ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಗ್ರಾಮೀಣಾಭಿವೃದ್ಧಿ ಕ್ಷೇತ್ರದಲ್ಲಿ ಇರುವ ಕಾನೂನು ತೊಡಕುಗಳನ್ನು ನಿವಾರಿಸಿ, ಸಮಗ್ರ ಅಭಿವೃದ್ಧಿ ಸಾಧಿಸುವ ನಿಟ್ಟಿನಲ್ಲಿ ರಾಜ್ಯ ಪಂಚಾಯತ್ ಪರಿಷತ್ ನೀಡಿರುವ ಸಲಹೆಗಳನ್ನು ಅನುಷ್ಟಾನಕ್ಕೆ ತರಲು ಕ್ರಮ ಕೈಗೊಳ್ಳಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಅವರು ತಿಳಿಸಿದರು.
ಅವರು ಜಿಲ್ಲಾ ಪಂಚಾಯತ್ನಲ್ಲಿ ನಡೆದ ಪರಿಷತ್ ಸಭೆಯ ಬಳಿಕ ಸುದ್ದಿಗಾರರಿಗೆ ಮಾಹಿತಿ ನೀಡಿದರು.
ಗ್ರಾಮೀಣ ಪ್ರದೇಶದ ಜನರ ಜೀವನಮಟ್ಟ ಸುಧಾರಣೆ ನಿಟ್ಟಿನಲ್ಲಿ ಕಾನೂನಿನಲ್ಲಿ ಇರುವ ತೊಡಕುಗಳು, ಅಗತ್ಯ ಸರ್ಕಾರಿ ಆದೇಶಗಳು ಸೇರಿದಂತೆ 23 ಸಲಹೆಗಳನ್ನು ಪರಿಷತ್ ನೀಡಿದೆ. ಈ ಸಲಹೆಗಳ ಕುರಿತು ಸಮಾಲೋಚನೆ ನಡೆಸಿ ಅಂತಿಮ ವರದಿಯನ್ನು ಸಿದ್ಧಪಡಿಸುವ ನಿಟ್ಟಿನಲ್ಲಿ ಜುಲೈ 6 ಮತ್ತು 7ರಂದು ಬೆಂಗಳೂರಿನಲ್ಲಿ ತಜ್ಞರ ಸಭೆಯನ್ನು ನಡೆಸಲಾಗುವುದು ಎಂದು ಹೇಳಿದರು.
ಸ್ವಾತಂತ್ರ್ಯದ 75ನೇ ವರ್ಷಾಚರಣೆ ಅಂಗವಾಗಿ 2021-26 ನೇ ಸಾಲಿನವರೆಗೆ `ಜನರ ಯೋಜನೆ’ ಹೆಸರಿನಲ್ಲಿ ದೂರದೃಷ್ಟಿ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಇದರಲ್ಲಿ ಮಹಿಳಾ ಉದ್ದೇಶಿತ ಆಯವ್ಯಯ, ಮಕ್ಕಳ ಉದ್ದೇಶಿತ ಆಯವ್ಯಯ, ವಿಕಲಚೇತನರ ಉದ್ದೇಶಿತ ಆಯವ್ಯಯ, ಅನುಸೂಚಿತ ಜಾತಿ ಮತ್ತು ಪಂಗಡಗಳಿಗೆ ಮೀಸಲಾದ ಅನುದಾನ ಮತ್ತು ಕ್ರೀಡಾ ಚಟುವಟಿಕೆಗಳಿಗೆ ಅನುದಾನ ಮೀಸಲಾಗಿಡಲಾಗುತ್ತಿದೆ. ಈ ಕುರಿತಾಗಿ ಪರಿಷತ್ ತನ್ನ ಸಲಹೆಗಳನ್ನು ನೀಡಿದೆ.
