ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ವಿ.ಎನ್.ಜೆ. ಶ್ರೀನಿವಾಸ್ ಅಯ್ಯಂಗಾರ್ ಅವರ ಜನ್ಮಶತಮಾನೋತ್ಸವದ ಅಂಗವಾಗಿ ಜ.20 ಮತ್ತು 21ರಂದು ಜಯನಗರದ ರಾಮಮಂದಿರದಲ್ಲಿ ವೀಣಾ ವಾದನ ಕಚೇರಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಶ್ರೀನಿವಾಸ್ ಅಯ್ಯಂಗಾರ್ಅವರ ಅಭಿಮಾನಿ ಬಳಗದ ಪ್ರೊ.ಯರುಪತಿಪುಟ್ಟಿ ಹಾಗೂ ವಿದ್ವಾನ್ ಶೃಂಗೇರಿ ನಾಗರಾಜ್ ಹೇಳಿದರು.
ಇಂದು ಮೀಡಿಯಾ ಹೌಸ್ನಲ್ಲಿ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರುಗಳು ಈ ವೀಣಾವಾದನ ಕಛೇರಿ ಕಾರ್ಯಕ್ರಮವನ್ನು ವಿದೂಷಿ ರಕ್ಷಿತ್ ರಮೇಶ್ ಹಾಗೂ ಪ್ರಶಾಂತ್ ಅಯ್ಯಂಗಾರ್ ನಡೆಸಿಕೊಡಲಿದ್ದಾರೆ. ಈ ಎರಡು ಕಾರ್ಯಕ್ರಮಗಳು ಜಯನಗರದ ರಾಮಮಂದಿರದಲ್ಲಿ ಪ್ರತಿದಿನ ಸಂಜೆ 6ಕ್ಕೆ ನಡೆಯಲಿವೆ ಎಂದರು.
ವಿ.ಎನ್.ಜೆ. ಶ್ರೀನಿವಾಸ್ ಅಯ್ಯಂಗಾರ್ ರವರು 1924ರಲ್ಲಿ ಜನಿಸಿದವರು, ಚಿಕ್ಕ ವಯಸ್ಸಿನಲ್ಲಿಯೇ ಗಾಯನ ಮತ್ತು ವೀಣಾವಾದನವನ್ನು ಕಲಿತು, ವೀಣೆ ಶೇಷಣ್ಣನವರ ಪರಂಪರೆಯ ವಿ.ವೆಂಕಟ ಗಿರೀಯಪ್ಪನವರಲ್ಲಿ ಶಿಶತ್ವ ಹೊಂದಿ ಮೈಸೂರು ಬಾನಿಯ ತಂತ್ರಗಳನ್ನು ಕರಗತ ಮಾಡಿಕೊಂಡವರು. ವೀಣಾವಾದನ ತಂತ್ರಗಳಿಗೆ ಹಲವು ಹೊಸಬಗೆಯ ಗಮಕಗಳನ್ನು ಅಳವಡಿಸಿಕೊಂಡವರು. ಆಕಾಶವಾಣಿಯ ಎ ಟಾಪ್ ಕಲಾವಿದರಾಗಿದ್ದವರು. ಇವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಹಾಗೂ ಕನಕ ಪುರಂದರ ಪ್ರಶಸ್ತಿ ಲಭಿಸಿದೆ. ಸುಮಾರು 60 ವರ್ಷಗಳ ಕಾಲ ಕಲಾವಿದರಾಗಿ, ಶಿಕ್ಷಕರಾಗಿ, ಅಜಾತಶತ್ರು ಆಗಿದ್ದವರು. ಇವರ ಜನ್ಮಶತಮಾನೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸುವ ನಿಟ್ಟಿನಲ್ಲಿ ಅವರು ಶಿಷ್ಯರು ಅಭಿಮಾನಿಗಳು 2023ರಿಂದಲೇ ರಾಜ್ಯದ ವಿಭಿನ್ನ ಸ್ಥಳಗಳಲ್ಲಿ ವೀಣಾವಾದನ ಕಛೇರಿ ನಡೆಸುತ್ತಿದ್ದಾರೆ. ಈ ಬಾರಿ ಶ್ರೀ ಗುರುಗುಹ ಸಂಗೀತ ಮಹಾವಿದ್ಯಾಲಯದ ಆಶ್ರಯದಲ್ಲಿ ಈ ಕಾರ್ಯಕ್ರಮವನ್ನು ಶಿವಮೊಗ್ಗದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು.
