ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ನಗರದ ಹೊರವಲಯದ ಹುಣಸೂಡು ಬಳಿ ಉಂಟಾದ ಸ್ಫೋಟದಿಂದ ಹಾನಿಗೊಳಗಾದ ಮನೆಗಳಿಗೆ ಪರಿಹಾರ ನೀಡುವಂತೆ ನವಕರ್ನಾಟಕ ವೇದಿಕೆ ವತಿಯಿಂದ ಸಚವ ಕೆ.ಎಸ್. ಈಶ್ವರಪ್ಪ ಅವರಿಗೆ ಇಂದು ಮನವಿ ಸಲ್ಲಿಸಲಾಯಿತು.

ಜನವರಿ 21ರ ರಾತ್ರಿ 10:20ರ ಸುಮಾರಿಗೆ ಕಲ್ಲುಕೋರೆಗಳಿಗೆ ಉಪಯೋಗಿಸಲು ಅಕ್ರಮವಾಗಿ ತಂದಿದ್ದ ಜಿಲೆಟಿನ್ ಕಡ್ಡಿಗಳು ಮತ್ತು ಸಿಡಿಮದ್ದುಗಳು, ಸ್ಫೋಟಗೊಂಡು ಜಿಲ್ಲೆಯಾದ್ಯಂತ ಭೂಕಂಪನ ಉಂಟಾಗಿತ್ತು. ಜಲ್ಲಿ ಕ್ರಶರ್ ಮತ್ತು ಕಲ್ಲು ಕೋರೆಗಳ ಸಮೀಪದಲ್ಲೇ ಇರುವ ಹುಣಸೂಡು, ಹೊಸುರು, ಆಜ್ಜಲಗೆರೆ, ಬಸವನ ಗಂಗೂರು, ಗಚ್ಚೇನಹಳ್ಳಿ, ಹನುಮಂತ ನಗರ, ಜಾಕತಿ ಕೊಪ್ಪ ಸೇರಿದಂತೆ ಸುತ್ತಮುತ್ತಲ ಅನೇಕ ಗ್ರಾಮಗಳ ಮನೆಗಳ ಗೋಡೆಗಳು ಬಿರುಕು ಬಿಟ್ಟಿದ್ದು, ಕೆಲ ಮನೆಗಳ ಚಾವಣಿ ಹಾಳಾಗಿದ್ದು, ಕೆಲವು ಮನೆಗಳ ಟಿ.ವಿ, ಎಲೆಕ್ಟ್ರಾನಿಕ್ ಉಪಕರಣಗಳು ಸ್ಫೋಟದಿಂದ ಹಾನಿಗೊಳಗಾಗಿವೆ ಎಂದು ದೂರಿದರು.

ಜಿಲ್ಲಾಡಳಿತದ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿರ್ಲಕ್ಷ್ಯದಿಂದ ತಮ್ಮದಲ್ಲದ ತಪ್ಪಿನಿಂದ ನೂರಾರು ಗ್ರಾಮಸ್ಥರು ಲಕ್ಷಾಂತರ ರೂಪಾಯಿಗಳ ನಷ್ಟ ಅನುಭವಿಸುವಂತಾಗಿದ್ದು, ಸ್ಫೋಟ ನಡೆದು 10-12 ದಿನಗಳಾದರೂ ಅಧಿಕಾರಿಗಳು ಹಾನಿಗೊಳಗಾದ ಮನಗಳಿಗೆ ಭೇಟಿ ನೀಡಿ ಗ್ರಾಮಸ್ಥರಿಗಾದ ನಷ್ಟದ ಬಗ್ಗೆ ಪರಿಶೀಲಿಸುವುದಾಗಲೀ, ಪರಿಹಾರ ನೀಡುವುದಾಗಲೀ ಮಾಡಿರುವುದಿಲ್ಲ. ಹಾನಿಗೊಳಗಾದ ಮನೆಗಳನ್ನು ಪರಿಶೀಲಿಸಿ ಸೂಕ್ತ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ವೇದಿಕೆಯ ರಾಜ್ಯಾಧ್ಯಕ್ಷ ಗೋ.ರಮೇಶ್ಗೌಡ, ಸಂತೋಷ್, ದೇವೇಂದ್ರಪ್ಪ, ನಾಗರಾಜ್, ನಯನ, ಶಿವಣ್ಣ, ರಾಜು, ಲೋಕೇಶ್ ಪರಶುರಾಮಪ್ಪ, ಆಶ್ರಫ್ ಮೊದಲಾದವರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

















