ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮಲೆನಾಡು ಭಾಗದಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಫಸಲಿಗೆ ಬಂದ ಬೆಳೆಗಳನ್ನು ಕಾಡಾನೆಗಳು ಹಾಳು ಮಾಡುತ್ತಿವೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯು ಕಾಡಾನೆಗಳ ಸೆರೆಗೆ ಮುಂದಾಗಿದ್ದು, ಸಕ್ರೈಬೈಲು ಆನೆ ಬಿಡಾರದಿಂದ ಪುರದಾಳು ಗ್ರಾಮಕ್ಕೆ ಆನೆಗಳನ್ನು ಕರೆತರಲಾಗಿದೆ.
ಶಿವಮೊಗ್ಗ ಪುರದಾಳು, ಬೇಳೂರು, ಮಲೇಶಂಕರ, ಆಲದೇವರ ಹಸೂರು, ಸಿರಿಗೆರೆ ಭಾಗದಲ್ಲಿ ಕಾಡಾನೆಗಳು ದಾಳಿ ನಡೆಸಿ ಬೆಳೆ ಹಾನಿ ಮಾಡಿದ್ದವು. ಸ್ಥಳೀಯರ ಆಕ್ರೋಶದ ಹಿನ್ನೆಲೆ ಕಾಡಾನೆ ಸೆರೆಗೆ ಅರಣ್ಯ ಇಲಾಖೆ ಮುಂದಾಗಿದೆ.
ಶೆಟ್ಟಿಹಳ್ಳಿ ಅಭಯಾರಣ್ಯದಲ್ಲಿ ಸಿಬ್ಬಂದಿ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಆಲೆ, ಬಹದ್ದೂರು, ಸೋಮಣ್ಣ ಮೂರು ಆನೆಗಳನ್ನ ಸಕ್ರಬೈಲಿನಿಂದ ಪುರುದಾಳುವಿಗೆ ತಂದು ಆನೆಗಳನ್ನ ಓಡಿಸುವ ಕಾರ್ಯಾಚರಣೆಗೆ ಚಾಲನೆ ದೊರೆತಿದೆ.
Also read: ಬಿಗ್ ನ್ಯೂಸ್ | ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಅ.29ಕ್ಕೆ ಮುಂದೂಡಿಕೆ
ಈ ಕುರಿತು ಮಾಧ್ಯಮಗಳಿಗೆ ಮಾತನಾಡಿದ ಸಕ್ರಬೈಲಿನ ವೈದ್ಯ ಡಾ. ವಿನಯ್, ಕಾಡಾನೆಗಳನ್ನ ಭದ್ರ ಅಭಯಾರಣ್ಯಗಳಿಗೆ ಓಡಿಸುವ ಕಾರ್ಯ ಇಂದಿನಿಂದ ಆರಂಭಗೊಂಡಿದೆ. ಭದ್ರ ಅಭಯಾರಣ್ಯ ಕಡೆ ಓಡಿಸಲು ತುಂಗಾ ನದಿ ನೀರು ಹೆಚ್ಚಿರುವುದು ಸಹ ಒಂದು ಸವಾಲಾಗಿದೆ ಎಂದು ತಿಳಿಸಿದ್ದಾರೆ.
ಕಾಡಾನೆ ಹಾವಳಿ ನಿಯಂತ್ರಿಸುವಲ್ಲಿ ಅರಣ್ಯ ಇಲಾಖೆ ನಿರ್ಲಕ್ಷ್ಯ ತೋರುತ್ತಿದೆ ಎಂದು ಆರೋಪಿಸಿ ಸ್ಥಳೀಯರು ಡಿಸಿ ಕಛೇರಿಯಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದರು. ಅರಣ್ಯ ಸಚಿವರು ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಿ ಕಾಡಾನೆ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಸೂಕ್ತ ನಿರ್ದೇಶನ ನೀಡುವಂತೆ ಆಗ್ರಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















