ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ನಗರದ ಪ್ರತಿಷ್ಟಿತ ಜೆಎನ್ಎನ್ಸಿ ಎಂಜಿನಿಯರಿಂಗ್ ಕಾಲೇಜು ಕೊರೋನಾ ಆತಂಕದ ಮತ್ತು ಸವಾಲುಗಳ ನಡುವೆಯು ಹಲವಾರು ಮಹತ್ವದ ಅಭಿವೃದ್ಧಿ ಮತ್ತು ಸಾಧನೆಯ ಹಾದಿಯಲ್ಲಿ ಮುನ್ನಡೆಯುತ್ತಿದೆ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್. ನಾಗರಾಜ ತಿಳಿಸಿದರು.
ಇಂದು ನಗರದ ಜೆ.ಎನ್.ಎನ್.ಸಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಟಿ ಉದ್ದೇಶಿಸಿ ಅವರು ಮಾತನಾಡಿದರು.
ಪ್ರವೇಶಾತಿ ಮತ್ತು ವಿದ್ಯಾರ್ಥಿ ವೇತನ:
ಕೋವಿಡ್ ಸವಾಲಿನ ನಡುವೆಯು ಕಳೆದ 2020-21 ರಲ್ಲಿ ಕಾಲೇಜಿನ ವಿವಿಧ ವಿಭಾಗಗಳಿಗೆ ಶೇ.79.06ರಷ್ಟು ವಿದ್ಯಾರ್ಥಿಗಳ ದಾಖಲಾತಿಯಾಗಿದೆ. ಜೊತೆಗೆ ವಿವಿಧ ಪೋಸ್ಟ್ ಮೆಟ್ರಿಕ್ ಯೋಜನೆಗಳ ಮೂಲಕ ಸುಮಾರು ಎಂಟು ಕೋಟಿ ರೂ. ವಿದ್ಯಾರ್ಥಿ ವೇತನ ನೀಡಲಾಗಿದೆ.
ವಿ.ಟಿ.ಯು ರ್ಯಾಂಕ್:
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 2019-20 ನೇ ಸಾಲಿನಲ್ಲಿ ಕಂಪ್ಯೂಟರ್ ಸೈನ್ಸ್, ಸಿವಿಲ್ ಎಂಜಿನಿಯರಿಂಗ್ ಪದವಿ ವಿಭಾಗಗಳಿಗೆ ಎರಡು ರ್ಯಾಂಕ್ ಒಂದು ಚಿನ್ನದ ಪದಕ ಹಾಗೂ ಎಂ.ಬಿ.ಎ ಸ್ನಾತ್ತಕೊತ್ತರ ಪದವಿಯಲ್ಲಿ ಒಂದು ರ್ಯಾಂಕ್ಗಳನ್ನು ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಪಡೆದಿದ್ದಾರೆ.
ಪ್ಲೇಸ್ಮೆಂಟ್ ಸಾಧನೆ :
ಕೊರೋನಾದ ಸವಾಲುಗಳ ನಡುವೆ ಕಾಲೇಜಿನ ಪ್ಲೇಸ್ಮೆಂಟ್ ಸೆಲ್ ಮೂಲಕ ಪ್ರತಿಷ್ಟಿತ ಕಂಪನಿಗಳಾದ ಟಿಸಿಎಸ್, ವಿಪ್ರೊ, ಇನ್ಫೊಸಿಸ್, ಅಸ್ಕೆಂಚರ್, ಮೈಂಡ್ಟ್ರಿ, ರೊಬೊಸಾಫ್ಟ ಸೇರಿದಂತೆ ಸುಮಾರು 75ಕ್ಕೂ ಹೆಚ್ಚು ಕಂಪನಿಗಳು ಕ್ಯಾಂಪಸ್ ಸಂದರ್ಶನ ನಡೆಸಿದ್ದು ಎಂಜಿನಿಯರಿಂಗ್, ಎಂ.ಸಿ.ಎ, ಎಂ.ಬಿ.ಎ ಸೇರಿದಂತೆ ವಿವಿಧ ವಿಭಾಗಗಳ ಸುಮಾರು 350 ಕ್ಕು ಹೆಚ್ಚು ವಿದ್ಯಾರ್ಥಿಗಳು ವಾರ್ಷಿಕ 3.5 ಲಕ್ಷದಿಂದ 14 ಲಕ್ಷ ವೇತನದವರೆಗೆ ಆಯ್ಕೆಯಾಗಿದ್ದಾರೆ. 2020 ರಲ್ಲಿ ಅರ್ಹ ಅಭ್ಯರ್ಥಿಗಳಲ್ಲಿ ಶೇ.65ರಷ್ಟು ಹಾಗೂ 2021 ರಲ್ಲಿ ಶೇ.75ರಷ್ಟು ವಿದ್ಯಾರ್ಥಿಗಳು ಕ್ಯಾಂಪಸ್ ನೇಮಕಾತಿ ಪಡೆದಿದ್ದಾರೆ.
