ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ದೇಶದ ಪ್ರಗತಿಗೆ ರಫ್ತು ಕ್ಷೇತ್ರವೂ ಮುಖ್ಯ. ರಫ್ತು ಉದ್ಯಮಕ್ಕೆ ಅವಶ್ಯವಿರುವ ಕೌಶಲ್ಯಗಳನ್ನು ಶಾಲಾ ಕಾಲೇಜು ಹಂತದಲ್ಲಿಯೇ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಬೇಕು ಎಂದು ಜಿಲ್ಲಾ ಕೈಗಾರಿಕಾ ಸಂಘದ ಅಧ್ಯಕ್ಷ ಜೋಯ್ಸ್ ರಾಮಾಚಾರಿ ಹೇಳಿದರು.
ಜೆಎನ್ಎನ್ ಕಾಲೇಜಿನ ಎಂಬಿಎ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಭಾರತ ದೇಶವು 2028ಕ್ಕೆ ಪ್ರಧಾನಿ ನರೇಂದ್ರ ಮೋದಿ ಆಶಯದಂತೆ ಪ್ರಪಂಚದ ಎಲ್ಲಾ ದೇಶಗಳಲ್ಲಿ ಪ್ರಥಮ ಸ್ಥಾನ ಪಡೆಯಲು ರಫ್ತಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಪೂರಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ತಿಳಿಸಿದರು.
ಶಾಲಾ-ಕಾಲೇಜಿನ ವಿದ್ಯಾರ್ಥಿಗಳಿಗೆ ರಫ್ತು ಕ್ಷೇತ್ರದ ಬಗ್ಗೆ ಹೆಚ್ಚಿನ ಮಾಹಿತಿ ಅವಶ್ಯಕತೆ ಇರುವುದರಿಂದ ಶಾಲಾ ಕಾಲೇಜು ಮಟ್ಟದಲ್ಲಿ ಜಿಲ್ಲಾ ಕೈಗಾರಿಕಾ ಸಂಘದಿಂದ ಹೆಚ್ಚಿನ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ವಿದ್ಯಾರ್ಥಿಗಳು ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್ ಮಾತನಾಡಿ, ಭಾರತ ಈಗಿನ ನಾಲ್ಕನೇ ಸ್ಥಾನದಿಂದ 2027ಕ್ಕೆ 3ನೇ ಸ್ಥಾನಕ್ಕೆ ಏರಲು ರಫ್ತು ಆಧಾರಿತ ಉತ್ಪನ್ನಗಳು ಜಾಸ್ತಿ ಆಗಬೇಕು ಹಾಗೂ 2047ರಲ್ಲಿ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲು ಭಾರತದಲ್ಲಿ ಉತ್ಪಾದಿಸಿದ ವಸ್ತುಗಳು ಎಲ್ಲಾ ರಾಷ್ಟ್ರಗಳಿಗೂ ರಫ್ತು ಆಗಬೇಕು ಎಂದು ತಿಳಿಸಿದರು.
ಐಟಿಎಸ್ಡಿಜಿಎಫ್ ಸಹಾಯಕ ನಿರ್ದೇಶಕ ಕೆ.ಆದರ್ಶ ಮಾತನಾಡಿ ರಫ್ತು ಆಧಾರಿತ ಉತ್ಪನ್ನದ ಮಾರುಕಟ್ಟೆಯ ಬಗ್ಗೆ ವಿವರಣೆ ನೀಡಿದರು. ಇಇಪಿಸಿ ಇಂಡಿಯಾ ಉಪ ನಿರ್ದೇಶಕ ವಿ.ಸಿ.ರವೀಶ್, ಜೆಎನ್ಎನ್ಸಿಇ ಆರ್ ಅಂಡ್ ಡಿ. ಡೀನ್ ಡಾ. ಎಸ್.ವಿ.ಸತ್ಯನಾರಾಯಣ, ಜಿಲ್ಲಾ ಕೈಗಾರಿಕಾ ಸಂಘದ ಕಾರ್ಯದರ್ಶಿ ವಿಶ್ವೇಶ್ವರಾಯ ಎಸ್, ಕೋ-ಆರ್ಡಿನೇಟರ್ ಉಜ್ವಲಾ ಬಿ. ಎಸ್., ನಳಿನಾ ಎಸ್.ಬಿ., ಸುಮತಿ ಕೆ., ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಖಜಾಂಚಿ ಆರ್. ಮನೋಹರ, ಕೈಗಾರಿಕೋದ್ಯಮಿಗಳು, ಎಂಬಿಎ ವಿದ್ಯಾರ್ಥಿಗಳು ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 




