ಗ್ರಾಮ ಪಂಚಾಯತ್ ಮಟ್ಟದಲ್ಲಿ ಕೆಡಿಪಿ ಸಭೆಗಳನ್ನು ನಡೆಸಬೇಕು. ಜಿಲ್ಲಾ ಯೋಜನಾ ಸಮಿತಿಯ ಪುನರಾಚನೆ, ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಗಳನ್ನು ಪ್ರಸ್ತುತ ಕಂದಾಯ ಇಲಾಖೆ ನಿರ್ವಹಿಸುತ್ತಿದ್ದು, ಅದನ್ನು ಗ್ರಾಮೀಣಾಭಿವೃದ್ಧಿ ಇಲಾಖೆಗೆ ವರ್ಗಾಯಿಸಬೇಕು. ಫಲಾನುಭವಿಗಳ ಆಯ್ಕೆ ಮತ್ತು ಅರ್ಜಿಗಳ ಪರಿಶೀಲನೆಯನ್ನು ಗ್ರಾಮ ಪಂಚಾಯತ್ಗಳಿಗೆ ನೀಡಬೇಕು. ಜನನ, ಮರಣ ಹಾಗೂ ವಿವಾಹ ನೋಂದಣಿ ಕಾರ್ಯ ನೆರವೇರಿಸಲು ಗ್ರಾಮ ಪಂಚಾಯತ್ಗಳನ್ನು ಹೆಚ್ಚುವರಿ ಕೇಂದ್ರಗಳಾಗಿಸಬೇಕು. ಗ್ರಾಮ ಪಂಚಾಯತ್ನಲ್ಲಿರುವ ಬಾಪೂಜಿ ಸೇವಾ ಕೇಂದ್ರದ ಮೂಲಕ ವೃದ್ಧಾಪ್ಯ, ವಿಧವೆಯರ ಪ್ರಮಾಣ ಪತ್ರ, ವಾಸದ ದೃಢೀಕರಣ ಪತ್ರ ಹಾಗೂ ವಿತರಣಾ ಸೇವೆಗಳನ್ನು ಕೈಗೊಳ್ಳಬೇಕು.
ಸರ್ಕಾರಿ ಪ್ರಾಥಮಿಕ, ಪ್ರೌಢ ಶಾಲೆ ಮತ್ತು ಮೆಟ್ರಿಕ್ ಪೂರ್ವ ಹಾಗೂ ನಂತರದ ವಸತಿ ಶಾಲೆ, ವಿದ್ಯಾರ್ಥಿ ನಿಲಯಗಳು, ಆಶ್ರಮ ಶಾಲೆಗಳು, ಪಶು ಚಿಕಿತ್ಸಾಲಯ ಸೇವಾ ವಿತರಣಾ ಘಟಕ, ಪ್ರಾಥಮಿಕ ಆರೋಗ್ಯ/ ಉಪ ಕೇಂದ್ರ, ಅಂಗನವಾಡಿ ಕೇಂದ್ರಗಳ ದೈನಂದಿನ ಕಾರ್ಯಚಟುವಟಿಕೆಗಳ ಮೇಲುಸ್ತುವಾರಿ ಮೇಲ್ವಿಚಾರಣೆಯನ್ನು ಗ್ರಾಮ ಪಂಚಾಯತ್ಗಳಿಗೆ ವಹಿಸಬೇಕು. ಪ್ರತ್ಯೇಕವಾಗಿ ಕರ್ನಾಟಕ ಪಂಚಾಯತ್ ರಾಜ್ ಆಡಳಿತಾತ್ಮಕ ಸೇವೆ ಸ್ಥಾಪನೆ, ಗ್ರಾಮ ಠಾಣಾ ವ್ಯಾಪ್ತಿ ವಿಸ್ತರಣೆ, ಶೇ.20ರಷ್ಟು ಮುಕ್ತ ಅನುದಾನವನ್ನು ಗ್ರಾಮ ಪಂಚಾಯತ್ಗಳಿಗೆ ನೀಡುವುದು, ಗ್ರಾಮೀಣ ಮಟ್ಟದಲ್ಲಿ ಕೌಶಲ್ಯ ಅಭಿವೃದ್ಧಿ ತರಬೇತಿ ಸೇರಿದಂತೆ ವಿವಿಧ ಸಲಹೆಗಳನ್ನು ಪರಿಷತ್ ನೀಡಿದೆ ಎಂದು ಹೇಳಿದರು.
ಕರ್ನಾಟಕ ರಾಜ್ಯ ಪಂಚಾಯತ್ ಪರಿಷತ್ ಸದಸ್ಯರಾದ ನಾರಾಯಣ ಸ್ವಾಮಿ, ಡಿ.ಆರ್.ಪಾಟೀಲ್, ಪ್ರಮೋದ್ ಹೆಗಡೆ, ಶಿವರಾಜ್, ವಿ.ವೈ.ಘೋರ್ಪಡೆ, ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾ ಮಹಾದೇವನ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೈಶಾಲಿ ಮತ್ತಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post