ನೂತನ ಕೋರ್ಸ್ ಪ್ರಾರಂಭ:
ಮನುಷ್ಯನಷ್ಟೆ ಗ್ರಹಿಸಿ ಕೆಲಸ ನಿರ್ವಹಿಸಬಲ್ಲ ನೂತನ ತಂತ್ರಜ್ಞಾನವೇ ಆರ್ಟಿಫಿಷಿಯಲ್ ಇಂಟಲಿಜೆನ್ಸ್. ಇಂದು ನೂತನ ತಂತ್ರಜ್ಞಾನಗಳ ಅಳವಡಿಕೆಯಲ್ಲಿ ಶೇ.270ರಷ್ಟು ಎ.ಐ ತಂತ್ರಜ್ಞಾನ ಅಳವಡಿಕೆಯಾಗುತ್ತಿದ್ದು, ಯುವ ಸಮೂಹಕ್ಕೆ ಆವಿಷ್ಕಾರಿ ಚಿಂತನೆ ನಡೆಸಲು ಮತ್ತು ಉನ್ನತ ಉದ್ಯೋಗವಕಾಶ ಪಡೆಯಲು ಸಹಕಾರಿಯಾಗಿದೆ. ಈ ಎಲ್ಲಾ ಪ್ರೇರಣೆಯೊಂದಿಗೆ ನಮ್ಮ ಕಾಲೇಜಿನಲ್ಲಿ ನೂತನವಾಗಿ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಮತ್ತು ಮೆಷಿನ್ ಲರ್ನಿಂಗ್ ಕೋರ್ಸ್ ಪ್ರಾರಂಭಿಸಲಾಗತ್ತಿದೆ. ಎಐಸಿಟಿಇ ಅನುಮೋದನೆ ನಂತರ ಪ್ರಸಕ್ತ ವರ್ಷದಿಂದಲೇ 60 ಸೀಟುಗಳ ಪ್ರವೇಶಾತಿ ಪ್ರಾರಂಭವಾಗಲಿದೆ. ಇದೇ ವೇಳೆ ತೀವ್ರ ಬೇಡಿಕೆಯ ಹಿನ್ನಲೆಯಲ್ಲಿ ಎಐಸಿಟಿಇ ಅನುಮೋದನೆ ನಂತರ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ಪ್ರವೇಶಾತಿಯನ್ನು 180 ಸೀಟುಗಳಿಗೆ ಏರಿಸಲು ಹಾಗೂ ಅನುಮೋದನೆ ದೊರೆತ ಎಂ.ಸಿ.ಎ ಸ್ನಾತಕೊತ್ತರ ಪದವಿ ಪ್ರವೇಶಾತಿಯನ್ನು 60 ಸೀಟುಗಳಿಗೆ ಏರಿಸಲಾಗಿದೆ.
