯ ನೌಕರರು, ಈಗ ಆತಂಕದಲ್ಲಿದ್ದಾರೆ. 2006ಕ್ಕೂ ಮೊದಲು ಉದ್ಯೋಗಪಡೆದ ನೌಕರರು ಹಳೇ ಪಿಂಚಣಿ ವ್ಯವಸ್ಥೆಯಲ್ಲಿ ಮುಂದುವರೇದಿದ್ದಾರೆ. ಆದರೆ ಆನಂತರ ಉದ್ಯೋಗ ಪಡೆದ ಸರ್ಕಾರಿ ನೌಕರರು ಹೊಸ ಪಿಂಚಣಿ ಯೋಜನೆಗೆ ಒಳಪಟ್ಟು ಮಾನಸಿಕ ಕ್ಷೋಭೆಗೆ ಒಳಗಾಗಿದ್ದಾರೆ ಎಂದರು.
ಕಾಂಗ್ರೆಸ್ ಪಕ್ಷ ಚುನಾವಣಾ ಪ್ರಣಾಳಿಕೆಯಲ್ಲಿ ಎನ್ಪಿಎಸ್ನ್ನು ರದ್ದುಪಡಿಸಿ ಓಪಿಎಸ್ನ್ನು ನೀಡುವ ಬಗ್ಗೆ ಭರವಸೆ ಕೊಟ್ಟಿತ್ತು. ಆದರೆ, ಓಪಿಎಸ್ನ್ನು ಜಾರಿ ಮಾಡಲು ಅನೇಕ ಕಾನೂನು ತೊಡಕುಗಳಿವೆ. ಇದು ಕೇಂದ್ರ ಸರ್ಕಾರದ ಯೋಜನೆಯಾಗಿದ್ದು, 2003ರಲ್ಲಿ ಪ್ರಸ್ತಾಪವಾಗಿ 2004ರಲ್ಲಿ ಜಾರಿಯಾಯಿತು. ತಮ್ಮ ವೇತನದಲ್ಲಿ ಶೇ.10ರಷ್ಟನ್ನು ಕಡಿತಗೊಳಿಸಿ ಮತ್ತು ಅದಕ್ಕೆ ಸರ್ಕಾರ ಶೇ.10ರಷ್ಟನ್ನು ನೀಡಿ, ಒಟ್ಟು ಶೇ.20ರಷ್ಟು ಇವರ ಹಣವನ್ನು ಕೇಂದ್ರ ಸರ್ಕಾರದ ನ್ಯಾಷನಲ್ ಸೆಕ್ಯೂರಿಟಿ ಡಿಪಾಸಿಟ್ಗೆ ಜಮಾ ಮಾಡಬೇಕಾಗಿತ್ತು ಎಂದರು.
Also read: ಶ್ರೀಕಾಂತ್ ಮೇಲೆ ಕೇಸಿದ್ದರೆ ನಾನು ಕ್ಷಮೆ ಕೇಳುತ್ತೇನೆ, ಇಲ್ಲದಿದ್ದರೆ ಸಿದ್ದರಾಮಯ್ಯ ಕೇಳಲಿ: ಈಶ್ವರಪ್ಪ ಸವಾಲು
ಹೀಗೆ ಕಡಿತಗೊಂಡ ಹಣ ಕೇಂದ್ರ ಸರ್ಕಾರದ ಸೆಂಟ್ರಲ್ ಏಜೆನ್ಸಿಗೆ ಹೋಗುತ್ತಿತ್ತು. ಆ ಏಜೆನ್ಸಿಯವರು ಇದನ್ನು ಶೇರು ಮಾರುಕಟ್ಟೆಗೆ ತೊಡಗಿಸಿ ಅದರಲ್ಲಿ ಬಂದ ಲಾಭಂಶವನ್ನು ಪಿಂಚಣಿ ರೂಪದಲ್ಲಿ ಕೊಡುತ್ತಿದ್ದರು. ಆದರೆ, ಶೇರು ಮಾರುಕೇಟ್ ಆಗಿರುವುದರಿಂದ ನಷ್ಟಗೊಂಡರೆ ಆ ಹಣವು ಸಿಗುತ್ತಿರಲಿಲ್ಲ. ಮತ್ತು ನಿವೃತ್ತಿದಾರರಿಗೆ ತಮ್ಮ ಹಣವನ್ನು ಎಲ್ಲಿ ವಿನಿಯೋಗ ಮಾಡಿದ್ದಾರೆ ಎಂದೇ ಗೊತ್ತಾಗುತ್ತಿರಲಿಲ್ಲ. ಆ ಮಾಹಿತಿಯೂ ನೀಡಿಲ್ಲ. ಶೇರು ಮಾರುಕಟ್ಟಿನ ಲಾಭ ನಷ್ಟಗಳ ಮೇಲೆ ಪಿಂಚಣಿ ನಿರ್ಧಾರವಾಗುತ್ತಿತ್ತು. ಇದು ಸರ್ಕಾರಿ ನೌಕರರಿಗೆ ಅನ್ಯಾಯವಾಗುತ್ತಿತ್ತು ಎಂದರು.
