ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕನ್ನಡ ಭಾಷೆ ನಮ್ಮ ಭಾವನೆಯನ್ನು ವ್ಯಕ್ತಪಡಿಸುವ ಹೃದಯಸ್ಪರ್ಶಿ ಭಾಷೆಯಾಗಿದೆ ಎಂದು ಶಿವಮೊಗ್ಗ ತಹಶೀಲ್ದಾರ್ ಗಿರೀಶ್ ಅವರು ತಿಳಿಸಿದರು.
ಜಿಲ್ಲಾಡಳಿತ ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕ್ನನಡ ಸಾಹಿತ್ಯ ಪರಿಷತ್, ಕನ್ನಡ ಜಾನಪದ ಪರಿಷತ್ ,ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ,ಕನ್ನಡಪರ ರೈತ ಕಾರ್ಮಿಕ ಸಂಘಟನೆ , ಎನ್ಎಸ್ಎಸ್,ಎನ್ಸಿಸಿ, ಸ್ಕೌಟ್ ಅಂಡ್ ಗೈಡ್, ರೋಟರಿ, ಲಯನ್ಸ್ ಕ್ಲಬ್, ರೆಡ್ ಕ್ರಾಸ್, ಸ್ತ್ರೀಶಕ್ತಿ ಹಾಗೂ ಇತರೆ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಕನ್ನಡ ಜ್ಯೋತಿ ಹೊತ್ತ ಕನ್ನಡದ ರಥಯಾತ್ರೆ ಶಿವಮೊಗ್ಗ ನಗರಕ್ಕೆ ಆಗಮಿಸಿದ ವೇಳೆ ಜಿಲ್ಲಾ ಪಂಚಾಯತ್ ಸಿಇಓ ಹೇಮಂತ್ ಅವರು ಪುಪ್ಪನಮನ ಸಲ್ಲಿಸುವ ಮೂಲಕ ಸ್ವಾಗತಿಸಿದರು.
ನಗರದ ಅಶೋಕ ವೃತ್ತ, ಶಿವಪ್ಪನಾಯಕ ವೃತ್ತ, ಗೋಪಿ ವೃತ್ತ, ಮಹಾವೀರ ವೃತ್ತದ ಮಾರ್ಗವಾಗಿ ಕುವೆಂಪು ರಂಗಮಂದಿರದವರೆಗೆ ಶಾಲಾ ಕಾಲೇಜು ವಿದ್ಯಾರ್ಥಿಗಳು ವಿವಿಧ ಕಲಾ ಮೇಳದೊಂದಿಗೆ ಅದ್ದೂರಿಯಾಗಿ ರಥಯಾತ್ರೆ ನಡೆಸಲಾಯಿತು.
ಕುವೆಂಪು ರಂಗಮಂದಿರದಲ್ಲಿ ಸಭಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ಕನ್ನಡ ಭಾಷೆಯನ್ನು ಮಾತನಾಡಿದರೆ ಕೆಲವು ಶಾಲೆಗಳಲ್ಲಿ ದಂಡ ಹಾಕುತ್ತಾರೆ ಎನ್ನುವ ಸುದ್ದಿಗಳನ್ನು ನಾವು ಕೇಳಿದ್ದೇವೆ. ಕನ್ನಡ ನಾಡಿನಲ್ಲಿಯೇ ಈ ಪರಿಸ್ಥಿತಿ ಇದ್ದು, ಇದು ಅತ್ಯಂತ ವಿಷಾಧನೀಯ. ಈ ರೀತಿಯ ಘಟನೆಗಳು ನಡೆಯಬಾರದು. ಕನ್ನಡ ಭಾಷೆಯಲ್ಲಿ ನಮ್ಮ ಭಾವನೆ ತುಂಬಿರುತ್ತದೆ. ಅನ್ಯಭಾಷೆ ಕಲಿಕೆ ನಮ್ಮ ಜೀವನಕ್ಕೆ ಅಗತ್ಯ ಅದರೆ ನಮ್ಮ ಮಾತೃ ಭಾಷೆಯನ್ನು ನಾವು ಎಂದಿಗೂ ಬಿಡಬಾರದು ಶಾಲೆಗಳಲ್ಲಿ ಹಾಗೂ ನಮ್ಮ ಉದ್ಯೋಗದ ಸ್ಥಳಗಳಲ್ಲಿ ಕನ್ನಡಭಾಷೆಯನ್ನು ನಾವು ಹೆಚ್ಚು ಮಾತನಾಡಬೇಕು ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಡಿ ಮಂಜುನಾಥ್ ಮಾತನಾಡಿ, ಮಂಡ್ಯ ಜಿಲ್ಲೆಯಲ್ಲಿ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಡಿಸೆಂಬರ್ 20,21, ಮತ್ತು 22 ರಂದು ನಡೆಸಲಾಗುತ್ತಿದ್ದು ಅದರ ಅಂಗವಾಗಿ ಇಡೀ ರಾಜ್ಯಾದ್ಯಂತ ಕನ್ನಡ ಜ್ಯೋತಿ ಹೊತ್ತ ರಥ ಸಂಚಾರ ಮಾಡಿ ಕನ್ನಡಿಗರಲ್ಲಿ ಜಾಗೃತಿಯನ್ನು ಮೂಡಿಸುತ್ತಿದೆ. ಕನ್ನಡವನ್ನು ಕಟ್ಟುವ ಕೆಲಸಕ್ಕೆ ಎಲ್ಲರೂ ಜೊತೆಯಾಗಬೇಕು. ವಿದ್ಯಾರ್ಥಿಗಳು ಕನ್ನಡ ಭಾಷೆ ಬಗ್ಗೆ ಅರಿವು ಪಡೆದುಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಅಧ್ಯಕ್ಷ ಚಂದ್ರಭೂಪಾಲ್, ಮಾಜಿ ಎಂಎಲ್ಸಿ ಆರ್ ಪ್ರಸನ್ನಕುಮಾರ್, ಹಾಗೂ ಕನ್ನಡ ಸಾಹಿತ್ಯ ಪರಿಷತ್ ನ ಸದಸ್ಯರು, ವಿವಿಧ ಕನ್ನಡಪರ ಸಂಘಟನೆ ಸದಸ್ಯರು ಶಾಲಾ, ಕಾಲೇಜು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