ನಾವಿನ್ಯ ಚಿಂತನೆಗಳಿಗೆ ಆರ್ಥಿಕ ನೆರವು:
ವಿದ್ಯಾರ್ಥಿಗಳ ನಾವಿನ್ಯ ಚಿಂತನೆಗಳಿಗೆ ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಿಂದ ನ್ಯೂ ಜೆನ್ ಐಇಡಿಸಿ ಮೂಲಕ 2.5 ಲಕ್ಷ ಆರ್ಥಿಕ ನೆರವು ಹಾಗೂ ಕರ್ನಾಟಕ ಸರ್ಕಾರದಿಂದ 3ಲಕ್ಷ ರೂಪಾಯಿ ಆರ್ಥಿಕ ನೆರವು ನೀಡಲಾಗುತ್ತಿದೆ. ರಾಷ್ಟ್ರೀಯ ಶಿಕ್ಷಣ ಸಮಿತಿ ವತಿಯಿಂದ ಜೆಎನ್ಎನ್ಸಿ ಕಾರ್ಟ್ ಮೂಲಕ ಕೃಷಿ ಆಧಾರಿತ ನಾವಿನ್ಯ ಚಿಂತನೆಗಳಿಗೆ ಹಾಗೂ ಜೆಎನ್ಎನ್ಸಿ ಆರ್ಐಸಿ ಮೂಲಕ ಸಂಶೋಧನಾ ಚಟುವಟಿಕೆಗಳಿಗೆ ಆರ್ಥಿಕ ಸಹಕಾರ ನೀಡಲಾಗುತ್ತಿದೆ. ಈಗಾಗಲೇ ಬಡ್ ಸ್ಕೂಪಿಂಗ್ ಮೆಷಿನ್ ಕುರಿತು ಪೆಟೆಂಡ್ ಫೈಲ್ ಆಗಿದೆ. ಜೊತೆಗೆ ಸರ್ಕಾರದ ಉಪಕರಣ ಮತ್ತು ತರಬೇತಿ ಕೇಂದ್ರದೊಂದಿಗೆ ಒಡಂಬಂಡಿಕೆಯಾಗಿದೆ.
ಹೆದ್ದಾರಿ ಪ್ರಾಧಿಕಾರದೊಂದಿಗೆ ಒಡಂಬಡಿಕೆ:
ಭಾರತ ಸರ್ಕಾರದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದೊಂದಿಗೆ ಕಾಲೇಜು ಒಡಂಬಡಿಕೆ ಮಾಡಿಕೊಂಡಿದ್ದು ಸಿವಿಲ್ ಎಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳು, ಸಂಶೋಧನಾರ್ಥಿಗಳು ಪ್ರಸ್ತುತ ಹೆದ್ದಾರಿ ಮತ್ತು ಸಾರಿಗೆ ಕ್ಷೇತ್ರದಲ್ಲಿನ ಹಲವು ಬೆಳವಣಿಗೆ ತಿಳಿಯಲು, ನೂತನ ಯೋಜನೆಗಳಿಗೆ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಅನುವು ಮಾಡಿಕೊಡಲಿದೆ. ಪ್ರಸ್ತುತ ರಾಷ್ಟ್ರೀಯ ಹೆದ್ದಾರಿ ಬೆಟ್ಟದ ಹಳ್ಳಿಯಿಂದ ಶ್ರೀರಾಂಪುರ ವರೆಗಿನ ಕಾಮಗಾರಿ ನಿರ್ವಹಣೆಯ ಜವಬ್ದಾರಿಯನ್ನು ನಮ್ಮ ಕಾಲೇಜಿನ ಸಿವಿಲ್ ಎಂಜಿನಿಯರಿಂಗ್ ವಿಭಾಗ ತೆಗೆದುಕೊಳ್ಳಲಿದೆ. ಕಾಮಗಾರಿಯ ಗುಣಮಟ್ಟ ಕಾಪಾಡುವ ಹಿನ್ನಲೆಯಲ್ಲಿ ಪ್ರಾಧಿಕಾರದೊಂದಿಗೆ ಕೂಡಿ ಕಾರ್ಯ ನಿರ್ವಹಿಸಲಿದೆ.