Also read: ಶಿವಮೊಗ್ಗದ ಫ್ರೀಡಂ ಪಾರ್ಕ್ಗೆ ಅಲ್ಲಮಪ್ರಭು ಹೆಸರು | ಸಂಪುಟದ ಸಭೆ ನಿರ್ಧಾರ | ಮಧು ಬಂಗಾರಪ್ಪ ಅಭಿನಂದನೆ
20ರಂದು ವಿದೂಷಿ ಕುಮಾರಿ ರಕ್ಷಿತ್ ರಮೇಶ್ರವರು ವೀಣೆ ಕಛೇರಿ ನಡೆಸಿಕೊಡುವರು, ಇವರ ಜೊತೆಗೆ ಅನಿರುದ್ಧ್ ಎಸ್. ಭಟ್ ಮೃದಂಗ, ಹರಿಹರಪುರ ಕೆ.ಅಭಿಜಿತ್ ಘಟ ನುಡಿಸುವರು. ರಕ್ಷಿತ್ ರಮೇಶ್ರವರು ಈಗಾಗಲೇ ಹಲವು ವೀಣಾ ಕಚೇರಿಯನ್ನು ದೇಶ ಮತ್ತು ವಿದೇಶಗಳಲ್ಲಿ ನೀಡಿರುತ್ತಾರೆ. ಆಕಾಶವಾಣಿ ಕಲಾವಿದರಾಗಿರುತ್ತಾರೆ. ಹಲವು ಬಹುಮಾನಗಳನ್ನು ಪಡೆದಿದ್ದಾರೆ. ಭಾರತ ಸರ್ಕಾರದ ಮಿನಿಸ್ಟ್ರಿ ಆಫ್ ಕಲ್ಚರ್ನಿಂದ ವಿದ್ಯಾರ್ಥಿ ವೇತನ ಪಡೆದಿದ್ದಾರೆ. ಹಲವು ವಿದ್ವಾನ್ರ ಕಚೇರಿಗಳಲ್ಲಿ ವಾದ್ಯಗೋಷ್ಠಿಗಳಲ್ಲಿ ತಮ್ಮ ವೀಣೆಯನ್ನು ನುಡಿಸಿದ್ದಾರೆ ಎಂದರು.
21ರಂದು ಮಧುಕರ್ ಪ್ರಶಾಂತ್ ಅಯ್ಯಂಗಾರ್ ವೀಣಾ ಕಚೇರಿ ನಡೆಸಿಕೊಡಲಿದ್ದು, ಇವರ ಜೊತೆಗೆ ಸುನಿಲ್ ಸುಬ್ರಹ್ಮಣ್ಯ ಮೃದುಂಗ್, ಫಣೀಂದ್ರ ಎನ್. ಘಟ ನುಡಿಸುವರು. ಪ್ರಶಾಂತ್ ಅವರು ಮೂಲತಹ ಸಂಗೀತ ವಿದ್ವಾಂಸ ಮನೆತನದವರು ಶ್ರೀ ತ್ಯಾಗರಾಜರ ಸಂಗೀತ ಪರಂಪರೆಗೆ ಸೇರಿದವರು ದೇಶ ವಿದೇಶಗಳಲ್ಲಿ ಕಚೇರಿ ನಡೆಸಿದವರು. 2010ರಲ್ಲಿ ನಿರಂತರವಾಗಿ 25 ಗಂಟೆಗಳ ಮ್ಯಾರಥಾನ್ ವೀಣಾ ಕಚೇರಿಯನ್ನು ನೀಡಿ ಲಿಮ್ಕಾ ದಾಖಲೆ ಮಾಡಿದವರು. 72 ಮೇಳ ರಾಗಗಳಲ್ಲಿ ವರ್ಣಗಳನ್ನು ರಚಿಸಿದ ಮೊದಲ ಕರ್ನಾಟಕ ವಾಗ್ಗೇಯಕಾರರಾಗಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಮಿತ್ ನಟೇಶ್ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post