ಕೇಂದ್ರ ಸರ್ಕಾರದ ಅಧೀನದಲ್ಲಿಯೇ ಇರುವ ಎನ್ಎಸ್ಪಿಎಗೆ ವರ್ಗವಾದ ಹಣವನ್ನು ವಾಪಾಸು ತೆಗೆದುಕೊಳ್ಳಲು ಬರುವುದಿಲ್ಲ. ಹಾಗಾಗಿ ರಾಜ್ಯ ಸರ್ಕಾರಗಳು ಹಳೆ ಪಿಂಚಣಿ ವ್ಯವಸ್ಥೆ ಜಾರಿಮಾಡಬೇಕು ಎಂದರೆ, ನಿವೃತ್ತಿ ನೌಕರರ ಕಡಿತಗೊಂಡ ಹಣ ರಾಜ್ಯ ಸರ್ಕಾರಕ್ಕೆ ವಾಪಾಸ್ಸು ಬರಬೇಕು. ಇದುವರೆಗೂ ಈ ಹಣವೇ 1,29,600 ಕೋಟಿ ಆಗುತ್ತದೆ. ಈ ಹಣವನ್ನು ರಾಜ್ಯ ಸರ್ಕಾರಗಳಿಗೆ ಹಂಚಿಕೆ ಮಾಡಿದರೆ ಹಳೆ ಪಿಂಚಣಿ ವ್ಯವಸ್ಥೆಯನ್ನು ಜಾರಿ ಮಾಡಲು ಅನುಕೂಲವಾಗುತ್ತದೆ. ಆದರೆ, ಅದು ಅಷ್ಟು ಸುಲಭ ಅಲ್ಲ. ಒಮ್ಮೆ ಹಾಕಿದ ಹಣವನ್ನು ವಾಪಾಸು ತೆಗೆಯಲು ಬರುವುದಿಲ್ಲ. ಅದಕ್ಕಾಗಿ ಕೇಂದ್ರ ಸರ್ಕಾರ ಈಗಿರುವ ಕಾಯ್ದೆಗೆ ತಿದ್ದುಪಡಿ ಮಾಡಬೇಕು. ಅದಕ್ಕೆ ರಾಜ್ಯ ಸರ್ಕಾರ ಪ್ರಯತ್ನಿಸಬೇಕು ಎಂದರು.
ಕಾಯ್ದೆ ತಿದ್ದುಪಡಿಗೆ ರಾಜ್ಯದ ಲೋಕಸಭಾ ಸದಸ್ಯರು ಕೂಡ ಮುಂಬರುವ ಬಜೆಟ್ ಅಧಿವೇಶನದಲ್ಲಿ ಪ್ರಸ್ತಾಪ ಮಾಡಿ ಒತ್ತಾಯಿಸಬೇಕು. ಇದಕ್ಕೆ ರಾಜ್ಯ ಸರ್ಕಾರ ಕೂಡ ಎಲ್ಲಾ ವಿವರಗಳನ್ನು ಪಡೆದು. ಈಗಿರುವ ಸಮಿತಿಯನ್ನು ಮತ್ತಷ್ಟು ವಿಸ್ತರಿಸಿ ವರದಿಯನ್ನು ನೀಡಬೇಕು. ಮತ್ತು ಈಗಾಗಲೇ ಹಲವು ರಾಜ್ಯಗಳಲ್ಲಿ ಎನ್ಪಿಎಸ್ ಯೋಜನೆ ಕೈಬಿಟ್ಟು ಹಳೆ ಪಿಂಚಣಿ ವ್ಯವಸ್ಥೆಯನ್ನೇ ಮುಂದುವರೆಸಲಾಗಿದೆ. ರಾಜ್ಯ ಸರ್ಕಾರ ಕೂಡ ನಾಳೆ ಈ ಬಗ್ಗೆ ಸಭೆ ಕರೆಯಲಿದೆ. ಸಮಿತಿಯನ್ನು ರಚಿಸಲಿದೆ. ಈ ಸಮಿತಿಯಲ್ಲಿ ನೌಕರರ ಸಂಘದ ಪದಾಧಿಕಾರಿಗಳು ಇರಬೇಕು. ಈ ಬಗ್ಗೆ ಈಗಾಗಲೇ ಸಚಿವ ಕೃಷ್ಣ ಬೈರೇಗೌಡರು ಬೆಳಗಾವಿ ಅಧಿವೇಶನದಲ್ಲಿ ಮುಖ್ಯಮಂತ್ರಿಗಳ ಪರವಾಗಿ ಉತ್ತರ ನೀಡಿದ್ದಾರೆ ಎಂದರು.
ಎನ್ಪಿಎಸ್ ನೌಕರರ ಹೋರಾಟಕ್ಕೆ ನಾನು ಮೊದಲಿನಿಂದಲೂ ಸಿದ್ದನಿದ್ದೇನೆ. ಅವರಿಗೆ ನನ್ನ ಬೆಂಬಲವಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡು ಸರ್ಕಾರಿ ನೌಕರರ ಹಿತ ಕಾಯಬೇಕು ಎನ್ಪಿಎಸ್ ವ್ಯವಸ್ಥೆ ರದ್ದಾಗಿ ಓಪಿಎಸ್ ವ್ಯವಸ್ಥೆ ಜಾರಿಯಾಗಬೇಕು ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಸದಸ್ಯ ವೈ.ಹೆಚ್.ನಾಗರಾಜ್ ಪ್ರಮುಖರಾದ ಧೀರರಾಜ್ ಹೊನ್ನಾವಿಲೆ, ಐಡಿಯಲ್ ಗೋಪಿ, ಶಿ.ಜು.ಪಾಶ, ಕೃಷ್ಣ, ಜಗದೀಶ್ ಗೌಡ, ಎಸ್.ವಿ.ಪಾಟಿಲ್, ಹಿರಣ್ಣಯ್ಯ, ಸಂತೋಷ್ ಆಯನೂರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post