ಸಿವಿಲ್ ಕನ್ಸ್ಲ್ಟೆನ್ಸಿ:
2020ರಲ್ಲಿ ಪ್ರಾರಂಭಗೊಂಡ ಜೆಎನ್ಎನ್ಎನ್ಸಿ ಸಿವಿಲ್ ಕನ್ಸ್ಲ್ಟೆನ್ಸಿ ಸಾರ್ವಜನಿಕವಾಗಿ ಭೂಮಿಗೆ ಸಂಬಂಧಿತ ಮಣ್ಣು, ರಾಸಾಯನಿಕ ಗುಣಮಟ್ಟ ಪರೀಕ್ಷೆ, ಭೂಮಿ ಸರ್ವೆ ನಡೆಸಿ ಅಧಿಕೃತ ವರದಿ ನೀಡುತ್ತಿದೆ. ನೀರಿನ ಹಲವಾರು ಗುಣವೈಶಿಷ್ಟ್ಯ ಅಳೆಯುವ ಮತ್ತು ಗುಣಮಟ್ಟ ಹೆಚ್ಚಿಸಲು ಪೂರಕವಾಗುವಂತೆ ಹೊಸದಾಗಿ ಬ್ಯಾಕ್ಟಿರಿಯಾಲಾಜಿಕಲ್ ಟೆಸ್ಟ ಮತ್ತು ಹೆವಿ ಮೆಟಲ್ ವಿಶ್ಲೇಷಣೆ ಸಂಶೋಧನಾ ಘಟಕ ಪ್ರಾರಂಭಿಸಲಾಗಿದೆ. ಸಾರ್ವಜನಿಕರು ಕಡಿಮೆ ದರದ ಸೇವಾ ಶುಲ್ಕದೊಂದಿಗೆ ಈ ಪ್ರಯೋಜನೆ ಪಡೆದುಕೊಳ್ಳಬಹುದಾಗಿದೆ.
ಪರ್ಮನೆಂಟ್ ಆಫಿಲಿಯೇಷನ್:
ಕಂಪ್ಯೂಟರ್ ಸೈನ್ಸ್ ಅಂಡ್ ಎಂಜಿನಿಯರಿಂಗ್ ಹಾಗೂ ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ವಿಭಾಗಕ್ಕೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಿಂದ 2020-21 ರಿಂದ 2025-26 ವರೆಗೆ ಐದು ವರ್ಷಗಳ ಅವಧಿಗೆ ಪರ್ಮನೆಂಟ್ ಆಫಿಲಿಯೇಷನ್ ದೊರೆತಿದ್ದು ಇದರಿಂದಾಗಿ ಮೌಲ್ಯಯುತ ಶಿಕ್ಷಣ ನೀಡಲು ಹೆಚ್ಚಿನ ಬಲ ಬಂದಂತಾಗಿದೆ.
ಇಂಡಿಯಾ ಟುಡೆ ರ್ಯಾಂಕಿಂಗ್ನಲ್ಲಿ ಅಗ್ರ ಸ್ಥಾನ:
ಕಾಲೇಜಿನ ಎಲ್ಲಾ ಎಂಜಿನಿಯರಿಂಗ್ ವಿಭಾಗಗಳು ಎನ್.ಬಿ.ಎ ಅನುಮೋದನೆ ಪಡೆದಿದ್ದು, ಎಐಸಿಟಿ ಅನುಮೋದನೆಯೊಂದಿಗೆ ಯುಜಿಸಿ 2ಎಫ್ ಮತ್ತು 12ಬಿ ಪ್ರಮಾಣ ಪತ್ರ ಪಡೆದಿದೆ. ಪ್ರತಿಷ್ಟಿತ ಇಂಡಿಯಾ ಟುಡೆ ನಡೆಸುವ ಉತ್ತಮ ಕಾಲೇಜುಗಳ ಸಮೀಕ್ಷೆಯಲ್ಲಿ ಜೆಎನ್ಎನ್ಸಿಇ ಕಾಲೇಜು ಈ ವರ್ಷ ಭಾರತದಲ್ಲಿ 48 ನೇ ರ್ಯಾಂಕ್ ಮತ್ತು ಕರ್ನಾಟಕದಲ್ಲಿ 10 ನೇ ರ್ಯಾಂಕ್ ಪಡೆದಿದೆ.
ವಿವಿಧ ಕಲಿಕಾ ಶಿಬಿರ:
ಶೈಕ್ಷಣಿಕ ಚಟುವಟಿಕೆಗಳ ಜೊತೆಗೆ ಹೊಸ ತಂತ್ರಜ್ಞಾನಗಳ ಜ್ಞಾನಾರ್ಜನೆಗಾಗಿ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರಿಗಾಗಿ ಆನ್ಲೈನ್ ಮೂಲಕ ಹಲವಾರು ಕಲಿಕಾ ಶಿಬಿರ ಏರ್ಪಡಿಸಲಾಗಿದೆ. ಭಾರತ ಸರ್ಕಾರದ ಎಐಸಿಟಿಇ ಟ್ರೈನಿಂಗ್ ಅಂಡ್ ಲರ್ನಿಂಗ್ ಅಕಾಡೆಮಿ ಸೇರಿದಂತೆ ವಿವಿಧ ಸಂಸ್ಥೆಗಳ ಜೊತೆಗೂಡಿ 120ಕ್ಕು ಹೆಚ್ಚಿನ ಕಲಿಕಾ ಶಿಬಿರ ವಿವಿಧ ವಿಭಾಗಗಳ ವತಿಯಿಂದ ಏರ್ಪಡಿಸಲಾಗಿದೆ. ಈ ಸಾಲಿನಲ್ಲಿ ಎಐಸಿಟಿಇ ಟ್ರೈನಿಂಗ್ ಅಂಡ್ ಲರ್ನಿಂಗ್ ಅಕಾಡೆಮಿಯ ಜೊತೆಗೂಡಿ ಎರಡು ಕಾರ್ಯಾಗಾರ ನಡೆಸಲು ಸರ್ಕಾರದಿಂದ ಅನುಮೋದನೆ ನೀಡಿದ್ದು ನಾವೆಲ್ ಮೆಟಿರಿಯಲ್ಸ್ ಮತ್ತು ಕ್ಲೌಡ್ ಟೆಕ್ನಾಲಜಿ ಕುರಿತು ಕಾರ್ಯಕ್ರಮ ನಡೆಯಲಿದೆ. ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯೊಂದಿಗೆ ಹದಿನೈದು ವರ್ಷಗಳ ಒಡಂಬಡಿಕೆ ಮಾಡಿಕೊಂಡಿದ್ದು ಇದರಿಂದ ಮತ್ತಷ್ಟು ಶಿಬಿರಗಳನ್ನು ಏರ್ಪಡಿಸಲು, ಸಂಶೋಧನಾ ಚಟುವಟಿಕೆ ನಡೆಸಲು ಸಹಕಾರಿಯಾಗಲಿದೆ.
ಕಾಲೇಜಿನ ಮೂಲಸೌಕರ್ಯಗಳು:
ಜೆ.ಎನ್.ಎನ್.ಸಿ.ಇ ಕಾಲೇಜು ಉನ್ನತ ಗುಣಮಟ್ಟದ ಶಿಕ್ಷಣದೊಂದಿಗೆ ಸಾರಿಗೆ, ಹಾಸ್ಟಲ್, ಕ್ಯಾಂಟಿನ್ ನಂತಹ ಹಲವಾರು ಸೌಲಭ್ಯಗಳನ್ನು ಕಡಿಮೆ ದರದಲ್ಲಿ ವಿದ್ಯಾರ್ಥಿಗಳಿಗೆ ನೀಡುತ್ತಿದೆ. ಕಾಲೇಜಿನ ಹಾಸ್ಟಲ್ ಅಡಿಗೆ ಮನೆಯನ್ನು ಈಚೆಗೆ ಮೆಲ್ದರ್ಜೆಗೆ ಏರಿಸಲಾಗಿದೆ. ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳಿಗಾಗಿ ಆರೋಗ್ಯ ಸೇವಾ ಕೇಂದ್ರ, ಬ್ಯಾಂಕ್, ಪೋಸ್ಟ್ ಆಫಿಸ್ ಸ್ಥಾಪಿಸಲಾಗಿದೆ.
ಸಹ ಪಠ್ಯಕ್ರಮದ ಚಟುವಟಿಕೆಗಳು:
ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿದ್ದು ಹೊಸ ಪ್ರತಿಭೆಗಳಿಗೆ ಅಗತ್ಯ ಪ್ರೋತ್ಸಾಹ ನೀಡಲಾಗುತ್ತಿದೆ. ಎನ್ಎಸ್ಎಸ್, ರೆಡ್ ಕ್ರಾಸ್ ಮೂಲಕ ರಕ್ತದಾನ ಶಿಬಿರ, ಕೊವಿಡ್ ಲಸಿಕಾ ಕಾರ್ಯಾಗಾರಗಳ ಸಂಘಟನೆ ಸೇರಿದಂತೆ ವಿವಿಧ ಸಮಾಜಮುಖಿ ಕಾರ್ಯದಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಂಡಿದ್ದಾರೆ. ಅತ್ಯುನ್ನತ ಕ್ರೀಡಾಂಗಣ ಹೊಂದಿರುವ ಕಾಲೇಜು ರಣಜಿ, ಎ-ತಂಡದ ಆಟಗಾರರ ವೆಸ್ಟ್ ಇಂಡೀಸ್ ಮತ್ತು ಭಾರತ ನಡುವಿನ ಪಂದ್ಯಾವಳಿಗೆ ಸಾಕ್ಷಿಯಾಗಿದೆ.
ಪರಿಸರ ಸ್ನೇಹಿ ಹಸಿರು ಕ್ರಾಂತಿ :
ಸಂಪೂರ್ಣ ಹಸಿರಿಕರಣದ ನಡುವೆ ರೂಪಗೊಂಡಿರುವ ಕ್ಯಾಂಪಸ್ ವಿವಿಧ ಪ್ರಬೇಧಗಳ ಮರಗಿಡಗಳನ್ನು ಹೊಂದಿದೆ.
ಸೌರ ವಿದ್ಯುತ್ ಸ್ಥಾವರ :
ಪ್ರತಿ ವರ್ಷವು ಕಾಲೇಜಿನ ಕ್ಯಾಂಪಸ್ನಲ್ಲಿ ವಿದ್ಯುತ್ ಬಳಕೆ ಮತ್ತು ಇಂಧನ ಬಿಲ್ ಹೆಚ್ಚಾಗುತ್ತಲೆ ಹೋಗುತ್ತಿತ್ತು. ಇದನ್ನು ಅರಿತು 2020ರಲ್ಲಿ ಸುಮಾರು ಎರಡು ಕೋಟಿ ರೂಪಾಯಿ ವೆಚ್ಚದಲ್ಲಿ ಕಾಲೇಜಿನ ಕಟ್ಟಡಗಳ ಮೆಲ್ಛಾವಣಿಯ ಮೇಲೆ ಸುಮಾರು ನಾಲ್ಕು ನೂರು ಕಿಲೊ ವ್ಯಾಟ್ ಸೌರ ವಿದ್ಯುತ್ ಸ್ಥಾವರವನ್ನು ಅಳವಡಿಸಲಾಗಿದೆ. ಇಂತಹ ಪ್ರಯೋಗ ಕಾಲೇಜಿಗೆ ಸಾಕಷ್ಟು ಉಳಿತಾಯ ತಂದುಕೊಟ್ಟಿದೆ.
ಒಳಚರಂಡಿ ನೀರಿನ ಸ್ಥಾವರ:
ಕಾಲೇಜಿನ ಕ್ಯಾಂಪಸ್ನಲ್ಲಿ ಬಳಕೆಯಾದ ನೀರನ್ನು ಒಳಚರಂಡಿಗಳ ಮೂಲಕ ಸಂಗ್ರಹಿಸಿ ಮರು ಬಳಕೆ ಮಾಡುವ ನಿಟ್ಟಿನಲ್ಲಿ ಒಂದು ಲಕ್ಷ ಲೀಟರ್ ನೀರಿನ ಸಾಮರ್ಥ್ಯದ ಶುದ್ಧಿಕರಣ ಘಟಕ ಸ್ಥಾಪಿಸಿದೆ.
ಜೈವಿಕ ಇಂಧನ ತಯಾರಿಕಾ ಘಟಕ :
ಕಳೆದ ಹನ್ನೊಂದು ವರ್ಷಗಳಿಂದ ಜೈವಿಕ ಇಂಧನ ತಯಾರಿಕ ಘಟಕ ಕಾರ್ಯನಿರ್ವಹಿಸುತ್ತಿದ್ದು ಜೈವಿಕ ಇಂಧನದ ಉತ್ಫಾದನೆ, ಸಂಶೋಧನೆ, ರೈತರಿಗೆ ಅರಿವು ಮೂಡಿಸುವ ಕಾರ್ಯ ನಡೆಯುತ್ತಿದೆ. ಈಗಾಗಲೇ 36,000 ಲೀಟರ್ ಜೈವಿಕ ಇಂಧನ ಉತ್ಫಾದನೆ ಮಾಡಲಾಗಿದ್ದು ರಾಜ್ಯದ 32 ವಿವಿಧ ಜೈವಿಕ ಉತ್ಫಾದನಾ ಘಟಕಗಳಲ್ಲಿ ನಮ್ಮ ಕಾಲೇಜಿನ ಘಟಕ ಮೊದಲ ಸ್ಥಾನ ಪಡೆದಿದೆ.
ರಾಷ್ಟ್ರೀಯ ಶಿಕ್ಷಣ ಸಮಿತಿ ವತಿಯಿಂದ ಸಾರ್ವಜನಿಕ ಶಿಕ್ಷಣ ಇಲಾಖೆಯ ಕೋರಿಕೆಯ ಮೇರೆಗೆ ಸರ್ಕಾರಿ ಶಾಲೆಗಳ ಹಳೆಯ ಪಿಠೋಪಕರಣಗಳನ್ನು ಹತ್ತು ಲಕ್ಷ ರೂಪಾಯಿ ವೆಚ್ಚದಲ್ಲಿ ದುರಸ್ತಿ ಮಾಡಿಕೊಡಲಾಗಿದೆ.
ಪತ್ರಿಕಾಗೋಷ್ಟಿಯಲ್ಲಿ ರಾಷ್ಟ್ರೀಯ ಶಿಕ್ಷಣ ಸಮಿತಿ ಉಪಾಧ್ಯಕ್ಷರಾದ ಅಶ್ವಥನಾರಾಯಣ ಶೆಟ್ಟಿ, ಸಹ ಕಾರ್ಯದರ್ಶಿಗಳಾದ ಅಮರೇಂದ್ರ ಕಿರೀಟಿ, ಖಜಾಂಚಿಗಳಾದ ಸಿ.ಆರ್. ನಾಗರಾಜ, ನಿರ್ದೇಶಕರಾದ ಪಿ. ಹೆಚ್.ಸಿ. ಶಿವಕುಮಾರ್, ಕುಲಸಚಿವರಾದ ಪ್ರೋ. ಹೂವಯ್ಯಗೌಡ, ಜೆ.ಎನ್.ಎನ್.ಸಿ.ಇ ಕಾಲೇಜಿನ ಪ್ರಾಂಶುಪಾಲರಾದ ಡಾ.ಮಂಜುನಾಥ.ಪಿ, ಇನ್ಫ್ರಾಸ್ಟಕ್ಷರ್ ಡೀನ್ ಡಾ.ಎಂ.ಎಂ. ರಜತ್ ಹೆಗಡೆ, ಪಿ.ಆರ್.ಓ ಸಿ.ಎಂ ನೃಪತುಂಗ, ವಿವಿಧ ವಿಭಾಗಗಳ ಮುಖ್ಯಸ್ಥರು, ಅಧ್ಯಾಪಕರು, ಫೋರ್ಮೆನ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post